ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂಬ ತಮ್ಮ ಹೇಳಿಕೆಯನ್ನು ತಮಿಳುನಾಡು ಸಚಿವ ಉದಯನಿದಿ ಸ್ಟಾಲಿನ್ ಸೋಮವಾರ (ಸೆಪ್ಟೆಂಬರ್ 4) ಸಮರ್ಥಿಸಿಕೊಂಡಿದ್ದಾರೆ.
ನಾನು ನನ್ನ ಹೇಳಿಕೆ ಬದ್ಧನಾಗಿದ್ದು, ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದರೂ ಅದನ್ನು ಎದುರಿಸಲು ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಸನಾತನ ಧರ್ಮವು (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನ ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ಬಿಜೆಪಿ ನಾಯಕರಿಗೆ ಮತ್ತೊಂದು ಸವಾಲ್ ಹಾಕಿದ್ದಾರೆ.
ಉದಯನಿಧಿ ಸ್ಟಾಲಿನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದ್ದಂತೆ ಬಿಜೆಪಿ ನಾಯಕರು ತಿರುಗಿಬಿದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಉದಯನಿಧಿ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದರು. ಈ ಬೆನ್ನಲ್ಲೇ ಉದಯನಿಧಿ ನನ್ನ ವಿರುದ್ಧ ಬಿಜೆಪಿ (BJP) ಯಾವುದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ನಾನ್ ರೆಡಿ ಎಂದು ಸವಾಲೆಸೆದಿದ್ದಾರೆ.
“ನಾನು ಸನಾತನ ಧರ್ಮವನ್ನ ಮಾತ್ರ ಟೀಕಿಸಿದ್ದೇನೆ. ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದು ಮತ್ತೆ ಹೇಳುತ್ತಿದ್ದೇನೆ. ಇದನ್ನು ನಿರಂತರವಾಗಿ ಹೇಳುತ್ತೇನೆ. ಆದರೆ ನಾನು ನರಮೇಧಕ್ಕೆ ಆಹ್ವಾನ ನೀಡಿದ್ದೇನೆ ಎಂದು ಕೆಲವರು ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ದ್ರಾವಿಡಂ (ದ್ರಾವಿಡರು) ನಿರ್ಮೂಲನೆಯಾಗಬೇಕು ಎಂದು ಹೇಳುತ್ತಿದ್ದಾರೆ. ಹಾಗಾದರೆ ಡಿಎಂಕೆ ಪಕ್ಷದವರನ್ನ ಕೊಲ್ಲಬೇಕೇ? ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಅಂತಾ ಕರೆ ಕೊಟ್ಟಿದ್ದರು. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ಸಿಗರನ್ನು ಕೊಲ್ಲಬೇಕು ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನನ್ನ ಹೇಳಿಕೆಯನ್ನ ತಿರುಚಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಬಿಜೆಪಿಗೆ ಇಂಡಿಯಾ ಒಕ್ಕೂಟವನ್ನ ಕಂಡರೆ ಭಯ. ಐಎನ್ಡಿಐಎ ಮೈತ್ರಿಗೆ ಹೆದರಿ ಹೀಗೆಲ್ಲಾ ಹೇಳುತ್ತಿದೆ. ನಾನು ನರಮೇಧಕ್ಕೆ ಕರೆ ಕೊಟ್ಟಿಲ್ಲ. ಬಿಜೆಪಿಯವರು ನನ್ನ ವಿರುದ್ಧ ಯಾವುದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ಸಿದ್ಧ ಎಂದು ಹೇಳಿದ್ದಾರೆ.