ಕೊರೋನಾ ತಗ್ಗಿದ ಹಿನ್ನೆಲೆ ಸರ್ಕಾರ ಶಾಲಾ ಕಾಲೇಜುಗಳನ್ನು ಪುನರಾರಂಭ ಮಾಡಿದೆ. ಇದರ ನಡುವೆ ಇದೀಗ ನಗರದ ಆಸ್ಪತ್ರೆಯೊಂದರಲ್ಲಿ ದಿನೇ ದಿನೇ ಮಕ್ಕಳಲ್ಲಿ ಇತರೆ ರೋಗ ಸಮಸ್ಯೆಗಳು ಕಾಣ ತೊಡಗಿವೆ. ಶಾಲೆ ಆರಂಭವಾದ ಬೆನ್ನಲ್ಲೇ ಮಕ್ಕಳಲ್ಲಿ ಕೊರೋನಾ ಹೊರತಾದ ರೋಗಗಳು ಉಲ್ಬಣವಾಗ ತೊಡಗಿದೆ. ಇದರ ಜೊತೆಗೆ ಕಳೆದ ಹತ್ತು ದಿನದಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಾಗಿದ್ರೂ ಕೂಡ ನಗರದಲ್ಲಿ, ಮಕ್ಕಳಿಗೆ ಹೆಚ್ಚು ಸೋಂಕು ತಗುಲಿದೆ.
ಕೊರೋನಾ ಕುಗ್ಗಿದ ಬೆನ್ನಲ್ಲೇ ಸರ್ಕಾರ ಶಾಲೆ ಆರಂಭಿಸಿದೆ. ಆದರೆ ತಜ್ಞರು ಮೂರನೇ ಅಲೆಯ ಎಚ್ಚರಿಕೆಯಂತೂ ಕೊಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಪತ್ತೆಯಾಗುತ್ತಿರುವ ಸೋಂಕಿನ ಪೈಕಿ ಹೆಚ್ಚು ಮಕ್ಕಳದ್ದೇ ಇದೆ ಎನ್ನುವುದು ಆತಂಕಕಾರಿ ವಿಚಾರ. 19 ವರ್ಷದೊಳಗೆ ಒಟ್ಟು 425 ಮಕ್ಕಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ನವಜಾತ ಶಿಶುಗಳಿಂದ ಒಂಬತ್ತು ವರ್ಷದೊಳಗಿನ 157 ಮಕ್ಕಳಲ್ಲಿ ಕೊರೋನಾ ಕಾಣಿಸಿಕೊಂಡ್ರೇ, 10 ವರ್ಷ ಮೇಲ್ಪಟ್ಟು 19 ವರ್ಷದೊಳಗಿನ 268 ಮಕ್ಕಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ಇದು ಈಗ ಬಹಳ ಆತಂಕ ಮೂಡಿಸಿದೆ.
ಮೂರನೇ ಅಲೆಯ ಭಯದ ನಡುವೆ ಮಕ್ಕಳಲ್ಲಿ ಇತರೆ ಕಾಯಿಲೆ ಉಲ್ಬಣ !
ಇಂಥಾ ಕೊರೋನಾ ಪರಿಸ್ಥಿತಿಯಲ್ಲೂ ಮಕ್ಕಳಲ್ಲಿ ಇತರೆ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕ ಇಮ್ಮಡಿ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ನಗರದ ಕೆಸಿ ಜನರಲ್ ಆಸ್ಪತ್ರೆಯ ಮಕ್ಕಳ ಹಾಸಿಗೆ ಭರ್ತಿಯಾಗಿದೆ. ಕಳೆದ ಹತ್ತು ದಿನದಲ್ಲಿ 70 ಕ್ಕೂ ಅಧಿಕ ಮಕ್ಕಳು ಉಸಿರಾಟ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಮಕ್ಕಳಲ್ಲಿ ಕೆಮ್ಮು, ನೆಗಡಿ, ಶೀತ ಅಸ್ತಮ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಉಸಿರಾಟ ಸಂಬಂಧಿ ಕಾಯಿಲೆಯಿಂದ ಕೆಸಿ ಜೆನರಲ್ ಆಸ್ಪತ್ರೆಯಲ್ಲಿರುವ 30 ಮಕ್ಕಳ ಬೆಡ್ ಭರ್ತಿಯಾಗಿದೆ.
ಮಕ್ಕಳಲ್ಲಿ ಉಸಿರಾಟ ಸಮಸ್ಯೆ ಹೆಚ್ಚಳ.. ಸಾಲು ಸಾಲು ಮಕ್ಕಳು ಆಸ್ಪತ್ರೆಗೆ ದಾಖಲು !
