ಸಂಪುಟ ಪುನರ್ ರಚನೆಯ ತಿಕ್ಕಾಟದ ನಡುವೆ ಕುಂದಾ ನಗರಿ ಬೆಳಗಾವಿಯಲ್ಲಿ ಶನಿವಾರ ರಾತ್ರಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಸಚಿವ ಸ್ಥಾನಾಕಾಂಕ್ಷಿಗಳಿಗೆ ನಿರಾಶಾದಾಯಕ ಸಂದೇಶ ನೀಡಿದೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಮೊಟ್ಟಮೊದಲ ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖವಾಗಿ ಸಂಪುಟ ಪುನರ್ ರಚನೆ ಬಿಕ್ಕಟ್ಟು, ನಿಗಮ ಮಂಡಳಿ ನೇಮಕದ ಮುಖ್ಯಮಂತ್ರಿಗಳ ಏಕಪಕ್ಷೀಯ ನಿರ್ಧಾರ ಪಕ್ಷದಲ್ಲಿ ಹುಟ್ಟಿಸಿರುವ ಅಸಮಾಧಾನ, ಸರ್ಕಾರ ಮತ್ತು ಸಂಪುಟದ ವಿಷಯದಲ್ಲಿ ಪಕ್ಷದ ನಾಯಕರು ನೀಡುತ್ತಿರುವ ಬಹಿರಂಗ ಹೇಳಿಕೆಗಳಿಂದ ಪಕ್ಷದ ಸಂಘಟನೆಯ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಚರ್ಚಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯವಾಗಿ ಸಭೆಗೆ ಮುನ್ನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಅರುಣ್ ಸಿಂಗ್, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ವಿಷಯದಲ್ಲಿ ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳಿಗೆ ನೀಡಿದ ಸಂದೇಶವನ್ನು ಮನವರಿಕೆ ಮಾಡಿದರು. ಆ ಸಂದೇಶದ ಪ್ರಕಾರ ಸದ್ಯ ಗ್ರಾಮ ಪಂಚಾಯ್ತಿ ಚುನಾವಣೆಗೆ ಮುನ್ನ ಯಾವುದೇ ರೀತಿಯಲ್ಲೂ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ಪ್ರಯತ್ನಗಳಿಗೆ ಕೈಹಾಕುವುದು ಬೇಡ. ಚುನಾವಣೆಗಳ ಬಳಿಕ ಕಾದುನೋಡಿ ಪಕ್ಷದ ಸಂಘಟನೆ ಮತ್ತು ಸರ್ಕಾರದ ಕಾರ್ಯನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಯಾರಿಗೆ ಸ್ಥಾನ ನೀಡಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬುದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ. ಅದು ಸ್ವತಃ ಸಿಎಂ ಅವರ ಹಿತಕಾಯುವ ಉದ್ದೇಶದಿಂದಲೇ ಕೈಗೊಳ್ಳಲಾಗುವ ನಿರ್ಧಾರವಾಗುತ್ತದೆ. ಹಾಗಾಗಿ ಅಲ್ಲಿಯವರೆಗೆ ಸ್ವತಃ ಸಿಎಂ ಮತ್ತು ಸ್ಥಾನಾಕಾಂಕ್ಷಿಗಳು ತಾಳ್ಮೆಯಿಂದ ಇರಬೇಕು. ಇಲ್ಲವಾದಲ್ಲಿ ಗ್ರಾಮಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಒಂದು ಅಪೂರ್ವ ಅವಕಾಶವಾಗಿರುವ ಪಂಚಾಯ್ತಿ ಚುನಾವಣೆಯ ಮೇಲೆ ಸಂಪುಟ ವಿಷಯ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದೂ ಸೇರಿದಂತೆ ಹಲವು ಸೂಕ್ಷ್ಮಗಳನ್ನು ಅರುಣ್ ಸಿಂಗ್, ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿದರು ಎನ್ನಲಾಗಿದೆ.
ಬಳಿಕ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಪುಟ ವಿಷಯ ಹೆಚ್ಚು ಚರ್ಚೆಯಾಗಲಿಲ್ಲ. ಬದಲಿಗೆ ಆ ವಿಷಯಕ್ಕೆ ಸಂಬಂಧಿಸಿದಂತೆ ವರಿಷ್ಠರ ಸಂದೇಶವನ್ನು ಸಭೆಗೆ ತಿಳಿಸಿ, ಸಂಪುಟದ ವಿಷಯದಲ್ಲೇ ಆಗಲೀ, ಮುಖ್ಯಮಂತ್ರಿಗಳು ಮತ್ತು ಅವರ ಆಡಳಿತದ ವಿಷಯದಲ್ಲೇ ಆಗಲೀ ಪಕ್ಷದ ಸಚಿವರು, ಶಾಸಕರು ಸೇರಿದಂತೆ ಯಾವುದೇ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಸಂಪುಟ ವಿಸ್ತರಣೆ- ಪುನರ್ ರಚನೆಯಂತಹ ವಿಷಯ ಪಕ್ಷದ ಆಂತರಿಕ ವಿಷಯ. ಹಾಗಾಗಿ ಅಂತಹ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸುವುದು ಪಕ್ಷದ ವರ್ಚಸ್ಸಿಗೆ ಪೆಟ್ಟು ಕೊಡಲಿದೆ. ಈಗಾಗಲೇ ಸಾಕಷ್ಟು ಹಿರಿಯ ನಾಯಕರು ಇಂತಹ ಹೇಳಿಕೆಗಳ ಮೂಲಕ ಮುಜುಗರ ತಂದಿದ್ದಾರೆ. ಆದರೆ, ಇನ್ನು ಇಂತಹ ಹೇಳಿಕೆಗಳನ್ನು ಪಕ್ಷದ ವರಿಷ್ಠರು ಹಗುರವಾಗಿ ಪರಿಗಣಿಸುವುದಿಲ್ಲ. ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹೇಳುವ ಮೂಲಕ, ಸಂಪುಟ ವಿಷಯದಲ್ಲಿ ಪಕ್ಷದ ಮುಖಂಡರ ಬಾಯಿಗೆ ಬೀಗ ಹಾಕುವ ಕಟು ಎಚ್ಚರಿಕೆ ನೀಡಲಾಯಿತು.
ಸಭೆಯಲ್ಲಿ ಪ್ರಮುಖವಾಗಿ ನಿಗಮ ಮಂಡಳಿ ನೇಮಕದ ವಿಷಯದಲ್ಲಿ ಮುಖ್ಯಮಂತ್ರಿಗಳ ಏಕಪಕ್ಷೀಯ ವರಸೆಯ ಬಗ್ಗೆ ಕೋರ್ ಕಮಿಟಿ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದರು. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಬಿಟ್ಟು ತಮ್ಮ ಮನಸ್ಸಿಗೆ ತೋಚಿದವರನ್ನು ನೇಮಕ ಮಾಡುವ ಮೂಲಕ ಸಂಘಟನೆಗೆ ಪೆಟ್ಟು ಬಿದ್ದಿದೆ. ನೇಮಕದ ವೇಳೆ ಹಿರಿಯ ಸಚಿವರ ಮಾತಿಗೇ ಬೆಲೆ ಸಿಕ್ಕಿಲ್ಲ. ಹಾಗಾಗಿ ನಿಗಮ ಮಂಡಳಿ ನೇಮಕದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಒಕ್ಕೊರಲಿನಿಂದ ಕೋರ್ ಕಮಿಟಿ ಒತ್ತಾಯಿಸಿತು. ಆಗ ಮಧ್ಯಪ್ರವೇಶಿಸಿದ ಸಿಎಂ, ಕೆಲವು ತಪ್ಪುಗಳಾಗಿರಬಹುದು. ಆದರೆ, ನೇಮಕಾತಿ ಮುಗಿದುಹೋಗಿಲ್ಲ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಇನ್ನಷ್ಟು ನಿಗಮ-ಮಂಡಳಿ, ವಿವಿಧ ಜಿಲ್ಲಾ ಸಮಿತಿಗಳ ನೇಮಕದ ವೇಳೆ ಎಲ್ಲರ ವಿಶ್ವಾಸ ಪಡೆದು ಮಾಡಲಾಗುವುದು ಎಂದು ಸಮಾಧಾನಪಡಿಸಿದರು ಎನ್ನಲಾಗಿದೆ.
ಹಾಗೇ ಮರಾಠ ಮತ್ತು ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ- ನಿಗಮಗಳ ರಚನೆಯ ವಿಷಯದಲ್ಲಿ ಕೂಡ ಕೋರ್ ಕಮಿಟಿಯಲ್ಲಿ ಬಿರುಸಿನ ಚರ್ಚೆ ನಡೆಯಿತು. ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುವ ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯಾಗಬೇಕಿತ್ತು. ಅಂತಹ ಮಹತ್ವದ ನಿರ್ಧಾರಗಳ ಸಾಧನ-ಬಾಧಕ ಕುರಿತು ಪಕ್ಷದ ಉನ್ನತ ಸಮಿತಿಯಲ್ಲಿ ಚರ್ಚಿಸದೇ ಮುಖ್ಯಮಂತ್ರಿಗಳು ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡು ಏಕಾಏಕಿ ಘೋಷಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು ಎಂದು ಮೂಲಗಳು ಖಚಿತಪಡಿಸಿವೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ, ಅರುಣ್ ಸಿಂಗ್ ಕೂಡ, ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಚರ್ಚೆ ಬಳಿಕ ನಿರ್ಧಾರ ಮಾಡಲಿದ್ದೇವೆ. ಆ ಕುರಿತ ವರಿಷ್ಠರ ಸಂದೇಶದ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಏನೆಲ್ಲಾ ಚರ್ಚೆ ನಡೆಯಿತು, ಏನು ತೀರ್ಮಾನವಾಯಿತು ಎಂಬುದು ಪಕ್ಷದ ಆಂತರಿಕ ವಿಷಯ. ಹಾಗಾಗಿ ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾಗೇ, ಬಿಜೆಪಿ ಕೋರ್ ಕಮಿಟಿ ಎರಡು ಪ್ರಮುಖ ನಿರ್ಣಯ ಕೈಗೊಂಡಿದ್ದು, ಲವ್ ಜಿಹಾದ್, ಗೋ ಹತ್ಯೆ ನಿಷೇಧ ಬಲವಾದ ಕಾನೂನು ತರಲು ಚರ್ಚಿಸಲಾಗಿದೆ. ಇನ್ನುಳಿದಂತೆ ಸಂಪುಟದ ಕುರಿತು, ಗ್ರಾಮ ಪಂಚಾಯ್ತಿ ಚುನಾವಣೆ ಕುರಿತು ಚರ್ಚಿಸಲಾಯಿತು ಎಂದು ಕೋರ್ ಕಮಿಟಿ ಸದಸ್ಯರಾದ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಒಟ್ಟಾರೆ, ಶನಿವಾರ ರಾತ್ರಿಯ ಕೋರ್ ಕಮಿಟಿ ಸಭೆಯಲ್ಲಿ ಸಚಿವಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿಲ್ಲ. ಭಾನುವಾರ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ನಡೆಯಲಿರುವ ಚರ್ಚೆಗಳ ಬಗ್ಗೆ ಈಗ ಎಲ್ಲರ ಗಮನ ಕೇಂದ್ರೀಕರಿಸಿದೆ.