ಭಾರತದ ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಗಹನವಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆ ಕಾಣುತ್ತಿದೆ. ಈ ಗ್ರಂಥದ ಬಗ್ಗೆ ಉತ್ತಮ ಒಳನೋಟಗಳನ್ನು ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಕಾಣಬಹುದು. ಡಾ ಅಂಬೇಡ್ಕರ್ ಇದನ್ನು ಮೂಲಭೂತ ದಸ್ತಾವೇಜು ಎಂದು ಬಣ್ಣಿಸಿದ್ದರು. “ ಸಂವಿಧಾನದ ಉದ್ದೇಶ ಕೇವಲ ಪ್ರಭುತ್ವದ ಅಂಗಗಳನ್ನು ರೂಪಿಸುವುದಷ್ಟೇ ಅಲ್ಲ, ಅವುಗಳ ಅಧಿಕಾರ ವ್ಯಾಪ್ತಿಯನ್ನು ಸೀಮಿತಗೊಳಿಸುವುದೂ ಆಗಿರುತ್ತದೆ ಏಕೆಂದರೆ ಈ ಅಂಗಗಳ ಅಧಿಕಾರ ವ್ಯಾಪ್ತಿಯ ಮೇಲೆ ಯಾವುದೇ ಮಿತಿಯನ್ನು ಹೇರದೆ ಹೋದರೆ, ಅಲ್ಲಿ ಸಂಪೂರ್ಣ ನಿರಂಕುಶಾಧಿಕಾರ ಮತ್ತು ದಬ್ಬಾಳಿಕೆ ಇರುತ್ತದೆ. ಶಾಸಕಾಂಗವು ಯಾವುದೇ ಕಾನೂನು ರೂಪಿಸುವ ಸ್ವಾತಂತ್ರ್ಯ ಹೊಂದಿರಬಹುದು, ಕಾರ್ಯಾಂಗವು ಯಾವುದೇ ನಿರ್ಣಯವನ್ನು ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿರಬಹುದು, ಸರ್ವೋಚ್ಛ ನ್ಯಾಯಾಲಯವು ಕಾನೂನಿಗೆ ಯಾವುದೇ ರೀತಿಯ ವ್ಯಾಖ್ಯಾನ ನೀಡಲು ಸ್ವಾತಂತ್ರ್ಯ ಹೊಂದಿರಬಹುದು. ಇದರ ಪರಿಣಾಮ ಅವ್ಯವಸ್ಥೆ ಉಂಟಾಗುತ್ತದೆ ” ಎಂದು ಹೇಳಿದ್ದರು.
ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಕೆಲವು ಘಟನೆಗಳನ್ನು ಗಮನಿಸಿದರೆ ಈ ಆತಂಕ ನ್ಯಾಯಯುತವಾದುದು ಎನಿಸುತ್ತದೆ. 2016ರ ಮಾರ್ಚ್ನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ “ ಬಾಬಾ ಸಾಹೇಬ್ ಮಾನವೀಯ ಮೌಲ್ಯಗಳ ಸಂರಕ್ಷಕರು ” ಎಂದು ಹೇಳುತ್ತಾ “ ಇಂದಿಗೂ ಪ್ರಸ್ತುತ ಎನಿಸುವ ಆಲೋಚನೆಗಳ ಜನಕರಾದ ಸಂಸ್ಥಾಪಕ ಪಿತಾಮಹರನ್ನು ನೀವು ಪಟ್ಟಿ ಮಾಡುತ್ತಾ ಹೋದರೆ, ಬಾಬಾ ಸಾಹೇಬ್ ಪ್ರಥಮ ಸ್ಥಾನದಲ್ಲಿರುತ್ತಾರೆ ” ಎಂದು ಹೇಳಿದ್ದರು. ದೇಶ ಬಾಂಧವರಿಗೆ ಐಕ್ಯತೆಯನ್ನು ಸಾಧಿಸಲು ಕರೆ ನೀಡಿದ ಪ್ರಧಾನಿ ಮೋದಿ “ ನಾವು ನಮ್ಮ ಸಮಾಜದ ಐಕ್ಯತೆಯನ್ನು ಮತ್ತೊಮ್ಮೆ ಬಲಪಡಿಸುವ ಸಮಯ ಈಗ ಬಂದಿದೆ, ನಾವು ಇದನ್ನು ಬಾಬಾ ಸಾಹೇಬ್ ಅವರಿಂದ ಕಲಿಯಬಹುದು ” ಎಂದು ಹೇಳಿದ್ದರು. ನವಂಬರ್ 27ರ ತಮ್ಮ ಟ್ವೀಟ್ ಒಂದರಲ್ಲಿ ಪ್ರಧಾನಿ ಮೋದಿ “ ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಜನತೆ ಸಂವಿಧಾನದ ವಿಚಾರಗಳನ್ನು ಅರಿತಿರುವುದು ಬಹಳ ಮುಖ್ಯವಾಗುತ್ತದೆ ” ಎಂದು ಹೇಳಿದ್ದೇ ಅಲ್ಲದೆ ಲೋಕಸಭೆಯ ತಮ್ಮ ಭಾಷಣದಲ್ಲಿ ತಾವು ಭಾರತದ ಸಂವಿಧಾನಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಆದರೆ ಮೋದಿ ಆಡಳಿತದಲ್ಲಿರುವ ಕಾರ್ಯಾಂಗವು ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಮಂಡಲಿಯಲ್ಲಿನ ಅವರ ಸಹೋದ್ಯೋಗಿಗಳು ಆಶಿಸಿದಂತೆ ಸಂವಿಧಾನಕ್ಕೆ ಬದ್ಧವಾಗಿದೆಯೇ ? ಹಾಗೆ ಕಾಣುತ್ತಿಲ್ಲ.
ಭಾರತದ ಸಂವಿಧಾನದ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ವಿಶೇಷ ಸ್ಥಾನಮಾನಗಳನ್ನು ಸಮರ್ಥಿಸುತ್ತಾ ಅಂಬೇಡ್ಕರ್ “ ಅಲ್ಪಸಂಖ್ಯಾತರ ರಕ್ಷಣೆಯ ವಿರುದ್ಧ ಒಂದು ರೀತಿಯ ಅಂಧಾಭಿಮಾನವನ್ನು ಬೆಳೆಸಿಕೊಂಡಿರುವ ಕೆಲವು ಸಂಪ್ರದಾಯವಾದಿಗಳಿಗೆ ನಾನು ಎರಡು ಮಾತುಗಳನ್ನು ಹೇಳಲಿಚ್ಚಿಸುತ್ತೇನೆ. ಮೊದಲನೆಯದಾಗಿ ಅಲ್ಪಸಂಖ್ಯಾತರು ಒಂದು ಸ್ಫೋಟಕ ಶಕ್ತಿಯಾಗಿದ್ದು, ಸ್ಫೋಟಗೊಂಡರೆ ದೇಶದ ಇಡೀ ವ್ಯವಸ್ಥೆಯನ್ನೇ ಛಿದ್ರಗೊಳಿಸುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಯೂರೋಪ್ನ ಭೀಕರ ಇತಿಹಾಸವೇ ನೇರ ಸಾಕ್ಷಿಯಾಗಿ ನಿಲ್ಲುತ್ತದೆ. ಎರಡನೆಯದಾಗಿ, ಭಾರತದ ಅಲ್ಪಸಂಖ್ಯಾತರು ತಮ್ಮ ಅಸ್ತಿತ್ವವನ್ನು ಬಹುಸಂಖ್ಯಾತರ ಕೈಯ್ಯಲ್ಲಿರಿಸಲು ಒಪ್ಪಿದ್ದಾರೆ,,,,, ಹಾಗಾಗಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡದಂತೆ ನಡೆದುಕೊಳ್ಳುವ ಕರ್ತವ್ಯ ಬಹುಸಂಖ್ಯಾತರದ್ದೇ ಆಗಿರುತ್ತದೆ,,,, ” ಎಂದು ಹೇಳಿದ್ದರು.
