• Home
  • About Us
  • ಕರ್ನಾಟಕ
Tuesday, July 8, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಂಬೇಡ್ಕರ್‌ ಭ್ರಮೆಯಲ್ಲ ಸೈದ್ಧಾಂತಿಕ ವಾಸ್ತವ

ನಾ ದಿವಾಕರ by ನಾ ದಿವಾಕರ
December 21, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

—-ನಾ ದಿವಾಕರ —–

ADVERTISEMENT

ನಮ್ಮ ಸಂಸದೀಯ ವ್ಯವಸ್ಥೆ ತನ್ನ ಘನತೆ ಸಮ್ಮಾನಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ

ಅಂಬೇಡ್ಕರ್‌ ಅವರನ್ನು ಧ್ಯಾನಿಸುವುದು ಒಂದು ಫ್ಯಾಷನ್‌ ಆಗಿದೆ, ಅವರನ್ನು ಧ್ಯಾನಿಸುವಷ್ಟು ಮಟ್ಟಿಗೆ ಅಥವಾ ಧ್ಯಾನಿಸುವ ಬದಲು ದೇವರನ್ನು ಧ್ಯಾನಿಸಿದ್ದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂಬ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಹೇಳಿಕೆ ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಹಜವಾಗಿಯೇ ದೇಶದ ದಲಿತ-ಶೋಷಿತ ಜನತೆ (ಬಿಜೆಪಿ ಸದಸ್ಯ-ಬೆಂಬಲಿಗರನ್ನು ಹೊರತುಪಡಿಸಿ) ಮತ್ತು ಪ್ರಗತಿಪರ ಮನಸ್ಸುಗಳು ಅಮಿತ್‌ ಶಾ ಅವರ ಹೇಳಿಕೆಯಿಂದ ಆಘಾತಕ್ಕೊಳಗಾಗಿವೆ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಸಾಂವಿಧಾನಿಕ ನಿಯಮಗಳ ಅನುಸಾರ ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಗೃಹಸಚಿವರು ಸಂವಿಧಾನ ಕರ್ತೃವನ್ನೇ ಅಪಮಾನಿಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. “ ನಾನು ಆ ಅರ್ಥದಲ್ಲಿ ಹೇಳಲಿಲ್ಲ, ನನ್ನ ಮಾತುಗಳನ್ನು ತಿರುಚಲಾಗಿದೆ ” ಇತ್ಯಾದಿ ಸಮಜಾಯಿಷಿಗಳು ಇನ್ನು ಮುಂದೆ ವ್ಯಕ್ತವಾಗಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿಯವರೂ ಅಮಿತ್‌ ಶಾ ಅವರನ್ನು ಸಮರ್ಥಿಸಿರುವುದು ಈ ಅಪಮಾನಕರ ಹೇಳಿಕೆಯ ಹಿಂದಿನ ಸಾಂಸ್ಥಿಕ ಮನಸ್ಥಿತಿಯನ್ನು ಬಿಂಬಿಸುತ್ತದೆ.

ಅಮಿತ್‌ ಶಾ ಅವರ ಹೇಳಿಕೆಯನ್ನು ಮೂರು ಆಯಾಮಗಳಲ್ಲಿ ನಿಷ್ಕರ್ಷೆಗೊಳಪಡಿಸಬಹುದು. ಮೊದಲನೆಯದಾಗಿ ಅಂಬೇಡ್ಕರ್‌ ಹಾಕಿಕೊಟ್ಟ ಸಾಂವಿಧಾನಿಕ ಹಾದಿಯನ್ನು ಕ್ರಮಿಸುವ ಮೂಲಕವೇ ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ಎಂಬ ವಿಶ್ವಾಸದೊಂದಿಗೆ ಬದುಕುತ್ತಿರುವ ದೇಶದ ತಳಸಮುದಾಯಗಳಿಗೆ ಹಾಗೂ ಶೋಷಿತ ಜನತೆಗೆ ಅಂಬೇಡ್ಕರ್‌ ಅವರನ್ನು ಧ್ಯಾನಿಸುವುದರಿಂದ ನಿಮಗೇನೂ ಪ್ರಯೋಜನವಾಗುವುದಿಲ್ಲ ಎಂಬ ಸಂದೇಶ. ಎರಡನೆಯದಾಗಿ, ಬುದ್ಧನನ್ನು ದೈವೀಕರಿಸಿದಂತೆಯೇ ಬುದ್ಧಧಮ್ಮದ ಪ್ರತಿಪಾದಕ ಹಾಗೂ ಮೂರ್ತಿಭಂಜಕ ಅಂಬೇಡ್ಕರ್‌ ಅವರನ್ನು ಮೂರ್ತೀಕರಿಸಿ (Iconise) ಶೋಷಿತ ಜನತೆಯನ್ನು ಪ್ರಾಚೀನ ಸಾಂಪ್ರದಾಯಿಕತೆಯತ್ತ ದೂಡುವುದು. ಮೂರನೆಯದು 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತದ ಬಹುಸಂಖ್ಯಾತ ಜನರು ತಮ್ಮ ಉತ್ತಮ-ಉಜ್ವಲ ಭವಿಷ್ಯಕ್ಕಾಗಿ, ಮತ್ತೆ ಮತ್ತೆ ಅಂಬೇಡ್ಕರ್‌ ಅವರತ್ತಲೇ ನೋಡುತ್ತಿರುವುದನ್ನು ಲೇವಡಿ ಮಾಡುವುದು.

