
- ರಾಯಚೂರಿನಲ್ಲಿ ಜನಾಕ್ರೋಶ ಇರುವುದು ಕೇಂದ್ರ ಸರ್ಕಾರ ವಿರುದ್ದ
ಬೆಂಗಳೂರು ಏಪ್ರಿಲ್ 22 : ಭಾರತ ಸರಕಾರದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ಯಾತ್ರೆ ಮಾಡುವ ಮುನ್ನ, ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸುವ ಬದ್ದತೆಯನ್ನು ಬಿಜೆಪಿ ನಾಯಕರು ತೋರಿಸಲಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ರಾಯಚೂರು ನಗರಕ್ಕೆ ಏಮ್ಸ್ ಘೋಷಿಸುವಂತೆ ಕಳೆದ ಸಾವಿರಾರು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಅನೇಕ ಬಾರಿ ಸನ್ಮಾನ್ಯ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಸಂಸದರು ಮಂತ್ರಿಗಳು, ಶಾಸಕರು, ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಸದಸ್ಯರುಗಳು ಮನವಿ ಮಾಡಿದರೂ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ.
ಅಲ್ಲದೇ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ರಾಯಚೂರಿನ ಮೇಲೆ ಕೇಂದ್ರ ಸರಕಾರದಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಗಧಾಪ್ರಹಾರ ನಡೆಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮಾಡಿದ ಮನವಿಯನ್ನು ಅಂದಿನ ಎನ್ಡಿಎ ಸರಕಾರ ಪುರಸ್ಕರಿಸಿರಲಿಲ್ಲ. ಆ ನಂತರ ಬಂದಂತಹ ಯುಪಿಎ ಸರಕಾರ ಸಂವಿಧಾನದ 371 {ಜೆ} ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಇದನ್ನು ಅನುಷ್ಠಾನಗೊಳಿಸಿದ್ದಲ್ಲದೇ, ನೀಡಿದ್ದ ಭರವಸೆಯಂತೆ ಬಜೆಟ್ನಲ್ಲಿ ಆ ಭಾಗದ ಅಭಿವೃದ್ದಿಗೆ 5000 ಸಾವಿರ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.
ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಅರ್ಥಿಕ ಅಭಿವೃದ್ದಿಗೆ ಕೊಡುಗೆ ನೀಡಬೇಕು ಎನ್ನುವ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅಂದಿನ ಬಿಜೆಪಿ ಸರಕಾರ ಅದನ್ನ ಧಾರವಾಡ ಜಿಲ್ಲೆಗೆ ವರ್ಗಾಯಿಸಿಕೊಳ್ಳುವ ಮೂಲಕ ಜಿಲ್ಲೆಗೆ ಮಲತಾಯಿ ಧೋರಣೆಯನ್ನು ತೋರಿಸಿದರು. ಆ ನಂತರ ಅಂದಿನ ಬಿಜೆಪಿ ನಾಯಕರು ರಾಯಚೂರು ನಗರಕ್ಕೆ ಏಮ್ಸ್ ಮಂಜೂರು ಮಾಡಿಸಿಕೊಡುವ ಆಶ್ವಾಸನ ನೀಡಿದ್ದರು. ಇದು ಇದುವರೆಗೂ ಆಶ್ವಾಸನೆಯಾಗಿಯೇ ಉಳಿದಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಬಾರಿ ಮನವಿಗಳನ್ನು ನೀಡಲಾಗಿದೆ. ಪ್ರಧಾನಮಂತ್ರಿ, ಆರೋಗ್ಯ ಸಚಿವರು ಸಂಬಂಧಪಟ್ಟ ಅಧಿಕಾರಿಗಳನ್ನು ವೈದ್ಯಕೀಯ ಶಿಕ್ಷಣ ಸಚಿವರು, ನಾನು ಹಾಗೂ ಸಂಸದರು ಭೇಟಿಯಾಗಿದ್ದೇವೆ. ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.
ರಾಜ್ಯ ಸರಕಾರದ ವಿರುದ್ದ ಹೋರಾಟ ಮಾಡುತ್ತಿರುವ ಬಿಜೆಪಿ ನಾಯಕರು, ಗ್ಯಾಸ್, ಪೆಟ್ರೋಲ್ ಮತ್ತು ಡಿಸೇಲ್ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವಂತಹ ಕೇಂದ್ರ ಸರಕಾರದ ನೀತಿಗಳ ವಿರುದ್ದ ಪ್ರತಿಭಟನೆ ಮಾಡಬೇಕು.
ಕೇಂದ್ರ ಸರಕಾರದ ಮಂತ್ರಿಗಳಾಗಿರುವ ನಮ್ಮ ರಾಜ್ಯದ ಮುಖಂಡರುಗಳು ಕೇವಲ ರಾಜಕೀಯ ಮಾಡಲು ಹೆಚ್ಚಿನ ಗಮನ ನೀಡುತ್ತಿದ್ದಾರೆಯೇ ಹೊರತು, ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ತರುವಂತಹ ಜವಾಬ್ದಾರಿ ತಗೆದುಕೊಂಡಿಲ್ಲ. ನಮ್ಮ ರಾಜ್ಯದ ಬಿಜೆಪಿ ನಾಯಕರು ಏಮ್ಸ್ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಬದ್ದತೆಯನ್ನು ತೋರಿಸಬೇಕು ಎಂದು ತಿಳಿಸಿದ್ದಾರೆ