ಕೋವಿಡ್-19 ನಲ್ಲಿ ಚೀನಾ ಹಿಂದಿಕ್ಕಿರುವ ಭಾರತ ಏರುಗತಿಯಲ್ಲಿಯೇ ಸಾಗುತ್ತಿದೆ. ಇನ್ನೊಂದೆಡೆ ಗುಣಮುಖರಾಗುವವರ ಸಂಖ್ಯೆಯೂ ಏರಿಕೆಯಾಗಿರುವುದು ಸಮಾಧಾನ ತಂದಿದೆ. ಆದರೆ ಕರೋನಾದಿಂದಾಗಿ ದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನ ಸರಿಪಡಿಸಲು ಕೇಂದ್ರ ಸರಕಾರ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳುವ ಅನಿವಾರ್ಯತೆಯಿದೆ. ಮೇ ತಿಂಗಳ 25 ನೇ ತಾರೀಕಿನಂದು ಮೂರು ವೃತ್ತಿಪರ ವೈದ್ಯಕೀಯ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿ ಹೇಳಿಕೆಯೊಂದನ್ನು ಸಲ್ಲಿಸಿದ್ದು, ಅದರಲ್ಲಿ ಸರಕಾರ ಕರೋನಾ ಸಾಂಕ್ರಾಮಿಕ ರೋಗ ನಿಭಾಯಿಸುವ ರೀತಿ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡಿದೆ.
ಈ ಹೇಳಿಕೆಯ ಪತ್ರದಲ್ಲಿ ಸಹಿ ಮಾಡಿರುವುದರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಮಾಜಿ ಸಲಹೆಗಾರರು, ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ವೈದ್ಯಕೀಯ ಹಾಗೂ ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳ ಹಾಲಿ ಹಾಗೂ ನಿವೃತ್ತ ಪ್ರಾಧ್ಯಾಪಕರು ಸೇರಿದ್ದಾರೆ. ಸಹಿ ಮಾಡಿರುವ ಎಲ್ಲಾ ತಜ್ಷರು ಭಾರತೀಯ ಸಾರ್ವಜನಿಕ ಆರೋಗ್ಯ ಸಂಘ ಹಾಗೂ ಸಾಂಕ್ರಾಮಿಕ ರೋಗ ತಡೆ ಸಂಬಂಧಿತ ಭಾರತೀಯ ವೈದ್ಯಕೀಯ ಸಂಘಗಳ ಸದಸ್ಯರೂ ಆಗಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಡಿಸಿಎಸ್ ರೆಡ್ಡಿ ಸಹಿ ಮಾಡಿದ್ದು, ಇವರನ್ನ ಸರಕಾರ ಜಾರಿಗೆ ತಂದ ಟಾಸ್ಕ್ ಫೋರ್ಸ್ ನ ಮುಖ್ಯಸ್ಥರನ್ನಾಗಿ ಕಳೆದ ಎಪ್ರಿಲ್ 6 ನೇ ತಾರೀಕಿನಂದೇ ಆಯ್ಕೆ ಮಾಡಲಾಗಿದೆ. ಇನ್ನೊಬ್ಬರು ಡಾ. ಶಶಿಕಾಂತ್, ಇವರು ದೆಹಲಿಯ ಏಮ್ಸ್ ಆಸ್ಪತ್ರೆಯ Centre for Community Medicine ಮುಖ್ಯಸ್ಥರಾಗಿದ್ದಾರೆ.
