ಕ್ರೌರ್ಯವನ್ನೇ ಉಸಿರಾಡಿ ಗದ್ದುಗೆ ಏರಿರೋ ತಾಲಿಬಾನಿಗಳು ಒಳಗೊಳಗೇ ಅಸಮಾಧಾನದ ಬೇಗುದಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮ ಇಸ್ಲಾಮಿಕ್ ಎಮಿರೇಟ್ ಸರ್ಕಾರದ ಹೊಸ ಸಂಪುಟದ ಬಗ್ಗೆ ಉಪ ಪ್ರಧಾನಿ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಇದೇ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಒಳ ಜಗಳದಲ್ಲಿ ಬರಾದಾರ್ ಹತ್ಯೆ ಆಗಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ಈ ಸಂಬಂಧವಾಗಿ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಟ್ವೀಟ್ ಮಾಡಿ ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆನ್ನಲ್ಲೇ ನಾನು ಸತ್ತಿಲ್ಲ ಜೀವಂತವಾಗಿದ್ದೇನೆ ಎಂಬ ಆಡಿಯೋ ಕ್ಲಿಪ್ ಕೂಡ ಬರಾದಾರ್ ಬಹಿರಂಗಗೊಳಿಸಿದ್ದಾರೆ.
ಮುಲ್ಲಾ ಬರಾದಾರ್ ಸಾವು ಸುಳ್ಳು ಅಂತಲೂ ಸುಹೈಲ್ ಶಹೀನ್ ಟ್ವೀಟ್ ಮಾಡಿದ್ದಾರೆ. ಇದರ ಮಧ್ಯೆ ರಕ್ಷಣಾ ಇಲಾಖೆ ಸಚಿವ ಸ್ಟಾನಿಕ್ಜಾಯ್ ಕೂಡ ನಾಪತ್ತೆಯಾಗಿದ್ದಾರೆ. ಹೀಗಾಗಿ ಉಗ್ರರ ಅಧಿಕಾರ ದಾಹ ಇವರಿಬ್ಬರ ಬಲಿ ತೆಗೆದುಕೊಂಡಿತಾ ಎಂಬ ಅನುಮಾನ ಶುರುವಾಗಿದೆ.
ಶಾಂತಿ ಬಿತ್ತಿದ್ದ ಬುದ್ಧನ ನೆಲವನ್ನ ಕ್ರೂರಿಗಳು ಅಕ್ಷರಶಃ ರಕ್ತಸಿಕ್ತಗೊಳಿಸಿ ಬಿಟ್ಟಿದ್ದಾರೆ. ಉಗ್ರ ತಾಲಿಬಾನಿಗಳ ಹಿಂಸಾತ್ಮಕ ಕೃತ್ಯ ಮತ್ತಷ್ಟೂ ಕಸುವು ಪಡೆದುಕೊಂಡಿದೆ. ಮೊದಲಿನಿಂದಲೂ ಉಗ್ರರ ವಿರುದ್ಧ ಸೆಡ್ಡು ಹೊಡೆದು ಗುಡುಗುತ್ತಿದ್ದ ಸಿಂಹಕೋಟೆ ಪಂಜಶೀರ್ಗೆ ನುಗ್ಗಿ ಮತ್ತೆ 20 ನಾಗರಿಕನ್ನ ತಮ್ಮ ಬಂದೂಕಿಗೆ ಬಲಿ ತೆಗದುಕೊಂಡಿದ್ದಾರೆ.
ಸೈನಿಕರೂ ಸೇರಿದಂತೆ ಪಂಜಶೀರ ಕಣಿವೆಯಲ್ಲಿ ಇಪ್ಪತ್ತು ಮಂದಿಯ ರಕ್ತ ಹರಿಸಿದ್ದಾರೆ. ಇನ್ನೂ ಪಂಜಶೀರ್ನಲ್ಲಿ ಸಂವಹನ ಸಂಪರ್ಕ ಕೂಡ ಸ್ಥಗಿತವಾಗಿದೆ. ಹೀಗೆ ಮುಂದುವರೆದರೆ ರಕ್ತಪಿಪಾಸುಗಳ ಈ ಕ್ರೌರ್ಯ ಮೆರವಣಿಗೆ ಮತ್ತಷ್ಟೂ ಕಳೆಗಟ್ಟಿಬಿಟ್ಟಿದೆ.
