ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವುದು ರೌಡಿ ರಾಜಕಾರಣ. ಸೈಲೆಂಟ್ ಸುನಿಲ್ ಹಾಗು ಫೈಟರ್ ರವಿ ಬಿಜೆಪಿಗೆ ಸೇರ್ಪಡೆ ಆಗ್ತಿದ್ದ ಹಾಗೆ ಕಾಂಗ್ರೆಸ್ ಕೆಂಡಾಮಂಡಲ ಆಗಿತ್ತು. ಟ್ವಿಟ್ಟರ್ನಲ್ಲಿ ಚಾಟಿ ಬೀಸಿದ ಕಾಂಗ್ರೆಸ್ ನಡೆಗೆ ಕಂಗಾಲಾದ ಕೇಸರಿ ಪಾಳಯ, ರೌಡಿಶೀಟರ್ಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಇದ್ರಿಂದ ಬಿಜೆಪಿಗೆ ಇರಿಸು ಮುರುಸು ಉಂಟಾಗಿರುವುದು ಸುಳ್ಳಲ್ಲ. ಆದರೆ ರೌಡಿಶೀಟರ್ ಆಗಿರುವ ಮಂಜುನಾಥ್ ಅಲಿಯಾಸ್ ಉಪ್ಪಿ ಎಂಬುವವನನ್ನು ಆನೇಕಲ್ ಪುರಸಭೆಗೆ ನಾಮ ನಿರ್ದೇಶನ ಮಾಡಿದೆ.
ಆನೇಕಲ್ ಪುರಸಭೆಗೆ ರೌಡಿಶೀಟರ್ ನಾಮನಿರ್ದೇಶನ
ಆನೇಕಲ್ ಪುರಸಭೆಗೆ ನಾಮನಿರ್ದೇಶಿತ ಸದಸ್ಯನಾಗಿ ಆಯ್ಕೆ ಆಗಿರುವ ಮಂಜುನಾಥ್ ಅಲಿಯಾಸ್ ಉಪ್ಪಿ, ನಖರ ಬಾಬು ಮರ್ಡರ್ ಕೇಸ್ನ ಪ್ರಮುಖ ಆರೋಪಿ ಆಗಿದ್ದನು. ಕವಳ ಮರ್ಡರ್ ಕೇಸ್ನಲ್ಲಿ ಆರೋಪಿಯಾಗಿದ್ದ ನಖರ ಬಾಬುನನ್ನು ಕೊಂದಿದ್ದ ಕೇಸ್ ಇತ್ತು. 3 ದಿನಗಳ ಹಿಂದೆ ಪುರಸಭೆಗೆ ರೌಡಿಶೀಟರ್ ಮಂಜುನಾಥ್ನನ್ನ ಬಿಜೆಪಿ ಆಯ್ಕೆ ಮಾಡಿತ್ತು. ಮಡಿವಾಳ ಠಾಣೆಯ ರೌಡಿಶೀಟರ್ ಆಗಿರೋ ಮಂಜುನಾಥ್ನನ್ನು ಪುರಸಭೆ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿದ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪ್ರತಿಕ್ರಿಯೆ ನೀಡಿದ್ದು, ಕೆಲವರ ಮೇಲಿನ ಪ್ರಕರಣವನ್ನು ನಾನು ಗಮನಿಸುತ್ತೇನೆ. ನಾನು ಇಂತಹ ನೇಮಕಾತಿ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಎಲ್ಲಿ..? ಏನು..? ತಪ್ಪಾಗಿದೆ ಅಂತ ಪರಿಶೀಲನೆ ಮಾಡ್ತೇವೆ ಎಂದಿದ್ದಾರೆ. ಎಲ್ಲಾದರೂ ಅಚಾತುರ್ಯ ಆಗಿದ್ದರೆ ಪರಿಶೀಲಿಸಿ ಸರಿ ಮಾಡ್ತೇವೆ ಎಂದಿದ್ದಾರೆ.
