ಕಳೆದ ತಿಂಗಳು ಮತ್ತು ಈ ತಿಂಗಳ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದಲ್ಲಿ ಮತ್ತೆ ಮಳೆ ಚುರುಕಾಗಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆ.28ರಂದು ಉತ್ತರ ಒಳನಾಡಿನ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗೆ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.
ಕುಂಭದ್ರೋಣ ಮಳೆಗೆ ಅಕ್ಷರಶಃ ನಲುಗಿದ ಚನ್ನಪಟ್ಟಣ!
ರಾಮನಗರ ಜಿಲ್ಲೆಯಲ್ಲಿ ಸುರಿದ ಕುಂಭದ್ರೋಣ ಮಳೆಗೆ ಅಕ್ಷರಶಃ ಮುಳುಗಿ ಹೋಗಿದೆ. ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿಯೇ ಅತೀ ಹೆಚ್ಚು ಹಾನಿಯಾಗಿದ್ದು, ಇದೆ ಮೊದಲ ಬಾರಿಗೆ ಸಾಂತ್ವನ ಕೇಂದ್ರ ತೆರೆಯಲಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಾದ್ಯಂತ ಧಾರಕಾರ ಮಳೆ ಹಿನ್ನೆಲೆ ಇಡೀ ಗ್ರಾಮ ಜಲಾವೃತವಾಗಿರುವಂತಹ ಘಟನೆ ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗ್ರಾಮದ ಬಳಿ ಇರುವ ಗಾಂಧಿ ಗ್ರಾಮದಲ್ಲಿ ಕಂಡುಬಂದಿದೆ. ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಆಹಾರ ಪದಾರ್ಥಗಳು, ವಸ್ತುಗಳು ನಾಶವಾಗಿದೆ. ಮನೆಯಲ್ಲಿದ್ದ ದಾಖಲಾತಿಗಳು ನೀರಿನಲ್ಲಿ ನೆನೆದು ಹೋಗಿದೆ.
ಚನ್ನಪಟ್ಟಣ ತಾಲ್ಲೂಕಿನ ಮಳೂರು ಕೆರೆ, ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ, ಹೊಂಗನೂರು ಕೆರೆ, ಮೊಗಳ್ಳಿ ಕೆರೆ, ಕೋಡಂಬಹಳ್ಳಿ ಕೆರೆ, ಬಿ.ವಿ.ಹಳ್ಳಿ ಕೆರೆ, ಶ್ಯಾನುಭೋಗನಹಳ್ಳಿ ಕೆರೆ, ಅಕ್ಕೂರು ಕೆರೆ, ಬ್ರಹ್ಮಣೀಪುರ ಕೆರೆ, ಸಂಕಲಗೆರೆ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಕೋಡಿ ಹರಿದಿವೆ. ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಾನಿಯಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.