ಒಂದು ಕಡೆ ಪ್ರಧಾನಿ ಮೋದಿಯವರ ಮುಖವಾಣಿಯಾಗಿರುವ ಮುಖ್ಯವಾಹಿನಿ ಮಾಧ್ಯಮಗಳು ನಕಲಿ ಟಿಆರ್ ಪಿ, ಹೈ ಪ್ರೊಫೈಲ್ ಪ್ರಕರಣಗಳ ಮೀಡಿಯಾ ಟ್ರಯಲ್ ಮುಂತಾದ ಕಾರಣಕ್ಕೆ ಭಾರತೀಯ ಮಾಧ್ಯಮದ ಮಾನ ಕಳೆಯುತ್ತಿರುವ ಹೊತ್ತಿಗೆ, ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಮತ್ತು ಬೆಲ್ಜಿಯಂ ಮೂಲದ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಜರ್ನಲಿಸ್ಟ್ಸ್ ಸಂಘಟನೆಗಳು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮಾಧ್ಯಮವಿರೋಧಿ ಧೋರಣೆಯ ವಿರುದ್ಧ ಎಚ್ಚರಿಕೆ ನೀಡಿವೆ.
ಕರೋನಾ ಸಂಕಷ್ಟದ ಹೊತ್ತನ್ನು ಭಾರತ ಸರ್ಕಾರ ಮಾಧ್ಯಮಗಳ ಕತ್ತು ಹಿಸುಕಲು ಅವಕಾಶವಾಗಿ ಬಳಸಿಕೊಳ್ಳುತ್ತಿದೆ ಎಂದಿರುವ ಪತ್ರಕರ್ತರ ಅಂತಾರಾಷ್ಟ್ರೀಯ ಸಂಘಟನೆಗಳು, ತಮ್ಮ ಪತ್ರಿಕಾ ವೃತ್ತಿಯ ಭಾಗವಾಗಿ ಮಾಡಿದ ವರದಿಗಾರಿಕೆ ಮತ್ತು ಮಾಧ್ಯಮ ಸಂಬಂಧಿತ ಕೆಲಸಗಳಿಗಾಗಿ ಪತ್ರಕರ್ತರ ಮೇಲೆ ಹೇರಿರುವ ದೇಶದ್ರೋಹ ಪ್ರಕರಣಗಳೂ ಸೇರಿದಂತೆ ಎಲ್ಲಾ ಬಗೆಯ ಪ್ರಕರಣಗಳನ್ನು ಕೂಡಲೇ ಕೈಬಿಡಬೇಕು ಎಂದು ಪ್ರಧಾನಿ ಮೋದಿಯವರಿಗೆ ಒತ್ತಾಯಿಸಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಾಗತಿಕ ಮಟ್ಟದಲ್ಲಿ ಸದ್ಯ ಭಾರತ ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಕರೋನಾ ಸಾಂಕ್ರಾಮಿಕ ಹೊತ್ತಲ್ಲಿ ತನ್ನ ವೈಫಲ್ಯ ಮತ್ತು ಜನವಿರೋಧಿ ನೀತಿಗಳ ಬಗ್ಗೆ ವಿಶ್ಲೇಷಿಸಿದ, ಟೀಕಿಸಿದ ಮತ್ತು ಆ ಮೂಲಕ ಸರ್ಕಾರದ ತಪ್ಪುಗಳನ್ನು ಎತ್ತಿತೋರಿಸಿದ ಹಲವು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಪೊಲೀಸ್, ಸಿಬಿಐ, ಇಡಿ, ಐಟಿ ಇಲಾಖೆಗಳನ್ನು ಬಳಸಿಕೊಂಡು ವಿವಿಧ ಬಗೆಯಲ್ಲಿ ಅವರ ದನಿ ಹತ್ತಿಕ್ಕುವ ಯತ್ನವನ್ನು ಮೋದಿಯವರ ಸರ್ಕಾರ ಮಾಡಿದೆ. ಈಗಲೂ ಕೂಡ ಉತ್ತರಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ಕೇರಳದ ಪತ್ರಕರ್ತರನ್ನು ಬಂಧಿಸಿ ಅವರ ವಿರುದ್ಧ ದುರುದ್ದೇಶದಿಂದ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಇಂತಹ ಮಾಧ್ಯಮ ದಮನ ನೀತಿಗಳಿಂದಾಗಿ ಭಾರತದಲ್ಲಿ ಇಂದು ಮಾಧ್ಯಮ ಸ್ವಾತಂತ್ರ್ಯ ಎಂಬುದು ಅಪಾಯಕ್ಕೆ ಸಿಲುಕಿದೆ.
ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಮೋದಿಯವರಿಗೆ ಮಾಡಿರುವ ಈ ಆಗ್ರಮ ಮಹತ್ವ ಪಡೆದಿದೆ. ಉಭಯ ಸಂಸ್ಥೆಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, ದೇಶದಲ್ಲಿ ಪತ್ರಕರ್ತರು ಯಾವುದೇ ಕಿರುಕುಳವಿಲ್ಲದೆ ಮತ್ತು ಬಂಧನದ, ದಬ್ಬಾಳಿಕೆಯ ಭೀತಿ ಇಲ್ಲದೆ ಮುಕ್ತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸಲು ತತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೋದಿಯವರನ್ನು ಒತ್ತಾಯಿಸಿವೆ. ಪತ್ರಕರ್ತರ ಕೆಲಸವನ್ನು ಯಾವುದೇ ಪರಿಸ್ಥಿತಿಯಲ್ಲೂ ದೇಶದ್ರೋಹ ಅಥವಾ ದೇಶದ ಭದ್ರತೆಯ ವಿಷಯದಲ್ಲಿ ಅಪಾಯಕಾರಿ ಎಂದು ಹೇಳಲಾಗದು. ಆದರೆ, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸತ್ಯವನ್ನು ಹೇಳುವ ಪತ್ರಕರ್ತರನ್ನು ಇಂತಹ ಅಪಾಯಕಾರಿ ಕಾನೂನು ಬಳಸಿ ಹಣಿಯಲಾಗುತ್ತಿದೆ. ಇದು ತೀರಾ ಆತಂಕಕಾರಿ ಬೆಳವಣಿಗೆ ಎಂದು ಹೇಳಿವೆ.
Also Read: ʼಕಶ್ಮೀರ್ ಟೈಮ್ಸ್ʼ ಪತ್ರಿಕಾ ಕಛೇರಿಯನ್ನು ಬಲವಂತದಿಂದ ಮುಚ್ಚಿಸಿದ ಸರ್ಕಾರ; EGI ಖಂಡನೆ
ತನ್ನ ನೀತಿ-ನಿಲುವುಗಳ ಟೀಕಾಕಾರರನ್ನು ದಮನ ಮಾಡಲು ಮೋದಿಯವರ ಸರ್ಕಾರ ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಹೊತ್ತನ್ನು ಬಳಸಿಕೊಂಡಿದೆ ಎಂದಿರುವ ಸಂಘಟನೆಗಳು, ದೇಶದ ಆರೋಗ್ಯ ವಲಯದ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ತನ್ನ ವೈಫಲ್ಯವನ್ನು ಎತ್ತಿ ತೋರಿಸಿದ ಮಾಧ್ಯಮಗಳನ್ನು ಸಲ್ಲದ ಕಾಯ್ದೆ- ಕಾನೂನುಗಳನ್ನು ಬಳಸಿ ಕತ್ತು ಹಿಸುಕಲಾಗುತ್ತಿದೆ. ಲಾಕ್ ಡೌನ್ ಹೇರಿದ ಮಾರ್ಚ್ 25ರಿಂದ ಮೇ 31ರ ವರೆಗಿನ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ 55 ಪತ್ರಕರ್ತರ ಮೇಲೆ ಮೋದಿ ಸರ್ಕಾರ ಇಂತಹ ದಮನ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ರೈಟ್ಸ್ ಅಂಡ್ ರಿಸ್ಕ್ಸ್ ಅನಲಿಸಿಸ್ ಗ್ರೂಪ್ ವರದಿಯಲ್ಲಿ ಅಂಕಿಅಂಶ ಸಹಿತ ಉಲ್ಲೇಖಿಸಲಾಗಿದೆ. ಇಂತಹ ದಮನ ಕ್ರಮ ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಘನತೆಗೆ ಶೋಭೆ ತರುವುದಿಲ್ಲ. ಜೊತೆಗೆ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜ ಪ್ರಜಾಪ್ರಭುತ್ವ ಮತ್ತು ಜನರ ಹಕ್ಕುಗಳ ರಕ್ಷಣೆಗೆ ಮಾಧ್ಯಮ ಪಾತ್ರ ನಿರ್ಣಾಯಕ ಎಂಬುದನ್ನು ಮೋದಿಯವರ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ ಎಂದೂ ಸಂಸ್ಥೆಗಳು ಹೇಳಿವೆ.
ಉತ್ತರಪ್ರದೇಶದ ಹತ್ರಾಸ್ ಘಟನೆಯ ವರದಿಗೆ ತೆರಳಿದ್ದ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರ ಬಂಧನ ಮತ್ತು ಅವರ ವಿರುದ್ಧದ ದೇಶದ್ರೋಹ ಪ್ರಕರಣ ದಾಖಲಿಸಿರುವ ಮೋದಿಯವರ ಸರ್ಕಾರದ ಕ್ರಮವನ್ನು ಕೂಡ ಉಲ್ಲೇಖಿಸಿರುವ ಸಂಸ್ಥೆಗಳು, ಲಾಕ್ ಡೌನ್ ಅವಧಿಯಲ್ಲಿ ಗುಜರಾತ್ ನ್ಯೂಸ್ ಪೋರ್ಟಲ್ ಫೇಸ್ ಆಫ್ ದಿ ನೇಷನ್ ಮಾಲೀಕರು ಮತ್ತು ಸಂಪಾದಕರಾದ ವಿನೋದ್ ದುವಾ, ಧಾವಲ್ ಪಟೇಲ್, ಭೂಮ್ ಕಾಲ್ ಸಮಾಚಾರ್ ಸಂಪಾದಕ ಕಮಲ್ ಶುಕ್ಲಾ ಮತ್ತಿತರರ ಬಂಧನ ಪ್ರಕರಣಗಳನ್ನೂ ಪ್ರಸ್ತಾಪಿಸಿವೆ.
