ಕರೋನಾ ಸೋಂಕು ಉಲ್ಬಣವಾಗುತ್ತಿದ್ದರೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ರಾಜ್ಯದ ಹಳ್ಳಿಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಕರೋನಾ ಸೋಂಕಿನ ಪರಿಣಾಮ ಅನ್ನದಾತರ ಮೇಲೆ ವ್ಯಾಪಕವಾಗಿ ಹರಡಿದೆ. ಕರೋನಾ ಲಾಕ್ಡೌನ್ ನಲ್ಲಿ ಸಿಲುಕಿರುವ ರೈತರು ತರಕಾರಿ ಸೇರಿದಂತೆ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಪರದಾಡುವ ಸ್ಥಿತಿ ಒದಗಿದೆ. ಒಂದು ವೇಳೆ ಮಾರುಕಟ್ಟೆಗೆ ಸಾಗಿಸಲು ಮುಂದಾದರೂ ಪೊಲೀಸ್ ಇಲಾಖೆಯ ಅಸಹಕಾರ ರೈತರು ಅನುಭವಿಸಬೇಕಾಗಿದೆ. ಒಂದು ವೇಳೆ ಎಲ್ಲಾ ಅಡೆತಡೆಗಳನ್ನು ದಾಟಿಕೊಂಡು ಮಾರುಕಟ್ಟೆಗೆ ಬೆಳೆಯನ್ನು ಸಾಗಿಸಿದ್ರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಜಮೀನಿನಿಂದ ಬೆಳೆಯನ್ನು ಕಟಾವು ಮಾಡಿ ಸಾಕಷ್ಟು ಕೈ ಬೆಚ್ಚಗೆ ಮಾಡಿ, ಮಾರುಕಟ್ಟೆಗೆ ಹೋದರೂ ಯಾವುದೇ ಲಾಭ ಸಿಗುವ ಭರವಸೆ ಇಲ್ಲದ ಕಾರಣಕ್ಕೆ ರೈತರ ಜಮೀನಿನಲ್ಲೇ ಬೆಳೆಯನ್ನು ಕೊಳೆಯಲು ಬಿಡುತ್ತಿದ್ದಾರೆ. ಊರುಗಳಲ್ಲಿ ಗ್ರಾಮಸ್ಥರು ತಮಗೆ ಬೇಕಾದಷ್ಟು ತರಕಾರಿಯನ್ನು ಕೊಂಡು ಹೋಗಲು ಕೆಲವು ರೈತರು ಅವಕಾಶ ಮಾಡಿಕೊಟ್ಟಿದ್ದಾರೆ.
ರೈತರು ಬೆಳೆದ ಬೆಳೆಯನ್ನು ಕರೋನಾ ಕಷ್ಟದಲ್ಲಿರುವ ಸಿಲುಕಿರುವ ರೈತರಿಗೆ ಹಂಚಿಕೆ ಮಾಡಬಹುದು ಅಲ್ಲವೇ ಎಂದು ಎಲ್ಲರೂ ಭಾವಿಸಬಹುದು. ಹೌದು, ಬೆಳೆದ ತರಕಾರಿಯನ್ನು ಹಂಚಬಹುದು. ಆದರೆ ರಾಷ್ಟ್ರೀಯ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಮಾಡಿಕೊಂಡಿರುವ ಕೈಸಾಲಗಾರರು ಕರೋನಾ ಸೋಂಕಿನ ಅವಧಿಯ ಬಡ್ಡಿಯನ್ನೂ ಬಿಡುವುದಿಲ್ಲ. ಬೆಳೆ ನಷ್ಟವಾಗಿದೆ ಎನ್ನುವ ಏಕೈಕ ಕಾರಣದಿಂದ ಸಾಲ ವಾಪಸ್ ಕೊಡುವುದು ಬೇಡ ಎನ್ನುವ ಉದಾರತೆಯನ್ನೂ ತೋರುವುದಿಲ್ಲ. ಕೇಂದ್ರ ಸರ್ಕಾರವೂ ರೈತರ ನೆರವಿಗೆ ಇಲ್ಲೀವರೆಗೂ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿದೆ. ಅದೇ ಕಾರಣಕ್ಕಾಗಿ ರೈತ ಆತ್ಮಹತ್ಯೆ ಎಂಬ ಕಠೋತ ಹಾದಿಯನ್ನು ತುಳಿದಿದ್ದಾರೆ. ಆತ್ಮಹತ್ಯೆ ಮಹಾಪಾಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕರೋನಾ ಸಂಕಷ್ಟ ಕಡಿಮೆ ಆದ ಬಳಿಕ ಸಾಲದ ಶೂಲಕ್ಕೆ ಸಿಲುಕಿ ಅವಮಾನಕ್ಕೆ ಗುರಿಯಾಗುವ ಬದಲು ಸಾವಿನ ಮನೆ ಸೇರುವ ಆತ್ಮಹತ್ಯೆ ಎಂಬ ಸಹಿಸಲಾಸಾಧ್ಯವಾದ ಕೂಪಕ್ಕೆ ತಳ್ಳಿಕೊಳ್ಳುತ್ತಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದದ ಕೇಂದ್ರ ಸರ್ಕಾರವೂ ದೇಶದ ಬೆನ್ನಲುಬು ಎನಿಸಿಕೊಂಡಿರುವ ಅನ್ನದಾತನಿಗೆ ಪಿಂಚಣಿ ಸೌಲಭ್ಯ ಸಿಗಬೇಕು ಎನ್ನುವ ಕಾರಣಕ್ಕೆ ಜಾರಿ ಮಾಡಿರುವ ಯೋಜನೆ ಇದೆ. 60 ವರ್ಷ ಆಗುವ ತನಕ ಪ್ರತಿ ತಿಂಗಳು ರೈತ 100 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾ ಹೋದರೆ, ಕೇಂದ್ರ ಸರ್ಕಾರವೂ ಕೂಡ 100 ರೂಪಾಯಿ ಹಣವನ್ನು ಅನ್ನದಾತರ ಖಾತೆಗೆ ಜಮಾ ಮಾಡುತ್ತದೆ. ಅಂತಿಮವಾಗಿ 60 ವರ್ಷ ಪೂರೈಸಿದ ಬಳಿಕ ರೈತರಿಗೆ ಪಿಂಚಣಿ ನೀಡಲಾಗುತ್ತದೆ. ಒಂದು ವೇಳೆ ಪಿಂಚಣಿ ಪಡೆಯಬೇಕಿದ್ದ ರೈತ ಸಾವನ್ನಪ್ಪಿದರೆ, ಆತನ ಮಡದಿ ಅಂದರೆ ಹೆಂಡತಿಗೆ ಪಿಂಚಣಿಯ ಅರ್ಧ ಹಣವನ್ನು ಕೊಡಲಾಗುತ್ತದೆ. ಈ ಯೋಜನೆಗೆ ಆರಂಭಿಕ ನಿಧಿಯಾಗಿ ಕೇಂದ್ರ ಸರ್ಕಾರ 5 ಕೋಟಿ ಹಣವನ್ನು ಮೀಸಲಿಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 18001 801551 ಸಂಪರ್ಕಿಸಬಹುದು.
ಪಿಎಂ ಕಿಸಾನ್ ಯೋಜನೆ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ ಅವಧಿ ಮುಗಿಸಿ 2ನೇ ಬಾರಿಗೆ ಚುನಾವಣೆಗೆ ಹೋಗುವ ವೇಳೆಯಲ್ಲಿ ಈ ಯೋಜನೆ ಜಾರಿ ಮಾಡಲಾಯ್ತು. ಈ ಯೋಜನೆಯಂತೆ ವಾರ್ಷಿಕ 6 ಸಾವಿರ ರೂಪಾಯಿ ಹಣವನ್ನು ಸಣ್ಣ ಹಿಡುವಳಿದಾರ ರೈತನ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆ ನೋಂದಣಿ ಮೇಲೆ ಈ ಸಹಾಯಧನವನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ಕೂಡ ಇದೇ ರೀತಿ ಯೋಜನೆಯನ್ನು ಘೋಷಣೆ ಮಾಡಿದೆ. ಆದ್ರೆ ಕೇಂದ್ರ ಸರ್ಕಾರ 4 ತಿಂಗಳಿಗೊಮ್ಮೆ 2 ಸಾವಿರ ಕೊಟ್ಟರೆ, ರಾಜ್ಯ ಸರ್ಕಾರ 6 ತಿಂಗಳಿಗೊಮ್ಮೆ 2 ಸಾವಿರ ಧನ ಸಹಾಯ ಮಾಡುವುದಾಗಿ ತಿಳಿಸಿದೆ. ಆದರೆ ಕೇಂದ್ರದ ಯೋಜನೆ ಜಾರಿಯಾಗಿದ್ದು, ರಾಜ್ಯದ ಯೋಜನೆಗೆ ಹಣ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಫಸಲ್ ಭೀಮಾ ಯೋಜನೆ:
ರೈತರು ಬೆಳೆದ ಬೆಳೆಗೆ ರೈತ ಮೊದಲೇ ಇಂತಿಷ್ಟು ಹಣವನ್ನು ವಿಮಾ ಕಂಪನಿಗೆ ಪಾವತಿ ಮಾಡಿದ್ದು, ಒಂದು ವೇಳೆ ಬೆಳೆ ಮಳೆ ಗಾಳಿಯಿಂದ ನಷ್ಟವಾದರೆ ಅಥವಾ ಮಳೆ ಬೀಳದೆ ಬೆಳೆ ನಷ್ಟವಾದರೆ ಅಥವಾ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿ ಉಂಟಾದರೆ ರೈತನಿಗೆ ಪರಿಹಾರದ ಮೊತ್ತ ಬರಲಿದೆ. 1 ಎಕರೆ ರಾಗಿ ಬೆಳೆಗೆ ಸುಮಾರು ಅಂದಾಜು 300 ರೂಪಾಯಿ ವಿಮೆ ಪಾವತಿ ಮಾಡಿದ್ದು, ಮಳೆ ಇಲ್ಲದೆ ಬೆಳೆ ನಷ್ಟ ಹೊಂದಿದ್ದರೆ ಸರಿ ಸುಮಾರು 15 ಸಾವಿರ ಪರಿಹಾರ ಬರಲಿದೆ. ಇದೇ ರೀತಿ ವಿವಿಧ ಬೆಳೆಗಳಿಗೆ ಪ್ರತ್ಯೇಕ ಪ್ರೀಮಿಯಂ ಇದ್ದು, ರೈತರು ಇದರ ಲಾಭ ಪಡೆಯಬಹುದು.
ಗಂಗಾ ಕಲ್ಯಾಣ, ಕೃಷಿ ಹೊಂಡ ಯೋಜನೆ:
ಇಷ್ಟು ಮಾತ್ರವಲ್ಲದೆ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಗಂಗಾ ಕಲ್ಯಾಣ ಯೋಜನೆ ಅಡಿ ದಲಿತರಿಗೆ ಕೊಳವೆ ಬಾವಿ ಕೊರೆಸಿಕೊಡಲಾಗ್ತಿತ್ತು. ಆದರೆ ಈಗಿರುವ ಬಿಜೆಪಿ ನೇತೃತ್ವದ ಸರ್ಕಾರ ಈ ಯೋಜನೆಗೆ ಅನುದಾನ ಮೀಸಲಿಡದ ಕಾರಣ ಯೋಜನೆ ಹಳ್ಳ ಹಿಡಿದಿದೆ. ಇನ್ನು ಕೃಷಿ ಹೊಂಡಗಳಿಂದಲೂ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತಿತ್ತು. ಈ ಯೋಜನೆಯಲ್ಲಿ ಸಾಕಷ್ಟು ಗೋಲ್ಮಾಲ್ ನಡೆಯುತ್ತೆ ಎನ್ನುವ ಕಾರಣದಿಂದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಯೋಜನೆಯನ್ನು ಸ್ಥಗಿತ ಮಾಡುವ ಉಮೇದಿನಲ್ಲಿದೆ. ಈ ಯೋಜನೆಯಲ್ಲಿ ಸಣ್ಣಪುಟ್ಟ ಲೋಪದೋಷಗಳು ಇರಬಹುದು. ಆದರೆ ಕೃಷಿ ಹೊಂಡ ತೆಗೆಯುವ ಕಾರಣ ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತಿತ್ತು.