ಆದರೆ ಬಿಜೆಪಿ ಮತ್ತು ಮಿತ್ರ ಪಕ್ಷಗಳ ವರ್ತನೆ, 2014ರ ಚುನಾವಣೆಗಳ ನಂತರದ ಕಾರ್ಯಾಂಗದ ಕಾರ್ಯವೈಖರಿ ಇದಕ್ಕೆ ತದ್ವಿರುದ್ಧವಾದ ಚಿತ್ರಣವನ್ನೇ ನೀಡುತ್ತದೆ. ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಸಮರ ಪೂರ್ಣಪ್ರಮಾಣದಲ್ಲಿ ಜಾರಿಯಲ್ಲಿರಬೇಕು ಆದರೆ ಇದು ಸಮುದಾಯದ ವಿರುದ್ಧ ಇರಕೂಡದು. ಅಂಬೇಡ್ಕರ್ ಸಾಂವಿಧಾನಿಕ ನೈತಿಕತೆಗೆ ಹೆಚ್ಚು ಒತ್ತು ನೀಡಿದ್ದರು. ಜಾರ್ಜ್ ಗ್ರೋಟ್ ಅವರನ್ನು ಉಲ್ಲೇಖಿಸಿದ್ದ ಅಂಬೇಡ್ಕರ್ ಸಾಂವಿಧಾನಿಕ ನೈತಿಕತೆಯನ್ನು “ ಸಂವಿಧಾನದ ಸ್ವರೂಪಗಳಿಗೆ ಅತಿ ಹೆಚ್ಚಿನ ಗೌರವ ನೀಡುವುದು, ಈ ಸ್ವರೂಪದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಲೇ ಅಧಿಕಾರ ಕೇಂದ್ರಗಳಿಗೆ ವಿಧೇಯತೆಯನ್ನು ಅಪೇಕ್ಷಿಸುವುದು, ಮುಕ್ತ ವಾಕ್ ಸ್ವಾತಂತ್ರ್ಯವನ್ನು ರೂಢಿಸಿಕೊಂಡು, ಕಾನೂನು ನಿಯಂತ್ರಣದಲ್ಲಿರುವ ಮುಕ್ತ ಚಟುವಟಿಕೆಗೆ ಅವಕಾಶ ನೀಡುವುದು ಮತ್ತು ಅಧಿಕಾರದಲ್ಲಿರುವವರ ಎಲ್ಲ ರೀತಿಯ ಕ್ರಿಯೆಗಳ ಬಗ್ಗೆ ಅನಿಯಂತ್ರಿತ ಒಪ್ಪದಿರುವುದು,,,,” ಎಂದು ಬಣ್ಣಿಸಿದ್ದರು. ಇದೇ ವೇಳೆ ಅಂಬೇಢ್ಕರ್ “ ಸಾಂವಿಧಾನಿಕ ನೈತಿಕತೆ ಒಂದು ಸ್ವಾಭಾವಿಕ ಭಾವನೆಯಲ್ಲ. ಅದನ್ನು ಪೋಷಿಸಿ ಬೆಳೆಸಬೇಕು. ಜನರು ಇನ್ನೂ ಇದನ್ನು ಕಲಿಯಬೇಕಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಭಾರತದ ಪ್ರಜಾಪ್ರಭುತ್ವ ಎಂದರೆ, ಮೂಲತಃ ಅಪ್ರಜಾತಾಂತ್ರಿಕವಾಗಿರುವ ಭಾರತದ ನೆಲವನ್ನು ಪ್ರಜಾಪ್ರಭುತ್ವದ ಹೊದಿಕೆಯಿಂದ ಸಿಂಗರಿಸುವುದೇ ಆಗಿದೆ ” ಎಂದು ಹೇಳಿದ್ದರು.
ಸರ್ಕಾರ ಸಾಂವಿಧಾನಿಕ ನೈತಿಕತೆಯನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದೆಯೇ ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಿಬಿಐ, ಕೇಂದ್ರ ವಿಚಕ್ಷಣಾ ದಳ ಮುಂತಾದ ಸಂಸ್ಥೆಗಳನ್ನು ಬುಡಮೇಲು ಮಾಡುವುದು, ನ್ಯಾಯಾಂಗ ಮತ್ತು ಸಂಸತ್ತನ್ನೂ ಸಹ ಕಡೆಗಣಿಸಲು ಪ್ರಯತ್ನಿಸುವುದು ಇವೆಲ್ಲವನ್ನೂ ನೋಡಿದರೆ ಭಿನ್ನ ಚಿತ್ರಣವೇ ಮೂಡುತ್ತದೆ. ಪ್ರಸ್ತುತ ಇರುವ ಭೀತಿಯ ವಾತಾವರಣ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಧಾಳಿ ಇವೆಲ್ಲವೂ ಗಂಭೀರ ವಿಚಾರಗಳನ್ನು ಮುನ್ನೆಲೆಗೆ ತರುತ್ತವೆ.
