ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಜನತಾದಳದಿಂದ ಬಿಜೆಪಿಗೆ ಸೇರ್ಪಡೆ ಆದವರು. ಜಾತ್ಯಾತಿತ ಹಿನ್ನಳೆ ಉಳ್ಳ ನಾಯಕ ಅನ್ನೋ ಕಾರಣಕ್ಕೆ ಆರಂಭದಲ್ಲಿ ಬಿಜೆಪಿ ನಾಯಕರೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿರೋಧ ಮಾಡಿದ್ದರು. ಆರ್ಎಸ್ಎಸ್ ಸಂಸ್ಕೃತಿಗೆ ಬಸವರಾಜ ಬೊಮ್ಮಾಯಿ ಒಗ್ಗಿಕೊಳ್ಳುವುದು ಕಷ್ಟ ಎನ್ನಲಾಗ್ತಿತ್ತು. ಆದರೆ ಇದೀಗ ನಿಧಾನವಾಗಿ ಆರ್ಎಸ್ಎಸ್ ಸಂಸ್ಕೃತಿಗೆ ಸಿಎಂ ಒಗ್ಗಿಕೊಳ್ತಿದ್ದಾರೆ. ನಿನ್ನೆ ಬರೋಬ್ಬರಿ 2 ಗಂಟೆಗಳ ಕಾಲ ಸಿಎಂ ಕೇಶವಾ ಕೃಪಾದಲ್ಲಿ ಆರ್ಎಸ್ಎಸ್ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವರಾದ ಡಾ ಸುಧಾಕರ್, ಆರ್ ಅಶೋಕ್, ಅಶ್ವತ್ಥ ನಾರಾಯಣ ಮುಂತಾದವರು ಸಾಥ್ ನೀಡಿದ್ದರು. ಆದರೆ ಸಭೆಯಲ್ಲಿ ಯಾರೆಲ್ಲಾ ಆರ್ಎಸ್ಎಸ್ ನಾಯಕರು ಇದ್ದರು..? ಏನೇಲ್ಲಾ ಚರ್ಚೆ ಆಯ್ತು ಅನ್ನೋ ಬಗ್ಗೆ ಎಲ್ಲಿಯೂ ಸೋರಿಕೆ ಆಗದಂತೆ ನೋಡಿಕೊಳ್ಳಲಾಗಿದೆ.
ರಾಜ್ಯ ಅಥವಾ ದೇಶದ ರಾಜಕಾರಣದಲ್ಲಿ ಆರ್ಎಸ್ಎಸ್ ನೇರ ಪಾಲ್ಗೊಳ್ಳುವಿಕೆ ಇದೆ ಎನ್ನುವುದು ಕಾಂಗ್ರೆಸ್ ಸದಾ ಮಾಡಿಕೊಂಡು ಬರುತ್ತಿರೋ ಆರೋಪ. ಆದರೆ ಸಂಘ ಪರಿವಾರ ಕೇವಲ ಸಲಹೆ ಸೂಚನೆಗಳನ್ನು ನೀಡುತ್ತದೆ. ಅಧಿಕಾರದಲ್ಲಿ ಆರ್ಎಸ್ಎಸ್ ಸ್ವಯಂ ಸೇವಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ ಎನ್ನುವುದು ಬಿಜೆಪಿ ನಾಯಕರ ಸಮರ್ಥನೆ. ಆದರೆ ಆಡಳಿತವನ್ನು ಹೇಗೆ ನಡೆಸಬೇಕು, ಯಾವ ಕಾನೂನು ಜಾರಿ ಮಾಡಬೇಕು. ಯಾರನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋ ಇಂಚಿಂಚು ಮಾಹಿತಿಯು ಚಾಮರಾಜಪೇಟೆಯ ಕೇಶವಾ ಕೃಪಾ ಕಚೇರಿಯಿಂದಲೇ ಬರುತ್ತದೆ ಎನ್ನುವುದನ್ನು ಯಾರು ಅಲ್ಲಗಳೆಯುವಂತಿಲ್ಲ. ಇದೀಗ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಾಲ್ಕಾರು ವಿಚಾರಗಳ ಬಗ್ಗೆ ಚರ್ಚೆ ಆಗಿರಬಹುದು ಅಂತಾ ಊಹೆ ಮಾಡಲಾಗ್ತಿದೆ. ಆದರೆ ಬಿಜೆಪಿ ನಾಯಕರು ಹೇಳ್ತಿರೋ ಮಾತುಗಳು ಮಾತ್ರ ಬೇರೆಯದೇ ಇದೆ.
