ಜನವರಿ 12 ರಂದು ನಡೆಯಿರುವ ರಾಷ್ಟ್ರೀಯ ಯುವಜನೋತ್ಸದಲ್ಲಿ ಪ್ರಧಾನಮಂತ್ರಿಗಳು ಭಾಗವಹಿಸುವುದರಿಂದ ಈ ಭಾಗದ ಯುವಕರಿಗೆ ಅವಕಾಶ ಹಾಗೂ ಪ್ರೇರಣೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಕಾರ್ಯಕ್ರಮದಲ್ಲಿ 28 ರಾಜ್ಯಗಳಿಂದ ಯುವಕರ ತಂಡ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಬರುತ್ತಿದ್ದಾರೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ವಾರ ನಡೆಯಲಿರುವ ಕಾರ್ಯಕ್ರಮ ದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆ ಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನ ಮೇಳ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ಎಲ್ಲಾ ರಂಗದಲ್ಲಿ ಯುವಕರು ಮುಂದೆ ಬರಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆ ಎನ್ನುವುದು ಭಾರವಲ್ಲ. ಇದು ನಮ್ಮ ಆಸ್ತಿ ಎಂದು ಪ್ರಧಾನಿಗಳು ಪರಿಗಣಿಸಿದ್ದಾರೆ. ಶೇ 46 ರಷ್ಟು ಯುವಜನರಿರುವ ದೇಶದಲ್ಲಿ ಯುವಕರಿಂದಲೇ ದೇಶದ ಭವಿಷ್ಯ ನಿರ್ಮಾಣ ಮಾಡಬಹುದು ಎಂದು ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ, ಮುದ್ರಾ, ಆತ್ಮನಿರ್ಭರ್ ಭಾರತ್ ನಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗಳ ಆಗಮನದಿಂದ ಸ್ಫೂರ್ತಿ ದೊರೆಯಲಿದೆ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.
ಪಂಚಮಸಾಲಿ ಮೀಸಲಾತಿ ಬಗ್ಗೆ ಸ್ವಾಮೀಜಿಗಳು ಗಡುವು ನೀಡಿರುವ ಬಗ್ಗೆ ಮಾತನಾಡಿ ಈಗಾಗಲೇ ಪ್ರವರ್ಗ 2 ಕ್ಕೆ ಬರಬೇಕಿರುವ ಸಮುದಾಯಗಳಿಗೆ ಮೊದಲ ನಿರ್ಣಯ ಕೈಗೊಂಡಿದೆ. ಬರುವ ದಿನಗಳಲ್ಲಿ ಪ್ರಮಾಣ ಎಷ್ಟು ಹೆಚ್ಚಾಗುತ್ತದೆ ಎನ್ನುವುದು ಅಂತಿಮ ವರದಿ ಬಂದ ನಂತರ ತಿಳಿಯಲಿದೆ. ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಮೇಲೆ ತೀರ್ಮಾನವಾಗುತ್ತದೆ. ಅದನ್ನು ಶೀಘ್ರವಾಗಿ ಸಲ್ಲಿಸಲು ಸೂಚಿಸಿದ್ದು. ಅದು ಬಂದ ನಂತರ ಸ್ಪಷ್ಟತೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸ್ಪಷ್ಟತೆ ಕೇಳುವುದು ಸಾಮಾನ್ಯ, ಅವುಗಳಿಗೆ ನಮ್ಮ ಬಳಿ ಪರಿಹಾರವಿದೆ. ಕೂಡಲೇ ಅವುಗಳಿಗೆ ಉತ್ತರ ನೀಡಿ ಪರಿಸರ ಇಲಾಖೆಯ ತೀರುವಳಿ ಪಡೆಯಲಾಗುವುದು ಎಂದು ಹೇಳಿದ್ದಾರೆ.