ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಕಳೆದ ವರ್ಷ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಒಗ್ಗೂಡಿದ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಪಂಜಾಬಿನಲ್ಲಿ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿವೆ.
ಸಂಯುಕ್ತ ಸಮಾಜ್ ಮೋರ್ಚಾ ಎಂದು ಕರೆಯಲ್ಪಡುವ ಪಕ್ಷವು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ. ಬಹುಶಃ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎನ್ನಲಾಗಿದೆ. ಆದರೂ ಕೆಲವು ಮೂಲಗಳು ಇದನ್ನು ನಿರಾಕರಿಸಿವೆ.
“ಎಸ್ಕೆಎಂ (ಸಂಯುಕ್ತ ಕಿಸಾನ್ ಮೋರ್ಚಾ) ವಿವಿಧ ಗುಂಪುಗಳ ಒಕ್ಕೂಟ ಸಂಸ್ಥೆಯಾಗಿತ್ತು. ನಾವು ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಗೆದ್ದಿದ್ದೇವೆ. ನಂತರ ನಮಗೆ ನಮ್ಮ ಕಾರ್ಯಕರ್ತರಿಂದ ಮಾತ್ರವಲ್ಲದೆ ಇತರ ಸಾಮಾನ್ಯ ಪಂಜಾಬಿಗಳಿಂದ ರಾಜಕೀಯಕ್ಕೆ ಇಳಿಯಲು ಒತ್ತಡವಿತ್ತು. ಆ ಒಂದು ವರ್ಷದ ಯುದ್ಧವನ್ನು ಗೆದ್ದ ನಾವು ಚುನಾವಣೆಯಲ್ಲೂ ಗೆಲ್ಲಬಹುದು. ಆದ್ದರಿಂದ ಸಾರ್ವಜನಿಕ ಬೇಡಿಕೆಯನ್ನು ಅನುಸರಿಸಿ ನಾವು ಸಂಯುಕ್ತ ಸಮಾಜ ಮೋರ್ಚಾವನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಬಿಕೆಯು (ಕಡಿಯನ್) ಬಣದ ನಾಯಕ ಹರ್ಮೀತ್ ಸಿಂಗ್ ಕಡಿಯನ್ ಹೇಳಿದ್ದಾರೆ.
ಈ ಸಮಯದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಖಡಾಖಂಡಿತವಾಗಿ ತಳ್ಳಿಹಾಕಿದ ಕೆಲವೇ ಗಂಟೆಗಳ ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡ 22 ರೈತ ಸಂಘಟನೆಗಳು ಚುನಾವಣಾ ರಾಜಕೀಯಕ್ಕೆ ಧುಮುಕುವ ಸುದ್ದಿ ಬಂದಿದೆ.
SKM ತನ್ನನ್ನು ತಾನು “400 ಕ್ಕೂ ಹೆಚ್ಚು ವಿಭಿನ್ನ ಸೈದ್ಧಾಂತಿಕ ಸಂಘಟನೆಗಳ ವೇದಿಕೆ” ಎಂದು ಗುರುತಿಸಿಕೊಂಡಿದೆ ಮತ್ತು ಆ ಸಂಘಟನೆಗಳ ನಡುವೆ ಒಮ್ಮತದ ಕೊರತೆಯ ಬೆಳಕಿನಲ್ಲಿ, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂಯುಕ್ತ್ ಮೋರ್ಚಾ ಹೇಳಿದೆ.
ದೇಶಾದ್ಯಂತ ಅಸ್ತಿತ್ವ ಇರುವ ಎಸ್ಕೆಎಂ ರೈತರ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ರಚನೆಯಾಗಿದೆ. ಚುನಾವಣೆ ಬಹಿಷ್ಕಾರದ ಕರೆಯನ್ನೂ ನಾವು ನೀಡಿಲ್ಲ ಮತ್ತು ಚುನಾವಣೆಗೆ ಸ್ಪರ್ಧಿಸುವ ಇಂಗಿತವೂ ಇಲ್ಲ ಎಂದು ಒಂಬತ್ತು ಸದಸ್ಯರ ಪ್ರಮುಖ ಸಮನ್ವಯ ಸಮಿತಿ ಹೇಳಿಕೆ ನೀಡಿದೆ.
ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಳಿದ ಬೇಡಿಕೆಗಳ ಕುರಿತು (ಇದು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭರವಸೆಗಳನ್ನು ಒಳಗೊಂಡಿದೆ) ಜನವರಿ 15, 2022 ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ಎಸ್ಕೆಎಂ ಹೇಳಿದೆ.
ಪಂಜಾಬ್ನಲ್ಲಿ (ಮತ್ತು ಯುಪಿ ಸೇರಿದಂತೆ ಇತರ ನಾಲ್ಕು ರಾಜ್ಯಗಳು) ಫೆಬ್ರವರಿ-ಮಾರ್ಚ್ನಲ್ಲಿ ಚುನಾವಣೆ ನಡೆಯಲಿವೆ. ಪಂಜಾಬ್ ಮತ್ತು ಯುಪಿ ಎರಡೂ ರಾಜ್ಯಗಳು ಗಮನಾರ್ಹವಾದ ರೈತ ಜನಸಂಖ್ಯೆಯನ್ನು ಹೊಂದಿವೆ. ಕಾಂಗ್ರೆಸ್ ಪಂಜಾಬ್ನಲ್ಲಿ ಮತ್ತು ಬಿಜೆಪಿ ಯುಪಿಯಲ್ಲಿ ಅಧಿಕಾರದಲ್ಲಿವೆ. ಒಟ್ಟಾರೆ ಈ ಬೆಳವಣಿಗೆ ಕುರಿತು ಕುತೂಹಲ ಹೆಚ್ಚಿದೆ.
(ದಿವಂಗತ ಪಿ ಕೆ ಮಲ್ಲನಗೌಡರ್ ಅವರ ಸ್ಟೋರಿ ಬ್ಯಾಂಕ್ ನಿಂದ)