ಕರ್ನಾಟಕ:
ಹಿಂದಿ ಪರೀಕ್ಷೆಯನ್ನು ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾಷೆ ಕಲಿಯುವುದು ಹೇರಿಕೆಯಲ್ಲ, ಅದು ವಿದ್ಯಾರ್ಥಿಗಳ ಬೆಳವಣಿಗೆಗೆ ಅಗತ್ಯ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.ಈ ಕುರಿತು ಪ್ರತಿಕ್ರಿಯಿಸಿದ ಅವರು, “ಯಾರ ಮಾತು ಕೇಳಿ ಹಿಂದಿ ಭಾಷೆಯನ್ನು ತೆಗೆದಿದ್ದೀರಿ?” ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ದೆಹಲಿಗೆ ಮೊದಲ ಬಾರಿ ಹೋದಾಗ ತಮ್ಮ ಭಾಷೆಯನ್ನು ಕೇಳಿ ಜನರು ನಗುತ್ತಿದ್ದರು ಎಂಬ ಅನುಭವವನ್ನು ಹಂಚಿಕೊಂಡ ಅವರು, ಹಿಂದಿ ಕಲಿಯುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.ರಾಜ್ಯ ಸರ್ಕಾರ ತ್ರೀ ಭಾಷಾ ನೀತಿಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, “ನಾವು ತ್ರೀ ಭಾಷಾ ಸೂತ್ರವನ್ನು ಅನುಸರಿಸಿ ಕಲಿತಿದ್ದೇವೆ, ನಮಗೆ ಯಾವುದೇ ತೊಂದರೆ ಆಗಿಲ್ಲ. ಎಲ್ಲಾ ಭಾಷೆಗಳನ್ನು ಕಲಿಯುವುದು ಅಗತ್ಯ” ಎಂದು ಹೇಳಿದರು.

ವಿದ್ಯಾರ್ಥಿಗಳು ವರ್ಷಪೂರ್ತಿ ಹಿಂದಿ ಕಲಿತಿದ್ದರೂ, ಪರೀಕ್ಷೆ ಆರಂಭವಾದಾಗ ಹಿಂದಿ ಕಡ್ಡಾಯವಲ್ಲ ಎಂದು ಘೋಷಿಸುವುದು ಸರಿಯಲ್ಲ ಎಂದು ಅವರು ಟೀಕಿಸಿದರು. “ಮಕ್ಕಳು ಹಿಂದಿ ಬೇಡ ಎಂದರಾ? ಪೋಷಕರು ವಿರೋಧಿಸಿದ್ದರಾ? ಈ ತೀರ್ಮಾನಕ್ಕೆ ಕಾರಣವೇನು?” ಎಂದು ಪ್ರಶ್ನಿಸಿದರು.

ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆಯೂ ಪ್ರಶ್ನೆ ಎತ್ತಿದ ಅವರು, ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದೇಕೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.






