ಕರ್ನಾಟಕ ಯುವ ನೀತಿ- 2021 ರೂಪಿಸಲು ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥಾಪಕ ಡಾ.ಬಾಲಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆಯ ಸಮಿತಿಯನ್ನು ರಚಿಸಿದೆ.
ಬೆಂಗಳೂರಿನ ಮಲ್ಲಿಕಾರ್ಜುನ್ ಬಿ.ಪಾಟೀಲ್, ವಿನೋದ್ ಕೃಷ್ಣಮೂರ್ತಿ, ನೆಹರೂ ಯುವ ಕೇಂದ್ರದ ನಿರ್ದೇಶಕ ಎಂ.ಎನ್.ನಟರಾಜ್, ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ದೊಡ್ಡಬಳ್ಳಾಪುರದ ಡಾ.ಡಿ.ಎಸ್.ಕೃಷ್ಣ, ಮಂಡ್ಯದ ಕೆ.ನಾಗಣ್ಣಗೌಡ, ಬೇಲೂರಿನ ಸಂತೋಷ್ ಸೋಮಶೇಖರ್ (ಕೆಂಚಾಂಬ) ಅವರು ಸಮಿತಿ ಸದಸ್ಯರಾಗಿದ್ದಾರೆ. ಇವರ ಬಗ್ಗೆ ಅಂತಹ ಆಕ್ಷೇಪಗಳೇನೂ ಕೇಳಿ ಬಂದಿಲ್ಲ.
ಈ ಸಮಿತಿಯಲ್ಲಿ ಮೂರು ಹೆಸರುಗಳು ಈಗ ವಿವಾದಕ್ಕೆ ಈಡಾಗಿವೆ. ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ, ಜಗದೀಶ್ ಶೆಟ್ಟರ್ ಅವರ ಎರಡನೇ ಪುತ್ರ ಸಂಕಲ್ಪ್ ಶೆಟ್ಟರ್ ಮತ್ತು ಕೇಂದ್ರ ಮಾಜಿ ಸಚಿವ ದಿ. ಅನಂತಕುಮಾರ್ ಪುತ್ರಿ ಐಶ್ವರ್ಯ ದಿನೇಶ್ ಅವರನ್ನು ಸಮಿತಿಯಲ್ಲಿ ಸೇರಿಸಿರುವುದು ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.
ಮೊದಲಿಗೆ ಚಕ್ರವರ್ತಿ ಸೂಲಿಬೆಲೆ. ಇತಿಹಾಸದ ಖಚಿತತೆಗೆ ಗೌರವ ಕೊಡದವರು ಭವಿಷ್ಯವನ್ನು ರೂಪಿಸಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಸೂಲಿಬೆಲೆ ಇತಿಹಾಸವನ್ನೆ ತಿರುಚಿ ಭಾಷಣಗಳನ್ನು ಕುಟ್ಟುತ್ತ ಒಂದು ತಲೆಮಾರಿನ ಹುಂಬ ಯುವಕರ ತಲೆಗೆ ಹುಳ ಬಿಟ್ಟವರು.
ಈ ದೇಶದ ಆರ್ಥಿಕತೆ ಅಧೋಗತಿಗೆ ಇಳಿದಾಗಲೂ ಅವರು ತಮ್ಮದೇ ಅಂಕಿಅಂಶಗಳ ಮೂಲಕ ದೇಶ ಸುಖಿಯಾಗಿದೆ ಎಂದು ರೀಲು ಬಿಡುತ್ತ ಬಂದವರು. ಈ ದೇಶದ ಯುವಕರು ಈಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಉದ್ಯೋಗದ್ದು. ಇಲ್ಲಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಎಲ್ಲ ವಿಫಲವಾಗಿವೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯೇ ಇಲ್ಲ. ಆದರೆ ಸೂಲಿಬೆಲೆ ಹಾಗೇನೂ ಆಗಿಲ್ಲ ಎಂಬಂತೆ ಬಿಂಬಿಸುತ್ತ ಬಂದವರು.
ಅವರು ಹಿಂದೂತ್ವದ ಅದರಲ್ಲೂ ಅಪಾಯಕಾರಿ ಹಿಂದೂತ್ವದ ಪ್ರತಿಪಾದಕರು. ಇತ್ತೀಚೆಗೆ ಅವರು ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಜನರನ್ನು ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ಬುದ್ಧಿವಾದ ಹೇಳಿದ್ದರು.
ಸೂಲಿಬೆಲೆ ಸಮಿತಿಯಲ್ಲಿ ಇರುವುದಾದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಗೆ ಹಾರಿಸಿ ಬಂದ ಡ್ರೋಣ್ ಪ್ರತಾಪ್ ಈ ಸಮಿತಿಯಲ್ಲಿ ಇರಲೇಬೇಕಿತ್ತು, ಛೇ ಸೂಲಿಬೆಲೆ ಪಕ್ಕ ಈ ಚೋಟಾ ಸುಳ್ಳುಗಾರ ಇರಲೇಬೇಕಿತ್ತು ಎಂದು ಜನ ವ್ಯಂಗ್ಯ ಮಾಡುತ್ತಿದ್ದಾರೆ. ಹಾಗೆಯೇ ಕರಾವಳಿಯ ಹಿಂದೂತ್ವವಾದಿ ಯುವ ಮುಖಂಡ ಶರಣ್ ಪಂಪ್ವೆಲ್ ಕೂಡ ಸಮಿತಿಯಲ್ಲಿ ಇದ್ದಿದ್ದರೆ ಸೂಪರ್ ಆಗುತ್ತಿತ್ತು ಎಂದೂ ಜನ ಕುಹಕ ಆಡುತ್ತಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ್ ಶೆಟ್ಟರ್ ಮತ್ತು ಅನಂತಕುಮಾರ್ ಪುತ್ರಿ ಐಶ್ವರ್ಯ ಅವರ ಸಾಧನೆ ಏನು? ಅವರು ಯುವ ಸಬಲೀಕರಣಕ್ಕೆ ಸಂಬಂಧಿಸಿದಂತೆ ಅಂತಹ ಯಾವ ಘನ ಕಾರ್ಯ ಮಾಡಿದ್ದಾರೆ? ತಜ್ಞರ ಸಮಿತಿಯಲ್ಲಿ ಸೇರುವ ಅರ್ಹತೆ ಅವರಿಗೆ ಇದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕರ ಮಕ್ಕಳು ಎಂಬುದೇ ಇವರ ಅರ್ಹತೆ, ಇಲ್ಲೂ ವಂಶಪಾರಂಪರ್ಯ ಮುಂದುವರೆಸಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು!
ವಿಜ್ಞಾನ, ಕ್ರೀಡೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ವಿಭಿನ್ನ ಗುಂಪುಗಳಿಗೆ ಸೇರಿದವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಬೇಕಿತ್ತು. ಈ ರಾಜ್ಯದಲ್ಲಿ ಅಂತಹ ಸಾಧಕರಿಗೆ, ದೂರಗಾಮಿ ಆಲೋಚನೆ ಉಳ್ಳವರಿಗೇನೂ ಕೊರತೆ ಇಲ್ಲ ಅಲ್ಲವೇ?
ಈ ಹಿಂದೆ ರೋಹಿತ್ ಚಕ್ರತೀರ್ಥ ಎಂಬ ಸಂಘಪರಿವಾರದ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ಸೇರಿಸುವ ಮೂಲಕ ಬಿಜೆಪಿ ಅಪಾಯಕಾರಿ ನಿಲುವು ತಳೆದಿತ್ತು. ಈಗ ಅದರ ಮುಂದುವರಿಕೆಯಾಗಿ ಸೂಲಿಬೆಲೆ, ಸಂಕಲ್ಪ್, ಐಶ್ವರ್ಯ ಅವರು ಈ ರಾಜ್ಯದ ಯುವಜನತೆಗೆ ನೀತಿಯೊಂದನ್ನು ರೂಪಿಸಲಿದ್ದಾರೆ. ಜೈ ಯುವ ಶಕ್ತಿ!