ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೇನು ಹದಿನಾರು, ಹದಿನೇಳು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಚುನಾವಣೆಗೆ ಈಗಿನಿಂದಲೇ ಬಿಜೆಪಿ ನಾಯಕರು ತಯಾರಿ ನಡೆಸ್ತಿದ್ದಾರೆ. ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿ ಬಿಬಿಎಂಪಿ ಎಲೆಕ್ಷನ್ ಬೇಡ. ಮುಂಚಿತವಾಗಿಯೇ ಮಾಡಿದ್ರೆ ಒಳ್ಳೆಯದು ಅಂತ ಸಿಎಂ ಮೇಲೆ ಬೆಂಗಳೂರಿನ ಜನಪ್ರತಿನಿಧಿಗಳು ದುಂಬಾಲು ಬಿದ್ದಿದ್ದಾರಂತೆ.
ಸದ್ಯ ಬಿಬಿಎಂಪಿ ಚುನಾವಣೆ ಮೇಲೆ ಬೆಂಗಳೂರಿನ ಜನಪ್ರತಿನಿಧಿಗಳ ಕಣ್ಣು ನೆಟ್ಟಿದೆ. ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಬಿಬಿಎಂಪಿ ಎಲೆಕ್ಷನ್ ನಡೆಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಬೆಂಗಳೂರಿನ ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಈ ಹಿಂದೆಯಿದ್ದ 198 ವಾರ್ಡ್ಗಳಿಗೆ ಚುನಾವಣೆ ನಡೆಸಿ, ಇಲ್ಲವಾದ್ರೆ ಹೊಸ ಪ್ರಸ್ತಾವನೆಯಿರೋ 243 ವಾರ್ಡ್ಗಳಿಗೆ ಚುನಾವಣೆ ಮಾಡಿ ಅಂತ ಒತ್ತಾಯಿಸ್ತಿದ್ದಾರೆ.
ಪಾಲಿಕೆ ಚುನಾವಣೆ ವಿಳಂಬವಾದಷ್ಟು, ಬೆಂಗಳೂರಿನ ಮತದಾರರನ್ನು ಸೆಳೆಯುವುದು ಕಷ್ಟ. ಬೂತ್ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ, ನಾವು ನಮ್ಮ ಚುನಾವಣೆಯನ್ನು ಎದುರಿಸುವುದು ಕಷ್ಟ. ಈಗಾಗ್ಲೇ ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರಿಲ್ಲದೇ ಸಮಸ್ಯೆಗಳ ಆಗರವೇ ಸೃಷ್ಟಿಯಾಗಿದೆ. ಮಳೆ ಹಾನಿ, ರಸ್ತೆ ಗುಂಡಿಗಳು, ಕಟ್ಟಡಗಳ ಕುಸಿತ, ಟ್ರಾಫಿಕ್ ಜಾಮ್ ಸೇರಿದಂತೆ ಸಮಸ್ಯೆಗಳ ಆಗರವಾಗಿದೆ ಬೆಂಗಳೂರು. ಇಂತಹ ಸಂದರ್ಭದಲ್ಲಿ ನಾವು ಕೈ ಕಟ್ಟಿ ಕೂರುವುದು ಸರಿಯಲ್ಲ. ಚುನಾವಣೆಯನ್ನು ನಡೆಸಲೇಬೇಕೆಂದು ಸಿಎಂಗೆ ಬೆಂಗಳೂರು ಪ್ರತಿನಿಧಿಸೋ ಜನಪ್ರತಿನಿಧಿಗಳು ದುಂಬಾಲು ಬಿದ್ದಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಒತ್ತಡ
1. ಈಗಾಗಲೇ ಬಿಬಿಎಂಪಿ ಸದಸ್ಯರ ಅವಧಿ ಮುಗಿದು ವರ್ಷ ಕಳೆದಿದೆ
2. 2020ರ ಸೆಪ್ಟೆಂಬರ್ 10ಕ್ಕೆ ಸದಸ್ಯರ ಆಡಳಿತಾವಧಿ ಮುಕ್ತಾಯವಾಗಿದೆ
3. 2021ರ ಆರಂಭದಲ್ಲೇ ಬಿಬಿಎಂಪಿಗೆ ಎಲೆಕ್ಷನ್ ನಡೆಸಬೇಕಾಗಿತ್ತು
4. ಕೊರೊನಾ 2ನೇ ಅಲೆಯ ಕಾರಣದಿಂದ ಚುನಾವಣೆ ನಡೆಸಿಲ್ಲ
5. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿದ್ದೇವೆ
6. ಒಬ್ಬೊಬ್ಬ ಶಾಸಕರಿಗೆ ಕನಿಷ್ಠ ಏಳೆಂಟು ಸದಸ್ಯರು ಕೆಲಸ ಮಾಡುತ್ತಾರೆ
