ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ನಗರವಾಗಿಸಲು ಸರ್ಕಾರ ಸಂಕಲ್ಪ ಮಾಡಿದೆ ಹಾಗೂ ಅದಕ್ಕೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳು ಪ್ರಾರಂಭವಾಗಿವೆ. ರಾಜಕಾಲುವೆಗಳ ಅಭಿವೃದ್ಧಿ ಗೆ 1600 ಕೋಟಿ ರೂ.ಗಳ ನ್ನು ಒದಗಿಸಲಾಗಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಮಂತ್ರಿಗಳು ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಪೆರಿಫೆರಲ್ ರಿಂಗ್ ರೋಡಿಗೆ ಟೆಂಡರ್ ಕರೆಯಲಾಗಿದೆ. ಈ ವರ್ಷ ಕಾಮಗಾರಿ ಪ್ರಾರಂಭವಾಗುತ್ತದೆ. ಮೆಟ್ರೋ ವಿಸ್ತರಣೆಯಾಗುತ್ತಿದೆ. ನಗರದ ಸೌಂದರ್ಯೀಕರಣಕ್ಕೆ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಡವರು ಇರುವ ಸ್ಥಳಗಳ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನು ಖಂಡಿತವಾಗಿಯೂ ಮಾಡಿಯೇ ತೀರುತ್ತೇವೆ ಎಂದಿದ್ದಾರೆ.
ಹಿಂದಿನ ಸರ್ಕಾರಗಳು ಕೆಲಸಗಳನ್ನು ಮಾಡದಿರುವ ಕಾರಣದಿಂದ ಒಂದೇ ಬಾರಿಗೆ ಸಮಸ್ಯೆಗಳು ಒದಗಿಬಂದಿದೆ. ಕಾಲಕಾಲಕ್ಕೆ ರಾಜಕಾಲುವೆ, ರಸ್ತೆ, ಒಳಚರಂಡಿ ವ್ಯವಸ್ಥೆಗಳನ್ನು ಅಭಿವೃದ್ಧಿ ಮಾಡಿದ್ದಾರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕಾವೇರಿ 5ನೇ ಹಂತದ ನೀರನ್ನು , ಯುಜಿಡಿ ವ್ಯವಸ್ಥೆ ಯನ್ನು, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ರಸ್ತೆಗಳನ್ನು ಅಭಿವೃದ್ಧಿ ಮಾಡುವುದು ನಮ್ಮ ಮುಂದಿರುವ ಸವಾಲು. ಈ ಸವಾಲನ್ನು ಸ್ವೀಕರಿಸಿದ್ದು, ಈಗಾಗಲೇ ಎಲ್ಲ ಕಡೆ ಕೆಲಸ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಬೆಂಗಳೂರನ್ನು ಸುಂದರ ನಗರವನ್ನಾಗಿಸಲಾಗುವುದು. ಜನಕ್ಕೆ ಅನುಕೂಲವಾಗುವ ಎಲ್ಲ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನ ದಟ್ಟಣೆ ನಿವಾರಿಸಲು ಸ್ಯಾಟಲೈಟ್ ಟೌನ್ ಗಳ ನಿರ್ಮಾಣ
ಇತ್ತೀಚೆಗಷ್ಟೇ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸಲು ನಿರ್ದೇಶನ ನೀಡಿದ್ದೇನೆ. ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಬೆಂಗಳೂರಿನ ಸಮಗ್ರ ಅಭಿವೃದ್ಧಿಯತ್ತ ನಡೆದಿದ್ದೇವೆ. ಬೆಂಗಳೂರಿನ ದಟ್ಟಣೆ ನಿವಾರಿಸಲು ಸ್ಯಾಟಲೈಟ್ ಟೌನ್ ಗಳ ನಿರ್ಮಾಣ ಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಮೂಲಭೂತ ಸೌಕರ್ಯ ಬೆಂಗಳೂರಿನ ನಾಗರೀಕರಿಗೆ ದೊರೆಯಬೇಕು ಎಂಬ ದೂರದೃಷ್ಟಿಯಿಂದ ಕೆಲಸ ಮಾಡುತ್ತಿ ದ್ದೇವೆ.
ಯಾವುದೇ ಭೇದಭಾವ ಮಾಡದೆ ಎಲ್ಲಾ ವಾರ್ಡುಗಳಲ್ಲಿ ಸಮಗ್ರ ಅಭಿವೃದ್ಧಿ
ಮುಂದೆ ನಡೆಯಲಿರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಭಾಜಪ ಅಭ್ಯರ್ಥಿಗಳು ಗೆದ್ದು ಜನರ ಸೇವೆಯನ್ನು ಅತ್ಯಂತ ಪ್ರಾಮಾಣಿಕಯಿಂದ ಮಾಡಿದರೆ, ಯೋಜನೆಗಳನ್ನು ವಾರ್ಡುಗಳಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡಿದರೆ ಖಂಡಿತವಾಗಿಯೂ ಜನರು ನಮ್ಮನ್ನು ಹರಸಿ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಯಾವುದೇ ಬೇಧಭಾವ ಮಾಡದೆ ಎಲ್ಲಾ ವಾರ್ಡುಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದರು.
5000 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವುದು ಸಾಮಾನ್ಯ ಕೆಲಸವಲ್ಲ. ಇನ್ನೂ 5 ಸಾವಿರ ವಿದ್ಯಾರ್ಥಿಗಳನ್ನು ಮುಂದಿನ ವರ್ಷ ದತ್ತು ತೆಗೆದುಕೊಳ್ಳಲಾಗುವುದು ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಘೋಷಿಸಿದ್ದಾರೆ. ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ, ದತ್ತು ತೆಗೆದುಕೊಳ್ಳುವ ಮೂಲಕ ವಿದ್ಯಾರ್ಜನೆಗೆ ಸಹಾಯ ಮಾಡಿ ಎಲ್ಲರಿಗೂ ಉತ್ತಮ ಭವಿಷ್ಯ ಬರೆಯುವ ಒಬ್ಬ ನಾಯಕರು ಅವರು ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ.