ಕರ್ನಾಟಕ ಹೈಕೋರ್ಟ್ ಇಂದು ಎಸಿಬಿ ರದ್ದುಪಡಿಸಿ ಆದೇಶ ಹೊರಡಿಸಿದ್ದು, ಬೇರೆ ರಾಜ್ಯಗಳಿಗೆ ಅನುಕರಣೀಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಲೋಕಯುಕ್ತ ಸಂಸ್ಥೆಗೆ ಮತ್ತೆ ಶಕ್ತಿ ತುಂಬಿದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ರಾಷ್ಟದಲ್ಲಿಯೇ ಮಾದರಿ ಸಾಂವಿಧಾನಿಕ ಸಂಸ್ಥೆಯಾಗಿ ಬೇರೆ ರಾಜ್ಯಗಳಿಗೆ ಅನುಕರಣೀಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಲೋಕಯುಕ್ತ ಸಂಸ್ಥೆಗೆ ಮತ್ತೆ ಶಕ್ತಿ ತುಂಬಿದಂತಾಗಿದೆ. ಇಂದಿನ ಉಚ್ಚ ನ್ಯಾಯಾಲಯ ಉತ್ತಮ ತೀರ್ಪನ್ನು ನೀಡಿದ್ದು, ಇದು ತುಂಬಾ ಸಂತೋಷದ ವಿಚಾರವಾಗಿದೆ. ತುಂಬು ಹೃದಯದಿಂದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕ ಲೋಕಯುಕ್ತ ಸಂಸ್ಥೆ ಪ್ರಾರಂಭಗೊಂಡಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನೇಮಕಗೊಂಡ ದಿವಂಗತ ಜಸ್ಟಿಸ್ ಶ್ರೀ ಎನ್.ವೆಂಕಟಚಲ ಅವರು ಮತ್ತು ಜಸ್ಟಿಸ್ ಸಂತೋಷ್ ಹೆಗ್ಗಡೆಯವರ ಪರಿಶ್ರಮದಿಂದ ಈ ಸಂಸ್ಥೆ ತುಂಬಾ ಹೆಸರುವಾಸಿ ಆಗಿತ್ತು. ಆಗ ದೇಶದ ಗಮನ ಸೆಳೆದಿದ್ದ ಕರ್ನಾಟಕ ಲೋಕಯುಕ್ತ ಸಂಸ್ಥೆ ಕೆಲವು ವರ್ಷಗಳ ಹಿಂದೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಆಯಿತು. ಭ್ರಷ್ಟಾಚಾರ ನಿಗ್ರಹ ದಳ ಸೃಷ್ಟಿಯಿಂದ ಅದು ತನ್ನ ಘನತೆಯನ್ನು ಕಳೆದುಕೊಂಡಿತು. ಎಸಿಬಿ ಯಂತಹ ಕೃತಕ ಸಂಸ್ಥೆಯು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾ ಬಂದಿತ್ತು. ಇದು ಬಂದ ಮೇಲೆ ಜನರಿಗೆ ನ್ಯಾಯ ಸಿಗದಂತೆ ಆಯಿತು.