ತೂತುಕುಡಿ ಜಿಲ್ಲೆಯ ಸಿವಕಲೈ ಗ್ರಾಮದಲ್ಲಿ ಸಿಕ್ಕಿದ ಆವಯಿಕ ಅಂಶಗಳ ಕಾರ್ಬನ್ ಡೇಟಿಂಗ್ ಪರೀಕ್ಷೆಯು ತಾಮಿರಬರಣಿ ನಾಗರೀಕತೆ ಕನಿಷ್ಠ 3200 ವರ್ಷಗಳಷ್ಟು ಪುರಾತನವಾದದ್ದು ಎಂಬುದನ್ನು ಬಿಚ್ಚಿಟ್ಟಿದೆ. ಇದರ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ತಿರುವನವೇಲಿಯಲ್ಲಿ ಇಲ್ಲಿ ಸಿಕ್ಕಿದ ವಸ್ತುಗಳನ್ನು ಪ್ರದರ್ಶಿಸಲು ಹದಿನೈದು ಕೋಟಿ ವೆಚ್ಚದ ವಸ್ತುಸಂಗ್ರಹಾಲಯವೊಂದನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈ ಸಂಗ್ರಹಾಲಯಕ್ಕೆ ತಾಮಿರಬರಣಿ ನದಿಯ ಪುರಾತನ ಹೆಸರಾದ ಪೊರುನೈ ಎಂದು ಹೆಸರಿಡಲಾಗುತ್ತದೆ.
ಆಗಸ್ಟ್ 27ರಂದು ಅಮೇರಿಕಾದ ಮಿಯಾಮಿಯ ಬೆಟಾ ಅನಾಲಿಟಿಕ್ ಟೆಸ್ಟಿಂಗ್ ಲಾಬೋರೇಟರಿಯು ತೂತುಕುಡಿ ಜಿಲ್ಲೆಯ ಸಿವಕಲೈ ಗ್ರಾಮದಲ್ಲಿ ಹೂಳಲಾಗಿದ್ದ ಮಡಿಕೆಯೊಂದರಲ್ಲಿ ಸಿಕ್ಕಿದ್ದ ಅಕ್ಕಿ ಮತ್ತು ಮಣ್ಣಿನ ಅಂಶಗಳ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸಿದೆ. ಈ ಫಲಿತಾಂಶದ ಪ್ರಕಾರ ಸಿಕ್ಕಿದ ಅಂಶಗಳು ಕ್ರಿಸ್ತಪೂರ್ವ 1115 ವರ್ಷದ್ದಾಗಿದೆ, ಅಂದರೆ, 3200 ವರ್ಷಗಳಷ್ಟು ಹಳೆಯದ್ದು. ತಮಿಳು ನಾಡಿನಲ್ಲಿ ನಡೆದಿರುವ ಉತ್ಖನನಗಳಲ್ಲಿ ಇದೇ ಅತ್ಯಂತ ಪುರಾತನವಾದದ್ದು.
ತಮಿಳಿಗರ ವ್ಯವಹಾರ ಸಂಪರ್ಕಗಳ ಕುರಿತು ಕಂಡುಹಿಡಿಯುವುದಕ್ಕೆ ಇತರೆ ರಾಜ್ಯಗಳಲ್ಲೂ ಉತ್ಖನನ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಮೊದಲಿಗೆ ಕೇರಳದ ಬಂದರು ನಗರವಾದ ಮುಸಿರಿಯಲ್ಲಿ (ಇಂದಿನ ಪಟ್ಟಣಂ) ಚೇರರ ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಅಲ್ಲಿನ ತಜ್ಞರು ಉತ್ಖನನವನ್ನು ಆರಂಭಿಸುತ್ತಾರೆ. ನಂತರ ಆಂಧ್ರ ಪ್ರದೇಶದ ವೆಂಗಿ, ಒಡಿಶಾ ರಾಜ್ಯದ ಪಾಲೂರು ಮತ್ತು ಕರ್ನಾಟಕದ ತಲೈಕುಡಿಯಲ್ಲೂ ಉತ್ಖನನಗಳನ್ನೂ ನಡೆಸಲಾಗುವುದು.
