ಕರೋನಾ ಪ್ರಸ್ತುತ ಇಡೀ ವಿಶ್ವದ ಎದುರು ದೊಡ್ಡ ಸವಾಲೊಂದನ್ನು ಎಸೆದಿದೆ. ಇಡೀ ವಿಶ್ವದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಒಂದೆಡೆ ಬಡತನ, ಹಸಿವು ಮತ್ತು ನಿರುದ್ಯೋಗ ಕಾಡುತ್ತಿದ್ದರೆ, ಮತ್ತೊಂದೆಡೆ ಇದರ ವಿರುದ್ಧ ಹೋರಾಟಕ್ಕೆ ಇಡೀ ವಿಶ್ವ ಸಜ್ಜಾಗಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಮಾತ್ರ ಕರೋನಾ ಕಾಲದ ಲಾಕ್ಡೌನ್ ಸಹ ಸಹಕಾರಿಯಾಗಿ ಬದಲಾಗಿರುವುದು ವಿಪರ್ಯಾಸ.
ಲಾಕ್ಡೌನ್ ಸಮಯದಲ್ಲಿ ಎಲ್ಲಾ ದೇಶಗಳು ಕರೋನಾ ವಿರುದ್ಧದ ಹೋರಾಟದಲ್ಲಿ ನಿರತವಾಗಿದ್ದರೆ, ಭಾರತದಲ್ಲಿ ಮಾತ್ರ ಈ ಅವಧಿಯಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನೇ ಹತ್ತಿಕ್ಕುತ್ತಿರುವುದು ಮತ್ತು ಸರ್ಕಾರದ ವಿರುದ್ಧದ ಎಲ್ಲಾ ದ್ವನಿಗಳನ್ನು ಅಡಗಿಸಲು ಬಳಸುತ್ತಿರುವುದು ಅತ್ಯಂತ ಖೇದಕರ ಮತ್ತು ಬೇಜವಾಬ್ದಾರಿತನ.
2019ರ ಆಗಸ್ಟ್ ತಿಂಗಳಿನಿಂದ ಇಡೀ ರಾಷ್ಟ್ರವ್ಯಾಪಿ NRC-NPR ಮತ್ತು CAA ಕಾಯ್ದೆಯ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ದೆಹಲಿಯಲ್ಲಂತು JNU ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಆರಂಭದಿಂದಲೂ ಈ ಹೋರಾಟದ ಮುಂಜೂಣಿಯಲ್ಲಿದ್ದರು. ಅಲ್ಲದೆ, ಇಲ್ಲಿನ ಶಾಹೀನ್ ಬಾಗ್ ಎಂಬ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಸತತವಾಗಿ ಈ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದರು.
ಭಾರತದ ಮಟ್ಟಿಗೆ ಅಣ್ಣಾ ಅಜಾರೆ ನೇತೃತ್ವದಲ್ಲಿ ನಡೆದ ಜನ ಲೋಕಪಾಲ್ ಮತ್ತು ಭ್ರಷ್ಟಚಾರ ವಿರೋಧಿ ಆಂದೋಲನದ ನಂತರ ನಡೆದ ಬಹುದೊಡ್ಡ ಹೋರಾಟ ಇದಾಗಿತ್ತು. ಕೇಂದ್ರ ಸರ್ಕಾರ ಏನೇ ಮಾಡಿದರೂ ಈ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗಲೇ ಇಲ್ಲ. ಈ ಸಂದರ್ಭ ಕೇಂದ್ರ ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಅನೇಕ ಕಸರತ್ತುಗಳನ್ನು ನಡೆಸಿದ್ದು ಸುಳ್ಳಲ್ಲ.
ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಪುಂಡರ ಆರ್ಭಟ:
ಸಿಎಎ ಕಾಯ್ದೆಯ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಬಲಗೊಂಡಂತೆ ಪೊಲೀಸರಿಗೆ ಮೊದಲು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯಕ್ಕೆ ದಾಳಿ ಇಡುವಂತೆ ನಿರ್ದೇಶನ ನೀಡಲಾಗಿತ್ತು. ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ನುಗ್ಗಿದ್ದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದರು. ಪರಿಣಾಮ ಹಲವಾರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನೂ ಕೆಲವು ಗೂಂಡಾಗಳು JNU ವಿಶ್ವವಿದ್ಯಾಲಯದ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ JNU ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಶೆ ಘೋಷ್ ತಲೆ ಪೆಟ್ಟಾಗಿ ಆಕೆ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೆ ಬದುಕಿ ಬಂದಿದ್ದಳು. ಆದರೆ, ಆನಂತರ ಆಕೆಯ ಮೇಲೆ ಕೇಸು ದಾಖಲಿಸಲಾಗಿತ್ತು.
ಆದರೆ, ಸರ್ಕಾರ ಏನೇ ಮಾಡಿದರೂ ಸಹ ಈ ಹೋರಾಟವನ್ನು ಹತ್ತಿಕ್ಕುವುದು ಸಾಧ್ಯವಾಗಿರಲಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಮನುಕುಲಕ್ಕೆ ಮಾರಕವಾದ ಕರೋನಾ ಭಾರತಕ್ಕೆ ಹಾವಳಿ ಇಡುತ್ತಿದ್ದಂತೆ, ಈ ಹೋರಾಟವನ್ನು ಹತ್ತಿಕ್ಕಲು ಕೇಂದ್ರಕ್ಕೆ ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿತ್ತು. ಲಾಕ್ಡೌನ್ ಸಂದರ್ಭದಲ್ಲೂ ಸದ್ದಿಲ್ಲದೆ ಸಾಲು ಸಾಲು ಹೋರಾಟಗಾರರನ್ನು ಬಂಧಿಸಲಾಗುತ್ತಿದೆ.
ಲಾಕ್ಡೌನ್ ಮತ್ತು ಹೋರಾಟಗಾರರ ಬಂಧನ:
ದೇಶದಾದ್ಯಂತ ಕರೋನಾ ಲಾಕ್ಡೌನ್ ಜಾರಿಯಾಗಿದೆ. ಸಿಎಎ ವಿರೋಧಿ ಆಂದೋಲನ ಇದೀಗ ಜನ ಸಾಮಾನ್ಯರ ಸ್ಮೃತಿ ಪಟಲದಿಂದ ಬಹುತೇಕ ಮರೆಯಾಗಿದೆ. ಮಾಧ್ಯಮಗಳಿಗೂ ಕರೋನಾ ಸುದ್ದಿಯೇ ಸಾಕಾಗಿದೆ. ಸಿಎಎ ವಿರೋಧಿ ಆಂದೋಲನವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರಕ್ಕೆ ಇಷ್ಟು ಸಾಕಾಗಿತ್ತು. ಆದರೆ, ಇದನ್ನೂ ದಾಟಿ ಕೇಂದ್ರ ಮಾಡುತ್ತಿರುವುದು ಮಾತ್ರ ಅಕ್ಷಮ್ಯ.
ಇಡೀ ದೇಶದ ಜನ ಮತ್ತು ಮಾಧ್ಯಮ ಕರೋನಾ ಕುರಿತು ಸದ್ದುಗದ್ದಲದಲ್ಲಿ ಮರೆಯಾಗಿರುವಾಗ ಕೇಂದ್ರ ಸರ್ಕಾರ ಹೋರಾಟಗಾರರ ವಿರುದ್ಧ ಸೇಡಿಗೆ ಮುಂದಾಗಿದೆ. ಈಗಾಗಲೇ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಫೂರ ಜಾರ್ಗರ್ ಮತ್ತು ಮೀರನ್ ಹೈದರ್ ಎಂಬ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಜಾಮಿಯಾ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿಫಾ-ಉರ್-ರೆಹಮಾನ್ ನನ್ನು ಬಂಧಿಸಲಾಗಿದೆ.
ಅಷ್ಟೇ ಅಲ್ಲ ಸಂಶೋಧನಾ ವಿದ್ಯಾರ್ಥಿ ಸಫೂರ ಜರ್ಗರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಆಕೆಯ ಬಂಧನದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮೇಲೆ ಕೆಟ್ಟ ವೈಯಕ್ತಿಕ ದಾಳಿ ನಡೆಯುತ್ತಿದೆ.
ಮುಜಾಫರ್ಪುರದ ಬಿಜೆಪಿ ಸದಸ್ಯ ಎಂದು ಗುರುತಿಸಿಕೊಂಡಿರುವ ಮನೋಜ್ ಕುಮಾರ್ ಆಜಾದ್ ಅವರು ಆಕೆಯ ಕುರಿತು ಮೇ 4 ರಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ “ಶಾಹೀನ್ ಬಾಗ್ನಲ್ಲಿ ದಂಗೆ ಮಾಡಿದ ನಂತರ ಅವಿವಾಹಿತ ಜಾಮಿಯಾ ಕಾನೂನು ವಿದ್ಯಾರ್ಥಿನಿ ಸಫೂರಾ ಜಾರ್ಗರ್ ಗಲಭೆಗಳನ್ನು ಪ್ರಚೋದಿಸಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಆಕೆಯನ್ನು ಕರೋನವೈರಸ್ ಪರೀಕ್ಷೆಗೆ ಒಳಪಡಿಸಿದಾಗ, ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಹಂಚಿಕೊಂಡಿದ್ದರು. ಆದರೆ ಇದೊಂದು ಸುಳ್ಳು ಸುದ್ದಿ ಎಂದು ನಂತರ ದೃಢಪಡಿಸಲಾಗಿತ್ತು.
ಪ್ರತಿಭಟನೆಯನ್ನೇ ಅಪರಾಧಿಕರಿಸುತ್ತಿರುವ ಸರ್ಕಾರ:
ಇತ್ತೀಚೆಗೆ ದೇಶದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದೇ ಅಪರಾಧ ಎಂಬಂತಹ ಮನಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಹಲವಾರು ಪೂರ್ವಾಗ್ರಹ ಪೀಡಿತ ಕ್ರಮಗಳನ್ನು ಜರುಗಿಸಲು ಮುಂದಾಗಿದೆ.
ವಿಪರ್ಯಾಸವೆಂದರೆ ಪೌರತ್ವ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ನಡೆದ ಶಾಂತಿಯುತ ಚಳುವಳಿಯನ್ನು, ದೆಹಲಿಯ ಗಲಭೆಯ ಜೊತೆಗೆ ಜೋಡಿಸಲು ಆ ಮೂಲಕ ಹೋರಾಟಗಾರರ ವಿರುದ್ಧ ಸೇಡಿಗೆ ಕೇಂದ್ರ ಮುಂದಾಗಿದೆ.
ಆದರೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಶಾಂತಿಯುತ ಚಳುವಳಿಯಾಗಿದ್ದು, ಭಾರತದ ಪೌರತ್ವ ಕಾನೂನುಗಳನ್ನು ಕೋಮುಗೊಳಿಸುವ ಪ್ರಯತ್ನಗಳನ್ನು ವಿರೋಧಿಸುವ ಮತ್ತು ಆ ಮೂಲಕ ಭಾರತೀಯ ಜಾತ್ಯತೀತತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮಗಳ ವಿರುದ್ಧ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಗಮನಾರ್ಹ ಹಿನ್ನಡೆ ಎನ್ನದೆ ಬೇರೆ ವಿಧಿ ಇಲ್ಲ.