ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳಲಾರಂಭಿವೆ. ಕೊಡಗಿನಲ್ಲೂ ಕೂಡ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿದ್ದು, ರಾಜಕೀಯ ಪಕ್ಷದ ಆಕಾಂಕ್ಷಿಗಳು ತಮ್ಮ ತಮ್ಮ ಲಾಭಿ ಪ್ರಾರಂಭಿಸಿದ್ದಾರೆ. ಒಂದೆಡೆ ಮೀಸಲಾತಿ ಬಗ್ಗೆ ಅಸಮಾಧಾನದ ಕೂಗು, ಇನ್ನೊಂದೆಡೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರಿಗಳಿಗೆ ಟಿಕೆಟ್ ಕೊಡುತ್ತಾರೆ ಎಂಬ ಆತಂಕ. ತಾಲೂಕು ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದಾಗಿ ರಾಜಕೀಯ ಪಕ್ಷ ಬದಲಾಯಿಸುವುದು, ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುತದೆ. ಈಗಲೂ ಅದೇ ನಡೆಯುತ್ತಿದೆ.
ತಾಲೂಕು ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಗಳ ಮೀಸಲಾತಿಯನ್ನು ” ಕರ್ನಾಟಕ ಗ್ರಾಮ ಸ್ವರಾಜ್ಯ ಹಾಗು ಪಂಚಾಯತ್ ರಾಜ್ 1993 ಅಧಿನಿಯಮದಡಿಯಲ್ಲಿ ಪ್ರಕರಣ 123, 161, 162 ,163 ಹಾಗು ಸಂವಿಧಾನದ ಆರ್ಟಿಕಲ್ 243 D ಪ್ರಕಾರ ನಿರ್ಧರಿಸಲಾಗುತ್ತದೆ. ಈ ಮೇಲೆ ಉಲ್ಲೇಖಿಸಿರುವ ಸೆಕ್ಷನ್ ಗಳ ಅನ್ವಯ ಐದು ಪ್ರಕಾರದ ಮೀಸಲಾತಿಗಳನ್ನು ಒಳಗೊಂಡಿರುತ್ತದೆ (1) ಮಹಿಳೆ . (2) ಪರಿಶಿಷ್ಟ ಪಂಗಡ . (3) ಪರಿಶಿಷ್ಟ ಜಾತಿ. (4) ಹಿಂದುಳಿದವರ್ಗ ಪ್ರವರ್ಗ (ಆ ) ಹಾಗು (5) ಹಿಂದುಳಿದವರ್ಗ ಪ್ರವರ್ಗ (ಬಿ ). ಪರಿಶಿಷ್ಟ ಪಂಗಡ ಹಾಗು ಪರಿಶಿಷ್ಟ ಜಾತಿಯ ಮೀಸಲಾತಿಯ ಪ್ರಮಾಣವನ್ನು ಆಯಾ ಜಿಲ್ಲೆಯ ಪರಿಶಿಷ್ಟ ಪಂಗಡ ಹಾಗು ಪರಿಶಿಷ್ಟ ಜಾತಿಯ ಶೇಕಡಾವಾರು ಜನಸಂಖ್ಯೆಗೆ (Percentage of SC & ST Population ) ಅನುಸಾರವಾಗಿ ನಿರ್ಧರಿಸಲಾಗುತ್ತದೆ . ಶೇಕಡಾ 33% ಮೀಸಲಾತಿಯನ್ನು ಹಿಂದುಳುದ ವರ್ಗದವರಿಗೆ ಮೀಸಲಾಗಿದ್ದು , ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಹಾಗು ಹಿಂದುಳಿದ ವರ್ಗದ ಮೀಸಲಾತಿ ಶೇ 50% ಮೀರಬಾರದು . ಹಾಗಾಗಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ನೀಡಿದ ನಂತರ ಶೇ 50% ರಲ್ಲಿ ಉಳಿದ ಮೀಸಲಾತಿಯನ್ನು ಶೇ. 33% ಮೀರದಂತೆ (OBC Reservation should not exceed 33%) ಹಿಂದುಳಿದ ವರ್ಗದವರಿಗೆ ನೀಡಲಾಗವುದು . ಈ ಎಲ್ಲ ಮೀಸಲಾತಿಗಳನ್ನು ಒಳಗೊಂಡಂತೆ ಶೇ 50% ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗವುದು ( Horizontal Reservation ).
ತಾಲೂಕು ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿಯನ್ನು ಚುನಾವಣಾ ಆಯೋಗವು ಅಧಿನಿಯಮದ ಅನುಸಾರ ನಿರ್ಧರಿಸುತ್ತದೆ . ಅಧಿನಿಯಮದ ಪ್ರಕಾರ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗು ಮಹಿಳೆಯರ ಹೆಚ್ಚು ಜನಸಂಖ್ಯೆ ಇರುವ ಕ್ಷೇತ್ರಗಳನ್ನು ಪಟ್ಟಿ ಮಾಡಿ ಆವರ್ತದ (Rotation) ಆದರದ ಮೇಲೆ ಮೀಸಲಾತಿ ನೀಡಲಾಗವುದು. ಕ್ಷೇತ್ರದ ಪುನರ್ವಿಂಗಡಣೆ ಆದಲ್ಲಿ ಆಯಾ ಕ್ಷೇತ್ರದ ದೊಡ್ಡ ಪ್ರದೇಶದ ಹಿಂದಿನ ಮೀಸಲಾತಿಯನ್ನು ಪರಿಗಣಿಸಲಾಗವುದು. ವಿವಿಧ ಕ್ಷೇತ್ರಗಳ ಸಣ್ಣ ಸಣ್ಣ ಪ್ರದೇಶಗಳನ್ನು ಸೇರಿಸಿ ಪುನಾರಚಿಸಿದ ಕ್ಷೇತ್ರವನ್ನು ಹೊಸ ಮೀಸಲಾತಿಯೊಂದಿಗೆ ಹೊಸ ಕ್ಷೇತ್ರ ಎಂದು ಪರಿಗಣಿಸಲಾಗವುದು.
