ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಿಕೆ ಮಾಡಿಕೊಂಡು 2 ವರ್ಷಕ್ಕೂ ಅಧಿಕ ಕಾಲ ಅಧಿಕಾರ ನಡೆಸಿದೆ. ರಾಜ್ಯದಲ್ಲಿ ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನುವ ವರದಿಗಳು ಬರುತ್ತಿವೆ. ಬಿಬಿಎಂಪಿ ಚುನಾವಣೆ ಮಾಡಿ, ಅದರಲ್ಲಿ ಮುಖಭಂಗ ಅನುಭವಿಸಿ ರಾಜ್ಯ ವಿಧಾನಸಭಾ ಚುನಾವಣೆಗೆ ಹೋಗುವುದು ಮೂರ್ಖತನ ಅನ್ನೋ ಕಾರಣಕ್ಕೆ ರಾಜ್ಯ ಬಿಜೆಪಿ ಬಿಜೆಪಿ ಸರ್ಕಾರ, ವಾರ್ಡ್ ಪುನರ್ ವಿಂಗಡಣೆ ನೆಪ ಹೇಳಿಕೊಂಡು ಚುನಾವಣೆಯನ್ನೇ ಮಾಡದೆ ಬಿಬಿಎಂಪಿಯಲ್ಲಿ ಪರೋಕ್ಷ ಆಡಳಿತ ಮಾಡುತ್ತಿದೆ. ಆದರೆ ಇತ್ತೀಚಿಗೆ ಸುಪ್ರೀಂಕೋರ್ಟ್ ಈ ವರ್ಷದ ಅಂತ್ಯದ ಒಳಗೆ ಚುನಾವಣೆ ನಡೆಸಲೇ ಬೇಕು ಅನ್ನೋ ಕಠಿಣ ಆದೇಶ ಹೊರಡಿಸಿತ್ತು. ಅನಿವಾರ್ಯವಾಗಿ ಚುನಾವಣೆ ನಡೆಸಲೇ ಬೇಕಾದ ಸ್ಥಿತಿಗೆ ರಾಜ್ಯ ಸರ್ಕಾರ ಸಿಲುಕಿತ್ತು.
ಬಿಜೆಪಿ ಪಾಲಿಗೆ ‘ಆಪರೇಷನ್ ವೋಟರ್’ ಆಪತ್ಬಾಂಧವ
ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ವಿಚಾರ ಏನಂದ್ರೆ ಚಿಲುಮೆ ಸಂಸ್ಥೆ ಮಾಡಿರುವ ಅಕ್ರಮ. ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣಾ ಜಾಗೃತಿ ಮೂಡಿಸಲು ಅನುಮತಿ ಪಡೆದು, ಮತದಾರರು ಯಾರಿಗೆ ವೋಟ್ ಹಾಕ್ತಾರೆ ಅನ್ನೋ ಮಾಹಿತಿ ಸಂಗ್ರಹ ಮಾಡಿದೆ ಎನ್ನುವುದನ್ನು ಪ್ರತಿಧ್ವನಿ ಡಿಜಿಟಲ್ ಮಾಧ್ಯಮ ಬಯಲಿಗೆ ಎಳೆದಿದೆ. ಇದೀಗ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳು ರಾಜ್ಯ ಸರ್ಕಾರದ ಕುತಂತ್ರ ನೀತಿ ವಿರುದ್ಧ ಬೀದಿಗೆ ಇಳಿದಿವೆ. ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದು, ಕಾನೂನು ಹೋರಾಟಕ್ಕೂ ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಬುಧವಾರ ಸಂಜೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಯೋಗ ಸಾಕ್ಷ್ಯಗಳ ಸಮೇತ ದೂರು ನೀಡಲಿದೆ.
ಅನ್ಯಾಯದ ವಿರುದ್ಧ ಕೋರ್ಟ್ ಮೊರೆ.. ಬಿಜೆಪಿಗೆ ಲಾಭ
ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿಗೆ ವಿರುದ್ಧವಾಗಿರುವ ಮತದಾರರನ್ನು ಪಟ್ಟಿಯಿಂದಲೇ ಡಿಲೀಟ್ ಮಾಡುತ್ತಿದೆ. ಇದಕ್ಕಾಗಿಯೇ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡಿದೆ. ಹಿಂಬದಿಯಲ್ಲಿ ನಿಂತು ಚಿಲುಮೆ ಸಂಸ್ಥೆಗೆ ಹಣಕಾಸಿನ ನೆರವು ನೀಡಲಾಗಿದೆ ಎನ್ನುವುದು ಕಾಂಗ್ರೆಸ್ ನೇರ ಆರೋಪ. ಸಚಿವ ಅಶ್ವತ್ಥ ನಾರಾಯಣ ಅವರ ಹೊಂಬಾಳೆ ಸಂಸ್ಥೆಗೂ ಚಿಲುಮೆ ಸಂಸ್ಥೆಗೂ ನಂಟಿದ್ದು, ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲೇ ಇದೆಲ್ಲಾ ಆಗಿದೆ ಎನ್ನುವುದನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಟ್ವೀಟ್ ಮೂಲಕವೂ ಆಕ್ರೋಶ ಹೊರ ಹಾಕಿದ್ದರು. ಕೆಜಿಎಫ್ ಹಾಗು ಕಾಂತಾರ ಸಿನಿಮಾ ನಿರ್ಮಾಣ ಸಂಸ್ಥೆಯಾದ ಹೊಂಬಾಳೆಯನ್ನು ಉಲ್ಲೇಖಿಸಿ ಚಾಟಿ ಬೀಸಿದ್ದರು. ಇದೀಗ ಮತದಾರರ ಪಟ್ಟಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಕಾಂಗ್ರೆಸ್ ಕೋರ್ಟ್ ಮೊರೆ ಹೋದರೆ ಬಿಜೆಪಿಗೆ ಲಾಭ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.
ಸೋಲಿಲ್ಲದೆ ಚುನಾವಣೆಗೆ ಹೋಗುವುದು ಕೇಸರಿ ಅಜೆಂಡಾ
ರಾಜ್ಯ ವಿಧಾನಸಭಾ ಚುನಾವಣೆಗೆ ಇರುವುದು ಕೇವಲ ಆರೇಳು ತಿಂಗಳು ಮಾತ್ರ. ಹೀಗಿರುವಾಗ ಸುಪ್ರೀಂಕೋರ್ಟ್ ಈ ವರ್ಷದ ಅಂತ್ಯದ ವೇಳೆಗೆ ಬಿಬಿಎಂಪಿ ಚುನಾವಣೆ ಮಾಡಿ ಮುಗಿಸಬೇಕು ಎಂದು ಕಟ್ಟಪ್ಪಣೆ ವಿಧಿಸಿತ್ತು. ಸೋಲಿನ ಮುಖ ಹೊತ್ತು ವಿಧಾನಸಭೆ ಚುನಾವಣೆಗೆ ಹೋಗಲು ಮನಸ್ಸಿಲ್ಲದ ಬಿಜೆಪಿ ಮತದಾರರ ಮೇಲೆ ನಿಯಂತ್ರಣ ಮಾಡಲು ಮುಂದಾಗಿತ್ತು. ಇದೀಗ ಹಗರಣ ಬಟಬಯಲಾಗಿದೆ. ಈಗ ಕಾಂಗ್ರೆಸ್ ಸುಪ್ರೀಂಕೋರ್ಟ್ ಹಾಗು ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗುವ ನಿರ್ಧಾರ ಮಾಡಿದ್ದು, ಬಿಬಿಎಂಪಿ ಚುನಾವಣೆಗೆ ಬ್ರೇಕ್ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮತದಾರರ ಪಟ್ಟಿ ಅಕ್ರಮದ ತನಿಖೆ ಮುಕ್ತಾಯ ಆಗುವ ತನಕ ಯಾವುದೇ ಚುನಾವಣೆ ನಡೆಸುವಂತಿಲ್ಲ, ಎಂದು ಕೇಂದ್ರ ಚುನಾವಣಾ ಆಯೋಗ ಅಥವಾ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದರೆ ಅಲ್ಲಿಗೆ ಬಿಬಿಎಂಪಿ ಚುನಾವಣೆ ಅನ್ನೋದು ಗಗನ ಕುಸುಮ. ಅಂದರೆ ಬಿಜೆಪಿ ಬಯಸಿದ್ದೂ ಹಾಲು ಅನ್ನ.. ಕೋರ್ಟ್ ಹೇಳುವುದು ಹಾಲು ಅನ್ನ ಎನ್ನುವಂತೆ ಆಗುವುದರಲ್ಲಿ ನೋ ಡೌಟ್.