2019ರ ಜುಲೈ 19, ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿ ಅವರು ದೇಶದ 14 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ 50 ವರ್ಷ ಪೂರೈಸಿದ ದಿನ. ಈಗ 2020ರ ಜುಲೈ 19ಕ್ಕೆ 51ನೇ ವರ್ಷವನ್ನೂ ಪೂರೈಸುತ್ತಿದೆ. 50 ರಿಂದ 51ನೇ ವರ್ಷ ತುಂಬುತ್ತಿರುವ ಈ ಒಂದು ವರ್ಷದೊಳಗೆ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅತ್ಯಂತ ನಿರ್ಣಾಯಕವಾಗಿವೆ. ಅಂದು ಇಂದಿರಾ ಗಾಂಧಿ ಅವರು ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಬಡವರ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿದ್ದರು. ಇಂದು ಅದೇ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಏನು ಸಾಧಿಸಲು ಹೊರಟಿದ್ದಾರೋ ಅವರಿಗೆ ಮಾತ್ರ ಗೊತ್ತು.
ಕಳೆದೊಂದು ವರ್ಷದಲ್ಲಿ ಮೋದಿ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ 2 ಪ್ರಮುಖ ನಿರ್ಣಯ ತೆಗೆದುಕೊಂಡಿದ್ದಾರೆ. ಒಂದು, ಮೊದಲು ರಾಜ್ಯಗಳ ವಿವಿಧ 10 ಬ್ಯಾಂಕುಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸಿದ್ದು. ಇದು ಈಗಾಗಲೇ ಆಗಿಹೋಗಿರುವ ಕೆಲಸ. ಇನ್ನೊಂದು ಆಗಬೇಕಿರುವ, ಆಗುತ್ತಿರುವ ಕೆಲಸ. ಅದೇನೆಂದರೆ ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದು. ಹೌದು, ನರೇಂದ್ರ ಮೋದಿಯವರ ಸರ್ಕಾರ ಆರಂಭಿಕ ಹಂತದಲ್ಲಿ ಪಂಜಾಬ್ ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕುಗಳನ್ನು ಪ್ರಾಯೋಗಿಕವಾಗಿ ಖಾಸಗೀಕರಣ ಮಾಡಲೊರಟಿದೆ. ಕ್ರಮೇಣ ಈ ಬ್ಯಾಂಕುಗಳ ಸಂಖ್ಯೆಗಳು ಕೂಡ ಹೆಚ್ಚಾಗಲಿವೆ.
ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರದ ಬಗ್ಗೆ ಜನಸಾಮಾನ್ಯರಿಂದ ಕಡುಟೀಕೆ ಬರುತ್ತದೆ ಎಂಬುದು ಆಡಳಿತ ನಡೆಸುತ್ತಿರುವವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅದಕ್ಕಾಗಿ ಸೊಗಸಾದ ಸಬೂಬೊಂದನ್ನು ಸಿದ್ದಪಡಿಸಿ ಇಟ್ಟುಕೊಂಡಿದ್ದಾರೆ. ಭಾರತದ ಆರ್ಥಿಕತೆಯ ನೀತಿ ನಿರೂಪಣೆಗಳ ಬಗ್ಗೆ ಸಲಹೆ, ಶಿಫಾರಸು ಕೊಡಲು ಇರುವ ನೀತಿ ಆಯೋಗ ಸಲಹೆ ನೀಡಿದೆ ಎಂದು ಹೇಳುತ್ತಿದೆ. ನೀತಿ ಆಯೋಗದ ಶಿಫಾರಸಿನ ಮೇರೆಗೆ ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುತ್ತಿರುವುದಾಗಿ ಹೇಳುತ್ತಿದೆ. ಅಲ್ಲದೆ ಒಂದು ಅಥವಾ ಹೆಚ್ಚಿನ ಸರ್ಕಾರಿ ನಿಯಂತ್ರಿತ ಬ್ಯಾಂಕುಗಳನ್ನು ಬಲಪಡಿಸುವ ದೃಷ್ಟಿಯಿಂದ ಕೆಲ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದೆ. ತೆರಿಗೆದಾರರ ಹಣವನ್ನು ನಷ್ಟದಲ್ಲಿರುವ ಕಂಪನಿಗಳಿಗೆ ಸಾಲದ ರೂಪದಲ್ಲಿ ಕೊಡುವುದನ್ನು ತಡೆಯುವುದು ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದು ಕೂಡ ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳಲಿದೆ.
