ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಎಂದರೆ ಇಲ್ಲ ಎನ್ನುವ ಧೈರ್ಯ ಯಾರಿಗೂ ಇಲ್ಲ. ಆದರೆ ಸಂಘಿ ಮನಸ್ಥಿತಿಯ ಪತ್ರಕರ್ತರು ಯಡಿಯೂರಪ್ಪನವರ ಹಿರಿಮೆ ಕಡಿಮೆ ಮಾಡಲು ಯಡಿಯೂರಪ್ಪ ಹೆಸರಿನೊಂದಿಗೆ ಅನಂತಕುಮಾರ ಹೆಸರು ಸೇರಿಸುವುದನ್ನು ನಾವು ನೋಡಿದ್ದೇವೆ. ಅನಂತಕುಮಾರ ಕಾಲವಾದ ನಂತದ ಆ ಸ್ಥಾನಕ್ಕೆ ಸಂಘ ತನ್ನದೆ ಸಮುದಾಯದ ಬಿ ಎಲ್ ಸಂತೋಷ ಎಂಬ ಅನಾಮಿಕ ಹಾಗು ಒಂದೂವರೆ ಮತ ಸೆಳೆಯದ ಆಸಾಮಿಯನ್ನು ತಂದಿರುವುದು ನಾವು ಬಲ್ಲೆವು. ಬೆಂಗಳೂರು ದಕ್ಷಿಣ ಸಂಸದೀಯ ಕ್ಷೇತ್ರದಿಂದ ಅನಂತಕುಮಾರ್ ಶ್ರೀಮತಿಗೆ ಟಿಕೇಟ್ ತಪ್ಪಿಸಿ ಈ ಬಿ ಎಲ್ ಸಂತೋಷ ಸಂಘದ ಹಿನ್ನೆಲೆಯ ಬಾಲಕ ತೇಜಶ್ವಿ ಸೂರ್ಯನನ್ನು ತಂದ ವಿಷಯ ನಿಮಗೆಲ್ಲರಿಗೆ ತಿಳಿದೆಯಿದೆ. ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ನಗಣ್ಯಗೊಳಿಸಿ ಯಡಿಯೂರಪ್ಪ ಕಟ್ಟಿದ ಮನೆಗೆ ತಮ್ಮವನೊಬ್ಬನನ್ನು ಯಜಮಾನನನ್ನಾಗಿ ತಂದು ಕೂಡಿಸುವ ಸಂಘದ ಕಾರ್ಯತಂತ್ರದ ಫಲವೆ ಈ ತೇಜಸ್ವಿ ಸೂರ್ಯ ಎನ್ನುವ ಹುಡುಗ. ಈ ಹುಡುಗ ಯಡಿಯೂರಪ್ಪ ಸೈಕಲ್ ತುಳಿದು ಕಟ್ಟಿದ ಬಿಜೆಪಿಯಲ್ಲಿ ಈಗ ಅನಾಯಾಸವಾಗಿ ಅಧಿಕಾರ ಅನುಭವಿಸುತ್ತಿದ್ದಾನೆ. ಈತನನ್ನು ವಿದ್ಯಾರ್ಥಿ ಪರಿಷತ್ತಿನಲ್ಲಿರುವಾಗಿನಿಂದ ಟಿವಿ ಸಂವಾದಗಳಿಗೆ ಅವಕಾಶ ಕೊಡುವ ಮೂಲಕ ಪ್ರಮೋಟ್ ಮಾಡುವ ಕೆಲಸ ಸದ್ದಿಲ್ಲದೆ ನಡೆದಿತ್ತು.
ಮೇಲ್ಜಾತಿ ಜಾತಿ ಮತ್ತು ಸಂಘದ ಹಿನ್ನೆಲೆ ಬಿಟ್ಟರೆ ಈ ಹುಡುಗನಿಗೆ ರಾಜಕೀಯದಲ್ಲಿರಲು ಮತ್ತಾವ ಅರ್ಹತೆಯೂ ಇಲ್ಲ. ಆದರೆ ಈತ ಮಾಡುತ್ತಿರುವ ಕಪಿಚೇಷ್ಟೆಗಳು ಒಂದೆರಡಲ್ಲ. ಹಿಂದೊಮ್ಮೆ ಈತ ಫ್ಯಾಬ್ ಇಂಡಿಯಾ ಜಾಹಿರಾತಿನ ಕುರಿತು ತನ್ನ ದ್ವೇಷಪೂರಿತ ನಾಲಿಗೆ ಹರಿಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದು ಹಿರಿಯ ರಾಜನೀತಜ್ಞ ಸುಧೀಂದ್ರ ಕುಲಕರ್ಣಿಯವರು ದಿ ಸ್ಕ್ರೋಲ್.ಇನ್ ವೆಬ್ ಪತ್ರಿಕೆಯಲ್ಲಿ ತೆಜಸ್ವಿ ಕುರಿತು ಒಂದು ಸುದೀರ್ಘ ಲೇಖನವನ್ನು ಬರೆದಿದ್ದರು. ಲೇಖನದ ಉದ್ದಕ್ಕೂ ಅವರು ಬಿಜೆಪಿ ಹಾಗು ಸಂಘದ ದ್ವೇಷಭಕ್ತಿಯನ್ನು ಪರಿಣಾಮಕಾರಿಯಾಗಿ ಅನಾವರಣ ಮಾಡುವುದರ ಜೊತೆಗೆ ಫ್ಯಾಬ್-ಇಂಡಿಯಾ ಬಹಿಷ್ಕರಿಸುವ ತೇಜಸ್ವಿ ಸೂರ್ಯನ ಟ್ವೀಟ್ ಹಿಂದೂ ಧರ್ಮದ ಆತ್ಮವನ್ನು ನೋಯಿಸಿದೆ ಎಂದಿದ್ದರು. ಹೌದುˌ ಇಂದಿನ ಬಿಜೆಪಿಯ ನಾಯಕರ ಅಹಸ್ಯಕರ ನಡವಳಿಕೆˌ ಅತಿಯಾದ ಮೂರ್ಖತನ, ಅಸಹಿಷ್ಣುತೆ ಮತ್ತು ದುರಹಂಕಾರಕ್ಕೆ ಇಂದು ಯಾವುದೆ ಅಂಕೆ ಇಲ್ಲದಂತಾಗಿದೆ. ಅಧಿಕಾರದ ಅಮಲು ಏರಿಸಿಕೊಂಡ ಆ ಪಕ್ಷದ ನಾಯಕರು ಏನು ಬೇಕಾದನ್ನು ಮಾಡಿ ದಕ್ಕಿಸಿಕೊಳ್ಳಬಹುದು ಎಂದು ಭಾವಿಸಿದಂತಿದೆ.
ಹಿಂದೂ ಸಮಾಜದ ಮೇಲೆ ಕಟ್ಟುನಿಟ್ಟಾದ ಸಾಂಸ್ಕೃತಿಕ ಏಕರೂಪತೆಯನ್ನು ಬಲವಂತವಾಗಿ ಹೇರುತ್ತಿರುವ ಬಿಜೆಪಿ ಮತ್ತು ಸಂಘ ಭಾರತೀಯ ಬಹುತ್ವ ಪರಂಪರೆಯ ಮೇಲೆ ಅತ್ಯಾಚಾರವನ್ನು ಎಸಗುತ್ತಿದ್ದಾರೆ. ಸಂಘ ಪರಿವಾರ ಸ್ಥಾಪಕರ ಸಮುದಾಯಕ್ಕೆ ಸೇರಿದ ಬಿಜೆಪಿಯ ಯುವ ಪುಢಾರಿˌ ಪಕ್ಷದ ಯುವ ಘಟಕದ ಮುಖ್ಯಸ್ಥ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮಾಡುತ್ತಿರುವ ಕಪಿ ಚೇಷ್ಟೆಗಳಿಗೆ ಅಂಕೆಯಿಲ್ಲದಂತಾಗಿದೆ. ಸಂಘದ ಶಾಖೆಗಳಲ್ಲಿ ಕಲಿತ ಪರಧರ್ಮ ದ್ವೇಷˌ ಸುಳ್ಳು ನೆರೇಷನ್ಸ್ ಗಳು ಮತ್ತು ಅಚ್ಚುಕಟ್ಟಾಗಿ ದಿರಿಸು ಮಾಡಿಕೊಂಡು ಅನಾವಶ್ಯಕವಾಗಿ ತಿರುಗಾಡುವುದು ಬಿಟ್ಟು ಈ ಹುಡುಗನಿಗೆ ಹೆಚ್ಚಿನದೇನೂ ಗೊತ್ತಿಲ್ಲ. ಹಿಂದೊಮ್ಮೆ ಈತ ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಅಲ್ಪಸಂಖ್ಯಾತ ನೌಕರರ ಬಗ್ಗೆ ದ್ವೇಷಪೂರಿತ ಮಾತನಾಡಿದ್ದ. ಏನಾದರೊಂದು ವಿವಾದಾತ್ಮಕ ಮಾತುಗಳನ್ನಾಡಿ ಅನೇಕ ವೇಳೆ ಕ್ಷಮೆ ಕೇಳುವ ಮೂಲಕ ಈತ ಸಂಘದ ಹಿರಿಯ ತಲೆಮಾರಿನ ವಿನಾಯಕ್ ದಾಮೋದರ್ ಸಾವರಕರ್ ಹಾಕಿದ ಕ್ಷಮಾಪಣಾ ಸಂಸ್ಕೃತಿಯನ್ನು ಮುಂದುವರೆಸಿರುವಂತಿದೆ.
ಮತ್ತೊಮ್ಮೆ ಈತ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಪುಂಡಾಟ ಮಾಡಲು ಹೋಗಿ ಚನ್ನಾಗಿ ಇಕ್ಕಿಸಿಕೊಂಡಿದ್ದ. ಮಗದೊಮ್ಮೆ ತನ್ನ ಪಟಾಲಂ ಕಟ್ಟಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನೆಯ ಮೇಲೆ ರೌಡಿಜಂ ಮಾಡಲು ಹೋಗಿದ್ದ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸದ್ದಿಲ್ಲದೆ ಕೆಲಸ ಮಾಡುವ ಕ್ಷಮತೆ ಹೊಂದಿರುವ ಯುವಕ. ಆದರೆ ವಿಜಯೇಂದ್ರನ ಸಂಘಟನಾ ಕ್ಷಮತೆ ಮತ್ತು ತನ್ನ ತಂದೆಗೆ ಇರುವ ಮುಂಗೋಪ ಮುಂತಾದ ಅನೇಕ ದೌರ್ಬಲ್ಯಗಳಿಂದ ಹೊರತಾದ ವ್ಯಕ್ತಿತ್ವವು ಬಿಜೆಪಿಯನ್ನು ನಿಯಂತ್ರಿಸುವ ಸಂಘಿಗಳಿಗೆ ನಿದ್ರೆ ಕೆಡಿಸಿದ್ದು ಸುಳ್ಳಲ್ಲ. ಹೇಗಾದರೂ ಮಾಡಿ ಯಡಿಯೂರಪ್ಪನವರ ನಂತರ ವಿಜಯೇಂದ್ರ ಮುನ್ನೆಲೆಗೆ ಬರಬಾರದು ಎನ್ನುವ ಹುನ್ನಾರಗಳು ಸಂತೋಷ್ ಪಟಾಲಂ ಮಾಡಿದ್ದನ್ನು ಕರ್ನಾಕಟದ ಜನತೆ ನೋಡಿದ್ದಾರೆ. ವಿಜಯೇಂದ್ರನಿಗಿರದ ಪ್ರಚಾರವು ಬಿಜೆಪಿˌ ಸಂಘ ಮತ್ತು ಅವು ಸಾಕಿರುವ ವೈದಿಕವ್ಯಾಧಿ ಮಾಧ್ಯಮಗಳುˌ ಸೂರ್ಯನಿಗೆ ನೀಡುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಈಗ ಈ ಸೂರ್ಯ ಮತ್ತೊಂದು ಮಹಾ ಯಡವಟ್ಟನ್ನು ಮಾಡಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಈತ ತಮಿಳುನಾಡಿನ ಪ್ರವಾಸದಲ್ಲಿ ವಿಮಾನಯಾನದ ಸಂದರ್ಭದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿರುವ ಗಂಭೀರ ಘಟನೆಯೊಂದು ನಡೆದುಹೋಗಿದೆ. ನಾಗರಿಕ ವಿಮಾನಯಾನ ಸಂಸ್ಥೆಯ ನಿಯಮಗಳಲ್ಲಿ ಇದೊಂದು ಗಂಭೀರವಾದ ಅಪರಾಧವೆ ಸರಿ. ಆದರೆ ಈ ದೇಶದಲ್ಲಿ ಬಿಜೆಪಿ ಆಡಳಿತ ಎಸಗುತ್ತಿರುವ ಜನತಂತ್ರ ಮತ್ತು ಸಂವಿಧಾನ ವಿರೋಧಿ ಕೃತ್ಯಗಳೆಲ್ಲವೂ ಕಾನೂನಿನಿಂದ ತಪ್ಪಿಸಿಕೊಳ್ಳುತ್ತ ಈ ದೇಶಕ್ಕೆ ದೊಡ್ಡ ಗಂಡಾಂತರವನ್ನು ತಂದಿವೆ. ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಈ ಪ್ರಕರಣವನ್ನು ಸರಕಾರ ಬೇಕೆಂತಲೆ ಮುಚ್ಚಿಟ್ಟಿತ್ತು. ಈಗ ಅದು ಬಹಿರಂಗಗೊಂಡಿದೆ. ಈ ಕೃತ್ಯವನ್ನು ಸೂರ್ಯನ ಬದಲಿಗೆ ಇನ್ನಾರಾದರೂ ವಿರೋಧ ಪಕ್ಷದವರು ಮಾಡಿದ್ದರೆ ಮಾಧ್ಯಮವ್ಯಾಧಿಗಳು ನೆಲಮುಗಿಸು ಒಂದು ಮಾಡಿ ಹಲಬುತ್ತಿದ್ದವು. ಬಿಜೆಪಿ ಸಾಕಿದ ಮಾಧ್ಯಮಗಳು ಸೂರ್ಯನ ಹೆಸರನ್ನು ಪ್ರಸ್ತಾಪಿಸದೆ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲು ತೆಗೆದಿದ್ದ ಎಂದು ಮುಗುಮ್ಮಾಗಿ ಸುದ್ದಿ ಮಾಡಿ ಬಿಜೆಪಿ ಪರವಾದ ತಮ್ಮ ಅನೈತಿಕ ನಿಷ್ಟೆಯನ್ನು ಪ್ರದರ್ಶಿಸಿವೆ.
