ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಬಂಧಿಸಿದ ಎಲ್ಲ ಕಾಮಗಾರಿಗಳಿಗೆ ಈ ವರ್ಷ 10 ಸಾವಿರ ಕೋಟಿ ರೂ.ಗಳ ಅನುದಾನ ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಾಗಲಕೋಟೆಯ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ ಲಾಲ್ ಬಹದ್ದೂರ ಶಾಸ್ತ್ರಿ ಸಾಗರದ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈಗಾಗಲೇ ಆಲಮಟ್ಟಿ ಎತ್ತರಿಸುವ ನಿಟ್ಟಿನಲ್ಲಿ ಹಣಕಾಸು, ಜಲ ಸಂಪನ್ಮೂಲ ಇಲಾಖೆ ಹಾಗೂ ಆರ್ & ಆರ್ ಜೊತೆ ಎರಡು ಮೂರು ಬಾರಿ ಸಭೆ ನಡೆಸಲಾಗಿದ್ದು, ಈ ವರ್ಷ ಪುನರ್ವಸತಿ, ಪುನರ್ ನಿರ್ಮಾಣ, ಸ್ಥಳಾಂತರ, ಕಾಲುವೆ ನಿರ್ಮಾಣ ಸೇರಿದಂತೆ ಎಲ್ಲ ಕಾರ್ಯಗಳಿಗೆ 10 ಸಾವಿರ ರೂ.ಗಳ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಾಗಿದೆ ಎಂದರು.
ಈ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದ ಶೇ.80 ರಷ್ಟು ಕೆರೆಗಳು ಭರ್ತಿಯಾಗಿ ಅಂತರ್ಜಲ ಕೂಡಾ ಹೆಚ್ಚಾಗಿದೆ. ಆಲಮಟ್ಟಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿಣ ಅರ್ಪಿಸಲಾಗಿದೆ. ಆಲಮಟ್ಟಿ ಜಲಾಶಯವನ್ನು ಈಗಿದ್ದ 519.06 ಮೀಟರ್ನಿಂದ 524 ಮೀಟರ್ ಎತ್ತರಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಸಾಕಷ್ಟು ಕ್ರಮಗಳನ್ನು ವಹಿಸಲಾಗಿದೆ ಎಂದರು.
ಕೃಷ್ಣಾ ನ್ಯಾಯಾಧೀಕರಣ-2 ಕುರಿತು ಸುಪ್ರೀಂ ಕೋರ್ಟನಲ್ಲಿ ಅಂತಿಮ ಘಟ್ಟ ತಲುಪಿದ್ದು, ಹೊಸ ನ್ಯಾಯವಾದಿಗಳ ನೇಮಕವಾಗಬೇಕಾಗಿದ್ದರಿಂದ ಆದೇಶ ಹೊರಬೀಳಲು ವಿಳಂಬವಾಗಿದೆ. ಈ ಮಾಹೆಯಲ್ಲಿ ನ್ಯಾಯವಾದಿಗಳ ನೇಮಕವಾಗಲಿದ್ದು, ಅಂತಿಮ ಅಧಿಸೂಚನೆ ಹೊರಬರಲಿದೆ. ಜಲಾಶಯ ಎತ್ತರದ ಹಿನ್ನಲೆಯಲ್ಲಿ ಆರ್ & ಆರ್ ಕೈಗೊಳ್ಳುವ ಕೆಲಸ ಬಹಳವಿದೆ. ಬಾದಿತಗೊಳ್ಳುವ 14 ಗ್ರಾಮಗಳ 4 ಗ್ರಾಮಗಳ ಪರಿಹಾರ ಪಾವತಿಗೆ ಬಂದಿದ್ದು, ಒಂದು ತಿಂಗಳಲ್ಲಿ 3900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು ಉಳಿದ 10 ಗ್ರಾಮಗಳಿಗೆ ಬರುವ ಜನವರಿಯಲ್ಲಿ ಪರಿಹಾರಧನ ನೀಡಲಾಗುತ್ತಿದೆ. ಇನ್ನುಳಿದ 6 ಗ್ರಾಮಗಳ ಸರ್ವೆ ಕಾರ್ಯ ಪ್ರಾರಂಭಿಸಲಾಗಿದ್ದು, ಬರುವ ದಿನಗಳಲ್ಲಿ ಪರಿಹಾರಕ್ಕೆ ಕ್ರಮವಹಿಸಾಗುತ್ತಿದೆ ಎಂದು ತಿಳಿಸಿದರು.
ನ್ಯಾಯಾಲಯದ ಆದೇಶ ಬಂದ ಮೇಲೆ 519.6 ಮೀಟರ್ ಎತ್ತರದಲ್ಲಿ ಹಿಡಿದಿಟ್ಟ ನೀರಿಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮುಳವಾಡ ಏತ ನೀರಾವರಿ, ಚಿಮ್ಮಲಗಿ ಹಾಗೂ ಕೊಪ್ಪಳ ಏತ ನೀರಾವರಿ ಸೇರಿದಂತೆ ಒಟ್ಟು 9 ಯೋಜನೆಗಳಿಗೆ ಕ್ರಮವಹಿಸಲಾಗುತ್ತಿದೆ. ನೀರನ್ನು ಹಿಡಿದಿಟ್ಟುಕೊಳ್ಳುವ ಒಂದು ಕೆಲಸವಾದರೆ ಅದನ್ನು ಉಪಯೋಗಿಸುವ ಕೆಲ ಮತ್ತೊಂದೆಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಶಿವಾನಂದ ಪಾಟೀಲ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕರಾದ, ಶ್ರೀಕಾಂತ ಕುಲಕರ್ಣಿ, ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ, ಅವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ, ಪಿ.ಸುನೀಲ್ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಚ್.ಡಿ.ಆನಂದಕುಮಾರ, ಜಯಪ್ರಕಾಶ, ಜಿ.ಪಂ ಸಿಇಓ ರಾಹುಲ್ ಸಿಂಧೆ, ಟಿ.ಭೂಬಾಲನ್ ಉಪಸ್ಥಿತರಿದ್ದರು.