ಬಿಎಂಟಿಸಿ ಬಸ್ ಗಳು ರಸ್ತೆ ಮಧ್ಯೆಯೇ ಹೊತ್ತಿ ಉರಿದ ಪ್ರಕರಣವನ್ನ ಇಡೀ ಬೆಂಗಳೂರು ನೋಡಿದೆ. ಘಟನೆ ನಡೆಯುತ್ತಿದ್ದಂತೆ ಅಶೋಕ್ ಲೈಲೆಂಡ್ ಬಸ್ನಲ್ಲಿದ್ದ ದೋಷ ಕಾರಣ ಅಂತ ನಿಗಮವೂ ಬಹಿರಂಗವಾಗೇ ಒಪ್ಪಿಕೊಂಡಿದೆ. ಆದರೀಗ ಬಸ್ ಗೆ ಆದ ನಷ್ಟವನ್ನು ಡ್ರೈವರ್ ಕಂಡೆಕ್ಟರ್ಗಳಿಂದ ವಸೂಲಿ ಮಾಡಲು ನಿಗಮ ಮುಂದಾಗಿದೆ.
ಬಿಎಂಟಿಸಿ ಬಸ್ ಬೆಂಕಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್ !
ಅದು ಫೆಬ್ರವರಿ 1. ಸಮಯ ಮಧ್ಯಾಹ್ನ 1.30. ಸ್ಥಳ ಜಯನಗರದ ನಂದಾ ಥಿಯೇಟರ್ ಮುಂಭಾಗ. ಚಲಿಸುತ್ತಿದ್ದ ಬಿಎಂಟಿಸಿ ಮಿಡಿ ಬಸ್ ಏಕಾ ಏಕಿ ಧಗಧಗಿಸಿ ಹೊತ್ತಿ ಉರಿಯಲಾರಂಭಿಸಿತ್ತು. ಸಡನ್ ಇನ್ಸಿಡೆಂಟ್ನಿಂದ ಕಂಗಾಲಾದ ಡ್ರೈವರ್ ಮತ್ತು ಕಂಡೆಕ್ಟರ್ ಹಾಗೋ ಹೀಗೋ ಪ್ರಯಾಣಿಕರನ್ನ ಇಳಿಸಿ ಎಲ್ಲರನ್ನೂ ಸೇಫ್ ಮಾಡಿದ್ದರು. ಆದರೆ ಬಸ್ ಮಾತ್ರ ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ಹೊತ್ತಿ ಉರಿದಿತ್ತು. ಈ ಘಟನೆಗೂ ಮುನ್ನ ಚಾಮರಾಜಪೇಟೆಯ ಮಕ್ಕಳಕೂಟದ ಬಳಿಯೂ ಇಂತಹದೇ ಘಟನೆ ನಡೆದಿತ್ತು. ಇದಾದ ಬಳಿಕ ಶೇಶಾದ್ರಿ ರಸ್ತೆಯಲ್ಲೂ ಇದೇ ರೀತಿ ಮಿಡಿಬಸ್ ಬೆಂಕಿಗಾಹುತಿಯಾಗಿತ್ತು.
ಸಿಬ್ಬಂದಿ ಬುಡಕ್ಕೆ ಬೆಂಕಿ ಹಚ್ಚಿದ ನಿಗಮದ ನೋಟೀಸ್ !
