ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಶಶಿ ತರೂರ್ ಅವರನ್ನು ಪದಚ್ಯುತಗೊಳಿಸಬೇಕೆಂದು ಬಿಜೆಪಿ ಸಂಸದರು ಪಟ್ಟು ಹಿಡಿದ್ದಾರೆ. ಪೆಗಾಸಸ್ ಕುರಿತಾಗಿ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಬೇಕೆಂದು ಅವರು ಹೇಳಿದ್ದೇ ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರದಂದು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸ್ಥಾಯಿ ಸಮಿತಿಯಲ್ಲಿರುವ 30 ಸದಸ್ಯರಲ್ಲಿ 17 ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಶಿ ತರೂರ್ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.
“ಅವರು ಸ್ಥಾಯಿ ಸಮಿತಿಯ ಸಭೆಯಲ್ಲಿ ಚರ್ಚಿಸುವುದನ್ನು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಚರ್ಚಿಸಬಹುದು. ಇಷ್ಟಾಗಿಯೂ ಅವರು ಪೆಗಾಸಸ್ ಬಗ್ಗೆ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದಿದ್ದಾರೆ,” ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ.
ಜುಲೈ 26ರಂದು ಈ ಸಮಿತಿಯ ಸಭೆಯಿಂದ ಬಿಜೆಪಿ ಸದಸ್ಯರು ಹೊರ ನಡೆದಿದ್ದರು. ಸದನ ನಡೆಯುತ್ತಿರುವಾಗಲೇ ಸ್ಥಾಯಿ ಸಮಿತಿಯಲ್ಲಿ ಪೆಗಾಸಸ್ ವಿಚಾರವನ್ನು ಚರ್ಚಿಸುವುದು ನಿಯಮಬಾಹಿರ ಎಂದು ಹೇಳಿದ್ದರು. ಬಹುತೇಕ ಬಿಜೆಪಿ ಸಂಸದರನ್ನು ಒಳಗೊಂಡಿರುವ ಈ ಸಮಿತಿಯಲ್ಲಿ ಸಂಸದೆ ಸುಮಲತಾ, ಕಾರ್ತಿ ಚಿದಂಬರಂ, ಟಿಡಿಪಿ ಹಾಗೂ ಡಿಎಂಕೆಯ ಸಂಸದರೂ ಇದ್ದಾರೆ.