ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಈಗ ಮತ್ತೊಂದು ಕಿಚ್ಚು ಹೊತ್ತಿಕೊಂಡಿದೆ. ವಿಜಯನಗರದಲ್ಲಿರುವ ಮಸ್ಜಿದ್ ಎ ಅಲ್ ಖುಬ ಎಂಬ ಮಸೀದಿಯನ್ನ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ.
ಸಾರ್ವಜನಿಕರ ರಸ್ತೆ ಒತ್ತುವಾರಿ ಮಾಡಿ ಮಸೀದಿ ನಿರ್ಮಾಣದ ಆರೋಪ!
ಇದು ನಗರದ ವಿಜಯನಗರದಲ್ಲಿರುವ ಮಸ್ಜಿದ್ ಎ ಅಲ್ ಖುಬ ಮಸೀದಿ. ಮುಸ್ಲಿಮರು ಇಲ್ಲಿ ನಮಾಜ್ ಮಾಡ್ತಾರೆ. ಇಂತಹ ನಮಾಜ್ ಮಾಡುವ ಈ ಕಟ್ಟಡವನ್ನ ಈಗ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ. ಯಾಕಂದ್ರೆ ಈ ಮಸೀದಿಯೂ ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ನ ಒತ್ತುವರಿ ಮಾಡ್ಕೊಂಡು ಕಟ್ಟಲಾಗಿದೆ. ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನ ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶ ಮಾಡಿದ್ದು, ಇದೇ ಆದೇಶದ ಅನುಸಾರ ಬಿಬಿಎಂಪಿ ಮಸೀದಿಗೆ ಡೆಮಾಲಿಷನ್ ಆರ್ಡರ್ ನೀಡಿದೆ. ಒತ್ತುವರಿ ಮಾಡಲಾಗಿದೆ ಎಂಬ ಭಾಗವನ್ನ ತೆರವು ಮಾಡಲು ಮಸ್ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.
ಎರಡು ನಿವೇಶನಗಳ ಮಧ್ಯೆ ಇದ್ದ ಖಾಲಿ ಜಾಗ ಮಸೀದಿಯಿಂದ ಒತ್ತುವರಿ.!
ವಿಜಯನಗರದ ಈ ಮಸೀದಿ ನಿರ್ಮಾಣ ಆಗಿರೋದು ನಿವೇಶನ ಸಂಖ್ಯೆ13 ಹಾಗೂ 15 ರಲ್ಲಿ. ಮಸೀದಿ ನಿರ್ಮಾಣಕ್ಕೆ ನಿವೇಶನ ಸಂಖ್ಯೆ 13 ರ ಮಾಲೀಕರಾಗಿದ್ದ ಪಿ ಬಾಷಾ ಒಂದು ಟ್ರಸ್ಟ್ ಗೆ ಬರೆದುಕೊಟ್ಟಿದ್ದರು. ನಂತರ ನಿವೇಶನ ಸಂಖ್ಯೆ15 ರ ಮಾಲೀಕರು ಅಮೀನಾ ಎಂಬುವವರು ಕೂಡಾ ನಿವೇಶನವನ್ನ ಮಸೀದಿಗೆ ನೀಡಿದ್ದಾರೆ. ಈ ಎರಡು ನಿವೇಶನಗಳನ್ನ ಒಂದೂಗೂಡಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆದರೆ, ಎರಡು ಸೈಟ್ ಗಳ ಮಧ್ಯೆ ನಿವೇಶನ ಸಂಖ್ಯೆ14 ಕೂಡಾ ಇತ್ತಂತೆ. ಅದನ್ನ ಒತ್ತುವರಿ ಮಾಡ್ಕೊಂಡು ಮಸೀದಿ ನಿರ್ಮಾಣ ಮಾಡಲಾಗಿದೆಯಂತೆ. ನಿವೇಶನ ಸಂಖ್ಯೆ ಹದಿನಾಲ್ಕು 5.5 ಅಡಿ ಅಗಲ ಹಾಗೂ 45 ಅಡಿ ಉದ್ದವಿತ್ತು. ಅದನ್ನು ಸಾರ್ವಜನಿಕರ ಓಡಾಟಕ್ಕೆ ಬಳಸಿಕೊಳ್ಳಲಾಗಿತ್ತಂತೆ. ಅದನ್ನ ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆದರೆ ಇದಕ್ಕೆ ಹಿಂದೆ ಬಿಬಿಎಂಪಿ ಖಾತಾ ಕೂಡಾ ಮಾಡಿಕೊಟ್ಟಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮ ಆದೇಶ ಹೊರಡಿಸಲಾಗಿದೆ. ಅದರಂತೆ ನಿವೇಶನ ಸಂಖ್ಯೆ 14ರ ಐದು ಅಡಿ ಜಾಗ ಪಾಲಿಕೆ ಸ್ವತ್ತೆಂದು ಗೊತ್ತಾಗಿದ್ದು ತಕ್ಷಣ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ. ಅದರಂತೆ ಬಿಬಿಎಂಪಿ ಕೂಡಾ ಮಸೀದಿಗೆ ಡೆಮಾಲಿಷನ್ ನೋಟೀಸ್ ಜಾರಿ ಮಾಡಿದೆ.
5 ಅಡಿ ಅಗಲದ ಸಾರ್ವಜನಿಕ ರಸ್ತೆ ಒತ್ತುವರಿ.. ಸ್ಥಳೀಯರ ಆರೋಪ!
ಈಗ ಬಿಬಿಎಂಪಿ ಒತ್ತುವರಿ ಎನ್ನಲಾದ ಜಾಗವನ್ನು ಡೆಮಾಲಿಷನ್ ಮಾಡಿದ್ರೆ ಮಸೀದಿಯ ಮಧ್ಯ ಭಾಗವನ್ನ ಹೊಡೆದು ಹಾಕಬೇಕು. ಅಲ್ಲಿಗೆ ಮಸೀದಿ ಸಂಪೂರ್ಣವಾಗಿ ಡೆಮಾಲಿಷನ್ ಆಗುತ್ತೆ. ಆದರೆ ಇದಕ್ಕೆ ಕೆಲ ಸ್ಥಳೀಯ ಜನ ನಾಯಕರು ಅವಕಾಶ ನೀಡ್ತಿಲ್ಲ. ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದು, ಡೆಮಾಲಿಷನ್ ಗೆ ತಡೆ ನೀಡಿದ್ದಾರಂತೆ. ಈಗ ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಒತ್ತುವರಿ ಜಾಗವನ್ನ ಡೆಮಾಲಿಷನ್ ಮಾಡಬೇಕು ಅಂತಾ ಸ್ಥಳೀಯ ಹಿಂದೂ ಪರ ಸಂಘಟನೆಗಳು ಪಟ್ಟುಹಿಡಿದಿವೆ. ಒಟ್ಟಾರೆ, ಮಸೀದಿಯ ಮುಖಂಡರ ಸಂಪರ್ಕ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾವು ಕಾನೂನು ಹೋರಾಟ ಮಾಡ್ತೇವೆ. ನಮ್ಮ ಬಳಿ ಎಲ್ಲಾ ದಾಖಲೆಗಳು ಇದೆ ಅಂತಾ ಮಸೀದಿಯವರು ವಾದ ಮಾಡ್ತಾಯಿದ್ದು, ಬಿಬಿಎಂಪಿ ಮಸೀದಿಗೆ ನೀಡಿದ್ದ ಖಾತಾವನ್ನ ರದ್ದು ಮಾಡಿದೆ. ಈಗ ಮಸೀದಿ ಕೆಡವಲು ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿದೆ.