ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನಲೆ ಪಶ್ಚಿಮ ಬಂಗಾಳದ ರಾಜಕೀಯ ರಂಗದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಟಿಎಂಸಿ ನಾಯಕರ ರಾಜೀನಾಮೆ ಒಂದು ಕಡೆ ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದ್ದು, ಮತ್ತೊಂದು ಕಡೆ ಬಿಜೆಪಿಯಲ್ಲಿಯೇ ನಾಯಕರು ಅಸಮಧಾನಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಒಗ್ಗಟ್ಟು ಇಲ್ಲದ ಸಲುವಾಗಿ ಮತ್ತು ಆಡಳಿತದಲ್ಲಿ ಉಂಟಾದ ದ್ವಂದ್ವಗಳ ಕಾರಣ ಹಲವು ಶಾಸಕರು ಹಾಗೂ ಸಚಿವರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈ ಬೆಳವಣಿಗೆ ಉಭಯ ಪಕ್ಷಗಳಲ್ಲೂ ಸಮಸ್ಯೆಗೆ ಎಡೆಮಾಡಿಕೊಟ್ಟಿದೆ.
“ಟಿಎಂಸಿ ಪಕ್ಷದಲ್ಲಿ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ನಡೆಸಿ ಕೆಲವು ಭ್ರಷ್ಟ ರಾಜಕಾರಣಿಗಳು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಕೆಲವು ನಾಯಕರನ್ನು ಪಕ್ಷವೇ ಉಚ್ಚಾಟಿಸಿತ್ತು, ಅಂತಹ ನಾಯಕರು ಪಕ್ಷ ತೊರೆದು ಪಕ್ಷಾಂತರ ಮಾಡಿದ್ದಾರೆ” ಎಂದು ಬಿಜೆಪಿ ಸ್ಥಳೀಯ ನಾಯಕರೊಬ್ಬರು ಮಾಧ್ಯಮಗಳ ಮುಂದೆ ಅಸಮಧಾನದ ಹೇಳಿಕೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ʼಪಕ್ಷದಲ್ಲಿ ಇಷ್ಟು ದಿನ ಶ್ರಮವಹಿಸಿ ಕೆಲಸ ಮಾಡಿ ನಮಗೆ ಒಳ್ಳೆಯ ಅವಕಾಶ ಸಿಗುತ್ತಿಲ್ಲ, ಮೊನ್ನೆ-ಮೊನ್ನೆ ಟಿಎಂಸಿ ಪಕ್ಷದಿಂದ ಬಿಜೆಪಿಗೆ ಸೇರಿದವರಿಗೆ ಅದ್ದೂರಿಯಾದ ಸ್ವಾಗತದ ಜೊತೆಗೆ ಸ್ಥಾನಮಾನವನ್ನು ಕೊಡಲು ಭರವಸೆ ನೀಡಲಾಗಿದೆʼ ಎಂದು ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (JP ನಡ್ಡಾ) ಕೂಡ ಈ ವಿಚಾರ ಕುರಿತು ಪಕ್ಷದ ಹಿರಿಯರನ್ನು ಎಚ್ಚರಿಸಿದ್ದಾರೆಂದು ಬಿಜೆಪಿ ರಾಜ್ಯ ಘಟಕದ ಮುಖಂಡರು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಟಿಎಂಸಿಯಿಂದ ಅನೇಕ ನಾಯಕರು ಬಿಜೆಪಿ ಸೇರಿ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದಾರೆಂಬ ಮೂಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಸಹನೆಯ ಹೇಳಿಕೆ ನೀಡಿದ ಮೂಲ ಬಿಜೆಪಿ ನಾಯಕರನ್ನು ಪಕ್ಷ ಗಮನಿಸುವುದಾಗಿ ಟಿಎಂಸಿಯಿಂದ ಪಕ್ಷಾಂತರಗೊಂಡ ರಾಜಕಾರಣಿಗಳು ಹೇಳಿದ್ದಾರೆ.