ತಮಿಳರ ಸಂಪರ್ಕಗಳ ಕುರಿತು ಅಧ್ಯಯಿಸಲು ಈಜಿಪ್ಟ್ ದೇಶದ ಪರ್ಣಿಕಾ ಅನೆಕ್ಕಾ ಮತ್ತು ಕ್ವಾಕರ್ ಅಲ್-ಕಾದಿಮ್ ನಲ್ಲೂ ಉತ್ಖನನಗಳನ್ನು ರಾಜ್ಯದ ಪುರಾತತ್ವಶಾಸ್ತ್ರ ಇಲಾಖೆ ನಡೆಸುವುದಾಗಿ ಸ್ಟಾಲಿನ್ ಹೇಳಿದ್ದಾರೆ. ಈ ಪ್ರದೇಶಗಳು ಒಂದಾನೊಂದು ಕಾಲದಲ್ಲಿ ರೋಮನ್ ರಾಜ್ಯದ ಭಾಗವಾಗಿದ್ದವು. ಒಮಾನ್ ದೇಶದ ಖೋರ್ ರೋರಿ ಪ್ರದೇಶದಲ್ಲಿ ಪ್ರೋಟೋ-ತಮಿಳ್ ಲಿಪಿಗಳು ಇರುವ ಮಡಿಕೆಗಳು ಸಿಕ್ಕಿರುವ ಕಾರಣದಿಂದಾಗಿ ಅಲ್ಲಿಯೂ ಅಧ್ಯಯನಗಳನ್ನು ನಡೆಸಲಾಗುವುದು. ಈ ಅಧ್ಯಯನಗಳನ್ನೂ ಆಯಾ ದೇಶದ ಪುರಾತತ್ವಶಾಸ್ತ್ರಜ್ಞರ ಸಹಕಾರದೊಂದಿಗೆ ನಡೆಸಲಾಗುತ್ತದೆ.
ಈ ಉತ್ಖನನಗಳನ್ನು ಹೊರತುಪಡಿಸಿ ಚೋಳಾ ರಾಜ್ಯದ ಸಂಪರ್ಕಗಳನ್ನು ಅನ್ವೇಷಿಸಲು ಇಂಡೋನೇಶಿಯಾ, ತೈಲ್ಯಾಂಡ್, ಮಲೇಶೀಯಾ, ವಿಯೆಟ್ನಾಮ್ ಗಳಂತಹ ದಕ್ಷಿಣಪೂರ್ವ ಏಷಿಯಾದ ರಾಷ್ಟ್ರಗಳಲ್ಲೂ ಉತ್ಖನನಗಳನ್ನು ನಡೆಸಲಾಗುವುದು.
ಹೂಳಿಕೆಯ ಮಡಿಕೆಯಲ್ಲಿ ಸಿಕ್ಕಿದ ಅಕ್ಕಿ ಮತ್ತು ಮಣ್ಣಿನ ಅಂಶವನ್ನು ಮಿಯಾಮಿಯ ಪ್ರಯೋಗಾಲಯಕ್ಕೆ ಕಾರ್ಬನ್ ಡೇಟಿಂಗ್ ಗಾಗಿ ಕಳುಹಿಸಲಾಗಿತ್ತು ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಸಿವಕಲೈ ಉತ್ಖನನಗಳ ಮಹತ್ವ
3200 ವರ್ಷಗಳಷ್ಟು ಹಿಂದೆ ದಕ್ಷಿಣ ಭಾರತದಲ್ಲಿ ನಾಗರೀಕತೆಯೊಂದು ಇದ್ದದ್ದು ಕಂಡುಬಂದಿರುವುದರಿಂದ ಆ ನಾಗರೀಕತೆ ಸಿಂಧೂ ನಾಗರೀಕತೆಯ ನಂತರದ ಭಾಗವಾಗಿರಬಹುದು ಎಂಬ ಯೋಚನೆ ತಮಿಳು ನಾಡಿನಲ್ಲಿ ಸಂಚಲನ ಮೂಡಿಸಿದೆ.