ಸ್ವತಂತ್ರ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸಲು, ಅವರಿಗೆ ಕಿರುಕುಳ ಕೊಟ್ಟ ಮಾಧ್ಯಮದ ಬಾಯಿ ಮುಚ್ಚಿಸಲು ದೇಶದ್ರೋಹದಂತಹ ಅಪಾಯಕಾರಿ ಕಾನೂನುಗಳನ್ನು ಬಳಸುತ್ತಿರುವುದು ಭಾರತದ ಅಂತಾರಾಷ್ಟ್ರೀಯ ಬದ್ಧತೆ ಮತ್ತು ಒಪ್ಪಂದಗಳಿಗೆ ವಿರುದ್ಧ; ಮಾತ್ರವಲ್ಲ, ತನ್ನ ವಿರುದ್ಧದ ಟೀಕೆಗಳನ್ನು ಕತ್ತು ಹಿಸುಕುವ ಸರ್ಕಾರದ ಹೇಯ ನಡೆ ಎಂದೂ ಜಂಟಿ ಹೇಳಿಕೆಯಲ್ಲಿ ಕಟು ಮಾತುಗಳಿಂದ ಮೋದಿ ಸರ್ಕಾರದ ನಡೆಯನ್ನು ಟೀಕಿಸಲಾಗಿದೆ.
Also Read: ಉ.ಪ್ರ ಪತ್ರಕರ್ತನ ಕೊಲೆ; ಪತ್ರಿಕಾ ಸ್ವಾತಂತ್ರ್ಯದ ಧಕ್ಕೆಗೆ ಮತ್ತೊಂದು ಉದಾಹರಣೆಯೇ?
ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಮತ್ತು ಬೆಲ್ಜಿಯಂ ಮೂಲದ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಜರ್ನಲಿಸ್ಟ್ಸ್ಗಳ ಈ ಜಂಟಿ ಹೇಳಿಕೆ, ಸದ್ಯ ಭಾರತದಲ್ಲಿ ನಡೆಯುತ್ತಿರುವ ಮಾಧ್ಯಮ ಸ್ವಾತಂತ್ರ್ಯ ಹರಣದ ಸರ್ಕಾರಿ ಅಧಿಕೃತ ಪ್ರಯತ್ನಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದು ಕಡೆ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಪ್ರತಿಪಾದಕರು ತಾವು ಎಂದುಕೊಳ್ಳುತ್ತಲೇ ಕರೋನಾ ನಿರ್ವಹಣೆ ವೈಫಲ್ಯ, ಲಾಕ್ ಡೌನ್ ಹೇರಿಕೆಯ ತಪ್ಪು ಕ್ರಮಗಳು, ಅಂತಹ ಅವಸರದ ಮತ್ತು ಪೂರ್ವತಯಾರಿ ಇಲ್ಲದ ನಡೆಗಳು ಸೃಷ್ಟಿಸಿದ ವಲಸೆ ಕಾರ್ಮಿಕರ ಬಿಕ್ಕಟ್ಟು, ದೇಶದ ಉದ್ಯಮ, ಕೃಷಿ ವಲಯಗಳಿಗೆ ಅದು ಕೊಟ್ಟ ಪೆಟ್ಟು ಮುಂತಾದ ವಾಸ್ತವಿಕ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರನ್ನು ಸರ್ಕಾರಿ ಆಡಳಿತ ಯಂತ್ರ ಬಳಸಿ ಹತ್ತಿಕ್ಕುವ, ಪೊಲೀಸ್ ಬಲ ಪ್ರಯೋಗಿಸಿ ಬಗ್ಗುಬಡಿಯುವ ಮತ್ತು ತಮ್ಮದೇ ಟ್ರೋಲ್ ಪಡೆ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೇಯ ನಿಂದನೆ ಮತ್ತು ಬೆದರಿಕೆ ಒಳಪಡಿಸುವ ಕೆಲಸಗಳನ್ನು ಆಡಳಿತ ವ್ಯವಸ್ಥೆಯೇ ಮಾಡುತ್ತಿರುವ ನಾಚಿಕೆಗೇಡಿನ ಪರಿಸ್ಥಿತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಾಗಿದೆ.