
ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಿದ್ದು ನಾನು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಕಾಂಗ್ರೆಸ್ ಕಚೇರಿಗೆ ಜಾಗ ಕೊಡಿಸಿದ್ದು ರಮೇಶ್ ಜಾರಕಿಹೊಳಿ, 5 ಕೋಟಿ ಮೌಲ್ಯದ ಜಾಗವನ್ನ ಕೇವಲ 15 ಲಕ್ಷ ರೂಪಾಯಿಗೆ ಕೊಡಿಸಿದ್ರು. ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ ನಾನು ಕೂಡ ದೊಡ್ಡ ಮೊತ್ತ ನೀಡಿದ್ದೇನೆ. ಎಲ್ಲರೂ ಸೇರಿ ಬೆಳಗಾವಿ ಕಾಂಗ್ರೆಸ್ ಕಚೇರಿ ಕಟ್ಟಿದ್ದು. ಯಾರೋ ಒಬ್ಬರಿಂದ ಪಕ್ಷದ ಕಚೇರಿ ನಿರ್ಮಾಣ ಆಗಿದ್ದಲ್ಲ ಎಂದು ಸತೀಶ್ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ವಿರುದ್ಧ ಸತೀಶ್ ಜಾರಕಿಹೊಳಿ ದೂರು ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಬೆಳಗಾವಿ ರಾಜಕಾರಣ ತಾರಕಕ್ಕೇರಿದೆ. ಡಿ.ಕೆ ಶಿವಕುಮಾರ್ ವಿರುದ್ಧ ಸತೀಶ್ ಜಾರಕಿಹೊಳಿ ಸಿಡಿಮಿಡಿಗೊಂಡಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲಗೆ ಡಿ.ಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಬೆಳಗಾವಿ ಪಾಲಿಟಿಕ್ಸ್ಗೆ ಮತ್ತೆ ಡಿ.ಕೆ ಶಿವಕುಮಾರ್ ಎಂಟ್ರಿ ಕೊಡ್ತಿದ್ದಾರೆ ಎಂದು ಹೈಕಮಾಂಡ್ ನಾಯಕರ ಎದುರು ದೂರು ಹೇಳಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಇದೇ ರೀತಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆ, ನಾವ್ಯಾರು ಸುಮ್ಮನೆ ಇರಲು ಸಾಧ್ಯವಿಲ್ಲ. ನಾವು ಕೂಡ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಕಠಿಣ ಸಂದೇಶ ರವಾನೆ ಮಾಡಬೇಕಾಗುತ್ತದೆ ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸುರ್ಜೇವಾಲಗೆ ದೂರು ನೀಡಿದ್ದಾರೆ.
ಬೆಳಗಾವಿ ರಾಜಕಾರಣದಲ್ಲಿ ಮತ್ತೆ ಡಿ.ಕೆ ಶಿವಕುಮಾರ್ ಎಂಟ್ರಿ ಆಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸ್ತಿದ್ದಾರೆ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಆದರೂ ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಡಿ.ಕೆ ಶಿವಕುಮಾರ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಸಿ.ಟಿ ರವಿ ಕೇಸ್ನಲ್ಲಿ ಅಧಿಕಾರಿಗಳ ದುರುಪಯೋಗ ಮಾಡಿಕೊಂಡಿದ್ದಾರೆ. ಗಾಂಧಿ ಭಾರತ ಕಾರ್ಯಕ್ರಮದಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡ್ತಿದ್ದಾರೆ. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಾನು ದೊಡ್ಡ ಮೊತ್ತ ನೀಡಿದ್ದೇನೆ. ಯಾರೋ ಒಬ್ಬರಿಂದ ಕಚೇರಿ ನಿರ್ಮಾಣ ಆಗಿದ್ದಲ್ಲ. ಡಿಕೆಶಿ ಪದೇ ಪದೇ ಎಂಟ್ರಿ ಕೊಡ್ತಿದ್ರೆ ನಾವ್ಯಾರು ಸುಮ್ಮನೆ ಇರಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆಗೂ ಒಂದು ಗಂಟೆಗಳ ಕಾಲ ಸಭೆ ಮಾಡಿರುವ ಸತೀಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ರಾಜಕಾರಣ ಜಟಾಪಟಿ ಸರ್ಕಾರಕ್ಕೆ ಸಂಕಟ ತರುತ್ತೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆರ. ಬೆಳಗಾವಿ ಪಾಲಿಟಿಕ್ಸ್ನಿಂದ ಈ ಸರ್ಕಾರ ಹೋಗುತ್ತದೆ. ಈ ಹಿಂದೆಯೂ ಬೆಳಗಾವಿ ರಾಜಕಾರಣದಿಂದ ಸರ್ಕಾರ ಪತನ ಆಗಿತ್ತು ಎಂದು ಮೈತ್ರಿ ಸರ್ಕಾರ ಪತನವನ್ನು ಉಲ್ಲೇಖಿಸಿ ವಿಪಕ್ಷ ನಾಯಕರ ಭವಿಷ್ಯ ನುಡಿದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ vs ಸತೀಶ್ ಜಾರಕಿಹೊಳಿ ಕಿತ್ತಾಟ ಜೋರಾಗಿದ್ದು, ಕಾಂಗ್ರೆಸ್ನಲ್ಲಿ ಕುರ್ಚಿ ಫೈಟ್ನಿಂದ ಸರ್ಕಾರ ಪತನ ನಿಶ್ಚಿತ ಎಂದಿದ್ದಾರೆ.