ಈ ಉತ್ಖನನದ ಮಹತ್ವದ ಕುರಿತು ಮಾತನಾಡುತ್ತಾ ಬರಹಗಾರರು-ಹೋರಾಟಗಾರರು ಆಗಿರುವ ನಾದಿಕಾ ನಡ್ಜಾ ಹೀಗೆ ಹೇಳಿದರು, “ಇರಾವತಂ ಮಹಾದೇವನ್ (ಭಾರತೀಯ ಶಾಸನತಜ್ಞ ಮತ್ತು ನಾಗರೀಕ ಸೇವಕ) ಮತ್ತು ಆಸ್ಕೋ ಪರ್ಪೋಲಾ (ಫಿನ್ಲ್ಯಾಂಡಿನ ಭಾರತಶಾಸ್ತ್ರಜ್ಞ) ಅಂತಹವರು ಸಿಂಧೂ ನಾಗರೀಕತೆ ದ್ರಾವಿಡ ನಾಗರೀಕತೆಯಾಗಿತ್ತು ಎಂದು ಎಂದಿನಿಂದಲೂ ನಂಬಿದ್ದಾರೆ. ಹೊಸ ಅಧ್ಯಯನಗಳು ಅಚ್ಚ ದ್ರಾವಿಡವಾದ ತಮಿಳು ಭಾಷೆಯನ್ನು ಅಥವಾ ಅದಕ್ಕೆ ಹತ್ತಿರವಾದಂತಹ ಪ್ರೋಟೋ ದ್ರಾವಿಡ ಭಾಷೆಯೊಂದನ್ನು ಅಲ್ಲಿನ ನಿವಾಸಿಗಳು ಬಳಸುತ್ತಿದ್ದರು ಎಂದು ತೋರಿಸಿದೆ. ಸಿಂಧು ನಾಗರೀಕತೆ ಕ್ರಿಸ್ತಪೂರ್ವ 1600-1700ರ ಹೊತ್ತಿಗೆ ಪತನಗೊಂಡಿತ್ತು (ಕ್ರಿಸ್ತಪೂರ್ವ 1900ಕ್ಕೂ ಮುನ್ನಕ್ಕೆ ಇದೂ ವಿಸ್ತರಿಸುತ್ತದೆ). ಕ್ರಿಸ್ತಪೂರ್ವ 1200 ಹೊತ್ತಿಗೆ ಸಿಂಧೂ ನಾಗರೀಕತೆ ಅಸ್ತಿತ್ವದಲ್ಲಿಯೇ ಇರಲಿಲ್ಲ. ಈಗ ತಮಿಳುನಾಡಿನಲ್ಲಿ ಕ್ರಿಸ್ತಪೂರ್ವ 1200ರ ಹೊತ್ತಿಗೆ ನಾಗರೀಕತೆಯೊಂದಿತ್ತು ಎಂಬುದು ಕಂಡುಬಂದಿದೆ. ಇದರ ಮೂಲಕ ಸಿಂಧೂ ನಾಗರೀಕತೆ ಮತ್ತು ತಮಿಳರ ನಾಗರೀಕತೆಯ ನಡುವೆ ನಾವು ಒಂದು ಕೊಂಡಿಯನ್ನು ನಿರ್ಮಿಸಬಹುದಾಗಿದೆ. ತಮಿಳರು ಬಹುಶಃ ಎರಡೂ ಸ್ಥಳಗಳಲ್ಲಿ ವಾಸ ಮಾಡಿ ಎರಡೂ ಪ್ರದೇಶಗಳಲ್ಲಿ ವ್ಯವಹಾರ ಸಂಪರ್ಕಗಳನ್ನು ಹೊಂದಿರಬಹುದು.”
