ಬಿಬಿಎಂಪಿ ಅಧಿಕಾರಿಗಳು ತರಾತುರಿಯಲ್ಲಿ ವಾರ್ಡ್ ಡೀಲಿಮಿಟೇಷನ್ ವರದಿ ಸಿದ್ದಪಡಿಸಿದ್ದಾರೆ, ಮನಸ್ಸಿಗೆ ಬಂದಂತೆ ವಿಂಗಡಣೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗ್ತಿದೆ. ಬಿಜೆಪಿ ಶಾಸಕರು, ಸಂಸದರ ಮಾತಿನ ಅಣತಿಯಂತೆ ನಡೆದುಕೊಂಡಿದ್ದರೆ ಎಂಬ ಆರೋಪದಡಿ ನಿರೀಕ್ಷೆಗೂ ಮೀರಿ ಆಕ್ಷೇಪಣೆಗಳು ಸಲ್ಲಿಕೆಯಾಗ್ತಿವೆ.
ಬಹು ನಿರೀಕ್ಷಿತ ವಾರ್ಡ್ ಡಿಲಿಮಿಟೇಷನ್ ಗೆ ಭಾರೀ ವಿರೋಧ.!
ಬಿಬಿಎಂಪಿಯಲ್ಲಿ ಕಾರ್ಪೋರೇಟರ್ಸ್ ಗಳ ಅವಧಿ ಮುಕ್ತಾಯಗೊಂಡು ಎರಡು ವರ್ಷಗಳಾಗ್ತಿದೆ. ಸುಪ್ರೀಂ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ವಾರ್ಡ್ ಮರುವಿಂಗಡಣೆ ಮಾಡಿದ್ದು, ಪರಿಷ್ಕರಣಾ ಕರಡನ್ನ ಸಾರ್ವಜನಿಕ್ರ ಮುಂದಿಟ್ಟಿದೆ. ಆದ್ರೀದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಯಾಕಂದ್ರೆ ವಾರ್ಡ್ ವಿಂಗಡಣೆ ಮಾಡುವಾಗ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡದೇ ಕೇವಲ ಬಿಜೆಪಿ ಸಚಿವರು, ಸಂಸದರ ಅಣತಿಯಂತೆ ವಿಂಗಡಣೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಕೇವಲ ಬಿಜೆಪಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಂಗಡಿಸಿದ್ದಾರೆ ಅನ್ನೋ ಕೂಗುಗಳು ಕೇಳಿ ಬರ್ತಿವೆ. ವಾರ್ಡ್ ವಿಂಗಡಣೆ ನೆಪದಲ್ಲಿ ಸಮಾಜ ಒಡೆಯುವ ಕೆಲ್ಸ ಮಾಡ್ತಿದೆ ಎನ್ನುವ ಆಕ್ಷೇಪಣೆಗಳು ಸದ್ಯಕ್ಕೆ ಬಂದಿದೆ.
ಹಲವು ಕಾರಣಗಳನ್ನು ನೀಡಿ ಸಾರ್ವಜನಿಕರಿಂದ ಡಿ ಲಿಮಿಟೇಷನ್ ಗೆ ವಿರೋಧ.!
ದಿನದಂದ ದಿನಕ್ಕೆ ವಿಂಗಡಣೆ ಪರಿಷ್ಕರಣೆ ಮಾಡಿ ಅಂತ ಅರ್ಜಿಗಳು ಸಲ್ಲಿಕೆಯಾವೆ. ಆಕ್ಷೇಪಣೆ ನೀಡೋಕೆ ಇನ್ನೂ 10 ದಿನ ಬಾಕಿ ಇದ್ದು, ಈಗಾಗಲೇ 2 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಮತ್ತೊಂದ್ಕಡೆ ಬಿಬಿಎಂಪಿ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶನೂ ಕೇಳಿ ಬರ್ತಿದೆ. ಬಿಬಿಎಂಪಿ ಸಿದ್ಧ ಮಾಡಿರುವ ಡಿ ಲಿಮಿಟೇಷನ್ ಬಗ್ಗೆ ಹೆಚ್ಚೆಚ್ಚು ಆಕ್ಷೇಪಣೆಗಳು ಕೇಳಿ ಬರುತ್ತಿರುವುದು ಇದೀಗ ಪಾಲಿಕೆಯನ್ನು ಹೈರಾಣಾಗಿಸಿದೆ. ಸೆಪ್ಟೆಂಬರ್ ನಲ್ಲಿ ಚುನಾವಣೆ ಎಂದುಕೊಂಡಿದ್ದ ಬಿಬಿಎಂಪಿಗೆ ಆಕ್ಷೇಪಣಾ ಅರ್ಜಿಗಳ ವಿಲೇವಾರಿಯೇ ತಲೆನೋವಾಗಿ ಪರಿಣಮಿಸಿದೆ.
ಬಿಬಿಎಂಪಿ ಡಿ ಲಿಮಿಟೇಷನ್ ಗೆ ಆಕ್ಷೇಪಣೆಗಳ ಸುರಿಮಳೆ.!
– ವಾರ್ಡ್ ವಿಂಗಡಣೆ ಮಾಡಿ ಬಿಜೆಪಿ ತಮ್ಮ ಮತಗಟ್ಟೆ ಪ್ರಬಲ ಮಾಡಿಕೊಂಡಿದೆ
– ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ವಾರ್ಡ್ ಗಳನ್ನು ಉದ್ದೇಶಪೂರ್ವಕವಾಗಿ ಒಡೆಯಲಾಗಿದೆ
– ಅವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ
– ಒಂದು ವಾರ್ಡ್ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ವಿಂಗಡಣೆ ಮಾಡಲಾಗಿದೆ
– ಹೊಸ ವಾರ್ಡ್ ಗಳಿಗೆ ಗಡಿಹಾಕುವುದರಲ್ಲಿ ಬಿಬಿಎಂಪಿ ಎಡವಿದೆ
– ನಿರ್ದಿಷ್ಟ ವಾರ್ಡ್ ನ ಮುಂದುವರೆದ ಭಾಗವಾಗಿ ಮತ್ತೊಂದು ವಾರ್ಡ್ ನ ಮಧ್ಯಭಾಗದಲ್ಲಿ ವಾರ್ಡ್ ನೀಡಲಾಗಿದೆ
– ವಾರ್ಡ್ ವಿಂಗಡಣೆ ನೆಪದಲ್ಲಿ ಉದ್ದೇಶಪೂರ್ವಕವಾಗಿ ಕೆಲ ಹೆಸರಿಗಳನ್ನು ತೆಗೆದುಹಾಕಲಾಗಿದೆ
– ಜಯನಗರ, ಗಾಳಿಆಂಜನೇಯ, ಕೆಜೆ ಹಳ್ಳಿ, ಹೀಗೆ ವಾರ್ಡ್ ಗಳ ಹೆಸರನ್ನೇ ಬದಲಿಸಲಾಗಿದೆ
– ಕೆಲವು ಕಡೆ ಬೆಂಗಳೂರಿನ ಇತಿಹಾಸಕ್ಕೆ ಸಂಬಂಧವೇ ಇಲ್ಲದ ಹೆಸರುಗಳನ್ನು ಇಡಲಾಗಿದೆ
– ವಾರ್ಡ್ ವಿಂಗಡಣೆ ಜನಸಂಖ್ಯೆ ಆಧಾರದ ಮೇಲೆ ಮಾಡಲಾಗಿದೆ ಎನ್ನುತ್ತಾರೆ
– ಆದರೆ ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರದ ವಾರ್ಡ್ ಗಳಲ್ಲಿ ಹೆಚ್ಚು ಜನ ಸಂಖ್ಯೆ ಸೇರಿಸಲಾಗಿದೆ
ಹೀಗೆ ಹಲವು ಕಾರಣಗಳನ್ನು ಸಾರ್ವಜನಿಕರು ನೀಡಿ ವಾರ್ಡ್ ಮರು ವಿಂಗಡಣೆಗೆ ವಿರೋಧ ಎತ್ತಿದ್ದಾರೆ. ದಿನದಿಂದ ದಿನಕ್ಕೆ ಬಿಬಿಎಂಪಿ ವಾರ್ಡ್ ವಿಂಗಡಣೆ ಕುರಿತಂತೆ ವಿರೋಧಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಇಷ್ಟೆಲ್ಲಾ ಆಗ್ತಿದ್ರೂ ಪಾಲಿಕೆ ಮಾತ್ರ ಎಷ್ಟು ಆಕ್ಷೇಪಣೆಗಳು ಬರ್ತವೋ ಬರ್ಲಿ ಸರಿ ಪಡಿಸೋಕೆ ಅವಕಾಶ ಇದೆಯಲ್ವಾ ಅಂತ ಸಮಜಾಯಿಷಿ ನೀಡ್ತಿದೆ. ಅಂತಿಮವಾಗಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.