ಪತ್ರದಲ್ಲಿ ಪ್ರಮುಖವಾಗಿ ಶಿಫಾರಸ್ಸು ಮಾಡಿರುವ ವಿಚಾರಗಳೇನೆಂದರೆ:
ಪ್ರಸ್ತುತ ಕರೋನಾ ವೈರಸ್ ನಿಂದ ಆಗಿರುವ ಸೋಂಕಿತರ ಸಂಖ್ಯೆ ಹಾಗೂ ಸಾವಿಗೀಡಾದವರ ಸಂಖ್ಯೆಯನ್ನು ಉಲ್ಲೇಖಿಸಿರುವ ಪತ್ರದಲ್ಲಿ ದೇಶದಲ್ಲಿ ಸದ್ಯಕ್ಕೆ ಎದುರಾದ ಆರ್ಥಿಕ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದ 114 ಮಿಲಿಯನ್ ಮಂದಿ ನಿರುದ್ಯೋಗಿಯಾಗಿದ್ದು, ಅದರಲ್ಲೂ 91 ಮಿಲಿಯನ್ ದಿನಗೂಲಿ ನೌಕರರು ಹಾಗೂ 17 ಮಿಲಿಯನ್ ಸಂಬಳ ಪಡೆಯುವವರಾಗಿದ್ದಾರೆ. ದೇಶಾದ್ಯಂತ 2,71,000 ಫ್ಯಾಕ್ಟರಿಗಳು ಹಾಗೂ 65-70 ಮಿಲಿಯನ್ ಸಣ್ಣ ಹಾಗೂ ಮೈಕ್ರೋ ಸಂಸ್ಥೆಗಳು ಸ್ಥಗಿತಗೊಂಡಿದೆ.
ಜನವರಿ 30 ರಂದು ಮೊದಲ ಸೋಂಕು ಪತ್ತೆಯಾದರೂ, ಸೋಂಕು ಏರಿಕೆಯಾಗದ ಹೊರತು ಯಾವುದೇ ಸಾರ್ವಜನಿಕ ಜೀವನವನ್ನ ನಿರ್ಬಂಧಿಸಲಾಗಿರಲಿಲ್ಲ. ಮಾತ್ರವಲ್ಲದೇ ʼವೈರಸ್ ಜೊತೆಗೆ ಬದುಕುʼ ಅನ್ನೋ ಧೋರಣೆಯನ್ನೇ ಇಲ್ಲಿನ ಆಸ್ಪತ್ರೆ, ಪ್ರಯೋಗಾಲಯಗಳು ಸೂಚಿಸುತ್ತಿದೆ. ಇನ್ನೊಂದೆಡೆ ಕರೋನಾ ಸಂಬಂಧಿತ ಅಂಕಿ ಅಂಶಗಳನ್ನ ವಿಜ್ಞಾನಿಗಳು, ಸಾರ್ವಜನಿಕ ಆರೋಗ್ಯ ವೃತ್ತಿಪರರ ಹಾಗೂ ಸಾರ್ವಜನಿಕರ ಜೊತೆ ಪಾರದರ್ಶಕವಾಗಿ ಹಂಚಿಕೊಳ್ಳಬೇಕಿದೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಅದನ್ನ ತಕ್ಷಣ ಜಾರಿಗೊಳಿಸಿದ್ದಲ್ಲಿ ನಿಯಂತ್ರಣಕ್ಕೆ ಪೂರಕವಾಗಬಹುದು.