CT Ravi: ನನ್ನ ತಲೆ ಚಚ್ಚಿಕೊಂಡಿದ್ದು ನಾನೇ ಎಂದು ಒಪ್ಪಿಕೊಂಡ್ರಾ ಸಿ ಟಿ ರವಿ..! #lakshmihebbalkar #ctravi

ಆದರೆ ಈ ಮೂರನೆಯ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾದ್ದು ನಮ್ಮ ಪ್ರಜಾಪ್ರಭುತ್ವವನ್ನು ನಿರ್ವಹಿಸುತ್ತಿರುವ ಜನಪ್ರತಿನಿಧಿಗಳ-ನಾಗರಿಕರ ಕರ್ತವ್ಯ. ಕೇವಲ ಮೂರು ದಶಕಗಳ ಹಿಂದೆ ಅಂಬೇಡ್ಕರ್‌ ಭಾರತದ ಸಾರ್ವಜನಿಕ ಸಂಕಥನಗಳ ಕೇಂದ್ರಬಿಂದು ಆಗಿರಲಿಲ್ಲ. ಕೇವಲ ಅಕಾಡೆಮಿಕ್‌ ವಲಯಗಳ ಚಿಂತನ-ಮಂಥನಗಳಿಗೆ ಸೀಮಿತವಾಗಿದ್ದರು. ಏಕೆಂದರೆ ದೇಶದ ತಳಸಮಾಜಕ್ಕೆ ಅಂಬೇಡ್ಕರ್‌ ಆಗಲೀ, ಸಂವಿಧಾನವಾಗಲೀ ನಿಲುಕಿರಲಿಲ್ಲ, ಅರ್ಥವೂ ಆಗಿರಲಿಲ್ಲ. 1991ರ ನಂತರದ ಮಾರುಕಟ್ಟೆ ಆರ್ಥಿಕತೆ ಮತ್ತು 2014ರ ನಂತರದ ಬಹುಸಂಖ್ಯಾವಾದಿ ಅಧಿಕಾರ ರಾಜಕಾರಣ ಜನರ ಈ ಕೊರತೆಯನ್ನು ನೀಗಿಸಿದೆ. ಈಗ ಸಂವಿಧಾನ ಮನೆಮನೆಯನ್ನೂ ತಲುಪುತ್ತಿದೆ, ಅಂಬೇಡ್ಕರ್‌ ಮನಮನವನ್ನೂ ತಲುಪುತ್ತಿದ್ದಾರೆ. ಶೋಷಣೆಗೊಳಗಾದ ಕಟ್ಟಕಡೆಯ ವ್ಯಕ್ತಿಯೂ ತಳಸಮಾಜದ ನೆಲದ ವಾಸ್ತವಗಳನ್ನು ಅರಿತು ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ಕ್ಷಮತೆ ಬೆಳೆಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಅರಿವಿನ ಹಿಂದೆ ಅಂಬೇಡ್ಕರ್‌ ಇದ್ದಾರೆ.

 ಅಂಬೇಡ್ಕರ್‌ ಏಕೆ ಬೇಕು ?

ಹೌದು, ಶೋಷಿತ ಜನತೆ ಏಕೆ ನಿತ್ಯ ಅಂಬೇಡ್ಕರ್‌ ಎಂದು ಜಪಿಸುತ್ತಾರೆ ? ಇದು ಪ್ರತಿಯೊಬ್ಬ ಮೇಲ್ಜಾತಿ ವ್ಯಕ್ತಿಗೆ, ಸಿರಿವಂತನಿಗೆ, ರಾಜಕೀಯ ನಾಯಕರಿಗೆ , ಕಾರ್ಪೋರೇಟ್‌ ಮಾರುಕಟ್ಟೆಯ ಪ್ರತಿನಿಧಿಗಳಿಗೆ ಹಾಗೂ ಪುರುಷಾಹಮಿಕೆಯ ಮನಸ್ಸುಗಳಿಗೆ ಕಾಡಬೇಕಾದ ಪ್ರಶ್ನೆ. ಸಂವಿಧಾನಕ್ಕೆ ತಲೆಬಾಗಿ ವಂದಿಸುವ ಆಳ್ವಿಕೆಯ ಕೇಂದ್ರಗಳಲ್ಲಿ ಸಂಸತ್ತು ಎನ್ನುವ ಒಂದು ಪವಿತ್ರ ಸಂಸ್ಥೆ ಹೇಗೆ ತನ್ನ ವರ್ಚಸ್ಸು ಮತ್ತು ಗುರಿಯನ್ನು ಕಳೆದುಕೊಂಡಿದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ನೂಕಾಟ-ತಳ್ಳಾಟ ಗಲಭೆಗಳೇ ಸಾಕ್ಷಿ. ಈ ಸಂಸ್ಥೆಯನ್ನು ತಮ್ಮ ಅಧೀನದಲ್ಲಿರುವ ಒಂದು ಸುಂದರ ಸ್ಥಾವರ ಎಂದೆಣಿಸಿ ಸಂಸದೀಯ ಮೌಲ್ಯಗಳನ್ನೂ ಅಪಮೌಲ್ಯೀಕರಣಗೊಳಿಸುತ್ತಿರುವ ಅಧಿಕಾರ ರಾಜಕಾರಣ, ಭಾರತದ ಸಂವಿಧಾನ ಒಂದು ಜಂಗಮರೂಪದ ಶಕ್ತಿ ಎನ್ನುವುದನ್ನು ಮನಗಾಣಬೇಕಿದೆ. ಈ ಜಂಗಮದ ಒಂದು ಧೀಶಕ್ತಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರಾಗಿ ಕಾಣುತ್ತಿದ್ದಾರೆ. ಏಕೆ ?