“ ಕರಡು ಸಂವಿಧಾನವು ಸಂಸದೀಯ ವ್ಯವಸ್ಥೆಯನ್ನು ಶಿಫಾರಸು ಮಾಡುವ ಸಂದರ್ಭದಲ್ಲಿ ಸ್ಥಿರತೆಗಿಂತಲೂ ಹೆಚ್ಚಾಗಿ ಜವಾಬ್ದಾರಿಗೆ ಹೆಚ್ಚಿನ ಒತ್ತು ನೀಡಲು ಬಯಸುತ್ತದೆ ” ಎಂದು ಹೇಳಿದ್ದ ಅಂಬೇಢ್ಕರ್ ಅವರ ಅಭಿಪ್ರಾಯದಲ್ಲಿ “ ಇಂಗ್ಲೆಂಡಿನಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಕಾರ್ಯಾಂಗದ ಕಾರ್ಯವೈಖರಿಯನ್ನು ಪ್ರತಿದಿನವೂ, ನಿಯತಕಾಲಿಕವಾಗಿ ಪರಾಮರ್ಶಿಸಲಾಗುತ್ತದೆ. ” ಲೋಕಸಭೆಯಲ್ಲಿ ಒಂದು ಹೇಳಿಕೆಯನ್ನು ದಾಖಲಿಸಲು ನಿರಾಕರಿಸುವ ಮೋದಿಯ ವರ್ತನೆ ಸಂಸದೀಯ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿದಂತಾಗುತ್ತದೆ. ಸಂವಿಧಾನದ 75ನೆಯ ಪರಿಚ್ಚೇದದನ್ವಯ ಪ್ರಧಾನ ಮಂತ್ರಿ ಮತ್ತು ಅವರ ಸಚಿವ ಸಂಪುಟ “ ಜನಪ್ರತಿನಿಧಿಗಳ ಸಭೆಗೆ ಸಾಮೂಹಿಕವಾಗಿ ಉತ್ತರದಾಯಿಯಾಗಿರುತ್ತಾರೆ ”. ನೋಟು ಅಮಾನ್ಯೀಕರಣದ ನಿರ್ಧಾರವನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಘೋಷಿಸುವುದು ನಂತರ ಸಾರ್ವಜನಿಕ ಸಭೆಗಳಲ್ಲಿ ಆಡಳಿತ ನೀತಿಗಳನ್ನು ಘೋಷಿಸುವುದರ ಮೂಲಕ ಮೋದಿ ಜನಪ್ರತಿನಿಧಿಗಳ ಸಭೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದನ್ನು ಸಾಬೀತುಪಡಿಸಿದ್ದಾರೆ.
