ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಸೋಮವಾರ ಆರಂಭವಾಗಿದೆ. ಮೂರು ದಿನಗಳ ಕಾಲ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮುಖ್ಯವಾಗಿ ಹಣದುಬ್ಬರ ಪ್ರಮಾಣವನ್ನು ಅವಲೋಕಿಸಿ ಬುಧವಾರ ಬಡ್ಡಿದರವನ್ನು ಪರಿಷ್ಕರಿಸಲಿದೆ. ಅದಕ್ಕೂ ಮುನ್ನವೇ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಲಾರಂಭಿಸಿವೆ.
ಕೆನರಾ ಬ್ಯಾಂಕ್ ಮತ್ತು ಕರೂರ್ ವೈಶ್ಯ ಬ್ಯಾಂಕ್ ಸೋಮವಾರ ತಮ್ಮ ಸಾಲದ ದರಗಳನ್ನು ಪರಿಷ್ಕರಿಸಿವೆ. ಅಂದರೆ, ಗ್ರಾಹಕರು ತಾವು ಮಾಡಿರುವ ಸಾಲಗಳ ಮೇಲಿನ ಬಡ್ಡಿ ಮೊತ್ತ ಹೆಚ್ಚು ಪಾವತಿಸಬೇಕಿದೆ. ಮಾಸಿಕ ಸಮಾನ ಕಂತುಗಳ ಪ್ರಮಾಣ ಅಥವಾ ಮೊತ್ತ ಹೆಚ್ಚುವುದರಿಂದ ಗ್ರಾಹಕರಿಗೆ ಹೊರೆಯಾಗಲಿದೆ.
ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಒಂದು ವರ್ಷದ ಅವಧಿಗೆ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ ದರವನ್ನು (ಎಂಸಿಎಲ್ಆರ್) ಐದು ಮೂಲಅಂಶಗಳಷ್ಟು ಅಂದರೆ ಶೇ. 0.05 ರಷ್ಟುಏರಿಕೆ ಮಾಡಿದೆ. ಇದರಿಂದಾಗಿ ಬಡ್ಡಿದರ ಶೇಕಡಾ 7.40 ಕ್ಕೆ ಏರಿದೆ.
ಬ್ಯಾಂಕ್ 6 ತಿಂಗಳ ಅವಧಿಯ ಎಂಸಿಎಲ್ಆರ್ ದರವನ್ನು ಶೇಕಡಾ 7.30 ರಿಂದ ಶೇಕಡಾ 7.35 ಕ್ಕೆ ಏರಿಸಿದೆ. ಹೊಸ ದರಗಳು ಜೂನ್ 7 ರಿಂದ ಜಾರಿಗೆ ಬರಲಿವೆ ಎಂದು ಕೆನರಾ ಬ್ಯಾಂಕ್ ಸೆಬಿಗೆ ಮಾಹಿತಿ ನೀಡಿದೆ.
ಈ ನಡುವೆ, ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್ ಬೆಂಚ್ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (ಬಿಪಿಎಲ್ಆರ್) 40 ಮೂಲ ಅಂಶಗಳಷ್ಟು ಅಂದರೆ ಶೇ.0.40ರಷ್ಟು ಏರಿಕೆ ಮಾಡಿದ್ದು, ಶೇ.13.75 ಕ್ಕೆ ಏರಿಸಿದೆ. ಬ್ಯಾಂಕ್ ನ ಮೂಲ ದರವನ್ನು (ಬೇಸ್ ರೇಟ್)ಶೇಕಡಾ 8.75 ಕ್ಕೆ ಏರಿಸಿದೆ. ಎಂಸಿಎಲ್ಆರ್ ಈ ಮೊದಲು ಸಾಲ ನೀಡಲು ಇದ್ದ ಹಳೆಯ ಮಾನದಂಡಗಳಾಗಿವೆ. ಪ್ರಸ್ತುತ, ಬ್ಯಾಂಕುಗಳು ಸಾಲಗಳನ್ನು ವಿತರಿಸಲು ಬಾಹ್ಯ ಮಾನದಂಡಗಳನ್ನು ಅಥವಾ ರೆಪೊ ಆಧಾರಿತ ಸಾಲ ದರಗಳನ್ನು ಅನುಸರಿಸುತ್ತವೆ.
