ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿ ನೆರವಿನಿಂದ ಭಾರತ ತಂಡ 5 ವಿಕೆಟ್ ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.
ಹರಾರೆಯಲ್ಲಿ ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವನ್ನು 38.1ಓವರ್ ಗಳಲ್ಲಿ ಆಲೌಟ್ ಮಾಡಿದ ಭಾರತ ತಂಡ 25.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶ ಪಡೆದಿದೆ.
ಸುಲಭ ಗುರಿ ಬೆಂಬತ್ತಿದ ಭಾರತ ನಾಯಕ ಕೆಎಲ್ ರಾಹುಲ್ (1) ಅವರನ್ನು ಬೇಗನೇ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಮೊದಲ ಪಂದ್ಯದಲ್ಲಿ 10 ವಿಕೆಟ್ ಜಯ ತಂದುಕೊಟ್ಟಿದ್ದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಎರಡನೇ ವಿಕೆಟ್ ಗೆ 42 ರನ್ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು.
ಶಿಖರ್ ಧವನ್ 21 ಎಸೆತಗಳಲ್ಲಿ 4 ಬೌಂಡರಿ ಸೇರಿದ 33 ರನ್ ಬಾರಿಸಿ ಔಟಾದರೆ, ಗಿಲ್ 34 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 33 ರನ್ ಗಳಿಸಿ ಔಟಾದರು. ನಂತರ ಇಶಾನ್ ಕಿಶನ್ (6) ಕೂಡ ಬೇಗನೇ ನಿರ್ಗಮಿಸಿದ್ದರಿಂದ ಭಾರತಕ್ಕೆ ಒತ್ತಡಕ್ಕೆ ಒಳಗಾಯಿತು.
ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ 56 ರನ್ ಜೊತೆಯಾಟದ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 43 ರನ್ ಗಳಿಸಿ ಅಜೇಯರಾಗಿ ಉಳಿದರೆ, ಹೂಡಾ 36 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 25 ರನ್ ಬಾರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ಶಾರ್ದೂಲ್ ಠಾಕೂರ್ ದಾಳಿಯಿಂದ ಅಲ್ಪ ಮೊತ್ತಕ್ಕೆ ಕುಸಿಯಿತು.
ತಂಡದ ಪರ ಸೀನ್ ವಿಲಿಯಮ್ಸನ್ 42 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 42 ರನ್ ಗಳಿಸಿ ಔಟಾದರೆ, ರಿಯಾನ್ ಬ್ರುಲ್ 47 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 39 ರನ್ ಬಾರಿಸಿ ಔಟಾಗದೇ ಉಳಿದರು.
ಭಾರತದ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿದರೆ, ಉಳಿದ ಎಲ್ಲಾ ಬೌಲರ್ ಗಳು ತಲಾ 1 ವಿಕೆಟ್ ಗಳಿಸಿದರು.