ಸ್ವೇಚ್ಛಾಚಾರ, ಸರ್ವಾಧಿಕಾರ ಮೆರೆಯುತ್ತಿರೋ ಕ್ರೂರಿ ತಾಲಿಬಾನಿಗಳ ವಿರುದ್ಧ ಅಫ್ಘನ್ನರು ಸಿಡಿದೆದ್ದಿದ್ದಾರೆ. ಸಮಾರು 3 ಸಾವಿರ ಸೈನಿಕ ಕುಟುಂಬಗಳಿಗೆ ಸೇನಾ ವಸತಿ ಕಾಲೋನಿಯನ್ನ ತೊರೆಯುವಂತೆ ಹೇಳಿದ್ದರಿಂದ ಸಾವಿರಾರು ಅಪ್ಘನ್ನರು ಪ್ರತಿಭಟಿಸಿದ್ದಾರೆ.
ಕಂದಹಾರ್ನಲ್ಲಿ ರಾಜ್ಯಪಾಲರ ಕಚೇರಿ ಮುಂದೆ ಪ್ರತಿಭಟಿಸಿದ್ದಾರೆ. ಇನ್ನು ಈ ನಡುವೆ ಸಾವಿರಾರು ನಾಗರಿಕರು ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿ ಮತ್ತೆ ಅಪ್ಘಾನಿಸ್ತಾನ ತೊರೆಯೋದಕ್ಕೆ ಹಾತೊರಿಯುತ್ತಿದ್ದಾರೆ. ಈ ನಡುವೆ ತಾಲಿಬಾನಿಗಳ ಮತ್ತೊಂದು ಹೇಳಿಕೆ ತುಂಬ ಹಾಸ್ಯಾಸ್ಪದ ಮತ್ತು ಆಕ್ರೋಶಕ್ಕೂ ಹಾರಣವಾಗಿದೆ.
ನಿತ್ಯವೂ ನೆತ್ತರಾಭಿಷೇಕದಲ್ಲಿ ಮಿಂದೇಳುತ್ತಿರೋ ತಾಲಿಬಾನಿಗಳು ಎಷ್ಟೋ ಮುಗ್ಧ ಅಪ್ಘಾನ್ನರ ರಕ್ತ ಹೀರಿದ್ದಾರೆ. ನಿತ್ಯವೂ ಮದ್ದು, ಗುಂಡು, ಬಂದೂಕಿನ ಮೇಳದಲ್ಲಿ ವಿಜೃಂಭಿಸುತ್ತಿರೋ ತಾಲಿಬಾನ್ ಈಗ ಮಾನವೀಯತೆ ಬಗ್ಗೆ ಮಾತನಾಡಿದೆ. ನಾವೂ ಈವರೆಗೆ ಮಾನವೀಯತೆ ವಿರುದ್ಧವಾಗಿ ಯಾವುದೇ ಅಪರಾಧ ಮಾಡಿಲ್ಲ ಅಂತ ಹೇಳಿದೆ.
ಈ ನಡುವೆ ವಿಶ್ವಸಂಸ್ಥೆ ಕೂಡ ಉಗ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಅಧಿಕಾರಿಗಳನ್ನ, ನಾಗರಿಕರನ್ನ ಹತ್ಯೆಗೈಯುತ್ತಿರೋ ಬಗ್ಗೆ ವರದಿಗಳಾಗುತ್ತಿವೆ. ತಾಲಿಬಾನಿಗಳ ಹಿಂಚಾಚಾರ ಮಿತಿ ಮೀರಿದೆ ಕೂಡಲೇ ತಾಲಿಬಾನ್ ಕ್ರೌರ್ಯವನ್ನ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಷೆಲ್ ಬ್ಯಾಚೆಲೆಟ್ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಎಚ್ಚರಿಸಿದ್ದಾರೆ.