ಏಕೆಂದರೆ ಕಳೆದ ಏಳು ದಶಕಗಳ ಆಳ್ವಿಕೆ ಈ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಇಂದಿಗೂ ಫಲಪ್ರದವಾಗಿ ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಂವಿಧಾನದ ಅಪೇಕ್ಷೆಯಂತೆ ಅಸ್ಪೃಶ್ಯತೆ ಕೊನೆಯಾಗಿಲ್ಲ, ಜಾತಿ ದೌರ್ಜನ್ಯಗಳು ನಿಂತಿಲ್ಲ, ಮಹಿಳಾ ದೌರ್ಜನ್ಯಗಳು ಕಡಿಮೆಯಾಗಿಲ್ಲ, ಬಡತನ-ಹಸಿವು-ನಿರ್ವಸತಿ ಸಮಸ್ಯೆಗಳು ನಿವಾರಣೆಯಾಗಿಲ್ಲ, ಕನಿಷ್ಠ ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಎಲ್ಲರನ್ನೂ ತಲುಪಿಲ್ಲ, ಅಸಮಾನತೆಯ ನೆಲೆಗಳು ಮರೆಯಾಗಿಲ್ಲ, ಬಡವ-ಶ್ರೀಮಂತರ ನಡುವಿನ ಅಂತರ ಕುಗ್ಗಿಲ್ಲ,  ಅಲ್ಪಸಂಖ್ಯಾತರ ಆದಿವಾಸಿಗಳ ಹಾಗೂ ಅವಕಾಶವಂಚಿತರ ಜೀವನಾವಶ್ಯಕತೆಗಳು ಪರಿಪೂರ್ಣವಾಗಿಲ್ಲ. ಸಮಾಜವಾದ, ಗಾಂಧಿವಾದ, ಲೋಹಿಯಾವಾದ ಮೊದಲಾದ ಉನ್ನತ ಚಿಂತನಾಧಾರೆಗಳನ್ನು ಆಳ್ವಿಕೆಯಲ್ಲಿ ಅಳವಡಿಸಿದ್ದರೂ ಈ ಸಮಸ್ಯೆಗಳಿನ್ನೂ ಜೀವಂತವಾಗಿದೆಯಲ್ಲವೇ ?

ಈ ಜಟಿಲ ಸಿಕ್ಕುಗಳಲ್ಲಿ ಸಿಲುಕಿರುವ ಶೋಷಿತ ಸಮುದಾಯಗಳು ಯಾರತ್ತ ನೋಡಬೇಕು ? ಅಕ್ಷರ ಜ್ಞಾನವಿಲ್ಲದ ಕೋಟ್ಯಂತರ ಜನರು ಈ ಸಮಾಜದಲ್ಲಿ ನಾಳೆಗಳನ್ನು ನೋಡುತ್ತಾ ಬದುಕುತ್ತಿದ್ದಾರೆ. ತಮ್ಮ ಮೂಲ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳು, ಪಾರಂಪರಿಕ ಜೀವನಶೈಲಿ-ಜೀವನೋಪಾಯದ ಹಾದಿಗಳು ಯಾವುದೇ ಕ್ಷಣದಲ್ಲಾದರೂ ಮುಚ್ಚಿಹೋಗಬಹುದು ಎಂಬ ಆತಂಕದಲ್ಲಿ ದೇಶದ ಆದಿವಾಸಿ-ಬುಡಕಟ್ಟು ಸಮುದಾಯಗಳು ಬದುಕುತ್ತಿವೆ. ನವ ಉದಾರವಾದಿ-ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಹಾದಿಯಲ್ಲಿ ತಾವು ಶತಮಾನದಿಂದ ಸಂಪಾದಿಸಿದ ಹಕ್ಕುಗಳನ್ನು ಎಲ್ಲಿ ಕಳೆದುಕೊಳ್ಳುತ್ತೇವೋ ಎಂಬ ಭೀತಿಯಲ್ಲಿ ದುಡಿಯುವ ಜನತೆ ಬದುಕುತ್ತಿದೆ. ತಾವು ಬದುಕಿಬಾಳಲು ಅವಲಂಬಿಸಿರುವ ಕೃಷಿಭೂಮಿ ಅಭಿವೃದ್ಧಿ ರಾಜಕಾರಣಕ್ಕೆ ಸಿಲುಕಿ ಎಲ್ಲಿ ಔದ್ಯಮಿಕ ಜಗತ್ತಿನ ಪಾಲಾಗುವುದೋ ಎಂಬ ಆತಂಕದಲ್ಲಿ ಕೋಟ್ಯಂತರ ರೈತರು ಬದುಕುತ್ತಿದ್ದಾರೆ. ಕಠಿಣ ಕಾನೂನುಗಳ ಹೊರತಾಗಿಯೂ ಮಹಿಳೆ ಸದಾ ಭೀತಿಯಲ್ಲಿದ್ದಾಳೆ, ಅಸ್ಪೃಶ್ಯರು ನಿರಂತರ ದಾಳಿಗೊಳಗಾಗುತ್ತಿದ್ದಾರೆ. ಈ ನೊಂದ ಜೀವಗಳು ಯಾರತ್ತ ನೋಡಬೇಕು ?

ಅದು ಧ್ಯಾನವಲ್ಲ ಗಟ್ಟಿಯಾದ ಅಂತರ್ಧ್ವನಿ

ಮಾನ್ಯ ಅಮಿತ್‌ ಶಾ ಅವರು ಹೇಳಿರಯವಂತೆ ಅಂಬೇಡ್ಕರ್‌ ಅವರನ್ನು ಧ್ಯಾನಿಸುವುದು ತಳಸಮುದಾಯಗಳಲ್ಲಿ ಫ್ಯಾಷನ್‌ ಅಲ್ಲ. ಒಂದು ನೆಲೆಯಲ್ಲಿ ಅದು Passion (ಭಾವಾತಿರೇಕ) ಆಗಿರುವುದು ವಾಸ್ತವ. ಏಕೆಂದರೆ ನಿರಂತರ ಶೋಷಣೆ , ದೌರ್ಜನ್ಯ ಮತ್ತು ತಾರತಮ್ಯಗಳಿಗೆ ಒಳಗಾಗುವ ಒಂದು ಸಮಾಜ ಈ ಅಪಾಯಗಳಿಗೆ ಕಾರಣವಾದ ಮೇಲ್ಪದರದ ಸಮಾಜ, ಆಳುವ ಸರ್ಕಾರ ಮತ್ತು ಸಾಂಪ್ರದಾಯಿಕ ಸಮಾಜ ಮತ್ತು ಇವೆಲ್ಲವನ್ನೂ ನಿಯಂತ್ರಿಸುವ ಸಾಂಸ್ಥಿಕ-ಸಾಂಘಿಕ ಶಕ್ತಿಗಳ ವಿರುದ್ಧ ದನಿ ಎತ್ತಲು ಬಯಸುತ್ತದೆ. ಅಂಬೇಡ್ಕರ್‌ ಏಕೆ Passion ಆಗುತ್ತಾರೆ ? ಏಕೆಂದರೆ ಈ ದಾಳಿಗಳಿಂದ ಪಾರಾಗಲು ಶೋಷಿತ ಜನತೆಗೆ ಅನ್ಯ ಮಾರ್ಗಗಳೇ ಕಾಣುತ್ತಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಳುತ್ತಿರುವ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್‌ ಸ್ವತಃ ಬಳಕೆಯ ವ್ಯಕ್ತಿಯಾಗಿದ್ದಾರೆ. ಅವರ ಸುತ್ತಲಿನ ಐತಿಹ್ಯ, ಕಥನ , ಸಂಕಥನಗಳು ಚುನಾವಣಾ ರಾಜಕಾರಣದ ಸರಕುಗಳಾಗಿವೆ.

ಆದರೆ ಸಾಂಸ್ಥಿಕ ನೆಲೆಯಲ್ಲಿ ಭಾರತದ ಪ್ರಜಾಪ್ರಭುತ್ವ ಅಂಬೇಡ್ಕರ್‌ ಪ್ರತಿಪಾದಿಸಿದ ಸಾಂವಿಧಾನಿಕ ಆಶಯಗಳಿಗೆ ವಿಮುಖವಾಗುತ್ತಲೇ ಸಾಗಿದೆ. ಅವರು ಬಲವಾಗಿ ಪ್ರತಿಪಾದಿಸಿದ ಸಾಂವಿಧಾನಿಕ ನೈತಿಕತೆ (Constitutional Morality) ಇಂದು ವಸ್ತುಪ್ರದರ್ಶನದ ಸುಂದರ ಪ್ರತಿಮೆಯಾಗಿ ಮಾತ್ರ ಉಳಿದಿದೆ. ಅಮಿತ್‌ ಶಾ ಹೇಳಿಕೆಯ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ನಡೆದ ತಳ್ಳಾಟ-ನೂಕಾಟಗಳು, ಕರ್ನಾಟಕದ ವಿಧಾನಪರಿಷತ್ತಿನಲ್ಲಿ ಬಿಜೆಪಿ ನಾಯಕರೊಬ್ಬರು ಮಹಿಳೆಯನ್ನು ಅಪಮಾನಿಸುವಂತೆ ಅವಾಚ್ಯ ನುಡಿ ಬಳಸಿರುವುದು ಇವೆಲ್ಲವನ್ನೂ ಗಮನಿಸುವ ತಳಸಮಾಜವು, ಒಂದು ಉತ್ತಮ ಆದರ್ಶಪ್ರಾಯ ಆಳ್ವಿಕೆಗಾಗಿ ಯಾರತ್ತ ನೋಡಬೇಕು ? ಅದೇ ಗಾಂಧಿ, ಅದೇ ನೆಹರು, ಪಟೇಲ್‌, ಆಝಾದ್‌, ವಿವೇಕಾನಂದ ಮತ್ತದೇ ಅಂಬೇಡ್ಕರ್.‌ 75 ವರ್ಷಗಳ ಸ್ವತಂತ್ರ ಸಂಸದೀಯ ಪ್ರಜಾತಂತ್ರದಲ್ಲಿ ಭವಿತವ್ಯಕ್ಕೆ ಮಾದರಿಯಾಗಬಹುದಾದ ಒಂದೇ ಒಂದು ವ್ಯಕ್ತಿತ್ವವನ್ನು ರೂಪಿಸಲು ನಮಗೆ ಸಾಧ್ಯವಾಗಿಲ್ಲ. ಹಾಗಾಗಿ ಜನರು ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಧ್ಯಾನಿಸುತ್ತಾರೆ.