ಇದು ಆರಂಭ ಮಾತ್ರ…
ಬ್ಯಾಂಕುಗಳು ಬಡ್ಡಿದರ ಏರಿಸಲಾರಂಭಿಸಿವೆ. ಇದು ಆರಂಭ ಮಾತ್ರ. ಬರುವ ತಿಂಗಳುಗಳಲ್ಲಿ ಭಾರಿ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಆಗಲಿದೆ. ಏಕೆಂದರೆ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಸರಿಸುಮಾರು ಶೇ.0.40 ರಿಂದ 0.50ರಷ್ಟು ಬಡ್ಡಿದರ ಏರಿಕೆ ಮಾಡಲಿದೆ. ಜೂನ್ ತಿಂಗಳ ಹಣದುಬ್ಬರ ಪ್ರಮಾಣವನ್ನು ನೋಡಿಕೊಂಡು ಜುಲೈ ತಿಂಗಳಲ್ಲಿ ಅಕಾಲಿಕವಾಗಿ ಬಡ್ಡಿದರ ಏರಿಕೆ ಮಾಡಬಹುದು. ಇಲ್ಲವೇ ಆಗಸ್ಟ್ ತಿಂಗಳವರೆಗೆ ಕಾದು ಹಣಕಾಸು ಸಮಿತಿಯ ದ್ವೈಮಾಸಿಕ ಸಭೆಯಲ್ಲಿ ಚರ್ಚಿಸಿದ ನಂತರ ಬಡ್ಡಿದರ ಏರಿಕೆ ಮಾಡಬಹುದು. ಆದರೆ, ದೊಡ್ಡ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಆಗುವುದು ನಿಶ್ಛಿತವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಇಂಧನ, ಖಾದ್ಯ ತೈಲ, ಆಹಾರಧಾನ್ಯ, ಹಣ್ಣು ತರಕಾರಿ, ಕಟ್ಟಡ ಸಾಮಗ್ರಿ ಮತ್ತಿತರ ಸರಕುಗಳು ಮತ್ತು ಸೇವೆಗಳ ದರ ತೀವ್ರವಾಗಿ ಏರಿರುವುದರಿಂದ ಹಣದುಬ್ಬರ ವರ್ಷಾಂತ್ಯದವರೆಗೂ ಹಿಡಿತಕ್ಕೆ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ಬಡ್ಡಿದರ ಏರಿಕೆ ಮಾಡುವುದು ಆರ್ಬಿಐಗೆ ಅನಿವಾರ್ಯವಾಗುತ್ತದೆ.
ಬುಧವಾರ ಆರ್ಬಿಐ ಎಷ್ಟು ಪ್ರಮಾಣದಲ್ಲಿ ಬಡ್ಡಿದರ ಏರಿಸುತ್ತದೆ ಎಂಬುದರ ಮೇಲೆ ಮುಂಬರುವ ತಿಂಗಳುಗಳಲ್ಲಿ ಏರಬಹುದಾದ ಬಡ್ಡಿದರದ ಅಂದಾಜು ಸಿಗಲಿದೆ.
ಕಳೆದ ತಿಂಗಳು ಅಕಾಲಿಕವಾಗಿ ಬಡ್ಡಿದರ ಏರಿಕೆ ಮಾಡುವವರೆಗೂ ದೇಶದಲ್ಲಿ ಬಡ್ಡಿದರವು ಸಾರ್ವಕಾಲಿಕ ಕನಿಷ್ಟ ಮಟ್ಟದಲ್ಲೇ ಇತ್ತು. ಕೋವಿಡ್ ಸಂಕಷ್ಟದಿಂದ ಪಾರಾಗುವವರೆಗೂ ಅದೇ ಕಾಯ್ದುಕೊಳ್ಳುವ ಇರಾದೆ ಆರ್ಬಿಐಗೆ ಇತ್ತು. ಆದರೆ, ಹಣದುಬ್ಬರವು ಮಿತಿ ಮೀರಿ ಜಿಗಿದಿದ್ದರಿಂದ ಅನಿವಾರ್ಯವಾಗಿ ಅಕಾಲಿಕವಾಗಿ ಬಡ್ಡಿದರ ಏರಿಸಿದೆ. ಹಿಂದೆ ಬಡ್ಡಿದರ ಏರಿಕೆ ಮಾಡಿ ಒಂದು ತಿಂಗಳು ಕಳೆಯುವ ಮುನ್ನವೇ ಮತ್ತೆ ಬಡ್ಡಿದರ ಏರಿಕೆ ಮಾಡಲು ಸಿದ್ಧತೆ ನಡೆಸಿದೆ.