ಕೊನೆಗೆ ವಿಮಾನಯಾನ ಖಾತೆಯ ಸಚಿವ ಜೋತಿರಾದಿತ್ಯ ಸಿಂಧಿಯಾ ಅವರೆ ಇದರ ಕುರಿತು ಸ್ಪಷ್ಟನೆ ನೀಡಬೇಕಾಯಿತು. ಆದರೆ ಈ ಗಂಭೀರ ಕೃತ್ಯ ಎಸಗಿದ ಸೂರ್ಯನಿಂದ ಕೇವಲ ಕ್ಷಮಾಪಣಾ ಪತ್ರ ಬರೆಸಿಕೊಂಡು ಇಡೀ ಪ್ರಕರಣವನ್ನೆ ಮುಚ್ಚಿಡಲಾಗಿದೆ. ತೆಜಸ್ವಿ ಸೂರ್ಯ ಮತ್ತು ಬಿಜೆಪಿಯ ಇತರ ಅನೇಕ ಪುಢಾರಿಗಳು ಈ ತರಹದ ಅನೇಕ ಅಪಾಯಕಾರಿ ಹಾಗು ಗಂಭೀರ ಕೃತ್ಯಗಳನ್ನು ಎಸಗಿದರೂ ಕೂಡ ಈ ದೇಶದ ಕಾನೂನನ್ನು ಸರಿಯಾಗಿ ಮತ್ತು ಪಕ್ಷಪಾತವಿಲ್ಲದೆ ಬಳಸುವಲ್ಲಿ ಬಿಜೆಪಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಸಂಸತ್ ಸದಸ್ಯನಾಗಿ ಭಾರತದ ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಹೊಂದುವೆನೆಂದು ಪ್ರಮಾಣವಚನ ಸ್ವೀಕರಿಸಿ ಹೀಗೆ ಕಾನೂನಿಗೆ ವಿರುದ್ಧವಾಗಿ ಮಾತನಾಡುವˌ ಮತ್ತು ಇಂತಹ ಕೃತ್ಯಗಳನ್ನು ಎಸಗುವ ತೇಜಸ್ವಿ ಸೂರ್ಯ ಮುಂತಾದ ಬಿಜೆಪಿ ನಾಯಕರ ವಿರುದ್ಧ ಈ ನೆಲದ ಕಾನೂನು ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಈ ತರಹದ ಘಟನೆಗಳು ಬಹುತೇಕ ಬಿಜೆಪಿ ನಾಯಕರು ಮಾಡುವುದು ಇತ್ತೀಚಿಗೆ ಸರ್ವೇಸಾಮಾನ್ಯ ಸಂಗತಿಯಾಗಿದ್ದು ಅವರಿಗೆ ರಾಜಕೀಯ ಬೆಂಬಲವಿದೆ ಎಂಬ ಕಾರಣಕ್ಕೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ.
ತೇಜಸ್ವಿ ಸೂರ್ಯ ಎಸಗಿರುವ ಈ ಕೃತ್ಯವು ೩೦ ವರ್ಷ ವಯಸ್ಸಿನ ಯುವ ರಾಜಕೀಯ ಪುಢಾರಿಯ ಮಂಗಚೇಷ್ಟೆ ಮಾತ್ರವೆಂದು ಅಲಕ್ಷಿಸಬಾರದು. ಆದರೆ ಬಿಜೆಪಿ ಪುಢಾರಿಗಳು ಈಗಾಗಲೆ ಆತನನ್ನು ಸಮರ್ಥಿಸಿ ಹೇಳಿಕೆ ನೀಡಲಾರಂಭಿಸಿದ್ದಾರೆ. ಇನ್ನೂ ತಮಾಷೆಯ ಸಂಗತಿ ಎಂದರೆ ಆತ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಿಲ್ಲ ˌ ಅಕಸ್ಮಿಕವಾಗಿ ಆತನ ಕೈ ತಾಗಿ ವಿಮಾನದ ಬಾಗಿಲು ತನ್ನಷ್ಟಕ್ಕೆ ತಾನೆ ತೆಗೆದಿದೆ ಎಂದು ಸಮರ್ಥಿಸುವ ಬಿಜೆಪಿಯ ಮತಿಹೀನ ಪುಢಾರಿಗಳು ಒಂದುಕಡೆಗಾದರೆˌ ಮತ್ತೊಂದು ಕಡೆ ಆ ತುರ್ತು ನಿರ್ಗಮನದ ಬಾಗಿಲು ಮೊದಲೆ ತೆಗೆದುಕೊಂಡಿತ್ತು ˌ ಇದು ಸೂರ್ಯನ ಗಮನಕ್ಕೆ ಬಂತುˌ ಆತ ತಕ್ಷಣ ಸಿಬ್ಬಂದಿಯ ಗಮನಕ್ಕೆ ತಂದು ವಿಮಾನದ ಬಾಗಿಲನ್ನು ಮುಚ್ಚಿಸಿ ಸಹ ಪ್ರಯಾಣಿಕರ ಪ್ರಾಣ ಉಳಿಸಿದ ಎನ್ನುವ ಮ್ಯಾನಿಪುಲೇಟಿವ್ ಸಮರ್ಥನೆ. ವಿಮಾನಯಾನ ಸಂಸ್ಥೆಗೆ ಈತ ಈ ಮೊದಲು ಆತ ಬರೆದುಕೊಟ್ಟ ಕ್ಷಮಾಪಣಾ ಪತ್ರವನ್ನು ಮರೆಮಾಚಿ ಈಗ ಸಂಸ್ಥೆಯ ಮೇಲೆ ಒತ್ತಡ ಹೇರುವ ಮೂಲಕ ಆತನಿಗೆ ಅಭಿನಂದನಾ ಪತ್ರ ಕೊಡಿಸುವಷ್ಟರ ಮಟ್ಟಿಗೆ ಬಿಜೆಪಿಯ ಕ್ರಿಮಿನಲ್ ಬುದ್ದಿ ಕೆಲಸ ಮಾಡುತ್ತಿದೆ.