ನೀತಿ ಆಯೋಗ ನೀಡುವ ಎಲ್ಲಾ ಸಲಹೆ ಶಿಫಾರಸುಗಳನ್ನು ಎಲ್ಲಾ ಕಾಲಕ್ಕೂ ಎಲ್ಲಾ ಸರ್ಕಾರಗಳು ಒಪ್ಪಿಲ್ಲ. ಯಥಾವತ್ತಾಗಿ ಜಾರಿಗೊಳಿಸಿಲ್ಲ. ಅದೊಂದು ನೆಪವಷ್ಟೇ. ಬ್ಯಾಂಕುಗಳ ವಿಲೀನಗೊಳಿಸಿದಾಗಲೇ ಮುಂದೊಂದು ದಿನ ಬ್ಯಾಂಕುಗಳ ಖಾಸಗೀಕರಣ ಆಗಬಹುದು ಎಂಬ ಅಂದಾಜಿಸಲಾಗಿತ್ತು. ಈಗ ಕಾರ್ಯರೂಪಗೊಳ್ಳುತ್ತಿದೆ. ನೀತಿ ಆಯೋಗದ ಸಲಹೆ ಮೇರೆಗೆ ಕಾರ್ಯಪ್ರವತ್ತವಾಗಿರುವ ಕೇಂದ್ರ ಹಣಕಾಸು ಇಲಾಖೆ ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆಯನ್ನೂ ನೀಡಿದೆ. ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲೆಂದು ಕೇಂದ್ರ ಹಣಕಾಸು ಇಲಾಖೆಯ ಉನ್ನತಾಧಿಕಾರಿಗಳ ಗುಂಪೊಂದನ್ನು ರಚಿಸಲಾಗಿದ್ದು, ಆ ಅಧಿಕಾರಿಗಳು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಆರಂಭಿಕ ಹಂತದ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನೀತಿ ಆಯೋಗವು ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಹೇಳಿರುವುದು ಮಾತ್ರವಲ್ಲ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿಯವರು ದೀರ್ಘಕಾಲದ ಬಂಡವಾಳ ಹೂಡಲು ಅನುವು ಮಾಡಿಕೊಡುವಂತೆ ಕೂಡ ಸಲಹೆ ನೀಡಿದೆ. ಖಾಸಗೀಕರಣ ಆಗುವ ಬ್ಯಾಂಕುಗಳಿಗೆ ಆಯ್ದ ಕೆಲ ಕೈಗಾರಿಕಾ ಸಂಸ್ಥೆಗಳ ಸಮೂಹಗಳಿಗೆ ಸಾಲ ಕೊಡದಂತೆ ಷರತ್ತು ವಿಧಿಸಬೇಕೆಂದು ಕೂಡ ಶಿಫಾರಸು ಮಾಡಿದೆ. ಈ ಎಲ್ಲಾ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅದಕ್ಕನುಗುಣವಾಗಿ ಅಡಿ ಇಡುತ್ತಿದೆ.
ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸು ಎಂಬ ಸಬೂಬು ಹೇಳಬಹುದು. ಈಗ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಖಾಸಗೀಕರಣ ಮಾಡಲಾಗುತ್ತಿದೆ ಎಂದರೆ ಇದಕ್ಕೂ ಮೊದಲು 10 ಬ್ಯಾಂಕುಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸಿದ್ದೇಕೆ? ಅದರ ಉದ್ದೇಶಗಳು ಈಡೇರಿಲ್ಲವೇ? ಕೇಂದ್ರ ಸರ್ಕಾರದ ವಿಲೀನಗೊಳಿಸುವ ಯೋಜನೆಯೇ ವಿಫಲವಾಯಿತೆ? ಅಥವಾ ಖಾಸಗೀಕರಣ ಮಾಡುವ ದೃಷ್ಟಿಯಿಂದಲೇ ಪೂರ್ವ ಪೀಠಿಕೆಯಾಗಿ ವಿಲೀನ ಮಾಡಲಾಯಿತೇ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸದ್ಯ ವಿಲೀನವಾಗಿರುವ 4 ಬ್ಯಾಂಕುಗಳನ್ನು ಖಾಸಗೀಕರಣ ಮಾಡಲಾಗುತ್ತಿಲ್ಲ. ಆದರೆ ಮುಂದೆಯೂ ಆಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?
ಕೇಂದ್ರ ಸರ್ಕಾರ ಮಾಡಲೊರಟಿರುವ ಕೆಲಸಕ್ಕೆ ಬ್ಯಾಂಕ್ ನ್ಯಾಷನಲೈಸೇಷನ್ ಆ್ಯಕ್ಟ್ ಕಾಯಿದೆಗೆ ತಿದ್ದುಪಡಿ ತರಬೇಕಾಗುತ್ತದೆ. ಆದರೆ ಸದ್ಯ ಬಹುಮತದ ಸರ್ಕಾರ ಇರುವ ಕಾರಣಕ್ಕೆ ಹಾಗೂ ವಿಪಕ್ಷಗಳಲ್ಲಿ ಒಮ್ಮತವಿಲ್ಲದ ಕಾರಣಕ್ಕೆ ಇದು ಅಸಾಧ್ಯವಾದ ಮಾತೇನಲ್ಲ. ರಾಜ್ಯನಿಯಂತ್ರಿತ ಬ್ಯಾಂಕ್ ಮಾಲೀಕತ್ವ ಮತ್ತು ಆಡಳಿತವನ್ನು 1970ರ ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಯು ನಿಯಂತ್ರಿಸುತ್ತದೆ. ಇದಕ್ಕೂ ತಿದ್ದುಪಡಿ ತರುವ ಸಾಧ್ಯತೆ ಇದೆ. ಜೊತೆಗೆ ಕಳೆದ ತಿಂಗಳು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕಾರ್ಯತಂತ್ರದ ಕ್ಷೇತ್ರಗಳು ಸೇರಿದಂತೆ ಉದ್ಯಮದ ಎಲ್ಲಾ ವಿಭಾಗಗಳನ್ನು ಖಾಸಗಿ ಬಂಡವಾಳಕ್ಕೆ ತೆರೆಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಘೋಷಿಸಿದ್ದರು. ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಗರಿಷ್ಠ 4 ಸಾರ್ವಜನಿಕ ವಲಯದ ಕಂಪನಿಗಳು ಇರುತ್ತವೆ ಎಂದು ಕೂಡ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು.
Also Read: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರನ್ನು ಹೃದಯಹೀನ ಮತ್ತು ಅಸಮರ್ಥ ಎಂದ ನಿರ್ಮಲಾ ಸೀತಾರಾಮನ್
ಲಾಕ್ಡೌನ್ ಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಯಾವ ಕ್ರಮಗಳಿಂದಲೂ ದೇಶದ ಆರ್ಥಿಕತೆ, ಜಿಡಿಪಿ, ತೆರಿಗೆ ಸಂಗ್ರಹ, ರಫ್ತು ಪ್ರಮಾಣಗಳು ಕುಸಿಯುವುದನ್ನು ತಡೆಯಲು ಸಾಧ್ಯವಾಗಿರಲಿಲ್ಲ ಲಾಕ್ಡೌನ್ ಎಂಬುದು ಗಾಯದ ಮೇಲೆ ಬರೆ ಎಳೆದಂತಾಯಿತು. ಪ್ರಯೋಗಾತ್ಮಕವಾಗಿ ಈಗ ಬ್ಯಾಂಕುಗಳ ಖಾಸಗೀಕರಣ ಮಾಡಲಾಗುತ್ತಿದೆ ಎಂಬುದಾಗಿ ಕೂಡ ಸಮರ್ಥಿಸಿಕೊಳ್ಳಬಹುದು. ಆದರೆ ಅದಕ್ಕೂ ಮೊದಲು ದಿವಂಗತ ಇಂದಿರಾ ಗಾಂಧಿ ಅವರು ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವ ದಿಟ್ಟ ಕ್ರಮ ಕೈಗೊಂಡ ಸಂದರ್ಭವನ್ನೂ ಅವಲೋಕಿಸಬೇಕು.
ಭಾರತ 1962ರಲ್ಲಿ ಚೀನಾ ವಿರುದ್ಧ ಯುದ್ಧ ಮಾಡಿತ್ತು. 1965 ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿತ್ತು. ನಿರಂತರವಾಗಿ ಎರಡು ಯುದ್ಧಗಳನ್ನು ಮಾಡಿ ಚೇತರಿಸಿಕೊಳ್ಳಲು ಎಂಥದೇ ಬಲಿಷ್ಟ ದೇಶಕ್ಕೂ ಕೆಲ ವರ್ಷಗಳು ಬೇಕಾಗುತ್ತವೆ. ಈ ನಡುವೆ ದೇಶದ ಚೊಚ್ಚಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು (1964ರಲ್ಲಿ) ಹಾಗೂ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ನಿಧನರಾಗಿ 1966ರಲ್ಲಿ ನಾಯಕತ್ವೂ ಇಲ್ಲದೆ ಅನುಭವ ಇಲ್ಲದ ಇಂದಿರಾ ಗಾಂಧಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದಲ್ಲದೆ ಸತತವಾಗಿ ಬರ ಕಾಡುತ್ತಿತ್ತು. ಜವಾಹರಲಾಲ್ ನೆಹರು ಅನುಪಸ್ಥಿತಿಯಲ್ಲಿ ವಿದೇಶಿ ವಿನಿಮಯ ಕುಸಿದಿತ್ತು. ಜಿಡಿಪಿಯೂ ಕೆಳಮುಖವಾಗಿತ್ತು. ಅಂಥ ಕ್ಲಿಷ್ಟ ಪರಿಸ್ಥಿತಿಯಲ್ಲೂ ಇಂದಿರಾಗಾಂಧಿ 1969ರಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಈಗ ಅಂಥ ಗಟ್ಟಿತನ ತೋರಿಸಬೇಕಾದ ಸರದಿ ನರೇಂದ್ರ ಮೋದಿಯವರದು.