ನಿಜ ಅಮಿತ್‌ ಶಾ ಅವರು ಹೇಳಿರುವಂತೆ ಅಂಬೇಡ್ಕರ್‌ ಧ್ಯಾನಿಸಿದರೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಮೋಕ್ಷವೂ ದೊರೆಯುವುದಿಲ್ಲ. ಅದು ಅಂಬೇಡ್ಕರ್‌ ಅವರನ್ನು ಧ್ಯಾನಿಸುವ ಪ್ರತಿಯೊಂದು ಮನಸ್ಸಿಗೂ ತಿಳಿದ ವಿಚಾರ. ದೇವರನ್ನು ಧ್ಯಾನಿಸಿದರೂ ಯಾವ ಮೋಕ್ಷವೂ ದೊರೆಯುವುದಿಲ್ಲ ಎಂಬ ಕಟುಸತ್ಯವನ್ನೂ ಭಾರತದ ಶೋಷಿತ ಜನತೆ ಅರಿತಿದ್ದಾರೆ. ಬುದ್ಧಮಾರ್ಗದಲ್ಲಿ ನಡೆಯುವ ಅಂಬೇಡ್ಕರ್‌ ಚಿಂತನೆಗಳಲ್ಲಿ ಸ್ವರ್ಗ, ಮೋಕ್ಷ ಇತ್ಯಾದಿಗಳಿಗೆ ಜಾಗವೇ ಇರುವುದಿಲ್ಲ. ಇಂದಿಗೂ ಕೆಲವೇ ಮೇಲ್ಜಾತಿಗಳ ಹಿಡಿತದಲ್ಲಿರುವ ದೇವರು ಮತ್ತು ಧರ್ಮ ತಳಸಮಾಜದ ಶೋಷಿತರನ್ನು ಈ ದೇವರುಗಳಿಂದ ದೂರವೇ ಇರಿಸುತ್ತಿದೆಯಲ್ಲವೇ ? ಈ ಜನತೆಗೆ ಮೋಕ್ಷ ಕಾಣುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿ, ಅವರ ವಿಚಾರಧಾರೆಗಳಲ್ಲಿ ಮತ್ತು ಅವರು ಹಾಕಿಕೊಟ್ಟ ಜಾತಿವಿನಾಶದ-ಸಮ ಸಮಾಜದ ಕ್ರಾಂತಿಕಾರಕ ಹಾದಿಯಲ್ಲಿ. ತಾವು ನಿತ್ಯ ಅನುಭವಿಸುವ ಹಸಿವು, ಬಡತನ, ನಿರುದ್ಯೋಗ ಮತ್ತು ಜಾತಿ-ಲಿಂಗ ದೌರ್ಜನ್ಯಗಳಿಂದ ವಿಮೋಚನೆ ಪಡೆದರೆ ಶೋಷಿತರಿಗೆ ಅದೇ ಸ್ವರ್ಗ. ಅದು ದೈವಸ್ತುತಿಯಿಂದ ಲಭಿಸುವುದಿಲ್ಲ, ಅಂಬೇಡ್ಕರ್‌ ಅವರನ್ನು ಅನುಸರಿಸುವುದರಿಂದ ದೊರೆಯುತ್ತದೆ.

ತಾತ್ವಿಕ ಶಕ್ತಿಯಾಗಿ ಅಂಬೇಡ್ಕರ್‌

ಆತ್ಮ-ಕರ್ಮ-ಪುನರ್ಜನ್ಮ ಮುಂತಾದ ಪ್ರಾಚೀನ ಚಿಂತನೆಗಳಿಂದ ತಾವು ಪ್ರತಿನಿಧಿಸುವ ಭಾರತದ ಅಸಂಖ್ಯಾತ ಶೋಷಿತರನ್ನು ಹೊರತರಲೆಂದೇ ಅಂಬೇಡ್ಕರ್‌ ಬುದ್ಧನನ್ನು ಆಶ್ರಯಿಸಿದ್ದಾರೆ. ಅಷ್ಟೇ ಅಲ್ಲ ವ್ಯಕ್ತಿ ಆರಾಧನೆಯನ್ನೇ ನಿರಾಕರಿಸುವ ಮೂಲಕ ಭಾರತೀಯ ಸಮಾಜದಲ್ಲಿ ವ್ಯಸನದಂತೆ ರೂಢಿಗತವಾಗಿರುವ ಮೂರ್ತೀಕರಣಕ್ಕೂ (Iconisation) ಶೋಷಿತ ಸಮುದಾಯ ಬಲಿಯಾಗಬಾರದು ಎಂದು ಎಚ್ಚರಿಸಿ ಹೋಗಿದ್ದಾರೆ. ಆದರೂ ಅಂಬೇಡ್ಕರ್‌ ಇಂದು Icon ಆಗಿದ್ದಾರೆ, ಆರಾಧನೆಗೊಳಪಡುತ್ತಿದ್ದಾರೆ. ತಾತ್ವಿಕ ನೆಲೆಯಲ್ಲಿ ಇದನ್ನು ವಿರೋಧಿಸಬಹುದಾದರೂ, ಇದೇಕೆ ಹೀಗೆ ಎಂದು ಯೋಚಿಸಿದಾಗ, ಸಮಾಜದೊಳಗಿನ ಆತಂಕ, ತಲ್ಲಣ ಮತ್ತು ನೋವು ನಮಗೆ ಕಾಣುತ್ತದೆ. ಆಳುವ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್‌ ಅವರ ಪ್ರತಿಮೆ ಒಂದು ರಾಜಕೀಯ ಮುನ್ನಡೆಯ ಚಿಮ್ಮುಹಲಗೆಯಾಗಿ (Launching pad)  ಕಾಣುತ್ತದೆ. ಆದರೆ ಶೋಷಿತರಿಗೆ ಅದು ಸಾಂತ್ವನದ ನೆಲೆಯಾಗಿ ಗೋಚರಿಸುತ್ತದೆ.