ಬಿಜೆಪಿಯಿಂದ ಅಸಮಾಧಾನಗೊಂಡು ಟಿಎಂಸಿ ಸೇರಿದ ಬಿಜೆಪಿ ನಾಯಕರು
ಪಶ್ಚಿಮ ಬಂಗಾಳದ ಬಿಷ್ಣಪುರ್ ನ ಬಿಜೆಪಿ ಎಂ.ಪಿ ಮತ್ತು ಯುವ ಮೋರ್ಚಾದ ಅಧ್ಯಕ್ಷ ಸೌಮಿತ್ರ ಖಾನ್ ಪತ್ನಿ ಸುಜಾತಾ ಮೊಂಡಲ್ ಖಾನ್ ಡಿ22 ರಂದು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಹಿರಿಯ ಮುಖಂಡ ಸೌಗತ್ ರಾಯ್ ಪಕ್ಷಕ್ಕೆ ಸಂತೋಷದಿಂದ ಬರಮಾಡಿಕೊಂಡಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪತಿ ಸೌಮಿತ್ರ ಖಾನ್ ಪರ ಪ್ರಚಾರ ಮಾಡಿದ್ದರು. ಬಿಜೆಪಿಯಲ್ಲಿ ಪ್ರಭಾವಿ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಈಗಿನ ಅವರ ಈ ನಡೆ ಪಕ್ಷಕ್ಕೆ ಶಾಕ್ ಕೊಟ್ಟಂತಾಗಿದೆ.
Also Read: ಟಿಎಂಸಿ ಸೇರಿದ ಪತ್ನಿ; ವಿಚ್ಛೇದನ ನೀಡಲು ಬಿಜೆಪಿ ಸಂಸದ ನಿರ್ಧಾರ
ಕುಟುಂಬವನ್ನು ಮೀರಿ ರಾಜಕೀಯದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಂಡಿರುವ ತನ್ನ ಪತ್ನಿಯ ಈ ನಿರ್ಧಾರವನ್ನು ಸೌಮಿತ್ರಾ ಖಾನ್ ವಿರೋಧಿಸಿದ್ದಾರೆ. ಸುಜಾತಾರ ಈ ನಡೆಗೆ ವಿಚ್ಚೇದನ ನೀಡುವುದಾಗಿ ಅವರು ಹೇಳಿದ್ದಾರೆ. ಆ ಮೂಲಕ ಪತ್ನಿ ಬಿಟ್ಟರು ಪಕ್ಷವನ್ನು ಬಿಡುವುದಿಲ್ಲವೆಂದು ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ಪತ್ನಿಯ ಈ ನಿರ್ಧಾರದ ವಿರುದ್ಧ ತೀವ್ರವಾಗಿ ಟೀಕೆ ಮಾಡಿದ ಅವರು, ʼಕುಟುಂಬವನ್ನು ಗಮನಹರಿಸದೆ ರಾಜಕೀಯದಲ್ಲಿ ದೊಡ್ಡ ತೀರ್ಮಾನ ತೆಗೆದು ಕೊಂಡಿದ್ದೀಯಾ, ಇನ್ನು ಮುಂದೆ ನಿನ್ನ ಹೆಸರಿನ ಮುಂದೆ ನನ್ನ ಸರ್ ನೇಮ್ ಬಳಸಬಾರದು, ಅದನ್ನು ತೆಗೆಯುವಂತೆʼ ಸೂಚಿಸಿದ್ದಾರೆ. ʼನಾನು ಗೆದ್ದು ಈ ಸ್ಥಾನಕ್ಕೆ ಬರಲು ಬಿಜೆಪಿ ಪಕ್ಷವೇ ಕಾರಣ. ಹಿಂದಿನ ಚುನಾವಣೆಯಲ್ಲಿ ನೀನು ನನ್ನ ಪರ ಪ್ರಚಾರ ಮಾಡಿದ್ದೆ, ಅದಕ್ಕೆ ನಾನು ಸದಾ ಸಂತಸ ವ್ಯಕ್ತಪಡಿಸುತ್ತೇನೆ. ಇದೀಗ ಕುಟುಂಬವನ್ನು ಮೀರಿ ತೆಗೆದುಕೊಂಡ ನಿರ್ಧಾರ ತಪ್ಪುʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Also Read: ಪಶ್ಚಿಮ ಬಂಗಾಳ ಚುನಾವಣೆ: ಕಳಂಕಿತರ ಪವಿತ್ರೀಕರಣದ ಬಿಜೆಪಿ ಸೋಪು ಯಾವುದು?
