ಶ್ರೀರಾಮ ಜನ್ಮಭೂಮಿ ವಿವಾದ ಈಗ ಅಂತ್ಯವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಬೃಹತ್ ಮಂದಿರವೊಂದು ತಲೆ ಎತ್ತಲಿದೆ. ಹಲವು ದಶಕಗಳ ಕಾಲ ನಡೆದುಕೊಂಡು ಬಂದಿದ್ದ ಜನ್ಮಭೂಮಿ ವಿವಾದ ಕಳೆದ ವರ್ಷ ಮುಕ್ತಾಯವಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಸುಧೀರ್ಘ ತೀರ್ಪು ನೀಡಿದ್ದು, ಶ್ರೀರಾಮ ಇದೇ ಸ್ಥಳದಲ್ಲಿ ಜನಿಸಿದ್ದ ಎನ್ನುವುದು ಬಹುಸಂಖ್ಯಾತ ಹಿಂದೂಗಳ ನಂಬಿಕೆಯಾಗಿದೆ. ನಂಬಿಕೆ ಜನರ ವೈಯಕ್ತಿಕ ವಿಚಾರವಾದರೂ ನಾವು ಅಲ್ಲಗಳೆಯುವಂತಿಲ್ಲ ಎಂದಿದ್ದ ಪೀಠ, ಬಾಬರಿ ಮಸೀದಿ ನಿರ್ಮಾಣವಾಗಿದ್ದ ಜಾಗವೂ ಕೂಡ ಖಾಲಿ ಸ್ಥಳ ಆಗಿರಲಿಲ್ಲ ಎಂಬುದು ಪುರಾತತ್ವ ಇಲಾಖೆಯ ತನಿಖೆಯಿಂದ ಸಾಬೀತಾಗಿದೆ ಎಂದು ನಿರ್ಧಾರಕ್ಕೆ ಬರಲಾಗಿತ್ತು.
ಆ ಬಳಿಕ ವಿವಾದಿತ ಭೂಮಿ 2.27 ಎಕರೆಯನ್ನು ಶ್ರೀರಾಮನ ಜನ್ಮಭೂಮಿ ಟ್ರಸ್ಟ್ಗೆ ನೀಡಲು ಸೂಚನೆ ಕೊಟ್ಟಿದ್ದು, ಮಸೀದಿ ನಿರ್ಮಾಣ ಮಾಡಲು ಅನುವಾಗುವಂತೆ ಸುನ್ನಿ ವಕ್ಫ್ ಬೋರ್ಡ್ಗೆ 5 ಎಕರೆ ಭೂಮಿಯನ್ನು ಕೊಡುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆ ತೀರ್ಪಿನಿಂದ ದಶಕಗಳ ಕಾಲದ ವಿವಾದ ಬಗೆಹರಿಯಿತು ಎನ್ನುವ ಸಮಾಧಾನ ಉಂಟಾಗಿತ್ತು. ಆದರೆ, ಈಗ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ಕೇಂದ್ರ ಸರ್ಕಾರ ನ್ಯಾಯಾಂಗದ ಮೇಲೆ ಒತ್ತಡ ಹಾಕುತ್ತಿದೆ ಎನ್ನುವುದಕ್ಕೆ ಪುರಾವೆ ಎಂಬಂತೆ ಹೇಳಿಕೆ ನೀಡಿದದಾರೆ. ಅವರ ಪ್ರಕಾರ ಈ ತೀರ್ಪು ಬರಲು ಪ್ರಧಾನಿ ನರೇಂದ್ರ ಮೋದಿಯೇ ಕಾರಣವಂತೆ..!