ಇಂದು ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ಚರ್ಚೆಯಾಗುತ್ತಿರುವ ಅಂಬೇಡ್ಕರ್‌ ಅಪಮಾನದ ನೆಲೆಗಳಲ್ಲೇ ಪರಾಮರ್ಶೆಗೊಳಗಾಗುತ್ತಿದ್ದಾರೆ. ಅವರು ಬದುಕಿದ್ದಾಗ ಆದ ಅವಮಾನಗಳನ್ನು ವರ್ತಮಾನದ ಅವಮಾನಗಳೊಡನೆ ತುಲನೆ ಮಾಡಿ ನೊಡಲಾಗುತ್ತಿದೆ. ಅಂಬೇಡ್ಕರ್‌ ಅವರನ್ನು ಯಾರು ಹೆಚ್ಚು ಅಪಮಾನಿಸಿದ್ದಾರೆ ಎಂಬ ಜಿದ್ದಾಜಿದ್ದಿ ಚರ್ಚೆ ನಡೆಯುತ್ತಿದೆ. ಎರಡೂ ಬಣಗಳಲ್ಲಿ ತಾವು ಅಂಬೇಡ್ಕರ್‌ ಅವರನ್ನು ಅವಮಾನಿಸಿಲ್ಲ ಎಂದು ಎದೆಮುಟ್ಟಿ ಹೇಳುವ ದಾರ್ಷ್ಟ್ಯ ಉಳಿದಿಲ್ಲ. ಏಕೆಂದರೆ ಅಧಿಕಾರ ರಾಜಕಾರಣದ ಅಂಗಳದಲ್ಲಿ ಅಂಬೇಡ್ಕರ್‌ ಒಂದು ಒರಗುಗೋಡೆಯಾಗಿ ಪರಿಣಮಿಸಿದ್ದಾರೆ. ಅಂಬೇಡ್ಕರ್‌ ಅವರ ಸಾಂವಿಧಾನಿಕ ಮೌಲ್ಯ ಮತ್ತು ಆಶಯಗಳನ್ನು ಯಾರು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಅನುಸರಿಸಿದ್ದಾರೆ ಎಂಬ ಒಂದು ಪ್ರಶ್ನೆ ಇಡೀ ರಾಜಕೀಯ ವಲಯವನ್ನು ಮೌನಕ್ಕೆ ದೂಡಿಬಿಡುತ್ತದೆ.

ಏಕೆಂದರೆ ಅಂಬೇಡ್ಕರ್‌ ಬಯಸಿದ ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆ ಭಾರತದ ಸಂಸದೀಯ ಹಾದಿಯಿಂದ ಕಾಣೆಯಾಗಿದೆ. ಆಡಳಿತಾತ್ಮಕವಾಗಿ ಹಾಗೂ ಸಾಂಸ್ಥಿಕವಾಗಿ ಭಾರತ ದಿನದಿಂದ ದಿನಕ್ಕೆ ಪ್ರಾಚೀನ ಅಂಧ ವಿಶ್ವಾಸಗಳತ್ತ ವಾಲುತ್ತಿದೆ. 75 ವರ್ಷಗಳ ಆಧುನಿಕ ಭಾರತ,  ನಮ್ಮ ನಡುವೆ ಅಸ್ಪೃಶ್ಯತೆಯಂತಹ ಹೀನಾಚರಣೆಯನ್ನು ಸಮ್ಮತಿಸುವ, ಸಾಮಾಜಿಕ ಬಹಿಷ್ಕಾರವನ್ನು ವೈಭವೀಕರಿಸುವ, ʼ ಅನ್ಯ ʼ ರ ಸಾವನ್ನು ಸಂಭ್ರಮಿಸುವ, ಮಹಿಳಾ ದೌರ್ಜನ್ಯಗಳಿಗೆ ಕುರುಡಾಗುವ, ಹಸಿವು-ಬಡತನಕ್ಕೆ ಬೆನ್ನು ತಿರುಗಿಸುವ, ಮೂಢನಂಬಿಕೆ-ಮೌಢ್ಯಾಚರಣೆಗಳನ್ನು ಪ್ರೋತ್ಸಾಹಿಸುವ ಒಂದು ಸಮಾಜವನ್ನು ಸೃಷ್ಟಿಸಿದೆ. ಈ ಹಾದಿಯಲ್ಲಿ ಸಾಗಿದರೆ ದೇಶದ ಭವಿಷ್ಯ ಏನಾಗಬಹುದು ? ಇಲ್ಲಿ ಅಂಬೇಡ್ಕರ್‌ ಅವರ ವೈಚಾರಿಕ ಬುದ್ಧಪ್ರಜ್ಞೆ ಸಾಮಾನ್ಯರ ಆಶಾದೀವಿಗೆಯಾಗಿ ಕಾಣುತ್ತದೆ. ಹಾಗಾಗಿ ಶೋಷಿತರು ಅಂಬೇಡ್ಕರ್‌ ಅವರನ್ನು ಧ್ಯಾನಿಸುತ್ತಾರೆ.

 ವರ್ತಮಾನದ ಸಿಕ್ಕುಗಳ ನಡುವೆ

ಇದಕ್ಕೆ ಪರ್ಯಾಯವಾಗಿ ಹಿಂದೂ ರಾಷ್ಟ್ರೀಯವಾದ ಅಥವಾ ರಾಜಕೀಯ ಬಹುಸಂಖ್ಯಾವಾದ ಏನನ್ನು ಸೂಚಿಸುತ್ತದೆ. ಅದೇ ಪ್ರಾಚೀನ ವರ್ಣವ್ಯವಸ್ಥೆಯ ವೈಭವೀಕರಣ, ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮರ್ಥನೆ, ಮಂದಿರ-ಮಸೀದಿ-ಚರ್ಚುಗಳ ಸುತ್ತಲಿನ ಸಂಘರ್ಷಗಳು, ಧರ್ಮದ ಹೆಸರಿನಲ್ಲಿ ಸಾಮಾನ್ಯರ ಶೋಷಣೆ, ಪಿತೃಪ್ರಧಾನ ಊಳಿಗಮಾನ್ಯ ಮೌಲ್ಯಗಳ ಆಧಿಪತ್ಯ ಇತ್ಯಾದಿ ಇತ್ಯಾದಿ. ಇವೆಲ್ಲವೂ ಭಾರತೀಯ ಸಮಾಜವನ್ನು ಇನ್ನಷ್ಟು  ಮತ್ತಷ್ಟು ವಿಭಜಿಸುತ್ತಲೇ ಹೋಗುತ್ತದೆ. ಈ ವಿಭಜನೆ-ವಿಘಟನೆಯ ಹಾದಿಯಲ್ಲಿ ತಳಸಮಾಜದಲ್ಲಿ ಹುದುಗಿರುವ ನೋವು ಸಂಕಟ ಆತಂಕಗಳ ಉತ್ಖನನವಾಗುವುದಿಲ್ಲ, ಬದಲಾಗಿ ಯಾವುದೋ ಮಸೀದಿಯಲ್ಲಿ ಹುದುಗಿದ ಹಳೆಯ ದೇವಸ್ಥಾನದ ಪಳೆಯುಳಿಕೆಗಳ ಉತ್ಖನನವಾಗುತ್ತದೆ. ಅಂಬೇಡ್ಕರ್‌ ಎಲ್ಲರನ್ನೂ ಒಂದುಗೂಡಿಸಬಹುದಾದ ಮೊದಲನೇ ಉತ್ಖನನದ ಪ್ರತಿಪಾದಕರಾಗಿದ್ದಾರೆ. ನಾವು ಸಮಾಜವನ್ನು ವಿಘಟನೆಯತ್ತ ಒಯ್ಯುವ ಎರಡನೆಯ ಮಾದರಿಗೆ ಜೋತುಬಿದ್ದಿದ್ದೇವೆ.

ಇಂತಹ ಸಂಕೀರ್ಣ ಭಾರತದಲ್ಲಿ ಅಂಬೇಡ್ಕರ್‌ ಅವರನ್ನು ದೈವೀಕರಿಸುವ ಅಗತ್ಯತೆಯಿಲ್ಲ ಅಥವಾ “ ಅಂಬೇಡ್ಕರ್‌ ಅಂಬೇಡ್ಕರ್‌ ಅಂಬೇಡ್ಕರ್‌ ಅಂಬೇಡ್ಕರ್‌,,,,” ಎಂಬ ಫ್ಯಾಷನ್‌ಗೆ ಈಡಾಗುವ ಅವಶ್ಯಕತೆಯೂ ಇಲ್ಲ. ಅವರ ಪ್ರತಿಮೆಗಳಲ್ಲಿ ಈ ದೇಶದ ಶೋಷಿತ-ಅವಕಾಶವಂಚಿತ ಜನರು ಸಾಂತ್ವನದ ನೆಲೆಯನ್ನು ಕಾಣುತ್ತಾರೆ, ಭರವಸೆಯ ಕಿರಣವನ್ನು ನೋಡುತ್ತಾರೆ, ಆತ್ಮವಿಶ್ವಾಸದ ಭಾವನೆಯನ್ನು ಕಂಡುಕೊಳ್ಳುತ್ತಾರೆ. ಹಾಗಾಗಿಯೇ ಅಂಬೇಡ್ಕರ್‌ ಸ್ವತಃ ವಿರೋಧಿಸಿದ್ದ ಆರಾಧನಾ ಭಾವವೂ ಸಹ ಇಂದಿನ ದಲಿತ ಸಮುದಾಯಗಳಲ್ಲಿ ಮನೆ ಮಾಡಿದೆ. ವೈಚಾರಿಕ ನೆಲೆಯಲ್ಲಿ ಇದನ್ನು ವಿಮರ್ಶಾತ್ಮಕವಾಗಿ ನೋಡಬಹುದಾದರೂ ವಾಸ್ತವಿಕ ನೆಲೆಯಲ್ಲಿ ಇದನ್ನು ಸಾರಾಸಗಟಾಗಿ ಖಂಡಿಸಲಾಗುವುದಿಲ್ಲ, ಕಾರಣ ಅಂತಹ ಸನ್ನಿವೇಶವನ್ನು ನಮ್ಮ ಸಮಾಜ-ಆರ್ಥಿಕತೆ ಮತ್ತು ಸಾಂಸ್ಕೃತಿಕ ನೆಲೆಗಳು ಸೃಷ್ಟಿಸಿವೆ. ಈ ಜನತೆಯನ್ನು ವೈಚಾರಿಕತೆಯ ದಾರಿಯಲ್ಲಿ, ವೈಜ್ಞಾನಿಕ ಪಥದಲ್ಲಿ ಕರೆದೊಯ್ಯುವ ಜವಾಬ್ದಾರಿ ನಾಗರಿಕ ಜಗತ್ತಿನ ಮೇಲಿದೆ.

