Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಭೀಕರ ಹತ್ಯೆ ಈ ಕೆಲವು ಸಾಲುಗಳನ್ನು ಹೊರಹೊಮ್ಮಿಸಿದೆ

ನಾ ದಿವಾಕರ

ನಾ ದಿವಾಕರ

July 5, 2022
Share on FacebookShare on Twitter

ಇಡೀ ಸಮಾಜದ ಕೈಗಳಿಗೆ‌ ಮುಕ್ತವಾಗಿ ಆಯುಧಗಳನ್ನು ನೀಡಿದ್ದೇವೆ ಎನಿಸುತ್ತಿದೆ. ಹಲ್ಲೆ, ಥಳಿತ, ಆಕ್ರಮಣ, ಗುಂಪು ಥಳಿತ, ಕೊಲೆ, ಅತ್ಯಾಚಾರ, ಅಪಹರಣ ಇವೆಲ್ಲವೂ ನಮ್ಮ ನಡುವಿನ ಸ್ವಾಭಾವಿಕ ನಡವಳಿಕೆ ಆಗಿಹೋಗಿದೆ. ಕೊಲ್ಲಲು ಬಲವಾದ ಕಾರಣವೇ ಇರಬೇಕೆಂದಿಲ್ಲ ಅಸಮಾಧಾನದ ಕಿಡಿಯೊಂದಿದ್ದರೆ ಸಾಕು. ಕೈಯ್ಯಲ್ಲಿ ಬಂದೂಕು, ಚಾಕು ಇದ್ದರೆ ಸಾಕು. ಅಸಮಾಧಾನಗೊಂಡವರು ಹಲ್ಲೆ ನಡೆಸಲಿ, ಹತ್ಯೆ ಮಾಡಲಿ ಸಮರ್ಥಿಸಿಕೊಳ್ಳುವ ಒಂದು ವರ್ಗವನ್ನೇ ಸೃಷ್ಟಿಸಿಬಿಟ್ಟಿದ್ದೇವೆ. ಅಪ್ಪನಿಂದ ಮಕ್ಕಳು, ಸೋದರನಿಂದ ಸೋದರಿ, ತಾಯಿಯಿಂದ ಮಗು, ಗೆಳೆಯರಿಂದ ಗೆಳೆಯರೇ ಹತ್ಯೆಗೀಡಾಗುವುದು ಇತ್ತೀಚಿನ ದಿನಗಳಲ್ಲಿ ವಿಶೇಷ ಎನಿಸುವುದೇ ಇಲ್ಲ. ಏಕೆಂದರೆ ಯಾವುದೋ ಒಂದು ಕಾರಣಕ್ಕೆ ಈ ಕೊಲೆಗಳು ನಡೆಯುತ್ತಲೇ ಇವೆ.

ಹೆಚ್ಚು ಓದಿದ ಸ್ಟೋರಿಗಳು

ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ

ಈ ಸರ್ಕಾರ ನಡೆಯುತ್ತಿಲ್ಲ, ಚುನಾವಣೆಗೆ ಏಳೆಂಟು ತಿಂಗಳಿದೆ ಅಂತ ಮ್ಯಾನೇಜ್​​ ಮಾಡುತ್ತಿದ್ದೇವೆ : ಸಚಿವ ಮಾಧುಸ್ವಾಮಿ ಆಡಿಯೋ ವೈರಲ್