ಕೊಡಗಿನಲ್ಲಿ ಎರಡು ಹೊಸ ತಾಲೂಕು ರಚನೆಯ ಹಿನ್ನೆಲೆಯಲ್ಲಿ ಕೊಡಗಿನ ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪುನರ್ವಿಂಗಡಿಸಲಾಯಿತು. ಪುನರ್ವಿಂಗಡನೆಯ ನಂತರ ಜಿಲ್ಲೆಯಲ್ಲಿ 29 ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗು 52 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ರಚಿಸಲಾಯಿತು .
ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸ್ತುತ ಡೆಮೊಗ್ರಫಿಯನ್ನು ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡೋಣ .ಜಿಲ್ಲೆಯ ಹಾಲಿ ಜನಸಂಖ್ಯೆ 5,96,718 (2019ರ ವಿಶೇಷ ಗುರುತಿನ ಪ್ರಾಧಿಕಾರ ಅಂಕಿ ಅಂಶಗಳ ಪ್ರಕಾರ) ಅದರಲ್ಲಿ 4,19,550 ಮತದಾರರಿದ್ದಾರೆ . ಒಟ್ಟು ಜನಸಂಖ್ಯೆಯಲ್ಲಿ 87,274 ಮುಸ್ಲಿಂ ( ಶೇ 15.74%) , 17,130 ಕ್ರಿಶ್ಚಿಯನ್ (ಶೇ 3.09%) ಹಾಗು 4,48,986 ಹಿಂದೂ (ಶೇ 80.97%) ಗಳಿದ್ದಾರೆ .
ಶೇ 80.97% ಹಿಂದೂ ಸಮುದಾಯದಲ್ಲಿ 73,584 ಪರಿಶಿಷ್ಟ ಜಾತಿಯವರು ( ಶೇ 13.27%) ಮತ್ತು 58,054 (ಶೇ 10.47%) ಪರಿಶಿಷ್ಟ ಪಂಗಡ ದವರು ಇದ್ದರೆ, ಹಿಂದುಳಿದ ಕೊಡಗು ಭಾಷಿಗ ಸಮುದಾಯಗಳನ್ನು ಒಳಗೊಂಡಂತೆ ಶೇ 36% ಹಿಂದುಳಿದವರಿದ್ದಾರೆ . ರಾಜಕೀಯ ಪಕ್ಷಗಳು ಪ್ರಬಲ ಸಮುದಾಯಗಳ ಮತಗಳತ್ತ ಗಮನ ಹರಿಸುತಿದ್ದು , ದೊಡ್ಡ ಪ್ರಮಾಣದ ಹಿಂದುಳಿದ ಮತಗಳನ್ನು ಪರಿಗಣಿಸುತ್ತಿಲ್ಲ . ಇತ್ತೀಚಿನ ದಿನಗಳಲ್ಲಿ ಕೊಡಗಿನ ಹಲವು ಅಂಚಿನಲ್ಲಿರುವ ಹಿಂದುಳಿದ ಸಮುದಾಯಗಳು ಧ್ರುವೀಕರಿಸುತಿದ್ದು , ಮುಂದಿನ ರಾಜಕೀಯ ಲೆಕ್ಕಾಚಾರ ಬದಲಾಗಬಹುದು .
ಹಿಂದುಳಿದ ಹಾಗು ಪರಿಶಿಷ್ಟ ವರ್ಗದವರಿಗೆ ಸಮಾನಾಂತರ ಹಾಗೂ ಲಂಬಾಂತರ ಮೀಸಲಾತಿ ನೀಡಿದ್ದರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅಂಚಿನಲ್ಲಿರುವ ಹಿಂದುಳಿದ ಹಾಗು ಪರಿಶಿಷ್ಟ ಸಮುದಾಯಗಳನ್ನು ಎಲ್ಲರನ್ನೂ ಒಳಗೊಳ್ಳುವ ಸಹಭಾಗಿತ್ವ ರಾಜಕಾರಣದಿಂದ ದೂರ ಇಟ್ಟಿರುವುದು. ಮೀಸಲಾತಿಯ ಹೊಸ ಚರ್ಚೆ ರಾಜಕಾರಣದ ಹೊಸ ಅಧ್ಯಾಯ ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.
- ಪ್ರಶಾಂತ್ ಭೀಮಯ್ಯ
ಸಿಂಡಿಕೇಟ್ ಸದಸ್ಯ , ಕನ್ನಡ ವಿಶ್ವವಿದ್ಯಾಲಯ, ಹಂಪಿ