7. ಈಗಿರುವ ಪರಿಸ್ಥಿತಿಯಲ್ಲಿ ಪಾಲಿಕೆಯ ಸದಸ್ಯರೇ ಇಲ್ಲದಂತಾಗಿದೆ
8. ಪರಿಸ್ಥಿತಿ ಹೀಗೇ ಇದ್ರೆ, ಮುಂಬರುವ ಚುನಾವಣೆಯಲ್ಲಿ ಕಷ್ಟವಾಗಲಿದೆ
9. ಹೀಗಾಗಿ ಸಿಎಂ ಸ್ಥಾನದಲ್ಲಿರುವ ನೀವು ನಿರ್ಧಾರಕ್ಕೆ ಬರಬೇಕೆಂದು ಒತ್ತಡ
ಈಗಾಗ್ಲೇ ಬಿಬಿಎಂಪಿ ಸದಸ್ಯರ ಅವಧಿ ಮುಗಿದು ವರ್ಷ ಕಳೆದಿದೆ. 2020ರ ಸೆಪ್ಟೆಂಬರ್ 10ಕ್ಕೆ ಸದಸ್ಯರ ಆಡಳಿತಾವಧಿ ಮುಕ್ತಾಯವಾಗಿದೆ. 2021ರ ಆರಂಭದಲ್ಲೇ ಬಿಬಿಎಂಪಿಗೆ ಎಲೆಕ್ಷನ್ ನಡೆಸಬೇಕಾಗಿತ್ತು. ಆದ್ರೆ, ಕೊರೊನಾ 2ನೇ ಅಲೆಯ ಕಾರಣದಿಂದ ಚುನಾವಣೆ ನಡೆಸಿಲ್ಲ. ಇದೀಗ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿದ್ದೇವೆ.ಒಬ್ಬೊಬ್ಬ ಶಾಸಕರಿಗೆ ಕನಿಷ್ಠ ಏಳೆಂಟು ಸದಸ್ಯರು ಕೆಲಸ ಮಾಡುತ್ತಾರೆ. ಈಗಿರೋ ಪರಿಸ್ಥಿತಿಯಲ್ಲಿ ಪಾಲಿಕೆಯ ಸದಸ್ಯರೇ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗೇ ಇದ್ರೆ, ಮುಂಬರುವ ಚುನಾವಣೆಯಲ್ಲಿ ಕಷ್ಟವಾಗಲಿದೆ. ಹೀಗಾಗಿ ಸಿಎಂ ಸ್ಥಾನದಲ್ಲಿರುವ ನೀವು ನಿರ್ಧಾರಕ್ಕೆ ಬರಬೇಕೆಂದು ಬೆಂಗಳೂರು ಜನಪ್ರತಿನಿಧಿಗಳು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್, ವಸತಿ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಪೌರಾಡಳಿತ ಸಚಿವ ಮುನಿರತ್ನ, ಅಬಕಾರಿ ಸಚಿವ ಕೆ. ಗೋಪಾಲಯ್ಯ, ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಸೇರಿ ಎಲ್ಲರೂ ಸಿಎಂ ಮೇಲೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಒತ್ತಡ ಹೇರ್ತಿದ್ದಾರೆ.
ಇತ್ತ ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಬೆಂಗಳೂರು ಉಸ್ತುವಾರಿ ಸ್ಥಾನ ನನಗೆ ಬೇಡ. ಸಿಎಂ ಬಳಿಯೇ ಉಸ್ತುವಾರಿ ಸ್ಥಾನ ಇರಲಿ. ಅವರು ಸಮರ್ಥರಿದ್ದು, ಎಲ್ಲವನ್ನೂ ನಿಭಾಯಿಸುತ್ತಾರೆ ಎಂದಿದ್ದಾರೆ.
ಒಟ್ನಲ್ಲಿ, ಬಿಬಿಎಂಪಿ ಚುನಾವಣೆ ಬಗ್ಗೆ ಇಷ್ಟು ದಿನ ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಏಕಾಏಕಿ ತಮ್ಮ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಒಂದು ಅಥವಾ ಎರಡು ತಿಂಗಳೊಳಗೆ ಪ್ರಕ್ರಿಯೆ ಆರಂಭಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸದ್ಯ, ಬಿಬಿಎಂಪಿ ಎಲೆಕ್ಷನ್ ಚಂಡು ಸಿಎಂ ಅಂಗಳದಲ್ಲಿದ್ದು, ಸಿಎಂ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.