ಕೀಳಡಿ, ಕೊರ್ಕೈ, ಆದಿಚ್ಚನಲ್ಲೂರು ಮತ್ತು ಇತರ ಪ್ರದೇಶಗಳಲ್ಲಿ ನಡೆದ ಉತ್ಖನನಗಳ ಮೂಲಕ ಸ್ಥಾಪಿತವಾದ ಕಾಲಮಾನಕ್ಕೂ ಪುರಾತನವಾದ ಕಾಲವನ್ನು ಸಿವಕಲೈ ಉತ್ಖನನ ಸ್ಥಾಪಿಸುತ್ತದೆ. ಈ ಹಿಂದೆ, ಆದಿಚ್ಚನಲ್ಲೂರಿನ ಉತ್ಖನನ ಕ್ರಿಸ್ತಪೂರ್ವ 980ರ ಕಾಲದಲ್ಲಿ ನಾಗರೀಕತೆಯೊಂದಿತ್ತು ಎಂದು ಸುಳಿವು ನೀಡಿತ್ತು.
ಮುಖ್ಯಮಂತ್ರಿ ಸ್ಟಾಲಿನ್ ಉತ್ಖನನಗಳಲ್ಲಿ ಸಿಕ್ಕಿದಂತಹ ಹಲವಾರು ವಸ್ತುಗಳ ಬಗ್ಗೆಯೂ ಮಾತನಾಡಿದರು. ಕೀಳಡಿಯಲ್ಲಿ ಇತ್ತೀಚೆಗಷ್ಟೇ ಕೆಲವು ಬೆಳ್ಳಿ ನಾಣ್ಯಗಳು ಸಿಕ್ಕಿದ್ದವು. ಸೂರ್ಯ, ಚಂದ್ರ ಮತ್ತು ಇತರ ರೇಖಾಗಣಿತಾತ್ಮಕ ಚಿತ್ರಗಳನ್ನು ಹೊಂದಿರುವ ಈ ನಾಣ್ಯಗಳು ಕ್ರಿಸ್ತಪೂರ್ವ ನಾಕನೇ ಶತಮಾನಕ್ಕೆ ಸೇರಿದ್ದವು ಎಂದು ಅಧ್ಯಯನಗಳು ತಿಳಿಸಿವೆ. ಇದು ಮೌರ್ಯರ ರಾಜ್ಯಭಾರಕ್ಕೂ ಹಿಂದನ ಕಾಲವಾಗಿದೆ.
ಆದಿಚ್ಚನಲ್ಲೂರು ಮತ್ತು ಕೊರ್ಕೈ ಗಳಿನ ಉತ್ಖನನಗಳು ಕ್ರಿಸ್ತಪೂರ್ವ 9ನೇ ಮತ್ತು 8ನೇ ಶತಮಾನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಪೊರುನೈ ನದಿಯ ದಡದಲ್ಲಿ ಒಂದು ಪುರಾತನ ನಾಗರೀಕತೆ ಬೆಳೆದಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ.
ಆದಿಚ್ಚನಲ್ಲೂರು, ಕೋರ್ಕೈ ಮತ್ತು ಸಿವಕಲೈ – ಈ ಎಲ್ಲಾ ಸ್ಥಳಗಳು ಪುರಾತನ ಪೊರುನೈ (ತಾಮಿರಬರಣಿ ನದಿ) ನದಿಯ ದಡದಲ್ಲಿದ್ದು ಪ್ರಸ್ತುತವಾಗಿ ತಮಿಳು ನಾಡಿನ ತೂತುಕುಡಿ ಜಿಲ್ಲೆಯಲ್ಲಿವೆ.
