ನನ್ನ ಕ್ಷೇತ್ರದ ಜನ ನನ್ನನ್ನ ಬಹಳ ಪ್ರೀತಿ ಮಾಡ್ತಾರೆ. ನನ್ನ ಕ್ಷೇತ್ರಕ್ಕೆ ಬಂದಾಗ ಅವರಿಗೆ ವಿಶೇಷವಾದ ಸಮಯ ಕೊಡುವ ಅವಶ್ಯಕತೆ ಇದೆ. ಅವರಿಗೆ ತಮ್ಮ ಅವಹಾಲುಗಳನ್ನು ಹೇಳಲು ಅವಕಾಶ ಮಾಡಿಕೊಟ್ಟಿದ್ದೆ. ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಮ್ಮ ಕ್ಷೇತ್ರದ ಜನತೆ ಮಾತ್ರವಲ್ಲದೇ ಬೆಳಗಾವಿ, ಬಳ್ಳಾರಿ, ಕುಂದಗೋಳ, ಹಾನಗಲ್ ಜನತೆ ಸಹ ಬಂದು ಅವಹಾಲು ಸಲ್ಲಿಸಿದ್ದಾರೆ. ಹೆಚ್ಚಿನವರು ಕೆಲಸ ಮತ್ತು ತಮ್ಮ ಮನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತಮ್ಮ ಊರಿನ ಅಭಿವೃದ್ಧಿಯ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜನರ ಅವಹಾಲುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸ ಆಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವರು ವಾರಕ್ಕೊಮೆ ಅಥವಾ 15 ದಿನಕ್ಕೊಮ್ಮೆ ಜನತಾದರ್ಶನ ಮಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದರು. ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ನಾನು ದಿನವೂ ಜನರ ಅವಹಾಲುಗಳನ್ನು ಕೇಳಿ ಪರಿಹಾರವನ್ನು ಕೊಡುವ ಕೆಲಸ ಮಾಡುತ್ತಿದ್ದೀನಿ. ಅಭಿವೃದ್ಧಿ ಕೆಲಸ ಹೇಗೆ ಬರುತ್ತೋ ಹಾಗೆ ಕೆಲಸ ಮಾಡುತ್ತಿದ್ದೀನಿ. ಜತೆಗೆ ಇಡೀ ರಾಜ್ಯದ ಜವಾಬ್ದಾರಿಯೂ ನನ್ನ ಮೇಲಿದೆ. ಹಾಗಾಗಿ ಸಮಯ ಹೊಂದಿಸಿಕೊಂಡು ಕ್ಷೇತ್ರದಲ್ಲಿ ಸಮಯ ಕಳೆಯಲು ಪ್ರಯತ್ನ ಮಾಡುತ್ತೀನಿ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ RSS ಮಾಹಿತಿ ಇಲ್ಲ ಈ ನಡುವೆ ರಾಹುಲ್ ಗಾಂಧಿಯವರ ಸೀತಾ ರಾಮ್ ಮತ್ತು ಶ್ರೀರಾಮ್ ಜಯಕಾರದ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ ಅವರು, “ರಾಹುಲ್ ಗಾಂಧಿಗೆ ಆರ್ ಎಸ್ಎಸ್ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ. ಆರ್ ಎಸ್ ಎಸ್ ನಲ್ಲಿ ಮಹಿಳೆಯರದ್ದೇ ಆದ ದುರ್ಗಾ ಸೇನೆ ಇದೆ. ನಾವು ಭಾರತ ಮಾತೆಗೆ ಜೈ ಎನ್ನುತ್ತೀವಿ. ಮಾತೆಯೂ ಹೆಣ್ಣು, ಭಾರತ್ ಮಾತಾ ಕಿ ಜೈ ಎಂದೇ ನಾವು ಕಾರ್ಯಕ್ರಮವನ್ನು ಪ್ರಾರಂಭ ಮಾಡ್ತೀವಿ. ಇದನ್ನು ನೀವು ರಾಹುಲ್ ಗಾಂಧಿಗೆ ತಿಳಿಸಿ” ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.