ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡನ ಪುತ್ರ ಹಾಗೂ ರೆಸಾರ್ಟ್ ಮಾಲೀಕನಿಂದ ಹತ್ಯೆಗೊಳಗಾದ ಯುವತಿ ತನ್ನ ಗೆಳತಿಗೆ ವಾಟ್ಸಪ್ ನಲ್ಲಿ ದುಃಖ ಹಂಚಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉತ್ತರಾಖಂಡ್ ನ ಹೃಷಿಕೇಶ್ ನಲ್ಲಿರುವ ರೆಸಾಟ್ಸ್ ಮಾಲೀಕ ಪುಲ್ಕಿಟ್ ಆರ್ಯಾ ರೆಸಾರ್ಟ್ ಗೆ ಬರುವ ಗಣ್ಯ ವ್ಯಕ್ತಿಗಳಿಗೆ ʻವಿಶೇಷʼ ಸೇವೆ ನೀಡಬೇಕು. ಇದಕ್ಕಾಗಿ 10 ಸಾವಿರ ನೀಡುವುದಾಗಿ ಒತ್ತಡ ಹೇರಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಹತ್ಯೆಗೊಳಗಾದ ಯುವತಿ ಗೆಳತಿಗೆ ಮಾಡಿದ ವಾಟ್ಸಪ್ ಸಂದೇಶದಲ್ಲಿ ವಿವರಿಸಿದ್ದಾಳೆ.
10 ವರ್ಷದ ಅಂಕಿತಾ ಭಂಡಾರಿ ಸೆಪ್ಟೆಂಬರ್ 19ರಿಂದ ನಾಪತ್ತೆಯಾಗಿದ್ದು, ಆಕೆಯನ್ನು ಕೊಂದು ಚಾನೆಲ್ ನಲ್ಲಿ ಎಸೆಯಲಾಗಿದೆ. ನದಿ ನೀರು ಹರಿಯುತ್ತಿರುವುದರಿಂದ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೆಸಾರ್ಟ್ ಗೆ ಬರುವ ಗಣ್ಯ ವ್ಯಕ್ತಿಗಳಿಗೆ ವಿಶೇಷ ಸೇವೆ ಮಾಡಿದರೆ 10 ಸಾವಿರ ನೀಡಬೇಕು ಎಂದು ಹೇಗೆಲ್ಲಾ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಯುವತಿ ಸ್ನೇಹಿತರ ಬಳಿ ಹಂಚಿಕೊಂಡಿದ್ದಾಳೆ. ಅಲ್ಲದೇ ಒಮ್ಮೆ ಗ್ರಾಹಕರೊಬ್ಬರು ಅಸಭ್ಯವಾಗಿ ನನ್ನ ಜೊತೆ ವರ್ತಿಸಿದ್ದರು. ಆದರೆ ಆತ ಕುಡಿದ ಅಮಲಿನಲ್ಲಿ ಇದ್ದಿದ್ದರಿಂದ ನಾನು ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕೂಡ ಹೇಳಿಕೊಂಡಿದ್ದಾಳೆ.
ಪೊಲೀಸರು ಇದೀಗ ಯುವತಿಯ ಶವಕ್ಕಾಗಿ ಶೋಧ ನಡೆಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ವಿಷಯಗಳು ತಿಳಿಯಲಿದೆ. ನಂತರ ಪ್ರಕರಣಕ್ಕೆ ತಿರುವು ಲಭಿಸುವ ಸಾಧ್ಯತೆ ಇದೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.