ರಾಜ್ಯದ 1 ಕೋಟಿ 25 ಲಕ್ಷ ಮನೆಗಳಲ್ಲಿ ಧ್ವಜ ಹಾರಾಟ: ಸಿಎಂ ಬೊಮ್ಮಾಯಿ

ಪ್ರೇಮ ವಿವಾಹವೋ, ಅಂತರ್ಜಾತಿ ವಿವಾಹವೋ, ಧಕ್ಕೆಗೊಳಗಾದ ಭಾವನೆಗಳೋ, ಅಪಾಯಕ್ಕೊಳಗಾದ ಅಸ್ಮಿತೆಗಳೋ , ಹೀಗೆ ಅತೃಪ್ತಿ, ಅಸಮಾಧಾನಕ್ಕೆ ಯಾವುದೋ ಒಂದು ಕಾರಣ ಇದ್ದರೆ ಸಾಕು. ಅದೇ ಆಕ್ರೋಶವಾಗಿ, ಮಾನವ ಜೀವ ನಿಕೃಷ್ಟವಾಗಿಬಿಡುತ್ತದೆ. ಇದನ್ನೇ ಆಂಗ್ಲ ಭಾಷೆಯಲ್ಲಿ Fratricide ಎನ್ನಲಾಗುತ್ತದೆ. ಭ್ರಾತೃಘಾತುಕತೆ. ಒಂದು ಸಮಾಜ ಎಂದರೆ ಒಂದು ಕುಟುಂಬದಂತೆ, ಇಲ್ಲಿ ಬಾಳುವವರೆಲ್ಲರೂ ಸೋದರ ಭಾವದೊಂದಿಗೆ ಬದುಕಬೇಕು ಎಂದು ಆಶಿಸಬೇಕಾದ ಹೊತ್ತಿನಲ್ಲಿ , ನಮ್ಮ ಸುತ್ತ ನಡೆಯುತ್ತಿರುವ ಕೊಲೆಗಳು ಹಾಗೆಯೇ ಕಾಣುತ್ತವೆ. ಈ ಪ್ರವೃತ್ತಿಯನ್ನು ನಮ್ಮದೇ ಆದ ಕಾರಣಗಳಿಗಾಗಿ, ಅಸ್ಮಿತೆಗಳಿಗಾಗಿ, ಮಾತು-ಮೌನಗಳ ಮೂಲಕ ಅನುಮೋದಿಸುತ್ತಲೇ ಬಂದಿದ್ದೇವೆ. ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವೆ ಇರುವ ಸೂಕ್ಷ್ಮ ತಂತು, ಮನುಜ ಜೀವದ ಮೌಲ್ಯವನ್ನರಿತು ಬೆಸೆಯುವ ಸೇತುವೆಯಾಗಬೇಕಲ್ಲವೇ ? ಹಾಗಾಗುತ್ತಿಲ್ಲ ಜೀವ ಭಂಜಕ ಅಸ್ತ್ರವಾಗುತ್ತಿದೆ.

ಅಸಮಾಧಾನಕ್ಕೊಳಗಾದ ಅತೃಪ್ತ-ಹತಾಶ ಮನಸ್ಸುಗಳು ಆಕ್ರೋಶಕ್ಕೊಳಗಾಗುವುದು ಮಾನವ ಸಹಜ ಗುಣ. ಸಮಾಜದಲ್ಲಿ, ವಿಶೇಷವಾಗಿ ಯುವ ಮನಸುಗಳಲ್ಲಿ, ಈ ಆಕ್ರೋಶ , ಹತಾಶೆ, ಜಿಗುಪ್ಸೆ, ಕ್ರೋಧ ಇವುಗಳನ್ನು ನಿಯಂತ್ರಿಸುವಂತಹ ಮಾನವೀಯ ಪರಿಸರವನ್ನು ನಿರ್ಮಿಸುವುದು ನಾಗರಿಕತೆಯನ್ನೊಪ್ಪಿಕೊಂಡ ಯಾವುದೇ ಸಮಾಜದ ಆದ್ಯತೆಯಾಗಿರಬೇಕು. ಈ ಪರಿಸರ ನಿರ್ಮಾಣಕ್ಕೆ ವಾರಸುದಾರರು ಯಾರಾಗಬೇಕು ? ಸಮಾಜದ ಹಿರಿಯ ನಾಗರಿಕರೇ, ಸಾಹಿತಿ ಕಲಾವಿದರೇ, ಶಿಕ್ಷಣ ಕ್ಷೇತ್ರದ ಪರಿಚಾರಕರೇ, ಸುಶಿಕ್ಷಿತ ಜನತೆಯೇ, ಧರ್ಮ ಪ್ರಚಾರಕರೇ, ಮತಧರ್ಮ ಪರಿಚಾರಕರೇ , ಮಾಧ್ಯಮಗಳೇ( !!! )ಅಥವಾ ರಾಜಕಾರಣಿಗಳೇ ? ಈ ಎಲ್ಲರ ನಡುವೆಯೂ ಯಾವುದೋ ಒಂದು ಅಸ್ಮಿತೆಯ ಸೈಜುಗಲ್ಲು ತನ್ನ ಇರುವಿಕೆಯನ್ನು ಪ್ರಚುರಪಡಿಸುತ್ತಲೇ ಇದೆ. ಹಂತಕರಿಗಿಂತಲೂ ಹೆಚ್ಚಾಗಿ ಹತ್ಯೆಗೊಳಗಾದವರು ಪ್ರಶ್ನಾರ್ಹರಾಗುತ್ತಿದ್ದಾರೆ. ಹಲ್ಲೆಕೋರರು, ಹಂತಕರು ಪ್ರಶ್ನಾತೀತರಾಗದಿದ್ದರೂ ” ಅಸಮಾಧಾನದ ” ಚಾವಡಿಯಲ್ಲಿ ವಿಶ್ರಮಿಸಿಬಿಡುತ್ತಾರೆ. ಏಕೆಂದರೆ “ದಾಳಿ” ಗಳನ್ನು ಸಮರ್ಥಿಸುವ ಕಾರಣಗಳನ್ನು ನಿರಂತರವಾಗಿ ಉತ್ಪಾದಿಸಲಾಗುತ್ತಿದೆ.

ಈ ಎಲ್ಲ ಆಯಾಮಗಳಲ್ಲೂ ಗಮನವಿರಿಸುತ್ತಾ ಸಮಾಜದಲ್ಲಿ‌ ಮನುಜ ಜೀವಿಗಳ ಮತ್ತು ಚರಾಚರ ಜೀವಿಗಳ ರಕ್ಷಣೆಗೆ ಪೂರಕವಾದ ಸಮನ್ವಯದ-ಸೌಹಾರ್ದತೆಯ-ಮಾನವೀಯತೆಯ ವಾತಾವರಣವನ್ನು ನಿರ್ಮಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿರುವಷ್ಟೇ ಪ್ರಜಾಸತ್ತಾತ್ಮಕ ಸರ್ಕಾರದ ಮೇಲೆ ಸಹ ಇರುತ್ತದೆ. ನಾವು ಎಲ್ಲಿ ಎಡವುತ್ತಿದ್ದೇವೆ ಎಂದು ಪ್ರಜ್ಞಾಪೂರ್ವಕವಾಗಿ ಆಲೋಚನೆ ಮಾಡುವ ವಿವೇಕ ಮತ್ತು ವಿವೇಚನೆಯನ್ನೂ ಕಳೆದುಕೊಂಡಿದ್ದೇವೆ. ಏಕೆಂದರೆ ಪ್ರತಿ ಘಟನೆ ನಡೆದಾಗಲೂ ” ಏಕೆ” ಎನ್ನುವುದಕ್ಕಿಂತಲೂ “ಯಾರು” ಎನ್ನುವುದೇ ಮುನ್ನೆಲೆಗೆ ಬರುತ್ತದೆ. ಮತ್ತದೇ ಅಸ್ಮಿತೆಗಳ ಸೈಜುಗಲ್ಲುಗಳು ಆಲಿಕಲ್ಲಿನಂತೆ ಉದುರಿ ನಮ್ಮನ್ನು ಪ್ರಜ್ಞಾಶೂನ್ಯರನ್ನಾಗಿ ಮಾಡಿಬಿಡುತ್ತದೆ.

ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹಾಡಹಗಲಿನಲ್ಲೇ, ಪ್ರತಿಷ್ಠಿತ ಹೋಟೆಲಿನ ಹೊರ ಆವರಣದಲ್ಲಿ, ಏಳೆಂಟು ಜನರ ಸಮ್ಮುಖದಲ್ಲಿ ಹತ್ಯೆಗೀಡಾಗುವುದು ಏನನ್ನು ಸೂಚಿಸುತ್ತದೆ ? ಅವರ ವೃತ್ತಿ‌ ಮತ್ತು ಅನುಸರಿಸಿದ ವ್ಯಾಪಾರದ ಮಾರ್ಗ ನಮಗೆ ಅಪ್ರಸ್ತುತ. ಅವರ ಹತ್ಯೆಗೆ ಏನೇ ವ್ಯಾವಹಾರಿಕ ಕಾರಣಗಳಿರಬಹುದು. ವಾಣಿಜ್ಯ ಲೋಕವೇ ಮೋಸ ವಂಚನೆಗಳ ಕೂಪ. ಅದರಲ್ಲಿ ವಾಸ್ತು, ಜ್ಯೋತಿಷ್ಯ ಇತ್ಯಾದಿಗಳೂ ಒಂದು. ಅವರ ವೃತ್ತಿಯೇ ಮೌಢ್ಯ ಬಿತ್ತನೆಯನ್ನು ಅವಲಂಬಿಸಿರುವಂತಹುದು. ಆದರೆ ಅದಕ್ಕೆ ಸಾವು ಉತ್ತರವಲ್ಲ. ಅವರಿಗೂ ಬದುಕುವ ಹಕ್ಕಿದೆ. ಅವರಿಂದ ವಂಚನೆಗೊಳಗಾದವರೇ ಇದ್ದರೂ ನಮ್ಮಲ್ಲೊಂದು ನ್ಯಾಯಾಂಗ ವ್ಯವಸ್ಥೆ ಇದೆಯಲ್ಲವೇ ? ವ್ಯಾಪಾರ ವಹಿವಾಟಿನಲ್ಲಿ ಅನ್ಯಾಯಕ್ಕೊಳಗಾದವರೆಲ್ಲರೂ ಹಂತಕರಾಗಲು ಸಾಧ್ಯವೇ ? ಅಥವಾ ಅನ್ಯಾಯ ವಂಚನೆ ಮಾಡುವವರೆಲ್ಲರೂ ದಾಳಿಗೊಳಗಾಗಲು ಸಾಧ್ಯವೇ ? ಹಾಗಾಗುವುದು ತರವೇ ?

ಇಲ್ಲಿ ಮೂಲ ಪ್ರಶ್ನೆ ಉದ್ಭವಿಸುತ್ತದೆ. ಹತಾಶೆ, ಅಸಮಾಧಾನ, ಅಸಂತೃಪ್ತಿ ಮತ್ತು ಭಾವನಾತ್ಮಕ ಧಕ್ಕೆ ಇವೆಲ್ಲಕ್ಕೂ ಹಿಂಸೆಯೇ ಪ್ರತ್ಯುತ್ತರವಾಗಬೇಕೇ ? ನಾವು ಒಂದು ಪ್ರಜ್ಞಾವಂತ ಸಮಾಜವಾಗಿ ಎಡವುತ್ತಿದ್ದೇವೆ ಎನಿಸುವುದಿಲ್ಲವೇ ? ವ್ಯಕ್ತಿಗತ-ತಾತ್ವಿಕ ಕಾರಣಗಳಿಗಾಗಿ ಹಿಂಸೆಯನ್ನು ಅನುಮೋದಿಸುವ ಮೂಲಕ ಸಮಾಜ ಘೋರ ಅಪರಾಧ ಮಾಡುತ್ತಿದೆ ಎನಿಸುವುದಿಲ್ಲವೇ ? ಕೂಡುಬಾಳ್ವೆಯ ಸಂದೇಶವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವುದರಲ್ಲಿ ನಾವು ವಿಫಲರಾಗಿದ್ದೇವೆ ಎನಿಸುವುದಿಲ್ಲವೇ ? ಇದಕ್ಕೆಲ್ಲಾ ಯಾರು ಹೊಣೆ ? ಈ ಜವಾಬ್ದಾರಿಯನ್ನು ಯಾರು ಹೊರಬೇಕು ? ಸರ್ಕಾರಗಳಿಗೆ ಇದು ಕೇವಲ ಕಾನೂನು ಪ್ರಶ್ನೆಯಾಗಿ ಉಳಿಯುತ್ತದೆ.