ಕೇಸರಿ ಪಾಳಯ ರೌಡಿಗಳನ್ನು ಒಪ್ಪಿಕೊಳ್ಳೋದಿಲ್ಲ
ಬಿಜೆಪಿ ಪಕ್ಷದಿಂದ ರೌಡಿ ರಾಜಕಾರಣ ವಿಚಾರವಾಗಿ ಭಯೋತ್ಪಾದನೆ, ನಕ್ಸಲ್ ನಿಯಂತ್ರಣ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ. ನಮ್ಮ ಪಕ್ಷ ಗೂಂಡಾ ಚಟುವಟಿಕೆ, ಭಯೋತ್ಪಾದನೆಯನ್ನು ಸಹಿಸಲ್ಲ. ನನ್ನ ಗೈರು ಹಾಜರಿಯಲ್ಲಿ ಕೆಲವು ವಿದ್ಯಮಾನಗಳು ನಡೆದಿವೆ. ರೌಡಿಶೀಟರ್ ಸೈಲೆಂಟ್ ಸುನೀಲನ ಜೊತೆ ವೇದಿಕೆ ಹಂಚಿಕೊಂಡ ವಿಚಾರವಾಗಿ ನಾಯಕರಿಂದ ವಿವರಣೆ ಕೇಳಿದ್ದೇನೆ ಎಂದಿದ್ದಾರೆ ನಳೀನ್ ಕುಮಾರ್ ಕಟೀಲ್. ಇದು ಬಿಜೆಪಿ ನಾಯಕರಿಂದ ತಪ್ಪಾಗಿದೆ ಅನ್ನೋದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಒಪ್ಪಿಕೊಂಡಂತಾಗಿದೆ.
ಇಬ್ಬರು ರೌಡಿಗಳನ್ನು ಪಕ್ಷದಿಂದ ಕೈಬಿಡಲು ಚಿಂತನೆ
ರೌಡಿ ರಾಜಕಾರಣದಿಂದ ಬಿಜೆಪಿಗೆ ಭಾರಿ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ಡ್ಯಾಮೇಜ್ ಕಂಟ್ರೋಲ್ಗೆ ಬಿಜೆಪಿ ಭಾರಿ ಪ್ರಯತ್ನ ನಡೆಸಿದೆ. ಇತ್ತೀಚಿಗೆ ಪಕ್ಷಕ್ಕೆ ಸೇರಿಸಿಕೊಂಡಿದ್ದ ಫೈಟರ್ ರವಿ, ಆನೇಕಲ್ನ ಮಂಜುನಾಥ್ಗೆ ಕೊಕ್ ಕೊಡಲು ಚಿಂತನೆ ಮಾಡಿದೆ. ಇವರಿಬ್ಬರಿಂದಲೇ ಮತ್ತೆ ಮತ್ತೆ ಮುಜುಗರಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸೈಲೆಂಟ್ ಸುನೀಲ್ ಪಕ್ಷ ಸೇರ್ಪಡೆ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಫೈಟರ್ ರವಿ ಹಾಗೂ ಆನೇಕಲ್ ಮಂಜುನಾಥ್ರಿಂದ ಆಗಿರುವ ಮುಜುಗರ ತಪ್ಪಿಸಿಕೊಳ್ಳಲು ಈ ಇಬ್ಬರ ಹಿನ್ನೆಲೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಹಿತಿ ಕೇಳಿದ್ದಾರೆ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಎನ್ನಲಾಗಿದೆ.
ಪಕ್ಷ ಸೇರ್ಪಡೆಗೆ ಬಿಜೆಪಿಯಲ್ಲಿ ಹೊಸ ರೂಲ್ಸ್
ಈ ಇಬ್ಬರು ರೌಡಿಶೀಟರ್ ಆಗಿದ್ರಾ..? ಈಗಲೂ ರೌಡಿಶೀಟರ್ ಆಗಿದ್ದಾರಾ..? ಇವ್ರ ಹಿನ್ನೆಲೆ ಏನು..? ಎಂಬುದರ ಬಗ್ಗೆ ಮಾಹಿತಿ ಪಡೆದ ಬಳಿಕ ಇವರನ್ನು ಪಕ್ಷದಿಂದ ಕೈ ಬಿಡುವ ಬಗ್ಗೆ ತೀರ್ಮಾನಿಸಲು ಕಟೀಲ್ ನಿರ್ಧಾರ ಮಾಡಿದ್ದಾರೆ. ಜೊತೆಗೆ ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳುವರ ಹಿನ್ನೆಲೆ ತಿಳಿಯಲು ನಿರ್ಧಾರ ಮಾಡಿದ್ದಾರೆ. ಪಕ್ಷ ಸೇರ್ಪಡೆಗೆ ಒಂದು ಸಮಿತಿ ರಚಿಸಿ, ಅದಕ್ಕೆ ಒಬ್ಬ ನಾಯಕರನ್ನು ನಿಯೋಜಿಸಿ ಪಕ್ಷ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ. ಕೆಲವು ನಿಯಮಗಳನ್ನು ಜಾರಿಗೆ ತರಲು ಬಿಜೆಪಿ ಚಿಂತನೆ ಮಾಡಿದೆ. ಬಿಜೆಪಿ ರೂಪಿಸುವ ನಿಯಮಕ್ಕೆ ಅನುಗುಣವಾಗಿ ಇರುವವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ.
ಕೃಷ್ಣಮಣಿ