“ಈ ಉತ್ಖನನಗಳು ಬಹಳ ಮಹತ್ವದ್ದಾಗಿವೆ.” ಎನ್ನುತ್ತಾರೆ ನಾದಿಕಾ. ಮೊದಲೆಯನದ್ದೇನಂದರೆ, ಈ ಹಿಂದೆ ದಕ್ಷಿಣ ಭಾರತದಲ್ಲಿ ಯಾವುದೇ ನಾಗರೀಕತೆಯಿರಲಿಲ್ಲ ಎಂಬ ನಂಬಿಕೆಯಾಗಿತ್ತು. “ಭಾರತ ಉಪಖಂಡದಲ್ಲಿ ಮೊದಲ ನಾಗರೀಕತೆ ಸಿಂಧು ನದಿಯ ದಡದಲ್ಲಿ ಉಗಮವಾಯಿತು. ಅದಾದ ನಂತರ ಎರಡನೇ ನಾಗರೀಕತೆ ಗಂಗೆಯ ದಡದಲ್ಲಿ ಮೌರ್ಯರ ಕಾಲದಲ್ಲಿ ಬೆಳೆಯಿತು ಎಂಬ ನಂಬಿಕೆಯಿತ್ತು. ಇವಾಗ ದೊರಕಿರುವ ಮಾಹಿತಿಯೇನೆಂದರೆ ಮೌರ್ಯರಿಗೂ ಮುನ್ನ ಆದಿಚ್ಚನಲ್ಲೂರಿನಲ್ಲಿ ಬೆಳ್ಳಿ ನಾಣ್ಯಗಳು ಚಾಲ್ತಿಯಲ್ಲಿದ್ದವು.”
ಕೀಳಡಿಯ ಉತ್ಖನನಗಳು ನಿದರ್ಶಿಸುವ ಮತ್ತೊಂದು ಅಂಶವೆಂದರೆ ಕ್ರಿಸ್ತಪೂರ್ವ 600ರ ಕಾಲಕ್ಕೆ, ಅಂದರೆ 2600 ವರ್ಷಗಳ ಹಿಂದೆಯೂ ಸಾಮಾನ್ಯ ತಮಿಳರಿಗೆ ಓದಲು ಬರುತ್ತಿತ್ತು. “ತಮಿಳು ಸಂಗಮ್ ಸಾಹಿತ್ಯವೂ ಸಹ ತಮಿಳರ ಸಂಸ್ಕೃತಿಯು ನಗರ ಸಂಸ್ಕೃತಿ ಎಂಬುದನ್ನು ಖಾತ್ರಿ ಪಡಿಸಿದೆ. ಈಗ ಸಿವಕಲೈನ ಪೊರುನೈ ನಾಗರೀಕತೆಯು ನಮ್ಮ ಊಹೆಗೂ ಮುನ್ನವೇ ಅಸ್ತಿತ್ವದಲ್ಲಿತ್ತು ಎಂಬುದು ತಿಳಿದುಬಂದಿದೆ. ಕ್ರಿಸ್ತಪೂರ್ವ 1155ರ ಹೊತ್ತಿಗೆ ತಮಿಳು ನಾಡಿನಲ್ಲಿ ವೃತ್ತಿಪದರಗಳು ಗಾಢವಾಗಿ ಬೆಳೆದುಕೊಂಡಿದ್ದವು. ಈಗ ಕಂಡುಬಂದಿರುವ ಮಾಹಿತಿ ಇವುಗಳಿಗೆ ಸಾಕ್ಷಿ ಒದಗಿಸುವುದಲ್ಲದೇ ಸಂಗಮ್ ಕಾಲವನ್ನೂ ಮೀರುವ ಮಾಹಿತಿಯನ್ನು ಒದಗಿಸಿದೆ.” ಎಂದು ನಾದಿಕಾ ವಿವರಿಸುತ್ತಾರೆ.