
ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ರಿಂದ ವಿಧಾನಪರಿಷತ್ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಬಿಜೆಪಿ ಅಂಗಳಲ್ಲಿ ತಲ್ಲಣ ಮೂಡಿಸಿದೆ. ಉಪ ಚುನಾವಣೆ ಬಿಸಿ ಏರುತ್ತಿದ್ದಂತೆ, ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದೆ. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ವರಿಷ್ಠರ ಕರೆ ಬೆನ್ನಲ್ಲೇ, ಇಬ್ಬರು ನಾಯಕರು ದೆಹಲಿಗೆ ಹೊರಟಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ವಿಧಾನಸಭೆ ಹಾಗು ವಿಧಾನಪರಿಷತ್ ವಿಪಕ್ಷ ನಾಯಕರ ಜೊತೆಗೆ ಹೈಕಮಾಂಡ್ ನಾಯಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ವಿಧಾನ ಪರಿಷತ್ ಸ್ಥಾನಕ್ಕೆ ಸಿ.ಪಿ ಯೋಗೇಶ್ವರ್ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದು, ನನಗೂ ಯೋಗೇಶ್ವರ್ ನಡೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅಶೋಕ್, ನಾನೂ ಹಾಗು ಅಶ್ವಥ್ ನಾರಾಯಣ್ ಯೋಗೇಶ್ವರ್ ಕರೆದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದೆವು. ದುಡಕಬೇಡ ಒಳ್ಳೆಯದು ಆಗುತ್ತದೆ. ಆತುರಬೇಡ ಎಂದು ಹೇಳಿದ್ದೆ. ಆಮೇಲೆ ಒಪ್ಪಿ ಹೋದವರು ರಾಜೀನಾಮೆ ಕೊಡೋಕೆ ಅಂತಾ ಹೋಗ್ತಿದ್ದಾರೆ. ಯೋಗೇಶ್ವರ್ ಸ್ಪರ್ಧೆ ಬಗ್ಗೆ ಪಕ್ಷದಲ್ಲೇ ಇನ್ನೂ ಚರ್ಚೆ ನಡೀತ್ತಿದೆ. ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಮಾತುಕತೆ ಮಾಡ್ತಿದ್ದೇವೆ ಎಂದಿದ್ದಾರೆ.

ಚನ್ನಪಟ್ಟಣ ಕ್ಷೇತ್ರ ಅಭ್ಯರ್ಥಿ ತೀರ್ಮಾನ ಕುಮಾರಸ್ವಾಮಿ ಅವರದ್ದೇ ಎಂದಿರುವ ಅಶೋಕ್, ಆ ವಿಚಾರವನ್ನು ಯೋಗೇಶ್ವರ್ಗೆ ಮನದಟ್ಟು ಮಾಡಿಕೊಟ್ಟಿದ್ದೇವೆ. ನನಗೆ ಇರುವ ಮಾಹಿತಿ ಪ್ರಕಾರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ. ಯೋಗೇಶ್ವರ್ ಬಿಜೆಪಿ ಯಿಂದ ಸ್ಪರ್ಧೆ ಮಾಡಿದ್ರೆ ಒಳ್ಳೆಯದು. ಇದನ್ನು ನಾನು ಕೂಡ ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಯೋಗೇಶ್ವರ್ ಅವರು ಸ್ವಲ್ಪ ಸಂಯಮದಿಂದ ಇರಬೇಕಿತ್ತು. ಇನ್ನೂ ಎರಡು ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ. ಯೋಗೇಶ್ವರ್ ಜೊತೆಗೂ ಹೈಕಮಾಂಡ್ ನಾಯಕರು ಮಾತಾಡ್ತಿದ್ದಾರೆ. ನಾನು ನಾಳೆ ದೆಹಲಿಗೆ ಹೋಗ್ತಿದ್ದೇನೆ. ಅಲ್ಲಿ ವರಿಷ್ಠರ ಜೊತೆಗೆ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆದರೆ ಸುಲಭ ಗೆಲುವು ಸಿಗುತ್ತಿತ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿ ಆದರೆ ಕಾಂಗ್ರೆಸ್ಗೆ ಭಾರೀ ಅನುಕೂಲ ಆಗುತ್ತದೆ ಅನ್ನೋ ಮಾತುಗಳಿವೆ. ಆದರೆ ಕಾಂಗ್ರೆಸ್ನಲ್ಲಿ ಡಿ.ಕೆ ಸುರೇಶ್ ಅಭ್ಯರ್ಥಿ ಆಗಲು ನಿರಾಕರಣೆ ಮಾಡಿದ್ದು, ಸ್ಥಳೀಯರನ್ನೇ ಅಬ್ಯರ್ಥಿ ಮಾಡಲಾಗುತ್ತದೆ ಎನ್ನಲಾಗಿದೆ. ಒಂದು ವೇಳೆ ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿ ಆಗದಿದ್ದರೆ ಜೆಡಿಎಸ್ ಅನಾಯಸವಾಗಿ ಗೆದ್ದು ಬೀಗಲಿದೆ ಎನ್ನಲಾಗ್ತಿದೆ. ಅಷ್ಟೊಂದು ಸುಲಭವಾಗಿ ಸೋಲು ಒಪ್ಪಿಕೊಳ್ಳದ ಡಿಕೆ ಬ್ರದರ್ಸ್, ಯೋಗೇಶ್ವರ್ ಅವರನ್ನು ಅಖಾಡಕ್ಕೆ ಇಳಿಸಿ ಗೆಲುವಿಗೆ ಅಡ್ಡಗಾಲು ಹಾಕಲು ಯೋಜನೆ ರೂಪಿಸಿದ್ದಾರೆ ಅನ್ನೋ ರಹಸ್ಯ ಹೊರಬರುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ಯಾವ ದಾಳ ಉರುಳಿಸುತ್ತದೆ ಅನ್ನೋದನ್ನು ಕಾದು ನೋಡ್ಬೇಕು.