ಇನ್ನು ಮಾರ್ಚ್ 23ರಿಂದ ಆರಂಭವಾದ ಲಾಕ್ಡೌನ್ ಕುರಿತಾಗಿ ಉಲ್ಲೇಖಿಸಿರುವ ಪತ್ರವು, ಮಾರ್ಚ್ 25 ರಿಂದ ಮಾರ್ಚ್ 30ರ ವರೆಗೆ ಲಾಕ್ಡೌನ್ ಕಠಿಣವಾಗಿದ್ದು ಈ ಸಂದರ್ಭದಲ್ಲಿ ದೇಶದಲ್ಲಿ 606 ಕೇಸುಗಳು ದಾಖಲಾಗಿದ್ದವು. ಆದರೆ ಮಾರ್ಚ್ 25 ರಿಂದ ಮೇ 24 ರವರೆಗೆ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 1,38,845 ಆಗಿದೆ. ಮಾತ್ರವಲ್ಲದೇ ಭಾರತ ಮಾನವೀಯ ಬಿಕ್ಕಟ್ಟು ಹಾಗೂ ಅತೀ ವೇಗದ ರೋಗ ಹರಡುವಿಕೆಗೆ ಒಳಗಾಗಿದ್ದು ಈ ಎರಡೂ ಬಿಕ್ಕಟ್ಟು ಭಾರತಕ್ಕೆ ಹೆಚ್ಚಿನ ಹೊರೆಯಾಯಿತು. ಬಹುತೇಕ ಕೋವಿಡ್-19 ಸೋಂಕಿಗೆ ಒಳಗಾದವರು ರೋಗದ ಆರಂಭಿಕ ಲಕ್ಷಣಗಳನ್ನೇ ಹೊಂದಿಲ್ಲದಿರುವವರೂ ಆಗಿದ್ದರು. ಇನ್ನೂ ಕೆಲವರಿಗೆ ಸಣ್ಣದಾಗಿ ಕಾಣಿಸಿಕೊಂಡರೆ, ಪ್ರಾಣಕ್ಕೆ ಕಂಟಕವಾಗಲಿಲ್ಲ. ಬಹುತೇಕ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಷ್ಟರ ಮಟ್ಟಿಗೂ ಕೋವಿಡ್-19 ಅಷ್ಟೊಂದು ತೀವ್ರವಾಗಿ ಕಾಣಿಸಿಕೊಳ್ಳದಿರುವುದು ಕೂಡಾ ಗಮನಾರ್ಹ.
ಕೋವಿಡ್-19 ಆರಂಭದ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ತವರು ರಾಜ್ಯಗಳಿಗೆ ತೆರಳಲು ಅವಕಾಶ ನೀಡಬೇಕಿತ್ತು. ಏಕೆಂದರೆ ಆಗ ದೇಶಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ಬಹಳಷ್ಟು ಕಡಿಮೆಯಿತ್ತು. ಆದರೆ ಇದೀಗ ವಲಸೆ ಕಾರ್ಮಿಕರಿಗೆ ತಮ್ಮ ತವರುಗಳಿಗೆ ಹೋಗಲು ಅವಕಾಶ ನೀಡಲಾಗಿದ್ದು, ಇನ್ನೊಂದೆಡೆ ಕೋವಿಡ್-19 ರೋಗವು ತಾಂಡವವಾಡುತ್ತಿದೆ. ಇದರಿಂದಾಗಿ ವಲಸೆ ಕಾರ್ಮಿಕರಿಂದ ಕರೋನಾ ಸೋಂಕು ಗ್ರಾಮೀಣ ಭಾಗಕ್ಕೂ ತಲುಪುವಂತಾಗಿದೆ.
ಆದ್ದರಿಂದ ದೇಶದಲ್ಲಿ ಕೋವಿಡ್-19 ದೂರ ಮಾಡಬಹುದು ಅನ್ನೋದೆ ಅವಾಸ್ತವಿಕತೆಯಾಗಬಹುದು. ಏಕೆಂದರೆ ಈಗಾಗಲೇ ದೇಶದ ಹಲವೆಡೆ ಸೋಂಕು ಮೂರನೇ ಹಂತ ತಲುಪಿಯಾಗಿದೆ. ಈ ಸಂದರ್ಭದಲ್ಲಿ ಉತ್ತಮವಾದ ಚಿಕಿತ್ಸೆ ಅಗತ್ಯವಿದ್ದು, ಭವಿಷ್ಯದಲ್ಲಾಗಬಹುದಾದ ಪರಿಣಾಮವನ್ನೂ ಅದು ತಡೆಗಟ್ಟಬೇಕಿದೆ. ದೇಶದಲ್ಲಿ ಕಠಿಣ ಲಾಕ್ಡೌನ್ ಇದ್ದ ಮೇಲೂ ಸೋಂಕು ಹರಡಿತ್ತು ಅಂತಾದರೆ, ಲಾಕ್ಡೌನ್ ಜಾರಿಯಲ್ಲಿ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಿರುವುದು ಕಾಣಿಸುತ್ತದೆ.