ಈ ಘಟನೆ ಬಹಿರಂಗಗೊಂಡ ಮೇಲೆ ಸೂರ್ಯ ನಮ್ಮ ನಡುವೆ ಕೆರಳೆಣಿಕೆಯಷ್ಟಿರುವ ಸೂಕ್ಷ್ಮಮತಿ ಮಾಧ್ಯಮಗಳ ಸಂಪರ್ಕದಿಂದ ದೂರ ಉಳಿದರೆˌ ವೈದಿಕವ್ಯಾಧಿ ಮಾಧ್ಯಮಗಳು ಈ ವಿಷಯದ ಕುರಿತು ಎಂದಿನಂತೆ ದಿವ್ಯ ಮೌನ ತಾಳಿವೆ. ಆದರೆ ಆತನೊಂದಿಗೆ ಪ್ರಯಾಣ ಮಾಡುತ್ತಿದ್ದ ತಮಿಳು ನಾಡಿನ ಅಣ್ಣಾಮಲೈ ಎಂಬ ಎಡಬಿಡಂಗಿ ಸೂರ್ಯನನ್ನು ಕನವರಿಸುತ್ತ ಸಮರ್ಥಿಸುತ್ತಿದ್ದಾರೆ. ಇನ್ನು ತಮಿಳುನಾಡು ಉಸ್ತುವಾರಿ ಆಗಿರುವ ನಮ್ಮ ರಾಜ್ಯದ ಸಿ ಟಿ ರವಿ ಎಂಬ ಉದ್ಧಾಮ ಪಂಡಿತನಂತು ಸೂರ್ಯನನ್ನು ಎರ್ರಾಬಿರ್ರಿ ಸಮರ್ಥಿಸುತ್ತಿರುವುದು ನಗೆ ತರಿಸುತ್ತಿದೆ. ಈ ಘಟನೆಯು ಭಾರತದಲ್ಲಿ ಈಗ ವೇಗವಾಗಿ ಹರಡುತ್ತಿರುವ ಬಿಜೆಪಿ ಪುಢಾರಿಗಳ ಅಹಂಕಾರˌ ಸಂವಿಧಾನ ವಿರೋಧಿˌ ಕಾನೂನು ಬಾಹಿರ ಕೆಲಸಗಳು ಮತ್ತು ಅಧಿಕಾರದ ಬಲದಿಂದ ಏನನ್ನು ಬೇಕಾದರು ಮಾಡಿ ಸಮರ್ಥಿಸಿಕೊಳ್ಳುವˌ ತಿರುಚುವ ಮತ್ತು ಮುಚ್ಚಿಹಾಕುವ ಅಪಾಯಕಾರಿ ಮನೋಭಾವನೆಯನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಭಾರತದಲ್ಲಿ ಮೋದಿಯ ಆತಂಕಕಾರಿ ಹಾಗು ಅಘಾತಕಾರಿ ಆಡಳಿತದ ಮೂಲಕ ಬಲಪಂಥೀಯರು ಭಾರತವನ್ನು ಒಂದು ಧರ್ಮಾಂಧ ದೇಶ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಇಂದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವದಂತೂ ಸತ್ಯ.
~ ಡಾ. ಜೆ ಎಸ್ ಪಾಟೀಲ.