ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದೂ ಬೇಕು, ಇದೂ ಇರಲಿ ಎಂಬ ಅಶೋಕ್ ಗೆಹ್ಲೋಟ್ ಅವರ ದುರಾಸೆ ಅವರ ಪಾಲಿಗೆ ಮುಳ್ಳಾದರೆ, ತೆರೆಮರೆಯಲ್ಲಿ ಇದ್ದವರು ಈಗ ಮುಂಚೂಣಿಗೆ ಬಂದು ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ.
ಹೌದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಈ ಬಾರಿ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಸ್ವಾತಂತ್ರ್ಯ ಪೂರ್ವ ಇತಿಹಾಸ ಹೊಂದಿರುವ ಈ ಹುದ್ದೆ ಇದುವರೆಗೂ ಗಾಂಧಿ ಕುಟುಂಬದ ಕೈಯಲ್ಲೇ ಹೆಚ್ಚಾಗಿ ಇದ್ದಿದ್ದರಿಂದ ಅದರ ಮೇಲೆ ಕಣ್ಣು ಹಾಕುವ ಯೋಚನೆ ಕನಸಿನಲ್ಲಿ ಕೂಡ ಮಾಡಲು ಸಾಧ್ಯವಿರಲಿಲ್ಲ.
ಆದರೆ, ಇದೀಗ ಗಾಂಧಿ ಕುಟುಂಬ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದು ಹೊಸಬರಿಗೆ ಅವಕಾಶ ಮಾಡಲು ನಿರ್ಧರಿಸುತ್ತಿದ್ದಂತೆ ಇನ್ನಿಲ್ಲದ ಕಸರತ್ತು ನಡೆದಿದೆ. ಯಾವುದೇ ವಿಧಾನಸಭೆ, ಲೋಕಸಭಾ ಚುನಾವಣೆಗೂ ಇಲ್ಲದಷ್ಟು ರಾಜಕೀಯ ನಡೆಯುತ್ತಿದೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಕೇಂದ್ರ ಸಚಿವ ಕೇರಳದ ಶಶಿ ತರೂರ್ ನಡುವೆ ಸ್ಪರ್ಧೆ ನಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ ರಾಜಸ್ಥಾನವನ್ನು ಬಿಟ್ಟುಕೊಡಲ್ಲ. ರಾಷ್ಟ್ರೀಯ ಅಧ್ಯಕ್ಷ ಸ್ಥಾನವೂ ಬೇಕು ಎಂದು ಗೆಹ್ಲೋಟ್ ಮಾಡಲು ಹೋದ ರಾಜಕೀಯ ಅವರ ಪಾಲಿಗೆ ಮುಳುವಾಯಿತು.
ಸಚಿನ್ ಪೈಲೆಟ್ ಗೆ ಸಿಎಂ ಸ್ಥಾನ ಕೊಡಬಾರದು ಎಂದು 90್ಕಕ್ಕೂ ಹೆಚ್ಚು ಶಾಸಕರಿಂದ ರಾಜೀನಾಮೆ ಕೊಡಿಸಿ ರಾಜಸ್ಥಾನದಲ್ಲಿ ಹಿಡಿತ ಸಾಧಿಸಲು ಹೋಗಿ ಮುಜುಗರಕ್ಕೆ ಒಳಗಾಗಿದ್ದಾರೆ. ಇದರಿಂದ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಿಂದ ಹಿಂದೆ ಸರಿಯುವುದು ಬಹುತೇಕ ಖಚಿತವಾಗಿದೆ.
ಇದೀಗ ಗೆಹ್ಲೋಟ್ ಹಿಂದೆ ಸರಿದಿದ್ದರಿಂದ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಗಾಂಧಿ ಕುಟುಂಬದ ಆಪ್ತರಾಗಿರುವ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್, ರಾಹುಲ್ ಗಾಂಧಿ ಆಪ್ತ ಕೆಸಿ ವೇಣುಗೋಪಾಲ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮುಂತಾದವರು ಈಗ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು, ಇವರು ಕೂಡ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ.
ಹೈಕಮಾಂಡ್ ಗರಂ
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಮಹತ್ತರವಾದ ಘಟ್ಟ ತಲುಪಿದ್ದು ಈ ಮಧ್ಯೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ದ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ.
ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ವರದಿಯನ್ನು ಕೇಳಿರುವ ಸೋನಿಯಾ ಗಾಂಧಿ ಆದಷ್ಟು ಬೇಗ ಬಿಕ್ಕಟ್ಟನ್ನು ಶಮನಗೊಳಿಸುವಂತೆ ತಮ್ಮ ಪಕ್ಷದ ನಾಯಕರಾದ ಅಜಯ್ ಮಾಕೆನ್ ಸೇರಿದಂತೆ ಇತರ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜಸ್ಥಾನದಲ್ಲಿ ಸದ್ಯ ಬಿಗುಡಾಯಿಸಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಎಂ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಲು ಒಲ್ಲದ ಮನಸ್ಸಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಉದಯ್ಪುರದಲ್ಲಿ ನಡೆದ ಚಿಂತನ ಶಿವಿರದ ನಿರ್ಣಯದಂತೆ ಒಂದು ವ್ಯಕ್ತಿ ಒಂದು ಹುದ್ದೆಗೆ ಗೆಹ್ಲೋಟ್ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.
ಇತ್ತ ರಾಜಸ್ಥಾನ ರಾಜಕೀಯವು ಬೇಕು ಮತ್ತು ರಾಷ್ಟ್ರೀಯ ರಾಜಕೀಯವು ಬೇಕು ಎಂದು ಎರಡು ಕಡೆಯೂ ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೈ ಕಮಾಂಡ್ ಗೆಹ್ಲೋಟ್ರನ್ನು ಅಧ್ಯಕ್ಷೀಯ ಚುನಾವಣೆಯಿಂದ ಹೊರಗಿಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಏಕೆಂದರೆ ಇತ್ತೀಚಿನ ದಿನಗಳಲ್ಲಿ ರಾಜಸ್ಥಾನ ಕಾಂಗ್ರೆಸ್ ಆಂತರಿಕ ತಿಕ್ಕಾಟ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿದ್ದು ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ರಿಗೆ ಕಾಂಗ್ರೆಸ್ ಹೈ ಕಮಾಂಡ್ ರಾಷ್ಟ್ರೀಯ ಮಟ್ಟದ ಸ್ಥಾನಮಾನವನ್ನ ನೀಡಲು ನಿರ್ಧರಿಸಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗೆಹ್ಲೋಟ್ ತಮ್ಮ ವಿರೋಧಿ ಬಣದ ನಾಯಕನಿಗೆ ರಾಷ್ಟ್ರೀಯ ಸ್ಥಾನಮಾನ ನೀಡಬಾರದು ಎಂದು ಆಗ್ರಹಿಸಿದ್ದರು.
ಇತ್ತ ಗೆಹ್ಲೋಟ್ ದುರಾಸೆಯಿಂದ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಗೆಹ್ಲೋಟ್ ನಡೆಯಿಂದಾಗಿ ರಾಜಸ್ಥಾನದಲ್ಲಿ ಒಂದು ವೇಳೆ ಪಕ್ಷ ಅಧಿಕಾರಿ ಕಳೆದುಕೊಂಡರೆ ಅದಕ್ಕೆ ಗೆಹ್ಲೋಟ್ ದುರಾಸೆಯೆ ನೇರ ಕಾರಣ ಎಂದು ದೂಷಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.