ಈ ಹಾದಿಯಲ್ಲಿ ನಮಗೆ ಅಂಬೇಡ್ಕರ್‌ ಬೆಂಗಾವಲಾಗಿ ನಿಲ್ಲುತ್ತಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅಂಬೇಡ್ಕರ್‌ ಬೇಕು ಎನಿಸುವುದು ಈ ತಳಸಮಾಜದ ಜನರಿಗಾಗಿ ಮತ್ತು ಅವರು ಕಾಣಬಯಸುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಮ ಸಮಾಜಕ್ಕಾಗಿ. ಇದು ಶೋಷಿತ ಸಮುದಾಯಗಳು ಬಯಸುವ ಲೌಕಿಕ ಸ್ವರ್ಗ. ಈ ಸಮುದಾಯಗಳನ್ನು ಅಲೌಕಿಕ ಅತೀತ ಸ್ವರ್ಗದೆಡೆಗೆ ಕರೆದೊಯ್ಯಲು ಬಯಸುವ ಜಾತಿ, ಧರ್ಮ ಮತ್ತು ಅಂಧಶ್ರದ್ಧೆಯ ಹಾದಿಗಳನ್ನು ನಿವಾರಿಸಿಕೊಂಡು, ಭಾರತದ ಸಂವಿಧಾನದ ಆಶಯಗಳನ್ನು, ಮೌಲ್ಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಜನಕೋಟಿಯ ಮೇಲಿದೆ. ಈ ಹಾದಿಯಲ್ಲಿ ಅಂಬೇಡ್ಕರ್‌ ಅವರಿಗೆ ಹೆಗಲಾಗಿ ಫುಲೆ, ಗಾಂಧಿ, ಪೆರಿಯಾರ್‌, ಮಾರ್ಕ್ಸ್‌, ನೆಹರೂ, ಠಾಗೋರ್‌ ಮೊದಲಾದ ದಾರ್ಶನಿಕರಾಗಿ ನಮ್ಮೆದುರು ನಿಲ್ಲುತ್ತಾರೆ.

ಅಂಬೇಡ್ಕರ್‌ ರೂಪಿಸಿದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಈ ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಭಾರತದ ಶೋಷಿತ ಜನತೆಗೆ ಮತ್ತಾವ ಸ್ವರ್ಗಪ್ರಾಪ್ತಿಯ ಮಹತ್ವಾಕಾಂಕ್ಷೆಯೂ ಇರಲಾರದು.

-೦-೦-೦-೦-

Tags: Amith ShaBJPCongress PartyMallikarjun KhargeNaa DivakaraNarendra ModiparlimentPratidhvaniprotestನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಕುವೈತ್‌ನಲ್ಲಿ 101 ವರ್ಷದ ಮಾಜಿ ಐಎಫ್‌ಎಸ್ ಅಧಿಕಾರಿ ಮಂಗಲ್ ಸೈನ್ ಹಂಡಾ ಅವರನ್ನು ಪ್ರಧಾನಿ ಮೋದಿ ಭೇಟಿ

Next Post

ಲೋಕಾಯುಕ್ತ ದಾಳಿ: ಕಾನ್‌ಸ್ಟೆಬಲ್ ಮನೆಯಲ್ಲಿ 40 KG ಬೆಳ್ಳಿ, ಕಂತೆ ಕಂತೆ ಹಣ ಪತ್ತೆ

Related Posts

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
0

ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ & ಮಾರಾಟ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ (Kempegowda International Airport) ಕರ್ನಾಟಕದ...

Read moreDetails

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

July 8, 2025

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

July 8, 2025

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

July 8, 2025
Next Post
ಲೋಕಾಯುಕ್ತ ದಾಳಿ: ಕಾನ್‌ಸ್ಟೆಬಲ್ ಮನೆಯಲ್ಲಿ 40 KG ಬೆಳ್ಳಿ, ಕಂತೆ ಕಂತೆ ಹಣ ಪತ್ತೆ

ಲೋಕಾಯುಕ್ತ ದಾಳಿ: ಕಾನ್‌ಸ್ಟೆಬಲ್ ಮನೆಯಲ್ಲಿ 40 KG ಬೆಳ್ಳಿ, ಕಂತೆ ಕಂತೆ ಹಣ ಪತ್ತೆ

Recent News

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
Top Story

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

by ಪ್ರತಿಧ್ವನಿ
July 8, 2025
Top Story

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

by ಪ್ರತಿಧ್ವನಿ
July 8, 2025
Top Story

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

by ಪ್ರತಿಧ್ವನಿ
July 8, 2025
Top Story

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

by ಪ್ರತಿಧ್ವನಿ
July 8, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada