IBPS ಪರೀಕ್ಷೆಗಳಲ್ಲಿ 2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನೇ ಜಾರಿಗೆ ತರಬೇಕು ಎಂದು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ಗೆ ಮನವಿ ಮಾಡಿದ್ದಾರೆ.
ಅರ್ಥ ಸಚಿವೆಗೆ ಮನವಿ ಪತ್ರ ನೀಡಿದ ಕುರಿತು ಟ್ವೀಟ್ ಮಾಡಿರುವ ಜಿಸಿ ಚಂದ್ರಶೇಖರ್, ʼIBPS ವಿಚಾರವಾಗಿ 2014 ಕ್ಕೂ ಮುಂಚಿನ ನಿಯಮಾವಳಿಗಳು ಪುನರ್ ಜಾರಿಯಾಗಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಮಾನ್ಯ ನಿರ್ಮಲ ಸೀತಾರಾಮನ್ ರವರನ್ನು ಖುದ್ದು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದೇನೆ, ಅತಿ ಶೀಘ್ರವೇ ಈ ವಿಷಯ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆʼ ಎಂದು ತಿಳಿಸಿದ್ದಾರೆ.

2014 ಕ್ಕೂ ಹಿಂದಿನ ನಿಯಮಾವಳಿಗಳು ಪುನರ್ಜಾರಿಯಾಗುವುದರಿಂದ ಸ್ಥಳೀಯ ಭಾಷೆಯಲ್ಲಿ ಹಾಗೂ ಬೋರ್ಡ್ಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಪ್ರಯೋಜನವಾಗುತ್ತದೆ. ಬ್ಯಾಂಕ್ನ ಗ್ರಾಹಕರಿಗೂ ಸಹಕಾರಿಯಾಗುತ್ತದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕು (RRB-regional rural bank) ಗಳ ಗ್ರಾಹಕರು ಗ್ರಾಮೀಣ ಪ್ರದೇಶದವರೇ ಆಗಿರುವುದರಿಂದ ಅವರೊಡನೆ ಸಂವಹನ ನಡೆಸಲು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕಗೊಳಿಸುವುದು ಹೆಚ್ಚು ಪ್ರಯೋಜನಾಕಾರಿ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
IBPS ಪರೀಕ್ಷೆಗಳಲ್ಲಿ 2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನೇ ಜಾರಿಗೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡಾ ಒತ್ತಾಯಿಸಿದ್ದರು.

ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ಅತ್ಯಗತ್ಯ. 2014 ಕ್ಕೆ ಮುನ್ನ ಕರ್ನಾಟಕದಲ್ಲಿನ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕೆಂಬ ನಿಯಮವಿತ್ತು. ನಂತರ ಇದನ್ನು ತೆಗೆದು, ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಕನ್ನಡ ಕಲಿಯಬೇಕೆಂದು ಹೇಳಲಾಯಿತು. ಇದರಿಂದಾಗಿ ರಾಜ್ಯದ ಬ್ಯಾಂಕ್ ಗಳಲ್ಲಿ ಕನ್ನಡ ತಿಳಿಯದವರೇ ತುಂಬಿದ್ದಾರೆ. ಇದು ಕನ್ನಡಿಗರಿಗೆ ಸಮಸ್ಯಾತ್ಮಕವಾಗಿದೆ. 2014ಕ್ಕೆ ಮೊದಲಿದ್ದ ಐಬಿಪಿಎಸ್ ಕಟ್ಟಲೆಗಳನ್ನು ಮರಳಿ ಜಾರಿಗೆ ತರುವುದೇ ಇದಕ್ಕೆ ಏಕೈಕ ಪರಿಹಾರ ಎಂದು ಕುಮಾರಸ್ವಾಮಿ ಹೇಳಿದ್ದರು.
ಇದೀಗ, ರಾಜ್ಯಸಭಾ ಸದಸ್ಯ ಜಿ ಚಂದ್ರಶೇಖರ್ ಕೂಡಾ ಈ ಬೇಡಿಕೆಗೆ ದನಿ ಸೇರಿಸಿದ್ದು, ನೇರವಾಗಿ ಅರ್ಥಸಚಿವರಿಗೆ ಮನವಿಯನ್ನು ಮಾಡಿದ್ದಾರೆ. ಜೊತೆಗೆ, ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನ ಗ್ರಾಹಕರಿಗೆ ತಮ್ಮ ಠೇವಣಿ ಸಿಗುವಂತೆ ಮಾಡಿ ಎಂದೂ ನಿರ್ಮಲಾ ಸೀತರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ.
ʼಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ತಮ್ಮ ರಿಟೈರ್ಮೆಂಟ್ ಹಣವನ್ನು ಠೇವಣಿ ಮಾಡಿದ್ದ ಹಿರಿಯರು ಸೇರಿದಂತೆ 49 ಜನ ಈಗಾಗಲೇ ಮರಣಹೊಂದಿದ್ದು ಉಳಿದ ಗ್ರಾಹಕರ ಚಿಂತಾಜನಕ,ಅಸಹಾಯಕ ಸ್ಥಿತಿಯನ್ನು ತಿಳಿಸಿ ಆದಷ್ಟು ಬೇಗ ಅವರ ಕಷ್ಟದ ಹಣ ಸಿಗುವಂತೆ ಮಾಡಿ ಎಂದು ಮಾನ್ಯ ಹಣಕಾಸು ಸಚಿವರಲ್ಲಿ ಮನವಿ ಮಾಡಿರುವುದಾಗಿ ಜಿ ಸಿ ಚಂದ್ರಶೇಖರ್ ತಿಳಿಸಿದ್ದಾರೆ.