ಹತ್ತು ದಿನಗಳಲ್ಲಿ 70 ಮಕ್ಕಳು ಆಸ್ಪತ್ರೆಗೆ ಹಲವು ಸಮಸ್ಯೆಯಿಂದ ದಾಖಲಾಗಿದ್ದಾರೆ. ಈ ಪೈಕಿ ಸುಮಾರು 55-60 ಮಕ್ಕಳಿಗೆ ಯಾವುದೇ ಅನಾರೋಗ್ಯದ ಹಿನ್ನೆಲೆಯಿಲ್ಲ. ಈಗ ಹವಾಮಾನ ಏರುಪೇರು ಹಿನ್ನೆಲೆ ಏಕಾಏಕಿಯಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸುಮಾರು 10 ಮಕ್ಕಳಲ್ಲಿ ಮೊದಲೇ ಆಸ್ತಮಾದಂಥ ಕಾಯಿಲೆ ಕಾಣಿಸಿಕೊಂಡಿತ್ತು. ಅದರ ಹೊರತಾಗಿ ಈ ಪೈಕಿ ಆಸ್ಪತ್ರೆ ದಾಖಲಾದ ಮಕ್ಕಳಲ್ಲಿ ಏಕಾಏಕಿಯಾಗಿ ಈ ಸಮಸ್ಯೆ ಬಾಧಿಸಿದೆ ಎಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆಯಿಂದ 5 ಮಕ್ಕಳು ಐಸಿಯುಗೆ ದಾಖಲು !
ಇನ್ನು ಈ ಪೈಕಿ 5 ಮಕ್ಕಳಲ್ಲಿ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದೆ. ಪರಿಣಾಮ, ಐವರನ್ನೂ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಧೂಳಿಣ ಕಣ, ಹವಾಮಾನ ಬದಲಾವಣೆಯಿಂದ ಮಕ್ಕಳಲ್ಲಿ ಇಂಥಾ ರೋಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಮಕ್ಕಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಶಾಲೆ ಆರಂಭವಾಗಿದ್ದು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯ ಪೋಷಕರ ಮೇಲಿದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಇದ್ದರೇ ವೈದ್ಯರನ್ನ ಸಂಪರ್ಕ ಮಾಡುವುದು ಒಳಿತು.
ಶಾಲಾ ಮಕ್ಕಳಿಗೆ RTPCR ಟೆಸ್ಟ್ಗೆ ಬಿಬಿಎಂಪಿ ಕಮಿಷನರ್ ಆದೇಶ !
ಇನ್ನು ಇದೇ ವಿಚಾರವಾಗಿ ಬಿಬಿಎಂಪಿ ಟೆಕ್ನಿಕಲ್ ಕಮಿಟಿ ಜೊತೆ ಮಹತ್ವದ ಸಭೆ ನಡೆಸಿದೆ. ಈ ಟೆಕ್ನಿಕಲ್ ಕಮಿಟಿ ಸಭೆಯಲ್ಲಿ ಶಾಲಾ ಮಕ್ಕಳ ಮೇಲೆ ಹೆಚ್ಚಿನ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಎರಡು ದಿನಕ್ಕಿಂತ ಹೆಚ್ಚು ಕೋವಿಡ್ ಗುಣಲಕ್ಷಣ ಕಂಡುಬರೋ ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ನಗರದ ಎಲ್ಲಾ ಶಾಲೆಗಳಲ್ಲಿ ಓರ್ವ ಅಧಿಕಾರಿಗಳನ್ನು ನಿಯೋಜಿಸಬೇಕು. ಆಯಾ ವಲಯದ ನೋಡೆಲ್ ಅಧಿಕಾರಿಗಳು ಶಾಲೆ ಜೊತೆ ಸಂಪರ್ಕಿಸಿ ಓರ್ವ ಅಧಿಕಾರಿಯನ್ನು ನೇಮಿಸಿ, ಅಗಾಗ್ಗೆ ಮಾಹಿತಿ ಪಡೆಯಬೇಕು.
ಸೋಂಕು ಲಕ್ಷಣವಿರುವ ಮಕ್ಕಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಬೇಕು. ಆ ಮಕ್ಕಳ ಮನೆಗೆ ವೈದ್ಯಾಧಿಕಾರಿ ತಂಡವು ತೆರಳಿ ಪರೀಕ್ಷೆ ಮಾಡಬೇಕು. ಸೋಂಕು ಲಕ್ಷಣಗಳಿರುವ, ಬೇರೆ ಖಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗುವ ಮಕ್ಕಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯವಾಗಿಸಬೇಕು. ಶಾಲೆಗೆ ಹೋಗುವ ಮಕ್ಕಳ ಜೊತೆ ಸಂಪರ್ಕ ಹೊಂದಿರುವವರಿಗೆ ಲಸಿಕೆ ನೀಡಬೇಕು. ಎರಡು ಬಾರಿ ಲಸಿಕೆ ಪಡೆದವರಿಗೆ ಕೋವಿಡ್ ಸೋಂಕು ಕಂಡುಬಂದರೆ ಜಿನೋಮ್ ಸೀಕ್ವೆನ್ಸ್ ಮಾಡಲು ಸಮಿತಿ ಪಾಲಿಕೆಗೆ ಸಲಹೆ ನೀಡಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದುಕೊಂಡ ಪಾಲಿಕೆ ಸಲಹೆಗಳನ್ನು ಯಥಾವತ್ತಾಗಿ ಆದೇಶಿಸಿ ಕಾರ್ಯಗತಗೊಳಿಸಲು ಸೂಚಿಸಿದೆ.