ಭಾರತ ತಂಡ 40 ರನ್ ಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಗ್ರಸ್ಥಾನಿಯಾಗಿ ಸೂಪರ್ 4ಗೆ ಲಗ್ಗೆ ಹಾಕಿದೆ.
ದುಬೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಹಾಂಕಾಂಗ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಖ್ಯಾತಿಗೆ ಹೋಲಿಸಿದರೆ ಈ ಗೆಲುವು ನಿರಾಸೆ ಎಂದೇ ಹೇಳಬಹುದು. ಆದರೆ ಮಾಜಿ ವಿಶ್ವ ಚಾಂಪಿಯನ್ ವಿರುದ್ಧ 150 ರನ್ ಗಡಿ ದಾಟಿದ್ದೂ ಅಲ್ಲದೇ ಆಲೌಟ್ ಆಗದೇ ಹಾಂಕಾಂಗ್ ಗೌರವದ ಸೋಲುಂಡಿತು.
ಹಾಂಕಾಂಗ್ ಪರ ಬಾಬರ್ ಹಯತ್ (41), ಕಿಂಚಿಟ್ ಶಾಹ್ (30), ಜಹೀನ್ ಅಲಿ (ಅಜೇಯ 26) ಮತ್ತು ಸ್ಕಾಟ್ ಮೆಕ್ ಚೀನ್ (ಅಜೇಯ 16) ತಂಡದ ಪರ ಹೋರಾಟ ನಡೆಸಿದರು. ಭಾರತದ ದಾಳಿ ಪ್ರಭಾವಶಾಲಿಯಾಗಿ ಇರಲಿಲ್ಲ.
ಕೊಹ್ಲಿ, ಸೂರ್ಯ ಅರ್ಧಶತಕದ ಮಿಂಚು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.
ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 59 ರನ್ ಸಿಡಿಸಿ ಭರ್ಜರಿ ಫಾರ್ಮ್ ಗೆ ಮರಳಿದರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 68 ರನ್ ಚಚ್ಚಿದರು. ಇವರಿಬ್ಬರು ಮುರಿಯದ 3ನೇ ವಿಕೆಟ್ ಗೆ 98 ರನ್ ಜೊತೆಯಾಟ ನಿಭಾಯಿಸಿದರು.
ಕೆಎಲ್ ರಾಹುಲ್ 39 ಎಸೆತಗಳಲ್ಲಿ 2 ಸಿಕ್ಸರ್ ಸೇರಿದ 36 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮ 13 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 21 ರನ್ ಬಾರಿಸಿ ಔಟಾದರು.