ಒಟ್ಟಾರೆ, ಸಾಕಷ್ಟು ಯೋಜನೆಗಳು ರೈತನ ಹೆಸರಿನಲ್ಲಿವೆ. ಆದರೆ ರೈತನ ಅನುಕೂಲಕ್ಕೆ ಬರಬಹುದು ತೀರಾ ಕಡಿಮೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತನೇ ಹಣ ಪಾವತಿ ಮಾಡಿ ವೃದ್ಧಾಪ್ಯದಲ್ಲಿ ಪಿಂಚಣಿ ಸೌಲಭ್ಯ ಪಡೆಯಬೇಕು. ಆದರೆ 60 ವರ್ಷ ಬದುಕಿದ್ದರೆ ನೋಡೋಣ ಎನ್ನುವ ಉದಾಸೀನತೆಯಿಂದ ಈ ಯೋಜನೆ ರೈತರಿಂದ ದೂರವಾಗಿದೆ. ಇನ್ನು ಪಿಎಂ ಕಿಸಾನ್ ಯೋಜನೆಯಲ್ಲಿ ವಾರ್ಷಿಕ 6 ಸಾವಿರ ಹಣ ಬರುತ್ತಿದೆ. ರಾಜ್ಯದ ಪಾಲು 4 ಸಾವಿರ ಬಂದರೆ 10 ಸಾವಿರ ರೈತರಿಗೆ ಬರಲಿದೆ. ಆದರೆ ಈ 10 ಸಾವಿರ ರೂಪಾಯಿ ಕೇವಲ ಬಿತ್ತನೆ ಬೀಜ, ರಸಗೊಬ್ಬರದ ಹೆಸರಿನಲ್ಲಿ ಸರ್ಕಾರವೇ ಕಿತ್ತುಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಯೋಜನೆ ರೈತರನ್ನು ಸೆಳೆಯುವ ಉದ್ದೇಶದಿಂದ ಘೋಷಣೆ ಮಾಡಿರುವುದು ಎನ್ನುವುದು ಎಲ್ಲರಿಗೂ ಗೊತ್ತು. ʼಫಸಲ್ ಭೀಮಾ ಯೋಜನೆʼ ಅತ್ಯುತ್ತಮ ಯೋಜನೆಗಳಲ್ಲಿ ಒಂದು. ಈ ಯೋಜನೆಯಿಂದ ನಷ್ಟ ಅನುಭವಿಸಿದ ರೈತ ಯಾರಿಗೂ ಸಲಾಂ ಹೊಡೆಯದೆ, ಪರಿಹಾರಕ್ಕಾಗಿ ಕಣ್ಣೀರು ಹಾಕದೆ ತನ್ನ ಹಕ್ಕು ಸಾಧಿಸಬಹುದು.
ಆದರೆ ʼಫಸಲ್ ಭೀಮಾ ಯೋಜನೆʼಯ ಪರಿಹಾರ ಹಣ ಸೂಕ್ತ ಕಾಲಕ್ಕೆ ಬರುತ್ತಿಲ್ಲ ಎನ್ನುವ ಆರೋಪ ಎಲ್ಲಾ ಕಡೆಗಳಲ್ಲೂ ಇದೆ. ವಿಮೆ ಪಾವತಿ ಮಾಡಿದ್ದರೂ ಪರಿಹಾರದ ಹಣ ಸೂಕ್ತ ಸಮಯಕ್ಕೆ ಸಿಗದಿದ್ದರೆ ಪ್ರಯೋಜನೆ ಏನು ಎನ್ನುವ ಕಾರಣಕ್ಕೆ ರೈತರು ವಿಮೆ ಮಾಡಿಸುವ ಮನಸ್ಸು ಮಾಡುತ್ತಿಲ್ಲ. ರೈತ ವೈಜ್ಞಾನಿಕವಾಗಿ ಕೃಷಿಯಲ್ಲಿ ಭಾಗಿಯಾದರೆ ನಷ್ದದ ಮಾತೇ ಇಲ್ಲ ಎನ್ನುವ ವಾದವೂ ಇದೆ. ಆದರೂ ರೈತನ ನೆರವಿದೆ ಸಾಕಷ್ಟು ಯೋಜನೆಗಳಿವೆ. ಆದರೂ ಸಾಯುವ ನಿರ್ಧಾರ ಮಾಡುವುದು ಮಾತ್ರ ವಿಪರ್ಯಾಸ. ಇನ್ನಾದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡದಿರಲಿ ಎನ್ನುವುದಷ್ಟೇ ʼಪ್ರತಿಧ್ವನಿʼಯ ಆಶಯ.