ಕೋಲಾರದಲ್ಲಿ ಮಾತನಾಡಿರುವ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ, ಪ್ರಧಾನಿ ಮೋದಿ ಸೂಚನೆ ಮೇರೆಗೆ ರಾಮಮಂದಿರದ ತೀರ್ಪು ಹೊರಬಂದಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರಿಂದಲೇ ರಾಮಮಂದಿರ ತೀರ್ಪು ಹೊರ ಬಂದಿದೆ. ರಾಮಮಂದಿರ ಸಮಸ್ಯೆ ಬಗೆಹರಿಸಲು ಹಿಂದಿನ ಪ್ರಧಾನಿಗಳು ಪ್ರಯತ್ನಿಸಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಜಟಿಲ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ರಾಮಮಂದಿರ ಪರವಾಗಿ ತೀರ್ಪು ಕೊಟ್ಟರೆ ಗಲಭೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವುದಾಗಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ಗೆ ಭರವಸೆ ಕೊಟ್ಟಿದ್ದರು ಎಂದು ರಾಜಾರೋಷವಾಗಿ ಹೇಳಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸಂಸದ ಮುನಿಸ್ವಾಮಿ ಹಲವಾರು ಇತರ ವಿಚಾರಗಳ ಬಗ್ಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ರಾಜ್ಯಸಭಾ ಸದಸ್ಯತ್ವದ ಹಿಂದಿನ ರಹಸ್ಯವೇ..?
ಶ್ರೀರಾಮ ಜನ್ಮಭೂಮಿ ವಿವಾದಿತ ಪ್ರಕರಣವನ್ನು ಸಮಾಪ್ತಿ ಮಾಡಿದ ಅಂದಿನ ಸುಪ್ರೀಂಕೋರ್ಟ್ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, 6 ತಿಂಗಳ ಒಳಗಾಗಿ ರಾಜ್ಯಸಭೆಗೆ ನೇಮಕವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ದೇಶದ ಜನತೆ ಅಚ್ಚರಿಯ ಕಣ್ಣುಗಳಿಂದ ನೋಡಿದ್ದಾರೆ. ಸುಪ್ರೀಂಕೋರ್ಟ್ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೊಗೊಯ್, ಕಳೆದ ವರ್ಷ ನವೆಂಬರ್17ರಂದು ನಿವೃತ್ತಿ ಹೊಂದಿದ್ದರು. ಆ ಬಳಿಕ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿಬಂದಿದ್ದವು.
ಪ್ರತಿಧ್ವನಿ ಕೂಡ ನಿವೃತ್ತರಾದ ನ್ಯಾಯಾಧೀಶರಾದ ಗೋಪಾಲಗೌಡ ಅವರನ್ನು ಮಾತನಾಡಿಸಿತ್ತು. ಆಗ ಅವರು ಹೇಳಿದಿಷ್ಟು, “ನಾಮಕರಣ ಮಾಡಬೇಕಿದ್ದರೆ ಕಲವೊಂದು ಅರ್ಹತೆಗಳು ಇರಬೇಕು, ಆದರೆ ಇವರಿಗೆ ಆ ಅರ್ಹತೆ ಇಲ್ಲ, ದೇಶದಲ್ಲಿ ಬಹಳಷ್ಟು ಜನರು ಸೇರಿದಂತೆ ಬುದ್ಧಿಜೀವಿಗಳು ತೀವ್ರ ಟೀಕೆ ಮಾಡಿದ್ದಾರೆ. ಅವರು ಸರ್ಕಾರದ ಪರವಾಗಿ ತೀರ್ಪು ನೀಡಿದ್ದಾರೆಯೇ ಎನ್ನುವುದನ್ನು ತೀರ್ಪು ನೋಡಿದಾಗಲೇ ಗೊತ್ತಾಗುತ್ತದೆ. ಇದು ಮೊದಲೇನಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲೇ ಮದ್ರಾಸ್ ಹೈಕೋರ್ಟ್ಮುಖ್ಯ ನ್ಯಾಯಮೂರ್ತಿಯಾಗಿದ್ದ ಸದಾಶಿವಂ ಅವರನ್ನು ಕೇರಳದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಇದಕ್ಕೆಲ್ಲಾ ಪುರಾವೆಗಳು ಸಿಗುವುದಿಲ್ಲ. ಆದರೆ ಎಲ್ಲರನ್ನೂ ಹೀಗೆ ನೇಮಕ ಮಾಡುವುದಿಲ್ಲವಲ್ಲ” ನೇಮಕ ಪ್ರಶ್ನಿಸಿದ್ದಾರೆ. ಇದೀಗ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿರುವ ಮಾತು ಆರೋಪಕ್ಕೆ ಪೂರಕವಾಗಿದೆ.
