ಜೊತೆ ಜೊತೆಯಲಿ ಧಾರವಾಹಿ ನಮ್ಮ ಕುಟುಂಬ. ನಮ್ಮ ಹೆಮ್ಮೆ. ಹಲವಾರು ದಾಖಲೆ ಬರೆದ ಈ ಧಾರವಾಹಿಯ ನಮ್ಮ ಅನ್ನದಾತರ ವಿರುದ್ಧವೇ ಮಾತನಾಡಬೇಕಾದ ದುರಂತ ಪರಿಸ್ಥಿತಿ ಬಂದಿದೆ ಎಂದು ನಟ ಅನಿರುದ್ಧ್ ಹೇಳಿದ್ದಾರೆ.
ಕಿರುತೆರೆ ನಿರ್ದೇಶಕರ ಸಂಘ ೨ ವರ್ಷ ನಿಷೇಧ ಮಾಡಿ ತಮಗೆ ನೋಟಿಸ್ ನೀಡಿದ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜಗಳ ಆಡಿರುವುದು ನಿಜ. ಆದರೆ ನನ್ನ ವೈಯಕ್ತಿಕ ಗೌರವ, ಸ್ಥಾನಮಾನ ಯಾವುದಕ್ಕೂ ಅಲ್ಲ. ಚಿತ್ರಕಥೆಗಾಗಿ ಹೋರಾಟ ನಡೆಸಿರುವುದು ನಿಜ ಎಂದರು.
ಧಾರವಾಹಿ ಆರಂಭಕ್ಕೂ ಮುನ್ನ ಸಿನಿಮಾ ಮಟ್ಟದಲ್ಲಿ ಧಾರವಾಹಿ ಮಾಡಲಾಗುವುದು ಎಂದು ಹೇಳಿದ್ದರು. ಅಲ್ಲದೇ ನೆಗೆಟಿವ್ ಪಾತ್ರ ಆಗುವುದಿಲ್ಲ ಎಂದು ಹಲವಾರು ಬಾರಿ ಭರವಸೆಯನ್ನೂ ನೀಡಿದ್ದರು. ಆದರೆ ಬರುಬರುತ್ತಾ ಚಿತ್ರದ ಗುಣಮಟ್ಟ, ಚಿತ್ರಕಥೆ ಎಲ್ಲವೂ ಬದಲಾಗಿದೆ ಎಂದು ಆರೋಪಿಸಿದರು.
ಧಾರವಾಹಿಯಲ್ಲಿ ನಾನು ೧೩ ಸಾವಿರ ಕೋಟಿ ರೂ. ಒಡೆಯ. ಆದರೆ ಇನ್ನೋವಾ ಕಾರಿನಲ್ಲಿ ತೋರುಸುತ್ತಾರೆ. ರಾಜನಕುಂಟೆಯಲ್ಲಿ ಭವ್ಯ ಬಂಗಲೆಯಲ್ಲಿ ಇದ್ದ ಶೂಟಿಂಗ್ ದಿಢೀರನೆ ಯಾವುದೇ ಸಣ್ಣ ಮನೆಗೆ ಸ್ಥಳಾಂತರಿಸಿದರು. ಕಥೆ ಹಾದಿ ತಪ್ಪುತ್ತಿತ್ತು. ಚಿತ್ರಕಥೆ, ಸಂಭಾಷಣೆ ಮೊದಲೇ ಕಳಿಸಿ ಎಂದರೆ ಒಂದೇ ಬಾರಿ ಎಲ್ಲಾ ಕಳುಹಿಸುತ್ತಿದ್ದರು. ನನಗೆ ರಾತ್ರಿಯೀಡಿ ಓದಿ ಬೆಳಿಗ್ಗೆ ಶೂಟಿಂಗ್ ಗೆ ಬರಬೇಕಿತ್ತು. ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಅವಕಾಶವೂ ಸಿಗುತ್ತಿರಲಿಲ್ಲ ಎಂದು ಅನಿರುದ್ಧ್ ವಿವರಿಸಿದರು.
ನಾನು ಕಥೆಗಾಗಿ, ಚಿತ್ರಕಥೆಗಾಗಿ ಹೊರಡಿದ್ದೇನೆ ಹೊರತು ಬೇರೆ ಯಾವುದಕ್ಕೂ ಅಲ್ಲದೇ. ನಾನು ಸೆಟ್ ನಲ್ಲಿ ಯಾರಿಗೂ ಬೈದಿಲ್ಲ. ಎಷ್ಟೋ ಜನ ಧಾರವಾಹಿಯಿಂದ ಹೊರಗೆ ಹೋಗಿದ್ದರು ಅವರನ್ನು ವಾಪಸ್ ಕರೆಸಿದ್ದೇನೆ. ನಾನು ಸುಳ್ಳು ವ್ಯಕ್ತಿ ಅಲ್ಲ ಎಂದು ಅವರು ಹೇಳಿದರು.
ನಾನು ಕ್ಯಾರವಾನ್ ಇಲ್ಲದೇ ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದಿಲ್ಲ. ಆದರೆ ಹೊರಗೆ ಹೋದಾಗ ಕ್ಯಾಮರಾನ್ ಬೇಕು. ಏಕೆಂದರೆ ನಾನು ಎಲ್ಲೆಂದರಲ್ಲಿ ಬಟ್ಟೆ ಬದಲಿಸುತ್ತೇನೆ. ಶೌಚಾಲಯಕ್ಕೂ ಹೋಗುತ್ತೇನೆ. ಆದರೆ ಶೂಟಿಂಗ್ ಗೆ ಬಂದ ಮಹಿಳೆಯರ ಪಾಡೇನು? ಊರ ಹೊರಗೆ ಅಭಿಮಾನಿಗಳ ಮನೆ ಬಳಸುವುದು ಸರಿಯೇ? ಒಂದೆರಡು ಬಾರಿ ಸರಿ. ಆದರೆ ಪದೇಪದೆ ಬಳಸುವುದು ನಮಗೆ ಮುಜುಗರ ಅಲ್ಲವೇ ಎಂದು ಪ್ರಶ್ನಿಸಿದರು.