ಭಾರತದಂತಹ ದೇಶದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲೂ ವೈಜ್ಞಾನಿಕ ರೀತಿಯಲ್ಲಿ ಸೋಂಕು ನಿಯಂತ್ರಿಸುವ ಅಗತ್ಯವಿದೆ. ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರಿಗೆ ಆರೋಗ್ಯ ಪರೀಕ್ಷೆಯ ಅಗತ್ಯವಿದೆ. ಆದ್ದರಿಂದ ಪ್ರಮುಖ ಹನ್ನೊಂದು ವಿಚಾರಗಳನ್ನ ನಾವು ನಿಮಗೆ ತಿಳಿಯಪಡಿಸಲು ಬಯಸುತ್ತೇವೆ ಎಂದು ವೈದ್ಯಕೀಯ ಸಂಸ್ಥೆಗಳ ಪ್ರಮುಖರು ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ.
ಮೊದಲನೆಯದಾಗಿ, ಸಾರ್ವಜನಿಕ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟುಗಳನ್ನು ಪರಿಹರಿಸಲು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಸುರಕ್ಷತೆ ಮತ್ತು ತಡೆಗಟ್ಟುವ ಆರೋಗ್ಯ ತಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳ ಸಮಿತಿಯನ್ನು ರಚಿಸಬೇಕು.
ಎರಡನೆಯದಾಗಿ, ಕೋವಿಡ್-19 ಸಂಬಂಧಿತ ಪಾರದರ್ಶಕ ಅಂಕಿ ಅಂಶಗಳನ್ನ ಸಾರ್ವಜನಿಕರ ಹಾಗೂ ಆರೋಗ್ಯ ಸೇವಾ ಆಯೋಗಗಳ ಮುಂದೆ ಇಡಬೇಕು. ಇದರಿಂದ ಸ್ವತಂತ್ರವಾಗಿ ತನಿಖೆ ನಡೆಸುವ ಸಂಶೊಧಕರಿಗೆ ಇದು ಹೆಚ್ಚಿನ ಅನುಕೂಲ ಒದಗಿಸುತ್ತದೆ. ಇದುವರೆಗೆ ಅಂತಹ ಪಾರದರ್ಶಕ ದತ್ತಾಂಶಗಳ ಅಲಭ್ಯತೆಯೂ ಸ್ವತಂತ್ರ ಸಂಶೋಧಕರಿಗೆ ಅಡ್ಡಿಯಾಗುತ್ತಾ ಬಂದಿದೆ.
ಇನ್ನು ಲಾಕ್ಡೌನ್ ತೆರವುಗೊಳಿಸಿ, ಕ್ಲಸ್ಟರ್ ಮಟ್ಟದಲ್ಲಿ ನಿರ್ಬಂಧಗಳನ್ನ ವಿಧಿಸಬೇಕು. ದೇಶಾದ್ಯಂತ ಲಾಕ್ಡೌನ್ ಅಗತ್ಯವಿಲ್ಲದಿರುವುದರಿಂದ ಅದನ್ನ ತೆರವುಗೊಳಿಸುವ ಮೂಲಕ ಎಲ್ಲೆಲ್ಲ ಸಾಂಕ್ರಾಮಿಕ ರೋಗ ಅತಿಯಾಗಿದೆಯೋ ಅಲ್ಲೆಲ್ಲ ನಿರ್ಬಂಧ ವಿಧಿಸಬೇಕು.