ನೋಟು ಅಮಾನ್ಯೀಕರಣ 130 ಕೋಟಿ ಜನತೆಯ ಸಾಂವಿಧಾನಿಕ ಹಾಗೂ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದೆ. ಈ ಬೃಹತ್ ಪ್ರಮಾಣದ ಹಕ್ಕುಗಳ ಉಲ್ಲಂಘನೆ ಹಿಂದೆಂದೂ ನಡೆದಿಲ್ಲ. ಬದುಕುವ ಹಕ್ಕು ಪವಿತ್ರವಾದದ್ದು, ಹಾಗೆಯೇ ಘನತೆಯೊಂದಿಗೆ ಬದುಕುವುದು ಮತ್ತು ಉತ್ತಮ ಗುಣಮಟ್ಟದ ಬಾಳ್ವೆ ನಡೆಸುವುದೂ ಸಹ ಸಾಂವಿಧಾನಿಕ ಹಕ್ಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳುತ್ತಲೇ ಬಂದಿದೆ. ನವಂಬರ್ 27ರ ತಮ್ಮ ಟ್ವೀಟ್ ಒಂದರಲ್ಲಿ ಸ್ವತಃ ನರೇಂದ್ರಮೋದಿ “ ಭಾರತೀಯರ ಘನತೆ ಮತ್ತು ಭಾರತಕ್ಕಾಗಿ ಐಕ್ಯತೆ,,,,, ನಮ್ಮ ಸಂವಿಧಾನದ ಇದನ್ನೇ ಹೇಳುತ್ತದೆ ” ಎಂದು ಹೇಳಿದ್ದಾರೆ. ದೇಶದ ಕರಾಳ ಮಾರುಕಟ್ಟೆಯ ವರ್ತಕರು, ನಕಲಿ ನೋಟು ಮುದ್ರಿಸುವವರು ಮಾತ್ರವೇ ಅಲ್ಲದೆ ಸಾಮಾನ್ಯ ಜನತೆಯೂ ಸಹ ತಮ್ಮ ದುಡಿಮೆಯ ಹಣವನ್ನು ಹಿಂಪಡೆಯಲು ಸಾಲುಗಟ್ಟಿ ನಿಲ್ಲುವಂತೆ ಮಾಡುವ ಮೂಲಕ ನಮ್ಮ ಚುನಾಯಿತ ಸರ್ಕಾರ ಸಮಸ್ತ ಜನಕೋಟಿಯನ್ನು ಅವಮಾನಿಸಿದೆ. ಬದುಕುವ ಹಕ್ಕಿನ ವ್ಯಾಪ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ಗೋಪ್ಯತೆ, ಗೌರವ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಬಲೀಕರಣದ ಹಕ್ಕುಗಳಿಗೂ ಅನ್ವಯಿಸಿದೆ. ಒಂದು ಆದೇಶದ ಮೂಲಕ ಜನರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವಂತಾಗಿದೆ. ಆದರೆ ಹೀಗೆ ಮಾಡಲು ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದರಿಂದ ಮಾತ್ರವೇ ಸಾಧ್ಯ ಎಂದು ಸಂವಿಧಾನ ಹೇಳುತ್ತದೆ. ನೂರಾರು ಜನರು ಮೃತಪಟ್ಟಿದ್ದಾರೆ, ನೌಕರಿ ಕಳೆದುಕೊಂಡಿದ್ದಾರೆ, ನಿರುದ್ಯೋಗಿಗಳಾಗಿದ್ದಾರೆ, ಹಸಿವಿನಿಂದ ಕಂಗೆಟ್ಟಿದ್ದಾರೆ, ವಸತಿಹೀನರಾಗಿದ್ದಾರೆ. ಇದು ಪ್ರಜಾಸತ್ತಾತ್ಮಕ ನಡೆಯೇ ?
ಭಾರತ ತನ್ನ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಳೆದುಕೊಳ್ಳುತ್ತದೆಯೇ ಎಂಬ ಆತಂಕವನ್ನು ಡಾ ಅಂಬೇಡ್ಕರ್ ಸಹ ವ್ಯಕ್ತಪಡಿಸಿದ್ದರು. “ಭಾರತದಂತಹ ಒಂದು ದೇಶದಲ್ಲಿ ಇದರ ಸಾಧ್ಯತೆಗಳೂ ಇವೆ, ದೀರ್ಘ ಕಾಲದ ದುರ್ಬಳಕೆಯಿಂದ ಪ್ರಜಾಪ್ರಭುತ್ವದ ಸ್ಥಾನವನ್ನು ನಿರಂಕುಶ ಅಧಿಕಾರ ಆಕ್ರಮಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹೊಸ ಸ್ವರೂಪದ ಪ್ರಜಾಪ್ರಭುತ್ವ ತನ್ನ ರೂಪವನ್ನು ಉಳಿಸಿಕೊಂಡೇ ನಿರಂಕುಶಾಧಿಕಾರಕ್ಕೆ ಆಸ್ಪದ ಕೊಡುವ ಸಾಧ್ಯತೆಗಳಿವೆ. ಒಂದು ಅನಾಹುತ ಸಂಭವಿಸಿದರೂ ಸಹ ಈ ಸಾಧ್ಯತೆಗಳು ಸಾಕಾರಗೊಳ್ಳುವ ಸಂದರ್ಭಗಳೇ ಹೆಚ್ಚಾಗಿ ಕಾಣುತ್ತವೆ ”. ಬಹುಶಃ ಪ್ರಧಾನಮಂತ್ರಿ ಮೋದಿ ಅಂಬೇಡ್ಕರ್ ಅವರ ಭವಿಷ್ಯವಾಣಿಯನ್ನು ಸುಳ್ಳಾಗಿಸಲೂಬಹುದು. ಆಘಾತಕಾರಿ ಸಂಗತಿ ಎಂದರೆ, ಭಾರತದ ಕೇಂದ್ರ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ನಿಷ್ಕ್ರಿಯವಾಗಿದೆ. ಹಣಕಾಸು ನೀತಿ ರಾಜಕೀಕರಣಗೊಂಡಿದೆ, ಹಣಕಾಸು ಸಚಿವಾಲಯ ನಿಷ್ಕ್ರಿಯವಾಗಿದೆ. ಒಂದಾದ ಮೇಲೊಂದರಂತೆ ಸಂಸ್ಥೆಗಳ ಮೇಲೆ ವ್ಯವಸ್ಥಿತವಾಗಿ ಮೋದಿ ಸರ್ಕಾರ ಧಾಳಿ ನಡೆಸುತ್ತಿರುವುದು ಕಳವಳಕಾರಿಯಾಗಿದೆ.
