ನವದೆಹಲಿ : ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದಲ್ಲಿ ಬಂಡಾಯ ಸ್ಫೋಟವಾಗುತ್ತಿದೆ. ವಿಪಕ್ಷ ನಾಯಕನ ಆಯ್ಕೆಯ ವಿಚಾರದಲ್ಲಿ ಪಕ್ಷ ಹೋಳಾಗಿ ಬಂಡಾಯ ಶಾಸಕರ ಬಣವೇ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದೆ. ಇದಾದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತವಾಗಿದೆ. ಶಾಸಲಕರ ಭಿನ್ನಮತದ ಹೊತ್ತಿನಲ್ಲಿಯೇ 20 ಸಂಸದರು ಎನ್ಡಿಎ ಮಿತ್ರಕೂಟವನ್ನು ಬೆಂಬಲಿಸುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ನಡುವೆಯೇ ಬಂಡಾಯವೆದ್ದು ಪಕ್ಷ ದ್ರೋಹವೆಸಗಿರುವ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಬಣದ ಸಂಸದರು ವಾಗ್ದಾಳಿ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಲ್ಲಿ ಹೊಸ ಬಣ ರಚನೆ, ರಾಜೀನಾಮೆ ಮತ್ತು ಭಿನ್ನಮತದ ಭೀತಿಯ ನಡುವೆ , ಹಿರಿಯ ಸಂಸದರಾದ ಸಾಗರಿಕಾ ಘೋಷ್, ಮಹುವಾ ಮೊಯಿತ್ರಾ, ಕೀರ್ತಿ ಆಜಾದ್ ಮತ್ತು ಡೆರೆಕ್ ಒ’ಬ್ರೇನ್ ಟಿಎಂಸಿ ಅಧಿನಾಯಕಿ ಬೆನ್ನಿಗೆ ನಿಂತಿದ್ದಾರೆ.
ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದರು, ನಾವು ಯಾವತ್ತೂ ಮಮತಾ ಬ್ಯಾನರ್ಜಿಯವರ “ಅದ್ಭುತ” ನಾಯಕತ್ವವನ್ನು ನಂಬುತ್ತೇವೆ. ಒಂದು ಪಕ್ಷದ ಚಿಹ್ನೆಯ ಮೇಲೆ ಮತ್ತು ಒಬ್ಬ ನಿರ್ದಿಷ್ಟ ನಾಯಕನ ಹೆಸರಿನಲ್ಲಿ ಗೆಲ್ಲುವ ನಾಯಕರು ಆ ಪಕ್ಷ ಮತ್ತು ಆ ನಾಯಕ ಸೋತಾಗ ಪಕ್ಷ ಬಿಡುವ ಪದ್ಧತಿ ವಿಚಿತ್ರ ಲಕ್ಷಣ ಎಂದು ಸಂಸದರು ಟೀಕಾಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ : ನೈತಿಕತೆಯಿಲ್ಲದ ಮಾಧ್ಯಮ ಸೇತುವೆಗಳು
2024 ರಲ್ಲಿ ನನ್ನ ರಾಜಕೀಯ ಜೀವನ ಆರಂಭವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರತದ ಅಮೂಲ್ಯ ಪ್ರಜಾಪ್ರಭುತ್ವ ಸ್ಥಳಗಳನ್ನು ನಾಶಪಡಿಸುತ್ತಿದೆ. ಸಂವಿಧಾನ ವಿರೋಧಿ, ಕೋಮುವಾದಿ ಮನಸ್ಸಿನ ಮೋದಿ ನೇತೃತ್ವದ ಬಿಜೆಪಿ ಧಾರ್ಮಿಕ ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ. ಇದರ ವಿರುದ್ಧ ವಿರೋಧ ಪಕ್ಷದ ಸಾಂವಿಧಾನಿಕ ಹೋರಾಟದಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ ಎಂದು ಸಂಸದೆ ಘೋಷ್ ಟೀಕಿಸಿದ್ದಾರೆ.
ನನ್ನ ಅಚಲ ಧೈರ್ಯ ಮತ್ತು ಮೌಲ್ಯಾಯುತ ರಾಜಕೀಯದಲ್ಲಿ ಎಲ್ಲಾ ಮಹಿಳೆಯರಿಗೆ, ಎಲ್ಲಾ ನಾಗರಿಕರಿಗೆ ಮಮತಾ ಸ್ಫೂರ್ತಿ. ಚುನಾವಣಾ ಫಲಿತಾಂಶ ಬದಲಾದಂತೆ ನಿಮ್ಮ ನಂಬಿಕೆಗಳು ಬದಲಾದರೆ, ಅವು ನಂಬಿಕೆಗಳೇ? ನೀವು ಪಕ್ಷದ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತೀರಿ. ನೀವು ಪಕ್ಷವನ್ನು ನಂಬುವಂತೆ ಮತದಾರರಿಗೆ ಹೇಳುತ್ತೀರಿ. ಆ ಪಕ್ಷದ ಬೆಂಬಲ ಮತ್ತು ನಾಯಕರ ಆಕರ್ಷಣೆಯಿಂದಾಗಿ ನೀವು ಗೆಲ್ಲುತ್ತೀರಿ, ಅದಾದ ಬಳಿಕ ಎಲ್ಲವನ್ನು ಮರೆತು ಬಿಡ್ತೀರಿ ಎಂದು ಬಂಡಾಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ಇನ್ನೊಬ್ಬ ಸಂಸದ ಡೆರೇಕ್ಒಬ್ರೇನ್ ಕೂಡ ಭಿನ್ನಮತೀಯರ ವಿರುದ್ಧ ಕಿಡಿಕಾರಿದ್ದಾರೆ, ನೀವು ಗೆಲ್ಲುವವರೆಗೆ ಪಕ್ಷ ನಿಷ್ಠೆ ತೋರಿಸುತ್ತೀರಿ, ಅದಾದ ನಂತರ ಅಮಿತ್ ಶಾ ಕಡೆಯವರು ಫೋನ್ ಮಾಡಿದರೆ ವಿನಮ್ರತೆಯಿಂದ ಸಾಲಾಗಿ ನಿಲ್ಲುತ್ತೀರಿ. ನೀವೆಷ್ಟು ನೈತಿಕತೆ ಇದ್ದವರು, ನೈತಿಕತೆ ಉಳಿಸಿಕೊಂಡವರು ಎಂಬುವುದು ಇಲ್ಲೇ ಗೊತ್ತಾಗುತ್ತದೆ. ನಿಮ್ಮ ನಡವಳಿಕೆ ನಾಚಿಕೆಗೇಡಿನದ್ದಾಗಿದೆ ಎಂದು ಒಬ್ರೇನ್ ತೀಕ್ಷ್ಣವಾಗಿ ಚಾಟಿ ಬೀಸಿದ್ದಾರೆ.
ನಾನು ಸಾಯುವವರೆಗೂ ದೀದಿ ಜೊತೆಗಿರುತ್ತೇನೆ. ಬಂಡಾಯಗಾರರೆಲ್ಲ ನಕಲಿ ನಾಯಕರು. ಇದಕ್ಕೆಲ್ಲ ಬಿಜೆಪಿ ಹೆಣೆದಿರುವ ಕಟ್ಟು ಕಥೆಯೇ ಕಾರಣವಾಗಿದೆ ಎಂದು ಕೀರ್ತಿ ಆಜಾದ್ ಟೀಕಿಸಿದ್ದಾರೆ.






