75ನೇ ವರ್ಷದ ಸ್ವಾತಂತ್ರ್ಯ ವರ್ಷದ ಅಂಗವಾಗಿ ಜಾಹೀರಾತು ನೀಡಿಕೆ ವೇಳೆ ದೇಶದ ಪ್ರಪ್ರಥಮ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರಾದ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟು ರಾಜ್ಯ ಸರ್ಕಾರ ಈಗ ವಿವಾದಕ್ಕೆ ಸಿಲುಕಿದೆ. ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಚಿತ್ರವನ್ನು ಉದ್ದೇಶಪೂರ್ವಕ ಕೈಬಿಡಲಾಗಿದೆ ಎಂದು ಸಮಾಜಿಕ ಜಾಲತಾಣದಲ್ಲಿ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗಿ ಬರೋಬ್ಬರಿ 75 ವರ್ಷ. ಈ ಏಳು ದಶಕಗಳ ಅವಯಲ್ಲಿ ದೇಶ ಸಾಸಿರುವ ಪ್ರಗತಿ ಅನೇಕ. ಪ್ರತಿವರ್ಷ ಆಗಸ್ಟ್ 15ರಂದು ನಾವು ಸಡಗರದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತೇವೆ ಮತ್ತು ಈ ಸಂಭ್ರಮಾಚರಣೆಗೆ ಕಾರಣರಾದವರನ್ನು ನೆನಪು ಮಾಡಿಕೊಳ್ಳುತ್ತೇವೆ. ಆದರೆ ಇಂದಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ದೀರ್ಘ ಕಾಲ ಪ್ರಧಾನಿಯಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ನೆಹರೂ ಅವರ ಭಾವಚಿತ್ರವನ್ನು ಸ್ವತಂತ್ರ್ಯ ಅಮೃತಮಹೋತ್ಸವದ ಜಾಹೀರಾತಿನಲ್ಲಿ ನೆನಪಿಸಿಕೊಳ್ಳದೆ ಇರುವುದು ವಿಷಾದಕರ ವಿಷಯವೇ ಹೌದು.
ಜಾಹೀರಾತಿನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಬೋಸ್, ನೆಹರೂ ಆಡಳಿತದಲ್ಲಿ ಆರ್ ಎಸ್ ಎಸ್ ಅನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದ ಸರ್ದಾರ್ ವಲ್ಲಭಭಾಯಿ ಪಟೇಲ್, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್, ಲಾಲಾ ಲಜ್ ಪತ್ ರಾಯ್, ಬಾಲ ಗಂಗಾಧರ್ ತಿಲಕ್, ಬಿಪಿನ್ ಚಂದ್ರ ಪಾಲ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ, ಸ್ವಾತಂತ್ರ್ಯ ಹೋರಾಟಗಾರರಾದ ಮೌಲಾನ ಅಬ್ದುಲ್ ಕಲಾಂ ಆಜಾದ್ ಫೋಟೋಗಳ ಜೊತೆಗೆ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಸಾವರ್ಕರ್ ಫೋಟೋವನ್ನು ಮುದ್ರಿಸಲಾಗಿದೆ.
ರಾಷ್ಟ್ರ ನಾಯಕರ ಫೋಟೋದ ಸಾಲಿನಲ್ಲಿ ಬ್ರಿಟಿಷರೊಂದಿಗೆ ಕ್ಷಮಾಪಣೆ ಕೇಳಿದ ಸಾವರ್ಕರ್ ಫೋಟೋವನ್ನು ಹಾಕಲಾಗಿದೆ, ‘ಕ್ರಾಂತಿಕಾರಿ’ ಎಂಬ ಬಿರುದನ್ನು ಪತ್ರಿಕೆಯಲ್ಲಿ ಸಾವರ್ಕರ್ ಗೆ ನೀಡಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ದೊಡ್ಡ ಮಟ್ಟದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನೆಹರೂ ಅವರ ಚಿತ್ರವನ್ನು ಹಾಕಿದರೆ ರಾಜಕೀಯವಾಗಿ ಹಿನ್ನಡೆಯಾಗಬಹುದು ಎಂಬ ಕಾರಣದಿಂದಲೊ ಏನೊ ಅವರು ಮಾಜಿ ಪ್ರಧಾನಿ ನೆಹರೂ ಅವರ ಫೋಟೊ ಇಲ್ಲದೆ ಜಾಹೀರಾತು ನೀಡುತ್ತಿದ್ದಾರೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ , ಇದು ಸರ್ಕಾರದ ಕಾರ್ಯಕ್ರಮ. ಹಾಗಾಗಿ ಕರ್ನಾಟಕದಲ್ಲಿ ನೀಡಿದ ಜಾಹೀರಾತಿನಲ್ಲಿ ನೆಹರೂ ಅವರ ಫೋಟೊವನ್ನು ಹಾಕುವುದು ಸೂಕ್ತ ಎಂಬುದು ಜನ ಸಾಮಾನ್ಯರ ಅಭಿಪ್ರಾಯ.
ಈ ಕುರಿತು ಸಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಸರ್ಕಾರ ತನ್ನ ಪ್ರೊಪಗಂಡಾ ವಿಚಾರ ಬಂದಾಗ ಗಟಾರಕ್ಕಾದರೂ ಇಳಿಯಬಲ್ಲದು ಅನ್ನುವುದಕ್ಕೆ ನೆಹರೂ ಅವರನ್ನು ಹೊರತುಪಡಿಸಿ ಕೊಟ್ಟ ಈ ಜಾಹೀರಾತೇ ಸಾಕ್ಷಿ!. ಕೀಲಿ ಬೊಂಬೆ ಬೊಮ್ಮಾಯಿಯವರೇ, ನೀವು ನಿಮ್ಮ ಗಟಾರದ ಪಕ್ಷ ತಿಪ್ಪರಲಾಗ ಹಾಕಿದರೂ ಇತಿಹಾಸ ಬದಲಿಸಲಾರಿರಿ. ಸ್ವಾತಂತ್ರ್ಯ ಹೋರಾಟ ಮಾಡಿದ ಪಕ್ಷ ಎನ್ನಿಸಿಕೊಳ್ಳಲಾರಿರಿ! ಅಂದಹಾಗೆ ಇಷ್ಟೊಂದು ಸುಳ್ಳು ಹೇಳಿ ಯಾವ ಘನಕಾರ್ಯ ಮಾಡಲಿದ್ದೀರಿ?! ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು, ಇದೆಲ್ಲಾ ಒಂದು ಕಡೆ ಇರ್ಲಿ, ಇವ್ರು ಗಾಂಧಿ ಫೋಟೋವನ್ನು ಮೊದಲ ಸಾಲಲ್ಲೇ ಮೊದಲನೇ ಫೋಟೋ ಹಾಕಿರೋದು ನೋಡಿ ಆಶ್ಚರ್ಯ ಆಯ್ತು. ಒಂದು ಕಡೆಯಿಂದ ಗಾಂಧಿಯನ್ನು ಬೈಯ್ಯೊದು, ಇನ್ನೊಂದು ಕಡೆ ಗಾಂಧಿಯನ್ನು ಹೊಗಳುವುದು. ತಿಪ್ಪೆ ಸಾರಿಸುವ ಕೆಲಸ ಚೆನ್ನಾಗಿ ಮಾಡ್ತಿದ್ದಾರೆ! ಎಂದಿದ್ದಾರೆ.
ಮತ್ತೋರ್ವ ನೆಟ್ಟಿಗರು, ಬೊಮ್ಮಾಯಿ ಸರ್ಕಾರ ನೆಹರೂ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಪಟ್ಟಿಯಿಂದ ದೂರವಿಡಬಹುದೇ ಹೊರತು ನನ್ನ ಹೃದಯದಿಂದಲ್ಲ ಎಂದು ಬರೆದುಕೊಂಡಿದ್ದಾರೆ.