ಇಂದು ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಅಮಾಯಕರ ಹತ್ಯೆ,-ಅತ್ಯಾಚಾರ-ದೌರ್ಜನ್ಯಗಳು ನಿತ್ಯಸುದ್ದಿಯಾಗುತ್ತಿರುವ ವಿಷಮ ಸನ್ನಿವೇಶದಲ್ಲಿ ನಾವು ನಾಗರಿಕತೆಯ ಹೊದಿಕೆಯಡಿ ವಿರಮಿಸುತ್ತಿದ್ದೇವೆ ಎನಿಸುತ್ತದೆ. ಸಮಾಜ ಸುಧಾರಕರ ಹೆಜ್ಜೆಗುರುತುಗಳನ್ನೇ ಅಳಿಸಿಹಾಕುತ್ತಿದ್ದೇವೆ ಎನಿಸುತ್ತದೆ.
ಸಮಾಜದಲ್ಲಿ ಹಿಂಸೆ-ಪ್ರತಿಹಿಂಸೆಯ ಮಾರ್ಗಗಳು ಬೌದ್ಧಿಕ ನೆಲೆಯಲ್ಲಿ ಹಿಂಸಾತ್ಮಕ ಮನಸುಗಳನ್ನು ಸೃಷ್ಟಿಸುತ್ತವೆ. ಆಯುಧ ಹಿಡಿದ ವ್ಯಕ್ತಿಯ ಹಿಂದೆ ಒಂದು ಸಾಮಾಜಿಕ ವ್ಯವಸ್ಥೆ ಇದ್ದೇ ಇರುತ್ತದೆ. ಆ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಜ ಪ್ರೀತಿ, ಸಂಯಮ, ಸೌಜನ್ಯ, ಸಂವೇದನೆಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಿದೆ. ಮೊದಲು ಮಾನವರಾಗೋಣ , ವಿಶ್ವಮಾನವ ನಮ್ಮಿಂದ ಬಹುದೂರದಲ್ಲಿದ್ದಾನೆ, ದಿಗಂತದಾಚೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಮೈಸೂರು; ನಾಡಹಬ್ಬಕ್ಕೆ ಮುನ್ನುಡಿ ಬರೆದ ಗಜಪಡೆ
ಕರ್ನಾಟಕ

ಮೈಸೂರು; ನಾಡಹಬ್ಬಕ್ಕೆ ಮುನ್ನುಡಿ ಬರೆದ ಗಜಪಡೆ

by ಪ್ರತಿಧ್ವನಿ
August 7, 2022
Uncategorized

Digital Marketing Equipment

by ಶ್ರುತಿ ನೀರಾಯ
August 11, 2022
ಬಿಹಾರ: ಗೃಹ ಖಾತೆ, ಸ್ಪೀಕರ್ ಸ್ಥಾನದ ಮೇಲೆ RJD ಕಣ್ಣು; ನಾಲ್ಕು ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ
ದೇಶ

ಬಿಹಾರ; ನೂತನ ಸರ್ಕಾರದಲ್ಲಿ ಆರ್‌ಜೆಡಿ ಪ್ರಾಬಲ್ಯ, ನಿತೀಶ್‌ಗೆ ಗೃಹ ಖಾತೆ ಸಾಧ್ಯತೆ

by ಪ್ರತಿಧ್ವನಿ
August 10, 2022
ಸಿಬಿಐ ಕಚೇರಿಯನ್ನು ನನ್ನ ಮನೆಯಲ್ಲೇ ನಿರ್ಮಿಸಲಿ: ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ವ್ಯಂಗ್ಯ
ದೇಶ

ಸಿಬಿಐ ಕಚೇರಿಯನ್ನು ನನ್ನ ಮನೆಯಲ್ಲೇ ನಿರ್ಮಿಸಲಿ: ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ವ್ಯಂಗ್ಯ

by ಪ್ರತಿಧ್ವನಿ
August 12, 2022
ಭಾನುವಾರ ಕೋವಿಡ್ ಪಾಸಿಟಿವ್, ಸೋಮವಾರ ಕೋವಿಡ್ ನೆಗೆಟಿವ್- ಇದು ಬಿಹಾರ ಸ್ಪೀಕರ್ ಕತೆ
ದೇಶ

ಭಾನುವಾರ ಕೋವಿಡ್ ಪಾಸಿಟಿವ್, ಸೋಮವಾರ ಕೋವಿಡ್ ನೆಗೆಟಿವ್- ಇದು ಬಿಹಾರ ಸ್ಪೀಕರ್ ಕತೆ

by Shivakumar A
August 9, 2022
Next Post
ಜಮೀನು ಆಕ್ರಮಣಕ್ಕೆ ವಿರೋಧ ತೋರಿದ ಆದಿವಾಸಿ ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ

ಜಮೀನು ಆಕ್ರಮಣಕ್ಕೆ ವಿರೋಧ ತೋರಿದ ಆದಿವಾಸಿ ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ: ಬೆಂಗಳೂರಿನ ಉಪ ತಹಶೀಲ್ದಾರ್/ ಮ್ಯಾನೇಜರ್ ಬಲೆಗೆ!

ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ: ಬೆಂಗಳೂರಿನ ಉಪ ತಹಶೀಲ್ದಾರ್/ ಮ್ಯಾನೇಜರ್ ಬಲೆಗೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist