ಸರಿಸುಮಾರು ಗಂಟೆಗೆ 180 ಕಿಮೀ ವೇಗದಲ್ಲಿ ಧಾವಿಸಿದ ಅಂಫಾನ್ ಚಂಡಮಾರುತ ಒಡಿಸ್ಸಾ, ಪಶ್ಚಿಮ ಬಂಗಾಳದ ಕೆಲವು ಭಾಗದಲ್ಲಿ ಭೂ ಕುಸಿತವನ್ನುಂಟು ಮಾಡಿದೆ. ಮೇ 20 ರ ಮಧ್ಯಾಹ್ನ 2:30 ರ ಹೊತ್ತಿಗೆ ಭಾರತದ ತೀರ ಪ್ರದೇಶಗಳಿಗೆ ಅಪ್ಪಳಿಸಿದ ಚಂಡಮಾರುತವು, ಪ್ರಸ್ತುತ ಬಾಂಗ್ಲಾ ದೇಶವನ್ನು ಕೇಂದ್ರೀಕರಿಸಿದೆ.
ಪಶ್ಚಿಮ ಬಂಗಾಳದಲ್ಲಿ 12 ಮಂದಿಯನ್ನು ಬಲಿ ಪಡೆದಿರುವ ಚಂಡಮಾರುತವು ನೆರೆಯ ಬಾಂಗ್ಲಾದಲ್ಲಿ 10 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಬಾಂಗ್ಲಾ ದೇಶದಲ್ಲಿ 5 ವರ್ಷದ ಬಾಲಕ ಹಾಗೂ 75 ವರ್ಷದ ವೃಧ್ದರೊಬ್ಬರು ಧರೆಗುರುಳಿದ ಮರದಡಿಗೆ ಬಿದ್ದು ಅಸುನೀಗಿದ್ದಾರೆ. ಅಲ್ಲದೆ ಚಂಡಮಾರುತ ತುರ್ತು ಸ್ವಯಂ ಸೇವಕರು ನೀರಿನಲ್ಲಿ ಮುಳುಗಿರುವುದಾಗಿ ವರದಿಯಾಗಿದೆ.
ಒಡಿಸ್ಸಾದಲ್ಲಿ ಎರಡು ಸಾವು ವರದಿಯಾಗಿದ್ದು, ಭಾರೀ ಮಳೆಗೆ ಹಟ್ಟಿ ಕುಸಿದು ಹಟ್ಟಿಯೊಳಗಿದ್ದ ಮಗು ಅಸುನೀಗಿದೆ.
“ಅಂಫಾನ್ ಚಂಡಮಾರುತ ಕಳೆದ 6 ಗಂಟೆಗಳಲ್ಲಿ 27 ಕಿ.ಮೀ ವೇಗದಲ್ಲಿ ಉತ್ತರ ಈಶಾನ್ಯ ದಿಕ್ಕಿಗೆ ಸಾಗಿ ದುರ್ಬಲಗೊಂಡಿತು. ಚಂಡಮಾರುತವು ಇಂದು ಬೆಳಿಗ್ಗೆ 5.30 ಕ್ಕೆ ಬಾಂಗ್ಲಾದೇಶದ ಮೇಲೆ ಕೇಂದ್ರೀಕೃತವಾಗಿತ್ತು. ಕೋಲ್ಕತ್ತಾದ ಈಶಾನ್ಯಕ್ಕೆ ಸುಮಾರು 270 ಕಿ.ಮೀ, ಧುಬ್ರಿಯಿಂದ ದಕ್ಷಿಣಕ್ಕೆ 150 ಕಿ.ಮೀ ಮತ್ತು ಬಾಂಗ್ಲಾದೇಶದ ರಂಗ್ಪುರದ ಆಗ್ನೇಯಕ್ಕೆ 110 ಕಿ.ಮೀ ದೂರದಲ್ಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಬೆಳಿಗ್ಗೆ ತನ್ನ ಬುಲೆಟಿನ್ ನಲ್ಲಿ ತಿಳಿಸಿದೆ.
ಹಾನಿಯನ್ನು ತಕ್ಷಣವೇ ನಿರ್ಣಯಿಸುವುದು ಕಷ್ಟ, ಇಡೀ ದ್ವೀಪಗಳು ಮುಖ್ಯ ಭೂಭಾಗದಿಂದ ಸಂಪರ್ಕ ಕಳೆದುಕೊಂಡಿದೆ ಹಾಗೂ ಅನೇಕ ಪ್ರದೇಶಗಳು ವಿದ್ಯುತ್ ಮತ್ತು ಫೋನ್ ಸಂಪರ್ಕವಿಲ್ಲದೆ ಉಳಿದಿದೆ ಎಂದು ಬುಧವಾರ ರಾತ್ರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.
“ಕರೋನಾ ವೈರಸ್, ಮನೆಗೆ ಮರಳುತ್ತಿರುವ ಸಾವಿರಾರು ವಲಸಿಗರು ಮತ್ತು ಈಗ ಚಂಡಮಾರುತ.. ಹೀಗೆ ನಾವು ಈಗ ಮೂರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದೇವೆ” ಎಂದು ಬ್ಯಾನರ್ಜಿ ಹೇಳಿದರು.
ಕಳೆದ ದಶಕಗಳಿಂದೀಚೆಗೆ ಬಂದ ಚಂಡಮಾರುತಗಳಲ್ಲಿ ʼಅಂಫಾನ್ʼ ಚಂಡಮಾರುತವು ಭೀಕರವಾದುದು. ಭಾರೀ ಗಾಳಿ ಮತ್ತು ಭೀಕರ ಮಳೆಗೆ ಒಡಿಸ್ಸಾ, ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದ ಅನೇಕ ಹಳ್ಳಿ, ನಗರಗಳು ಹಾನಿಗೊಂಡಿದೆ