ಮಂಗಳೂರು ಬಾಂಬ್ ಬ್ಲಾಸ್ಟ್ನಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎನ್ನುವ ಹಾಗೆ ಪ್ರಕರಣವನ್ನು ಕಾಂಗ್ರೆಸ್ ಕಡೆಗೆ ತಿರುಗಿಸಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಮುಜುಗರ ಮಾಡುವುದು. ಮತ್ತೊಂದು ಸ್ವತಃ ಬಿಜೆಪಿ ಸರ್ಕಾರವೇ ಮತದಾರರ ಪಟ್ಟಿಯಲ್ಲಿ ಕೆಲವು ಸಮುದಾಯದ ಜನರ ಹೆಸರನ್ನು ಡಿಲೀಟ್ ಮಾಡಿಸಿದ್ದಾರೆ ಅನ್ನೋ ಆರೋಪದಿಂದ ಹೇಗೆ ಜಾರಿಕೊಳ್ಳಬೇಕು ಹಾಗು ಆ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಯಾವ ರೀತಿಯ ಮಾಹಿತಿ ಕೊಡಬೇಕು ಅನ್ನೋ ಬಗ್ಗೆ ಸಲಹೆ ಸಿಕ್ಕಿರಬಹುದು ಎನ್ನಲಾಗ್ತಿದೆ. ಅದರ ಜೊತೆಗೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡುವುದಕ್ಕೆ ಹೋಗಿದ್ದ ಆರ್ಎಸ್ಎಸ್ ನಾಯಕ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ಗೆ 2ನೇ ಬಾರಿ ಕೋರ್ಟ್ ಸಮನ್ಸ್ ನೀಡಿದೆ. ಈ ಪ್ರಕರಣದಲ್ಲಿ ಸಂತೋಷ್ ಅವರನ್ನು ಬಚಾವ್ ಮಾಡಲು ಇರುವ ಆಯ್ಕೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಬಿಜೆಪಿ ನಾಯಕರು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಆಗಿದೆ ಎನ್ನುತ್ತಿದ್ದಾರೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಗೆಲ್ಲಲು ಚಾಮರಾಜಪೇಟೆಯ RSS ಕಚೇರಿಯಲ್ಲಿ ನೀಲನಕ್ಷೆ ಜೊತೆಗೆ ಮಹತ್ವದ ಚರ್ಚೆ ನಡೆಸಲಾಗಿದೆ, ಸರ್ಕಾರದ ಆಡಳಿತ ಕಾರ್ಯಗಳ ಹೇಗಿರಬೇಕು..? ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಹೇಗೆ..? ಸರ್ಕಾರದ ಪರವಾದ ಜನರ ಒಲವು ಮೂಡುವಂತೆ ಮಾಡುವುದಕ್ಕೆ ಏನೇನು ಮಾಡಬೇಕು..? ಹಳೇ ಮೈಸೂರು ಭಾಗದಲ್ಲೇ ಪಕ್ಷ ಬಲವರ್ಧನೆ ಮಾಡುವುದರಿಂದ 25 ರಿಂದ 30 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಅವಕಾಶವಿದೆ. ವಿಪಕ್ಷಗಳ ಆರೋಪಗಳಿಗೆ ಪರಿಣಾಮಕಾರಿಯಾಗಿ ತಿರುಗೇಟು ನೀಡಿ. ಕಾಂಗ್ರೆಸ್ನ ಟಿಪ್ಪು ಪ್ರತಿಮೆ ವಿಚಾರವನ್ನೇ ಹಿಡಿದುಕೊಂಡು ಹೋರಾಟ ರೂಪಿಸುವುದು ಹೇಗೆ..? ಹಳೇ ಮೈಸೂರು ಭಾಗದಲ್ಲಿ ಹಿಂದೂ ಅಜೆಂಡಾವನ್ನು ಪ್ರಬಲವಾಗಿ ಬಳಸುವುದಕ್ಕೆ ಏನೆಲ್ಲಾ ಮಾಡಬೇಕು. ಸಂಘ ಏನು ಮಾಡುತ್ತೆ..? ಬಿಜೆಪಿ ಏನು ಮಾಡಬೇಕು ಅನ್ನೋ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎನ್ನೋ ಮಾಹಿತಿ ಬಿಜೆಪಿ ಮೂಲಗಳಿಂದಲೇ ಸಿಕ್ಕಿದೆ. ಒಂದಂತೂ ಸತ್ಯ. ರಾಜ್ಯ ಹಾಗು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅನ್ನೋದಕ್ಕಿಂತ ಬಿಜೆಪಿ ಮಾತೃ ಸಂಸ್ಥೆ ಆರ್ಎಸ್ಎಸ್ ಸರ್ಕಾರ ಎನ್ನಬಹುದು.
ReplyForward |