ಜೊತೆಗೆ, ಎಲ್ಲಾ ಆರೋಗ್ಯ ಸೇವಾ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳು ಸಾರ್ವಜನಿಕರ ಸೇವೆಗಾಗಿ ತೆರೆಯಬೇಕಿದೆ. ಅಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷತಾ ವಿಧಾನಗಳನ್ನ ಪಾಲಿಸುವಂತೆ ತಿಳಿಸಬೇಕು. ಪ್ರಾಥಮಿಕ, ದ್ವಿತೀಯ ಹಾಗೂ ಎಲ್ಲಾ ಹಂತಗಳ ಚಿಕಿತ್ಸಾ ಕೇಂದ್ರಗಳನ್ನ ಸಾರ್ವಜನಿಕರ ಉಪಯೋಗಕ್ಕಾಗಿ ತೆರೆಯಲಿ. ಇದರಿಂದಾಗಿ ಇನ್ನಿತರ ತೀವ್ರ ಥರದ ರೋಗದಿಂದ ಬಳಲುವವರಿಗೆ ಹೆಚ್ಚಿನ ಅನುಕೂಲವಾಗುವುದು. ಟಿಬಿ,ಹೃದಯ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗುತ್ತದೆ.
ಇನ್ನು ಪ್ರಮುಖವಾಗಿ ಕರೋನಾ ಸೋಂಕು ಸಾಂಕ್ರಾಮಿಕ ರೋಗವಾಗಿರುವದರಿಂದ ಮತ್ತು ವೈರಸ್ನಿಂದ ಹರಡುವುದರಿಂದ ಈ ಕುರಿತ ಸಾರ್ವಜನಿಕ ಜಾಗೃತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ. ಸಾರ್ವಜನಿಕ ಓಡಾಟದಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಸುವುದು, ಕೈ ತೊಳೆದುಕೊಳ್ಳುವುದು (ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸೋಪ್ ನಿಂದ ಹಾಗೂ ಸೋಂಕು ತಡೆಗಟ್ಟಲು ಬೇಕಾದ ಎಲ್ಲಾ ಮುಂಜಾಗೃತ ಕ್ರಮಗಳನ್ನ ಅನುಸರಿಸುವುದನ್ನ ಸಾರ್ವಜನಿಕರಿಗೆ ತಿಳಿಸಬೇಕಿದೆ.
ಮಾತ್ರವಲ್ಲದೇ, ಸಾಮಾಜಿಕ ಬಂಧದೊಂದಿಗೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಈ ಮೂಲಕ ಸಾಮಾಜಿಕ ಕಳಂಕವೊಂದನ್ನ ತೊಡೆದು ಹಾಕಬೇಕು. ಒಂದು ವೇಳೆ ಕ್ವಾರೆಂಟೈನ್ ಅವಧಿ ಮುಗಿದಿದ್ದರೂ ದೈಹಿಕ ಅಂತರ ಕಾಪಾಡಲೇಬೇಕು. ಗುಂಪಾಗಿ ಸೇರುವುದನ್ನು ನಿರ್ಬಂಧಿಸಬೇಕು. ಇದರಿಂದಾಗಿ ಸರಕಾರ, ಮಾಧ್ಯಮ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಯು ಈ ಕುರಿತು ಮಾಹಿತಿಯನ್ನ ಹೆಚ್ಚು ಗೌರವಯುತವಾಗಿಯೇ ನೀಡಬೇಕು.
ಇನ್ನು ಹಾಟ್ ಸ್ಪಾಟ್ ಅಥವಾ ಕ್ಲಸ್ಟರ್ ವಲಯಗಳನ್ನಾಗಿ ವಿಭಜಿಸಿ ಸಕ್ರಿಯ ಕಣ್ಗಾವಲು ಇರಿಸಬೇಕು. ಇಂತಹ ಪ್ರದೇಶಗಳ ಪ್ರತಿದಿನ ಸೋಂಕು ಪೀಡಿತರ ವರದಿ ತಯಾರಿಸುವುದು. ಇದಕ್ಕೆ ಪೂರಕ ಮೆಡಿಕಲ್ ಕಾಲೇಜು ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬೆಂಬಲವನ್ನ ಪಡೆಯಬೇಕು.
ದೇಶದ ಹಲವು ರಾಜ್ಯಗಳು ಸೋಂಕು ಪತ್ತೆ ಹಚ್ಚುವಿಕೆಯಲ್ಲಿ ಭಾರೀ ಹಿಂದೆ ಬಿದ್ದಿದೆ. ಅದರ ಪರಿಣಾಮ ಸೋಂಕು ಹೆಚ್ಚುತ್ತಲೇ ಇದೆ. ಆದ್ದರಿಂದ ಅಂತಹ ರಾಜ್ಯಗಳಲ್ಲಿ ಸರಕಾರ ಖಾಸಗಿ ಲ್ಯಾಬ್ಗಳಲ್ಲೂ ಉಚಿತ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಅಲ್ಲದೇ ವಾಪಾಸ್ ಹಿಂತಿರುಗಿ ಬಂದ ವಲಸೆ ಕಾರ್ಮಿಕರನ್ನು ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಬೇಕು. ಆದ್ದರಿಂದ ಸರಕಾರ ಪರೀಕ್ಷೆ, ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆ ನೀಡಿಸುವಿಕೆ ಕ್ರಮವನ್ನ ಪಾಲಿಸಬೇಕು.
ಅಲ್ಲದೇ ತೀವ್ರ ನಿಗಾ ಘಟಕವುಳ್ಳ ಆಸ್ಪತ್ರೆಗಳನ್ನ ಇನ್ನಷ್ಟು ಬಲಪಡಿಸಬೇಕು. ಅಂತಹ ಅವಕಾಶವುಳ್ಳ ಆಸ್ಪತ್ರೆಗಳಲ್ಲಿ ಅಗತ್ಯ ಆರೋಗ್ಯ ಪರಿಕರಗಳನ್ನ ಸರಕಾರ ಒದಗಿಸಬೇಕು. ಸೋಂಕಿನ ಲಕ್ಷಣ ಗೋಚರಿಸುತ್ತಲೇ ಅಂತಹವರಿಗೆ ಇಂತಹ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಾಗಬೇಕು. ಆಕ್ಸಿಜನ್ ಹಾಗೂ ಇನ್ನಿತರ ಪೂರಕವಾದ ವೈದ್ಯಕೀಯ ಸಲಕರಣೆಯನ್ನು ಒದಗಿಸಬೇಕು. ಮುಂಬೈಯಲ್ಲಿ ಮಾದರಿಯಲ್ಲಿಯೇ ದೇಶದ ಇನ್ನಿತರ ನಗರಗಳಲ್ಲೂ ತೀವ್ರ ನಿಗಾ ಘಟಕವನ್ನು ಬಲಪಡಿಸಬೇಕು.
ಇನ್ನು ಕೋವಿಡ್-19 ವಿರುದ್ಧದ ಹೋರಾಟ ಅನ್ನೋದು ವೈದ್ಯಕೀಯ ಸಿಬ್ಬಂದಿಗಳಿಗೆ ಸಾಕಷ್ಟು ಚಾಲೆಂಜಿಂಗ್ ಆಗಿದ್ದು, ಸರಕಾರ ಅಂತಹ ಆರೋಗ್ಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಗಳನ್ನ ಒದಗಿಸಬೇಕು. ಯಾರೆಲ್ಲಾ ಕೋವಿಡ್-19 ವಿರುದ್ಧ ಮುಂದಿನ ಸಾಲಿನಲ್ಲಿ ನಿಂತು ಹೋರಾಟ ನಿರತರಾಗಿದ್ದಾರೋ ಅವರೆಲ್ಲರಿಗೂ ಪಿಪಿಇ ಕಿಟ್ಗಳು ಸಿಗುವಂತಾಗಬೇಕು. ಅಲ್ಲದೇ ಒದಗಿಸಲಾದ ಪಿಪಿಇ ಕಿಟ್ಗಳು ಗುಣಮಟ್ಟದ್ದಾಗಿದ್ದು, ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗಳಲ್ಲೂ ಆತ್ಮ ವಿಶ್ವಾಸವನ್ನ ಹೆಚ್ಚಿಸಬೇಕು. ಅಲ್ಲದೇ ದೇಶದಲ್ಲಿಯೇ ಪಿಪಿಇ ಕಿಟ್ ಗಳನ್ನು ಇನ್ನಷ್ಟು ತಯಾರಿಕೆಗೆ ಒತ್ತು ನೀಡಬೇಕು.