ಬಿಜೆಪಿ ಸಂಸದರದ್ದು ಸತ್ಯ ಮಾತೋ ಅಜ್ಞಾನವೋ..?
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಅಯೋಧ್ಯೆ ಹಾಗೂ ಶಬರಿಮಲೆ ವಿವಾದದ ಬಗ್ಗೆ ತೀರ್ಪು ನೀಡಿ ನಿವೃತ್ತಿಯಾದ ಕೆಲವೇ ದಿನಗಳಲ್ಲಿ ರಾಜ್ಯಸಭೆಗೆ ಆಯ್ಕೆಯಾದರು ಎನ್ನುವುದು ಸತ್ಯವಾದ ವಿಷಯವೇ ಸರಿ. ಆದರೆ ಸುಪ್ರೀಂಕೋರ್ಟ್ನಲ್ಲಿ ಕೇಂದ್ರದ ಪರವಾಗಿ ತೀರ್ಪು ನೀಡಿದ ಕಾರಣಕ್ಕೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ ಎನ್ನುವುದು ಸರಿಯಾದ ಕ್ರಮವಲ್ಲ. ಆದರೆ ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಹೇಳಿದ ಕಾರಣಕ್ಕೇ ಶ್ರೀರಾಮ ಜನ್ಮಭೂಮಿ ವಿವಾದ ಬಗೆಹರಿದಿದ್ದು ಎಂದಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೋರ್ಟ್ಗೆ ಭರವಸೆ ಕೊಟ್ಟಿದ್ದರಿಂದಲೇ ತೀರ್ಪು ಹೊರಬಿತ್ತು ಎನ್ನುವ ವಿವಾದಿತ ಹೇಳಿಕೆ ನೀಡಿದ್ದಾರೆ.
ಯಾವುದೇ ಓರ್ವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಾಗ ಆತನ ವಿದ್ಯಾಭ್ಯಾಸ, ಆತನ ನಡವಳಿಕೆ, ಆತನ ಸಮಾಜಸೇವೆ ಮಾಡುವ ರೀತಿಗಳನ್ನು ನೋಡಿಕೊಂಡು ಮತ ಚಲಾಯಿಸಬೇಕು. ಇದು ಸಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾವ ವ್ಯಕ್ತಿ ಪ್ರಧಾನಿಯಾಗಿ ಅಧಿಕಾರಕ್ಕೆ ಬರುತ್ತಾರೆ ಎನ್ನುವ ಅಂಶಗಳನ್ನು ಇಟ್ಟುಕೊಂಡು ಆಯ್ಕೆ ಮಾಡುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಬೃಹತ್ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯನಾಗಿದ್ದ ಮುನಿಸ್ವಾಮಿ ಅವರನ್ನು ಕೋಲಾರ ಸಂಸದನಾಗಿ ಮಾಡಿ ಬಿಜೆಪಿ ತಾನೇ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ಮೇಲೆ ಪ್ರಬಾವ ಬೀರಿದ್ದಾರೆಯೋ ಇಲ್ಲವೋ ಎನ್ನುವುದು ಚರ್ಚೆ ಮಾಡುವ ವಿಚಾರವಲ್ಲ. ಅಷ್ಟೂ ಕನಿಷ್ಠ ಪ್ರಜ್ಞೆಯಿಲ್ಲದ ಸಂಸದನನ್ನು ಆಯ್ಕೆ ಮಾಡಿಕೊಂಡಿರುವ ಕೋಲಾರದ ಜನರೇ ಅನುಭವಿಸಬೇಕಿದೆ.