ಸಂಸತ್ತು ಮತ್ತು ಸಚಿವ ಸಂಪುಟವನ್ನು ಕೇವಲ ಔಪಚಾರಿಕ ಕೇಂದ್ರಗಳನ್ನಾಗಿ ಮಾಡಲಾಗಿದೆ. ಜನತೆಯ ಕೊನೆಯ ಭರವಸೆ ಎನ್ನಬಹುದಾದ ನ್ಯಾಯಾಂಗ ದುರ್ಬಲವಾದಂತೆ ಕಾಣುತ್ತಿದೆ. ಸುಳ್ಳು ಮೊಕದ್ದಮೆಗಳನ್ನು ಎದುರಿಸುವ, ವಿನಾಕಾರಣನ ಬಂಧನಕ್ಕೊಳಗಾಗಿರುವ ಜನರಿಗೆ, ಪೊಲೀಸರ ಮತ್ತು ತನಿಖಾ ಸಂಸ್ಥೆಗಳ ವಿಚಾರಣೆಗೊಳಪಟ್ಟ ಜನರಿಗೆ ಯಾವುದೇ ಪರಿಹಾರ ಮಾರ್ಗಗಳೇ ಕಾಣದಂತಾಗಿದೆ. ಜನವರಿ 11 ರಂದು ಸುಪ್ರೀಂಕೋರ್ಟ್ ನೀಡಿದ ಬಿರ್ಲಾ-ಸಹಾರಾ ತೀರ್ಪನ್ನು ಗಮನಿಸಿದರೆ ರಾಜಕೀಯ ವಲಯದ ಬಗ್ಗೆ ನ್ಯಾಯಾಂಗ ಮೃದು ಧೋರಣೆ ಅನುಸರಿಸಿದಂತೆ ತೋರುತ್ತದೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಶಿಕ್ಷಣ ನೀತಿಗಳನ್ನು ಸತತವಾಗಿ ಭಂಗಗೊಳಿಸಲಾಗುತ್ತಿದೆ. ಭೀತಿಯ ವಾತಾವರಣವೇ ಸೃಷ್ಟಿಯಾಗಿದ್ದು, ಪ್ರೀತಿಯ ಬದಲು ದ್ವೇಷ ಹೆಚ್ಚು ಪ್ರಚಲಿತವಾಗುತ್ತದೆ. ಅಮೆರಿಕದಲ್ಲಿ ಹಾಲಿವುಡ್ನಿಂದ ಸಿಲಿಕಾನ್ ಕಣಿವೆಯವರೆಗೆ, ನ್ಯಾಯಾಂಗದಿಂದ ಮಾಧ್ಯಮಗಳವರೆಗೆ ಎಲ್ಲರೂ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸೆಟೆದು ನಿಂತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಸ್ಪಷ್ಟವಾಗಿ ಮೌನದ ಪಿತೂರಿ ವ್ಯಕ್ತವಾಗುತ್ತಿದೆ. ಇದು ಏನನ್ನು ಸೂಚಿಸುತ್ತದೆ ? ಭಾರತ ಒಂದು ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯಾಗುವುದರ ಬದಲು ಹೊಸ ಸ್ವರೂಪದ ಆಡಳಿತ ವ್ಯವಸ್ಥೆಯತ್ತ ಸಾಗುತ್ತಿದೆ. ನಮ್ಮ ಪೂರ್ವಿಕರ ದಶಕಗಳ ಹೋರಾಟಗಳ ಫಲವಾಗಿ ವಿಮೋಚನೆ ಪಡೆದ ಭಾರತಕ್ಕೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಭಾರತ ಸಾಂವಿಧಾನಿಕ ಪ್ರಜಾಪ್ರಭುತ್ವದಿಂದ ಜನಪ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆಯೆಡೆಗೆ ಸಾಗಿದೆ. ಅಂಬೇಡ್ಕರ್ ಸೋಲುತ್ತಿದ್ದಾರೆ, ಮೋದಿ ಗೆಲ್ಲುತ್ತಿದ್ದಾರೆ.
ಈ ಸಂದರ್ಭದಲ್ಲಿ ನಾವು ಭವಿಷ್ಯದ ಮಹಾನ್ ನಾಯಕರಿಗೆ ಡಾ ಅಂಬೇಡ್ಕರ್ ನೀಡಿದ ಮುನ್ನೆಚ್ಚರಿಕೆಯ ಸಂದೇಶವನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. “ನಾವು ಬಹಳ ಜಾಗ್ರತೆಯಿಂದ ಗಮನಿಸಬೇಕಾದ ಎರಡನೆ ಅಂಶವೆಂದರೆ, ಜಾನ್ ಸ್ಟುವರ್ಟ್ ಮಿಲ್, ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವುದರಲ್ಲಿ ಆಸಕ್ತಿ ಇರುವ ಎಲ್ಲರಿಗೂ ನೀಡಿದ ಎಚ್ಚರಿಕೆಯ ಈ ಒಂದು ಸಂದೇಶ ‘ ಎಷ್ಟೇ ಮಹಾನ್ ವ್ಯಕ್ತಿಯಾಗಿದ್ದರೂ ನಿಮ್ಮ ಸ್ವಾತಂತ್ರ್ಯವನ್ನು ಅವರ ಪಾದದಡಿ ಇರಿಸಬೇಡಿ, ಅಥವಾ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬುಡಮೇಲು ಮಾಡುವಂತಹ ಅಧಿಕಾರವನ್ನು ಆ ವ್ಯಕ್ತಿಗೆ ನೀಡಬೇಡಿರಿ,,,, ’ . ಬೇರೆ ಯಾವುದೇ ದೇಶಕ್ಕಿಂತಲೂ ಭಾರತಕ್ಕೆ ಈ ಎಚ್ಚರಿಕೆ ಹೆಚ್ಚು ಅನ್ವಯಿಸುತ್ತದೆ. ಏಕೆಂದರೆ ಭಾರತದಲ್ಲಿ ಭಕ್ತಿ ಅಥವಾ ಭಕ್ತಿಯ ಮಾರ್ಗ ಮತ್ತು ವ್ಯಕ್ತಿ ಆರಾಧನೆ ಎನ್ನುವುದು ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಶದ ಇನ್ನಾವುದೇ ದೇಶದಲ್ಲೂ ರಾಜಕಾರಣದಲ್ಲಿ ವ್ಯಕ್ತಿ ಆರಾಧನೆಯನ್ನು ಈ ಮಟ್ಟದಲ್ಲಿ ಕಾಣಲು ಸಾಧ್ಯವಾಗದು. ಧರ್ಮದ ಅನುಸರಣೆಯಲ್ಲಿ ಭಕ್ತಿ ಮೋಕ್ಷಕ್ಕೆ ಒಂದು ಮಾರ್ಗವಾಗಿ ತೋರಬಹುದು, ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿ ಆರಾಧನೆ ಖಂಡಿತವಾಗಿಯೂ ಅವನತಿಯ ಸುಲಭ ಮಾರ್ಗಗಳನ್ನು ನಿರ್ಮಿಸುತ್ತದೆ. ಅಂತಿಮವಾಗಿ ಇದು ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತದೆ.”
- ಮೂಲ : ದ ವೈರ್