ಇನ್ನು ಕೊನೆಯದಾಗಿ, ಸಾರ್ವಜನಿಕ ಆರೋಗ್ಯದ ಬಗ್ಗೆ ವ್ಯವಸ್ಥಿತವಾಗಿ ನಿರ್ಲಕ್ಷ್ಯ ತಾಳಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಂಡಂತಿಲ್ಲ. ಆದ್ದರಿಂದ ಕ್ಷಿಪ್ರವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಾರ್ವಜನಿಕ ಆರೋಗ್ಯಕ್ಕಾಗಿ ಹಾಗೂ ಸಂಶೋಧನೆಗಾಗಿ ಜಿಡಿಪಿಯ ಶೇಕಡಾ 5 ರಷ್ಟು ನೆರವನ್ನ ಒದಗಿಸಬೇಕು.
ಇಂತಹ ಹನ್ನೊಂದು ಪ್ರಮುಖ ವಿಚಾರಗಳನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಜ್ಞರು ಪತ್ರ ಬರೆದು ವಿನಂತಿಸಿದ್ದಾರೆ. ಅಲ್ಲದೇ ಕನಿಷ್ಟ ಮಟ್ಟಿನ ಸಾವು ಹಾಗೂ ಸಾಮಾಜಿಕ, ಆರ್ಥಿಕ ಪುನರ್ ರಚನೆ ಇದು ಹೆಚ್ಚು ವೈಜ್ಞಾನಿಕ ಹಾಗೂ ಮಾನವೀಯ ನೀತಿಯ ಸಲಹೆಗಳಾಗಿದ್ದಾವೆ. ಈಗಾಗಲೇ ಕೋವಿಡ್-19 ವಿಚಾರದಲ್ಲಿ ಪ್ರಕೃತಿ ಎಚ್ಚರಿಕೆಯನ್ನ ನೀಡಿದೆ. ಆದ್ದರಿಂದ ʼವಸುಧೈವ ಕುಟುಂಬಕಂʼ ಅನ್ನೋ ಪರಿಕಲ್ಪನೆಯಡಿ ಕರೋನೋತ್ತರ ಜಗತ್ತಿನಲ್ಲೂ ಮನುಷ್ಯರು ಹಾಗೂ ಇತರೆ ಜೀವ ಸಂಕುಲಗಳು ಒಂದಾಗಿ ಜೀವನ ನಡೆಸುವಂತಾಗಬೇಕಿದೆ.
ಒಟ್ಟಿನಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಮುಗಿಯುವ ಹೊತ್ತಿಗೆ ಪ್ರಧಾನಿ ಮುಂದೆ ಇಷ್ಟೆಲ್ಲ ಸಲಹೆಗಳುಳ್ಳ ಪತ್ರ ಕೈ ಸೇರಿದೆ. ಲಾಕ್ಡೌನ್ ನಿಂದ ಆದ ಸಂಕಷ್ಟ ಹಾಗೂ ಸರಕಾರ ತೋರಿದ ಎಡವಟ್ಟು ಎಲ್ಲಾ ಸಮಸ್ಯೆಗಳಿಗೂ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ತಜ್ಞರು ಉತ್ತರ ಕಂಡುಕೊಂಡಿದ್ದಾರೆ. ಅದನ್ನು ದೇಶದ ಪ್ರಧಾನಿ ಮುಂದೆಯೇ ಇರಿಸಿದ್ದಾರೆ.