ಆದರೆ ಈ ಎಲ್ಲಾ ಘಟನೆಗೆ ಅಶೋಕ್ ಲೈಲೆಂಡ್ ಬಸ್ ನಲ್ಲಿದ್ದ ದೋಷ ಕಾರಣ ಅಂತ ರಿಪೋರ್ಟ್ ಸಹ ತಜ್ಞರಿಂದ ಬಿಎಂಟಿಸಿಗೆ ಸಲ್ಲಿಕೆ ಆಗಿತ್ತು. ಹೀಗಾಗೇ ಬಿಎಂಟಿಸಿ ಆ ಬ್ಯಾಚ್ ನಲ್ಲಿ ಖರೀದಿಸಿದ 186 ಮಿಡಿ ಬಸ್ಗಳನ್ನು ಸೇವೆಯಿಂದ ಹಿಂದಕ್ಕೆ ಪಡೆದಿತ್ತು. ಆದರೀಗ ಸಡನ್ ಆಗಿ ಈ ಘಟನೆಗೆ ನೌಕರರು ಕಾರಣ ಅಂತ ನಿಗಮ ನೋಟೀಸ್ ಜಾರಿಮಾಡಿದೆ
ಬಸ್ ಬೆಂಕಿಗೆ ತಾಂತ್ರಿಕ ವರ್ಗದ ಸಿಬ್ಬಂದಿ ಹಾಗೂ ಡ್ರೈವರ್ ಮತ್ತು ಕಂಡೆಕ್ಟರ್ ಕಾರಣ ಅಂತ ಬಿಎಂಟಿಸಿ ನೋಟೀಸ್ ಜಾರಿಮಾಡಿದೆ. ನೋಟೀಸ್ ಗೆ ಸರಿಯಾದ ಉತ್ತರ ಕೊಡಿ ಇಲ್ಲದಿದ್ದರೆ ಬಸ್ ಗೆ ಹಾನಿಯಾದ 13 ಲಕ್ಷದ 61 ಸಾವಿರದ 311ರೂಪಾಯಿನ್ನ ನಿಗಮಕ್ಕೆ ಪಾವತಿಸಿ ಎಂದು ನೋಟೀಸ್ ಇಶ್ಯೂ ಮಾಡಲಾಗಿದೆ. ನಿಗಮದ ಈ ಕ್ರಮ ಈಗ ನೌಕರರನ್ನ ಕಂಗಾಲು ಮಾಡಿದೆ. ನಿಯಮದ ಪ್ರಕಾರಣ 9 ಲಕ್ಷ ಕಿಲೋಮೀಟರ್ ಓಡಿಸಿದ ಬಸ್ಗಳನ್ನು ರಸ್ತೆಗಿಳಿಸುವಂತಿಲ್ಲ. ಹೀಗಿದ್ದರೂ ನಿಗಮದಲ್ಲಿ 12, 13 ಲಕ್ಷ ಓಡಿರೋ ಬಸ್ಗಳನ್ನು ನೀಡಲಾಗುತ್ತೆ. ತಾಂತ್ರಿಕ ದೋಷ ಇರೋದು ಗೊತ್ತಿದ್ರೂ ಬಸ್ ನೀಡಲಾಗುತ್ತೆ. ಇದೆಲ್ಲಾ ಇದ್ದು ಈಗ ಬಡಪಾಯಿ ನೌಕರರನ್ನ ಗುರಿಮಾಡೋದು ಎಷ್ಟು ಸರಿ ಎಂದು ನೌಕರರ ಮುಖಂಡರು ಸಿಡಿದೆದ್ದಿದ್ದಾರೆ.
ಇನ್ನು ಚಾಲಕ ನಿರ್ವಾಹಕ ಅವಘಡದ ವೇಳೆ ಕೆಲವೊಂದಿಷ್ಟು ಮುಂಜಾಗ್ರತೆ ವಹಿಸಬೇಕಿತ್ತು. ಅದನ್ನ ಮಾಡಿಲ್ಲ. ಇದರಿಂದ ನಿಗಮಕ್ಕೆ ನಷ್ಟವಾಗಿದೆ. ಇದೇ ಕಾರಣಕ್ಕೆ ನೋಟೀಸ್ ನೀಡಲಾಗಿದೆ ಎಂದು ಬಿಎಂಟಿಸಿ ಸಮಜಾಯಿಷಿ ನೀಡಿದೆ. ಒಟ್ಟಿನಲ್ಲಿ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆಹಾಕಿದ್ರಂತೆ ಅನ್ನೋಹಾಗಾಗಿದೆ ಬಿಎಂಟಿಸಿ ನೌಕರರ ಸ್ಥಿತಿ. ಈಗಾಗಲೇ ಸಂಬಳ ಭತ್ಯೆ ಇಲ್ಲದೇ ಕಂಗಾಲಾಗಿರುವ ನೌಕರರಿಗೆ ಈ ರೀತಿ ಲಕ್ಷ ಲಕ್ಷ ದ ನೋಟೀಸ್ ಜಾರಿಮಾಡಿರೋದು ದೊಡ್ಡ ಟೆಂಕ್ಷನ್ ತಂದಿಟ್ಟಿದೆ.