ಮತ್ತೊಂದೆಡೆ, ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಸುಜಾತಾರನ್ನು ಟಿಎಂಸಿ ಮುಖಂಡರುಗಳು ಸಂತಸದಿಂದ ಬರಮಾಡಿಕೊಂಡಿದ್ದಾರೆ.
ʼʼಕುಟುಂಬ ಮತ್ತು ರಾಜಕೀಯ ಒಂದೇ ಅಲ್ಲ. ಮುಂದೊಂದು ದಿನ ಕುಟುಂಬದಲ್ಲಿ ಉಂಟಾದ ಕಲಹ ಸರಿ ಹೊಂದಬಹುದು. ನಾನು ರಾಜಕೀಯದಲ್ಲಿ ಕುಟುಂಬವನ್ನು ತರುವುದಿಲ್ಲ, ಪಕ್ಷದ ಸಂಘಟನೆಯಲ್ಲಿ ಸಮಸ್ಯೆ ಬಂದಿದ್ದರಿಂದ ನಾನು ಬಿಜೆಪಿಯನ್ನು ತೊರೆದಿದ್ದೇನೆ. 17 ನೇ ಲೋಕಸಭಾ ಚುನಾವಣೆಯಲ್ಲಿ ನಾನು ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದೆ. ಪಕ್ಷವನ್ನು ಸಂಘಟಿಸುವುದರಲ್ಲಿಯೂ ನನ್ನ ಪಾತ್ರ ಹೆಚ್ಚಿತ್ತು. ನಾನು ಮೋದಿಯ ಅಪ್ಪಟ ಅಭಿಮಾನಿಯಾಗಿದ್ದೆ. ಆದರೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮೇಲೆ ಅಸಮಾಧಾನ ಹಿನ್ನಲೆ ಪಕ್ಷ ತೊರೆದಿದ್ದೇನೆʼʼ ಎಂದಿದ್ದಾರೆ. ಈಗಾಗಲೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ 6 ಜನ, ಉಪಮುಖ್ಯಮಂತ್ರಿಗಳ ಸ್ಥಾನಕ್ಕೆ 13 ಜನರ ಅಕಾಂಕ್ಷಿಗಳ ಹೆಸರಿನ ಪಟ್ಟಿ ಸಿದ್ದವಾಗಿದೆ ಎಂಬ ಸತ್ಯವನ್ನು ಕೂಡಾ ಹೊರಹಾಕಿದ್ದಾರೆ.
Also Read: ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್
ಈ ಅಂಶ ಗಮನಿಸಿದರೆ ಅಧಿಕಾರದ ಆಸೆಗೆ ನಾಯಕರುಗಳು ಪಕ್ಷಾಂತರ ಮಾಡುತ್ತಿದ್ದಾರಾ.? ಎಂಬ ಪ್ರಶ್ನೆ ಮೂಡುತ್ತದೆ. ಈ ಹಿಂದೆ ಟಿಎಂಸಿ ಪ್ರಭಾವಿ ನಾಯಕ ಸುವೆಂದು ರಾಜಿನಾಮೆ ನೀಡಿದಾಗಲೂ ಕೆಲವರಲ್ಲಿ ಈ ಪ್ರಶ್ನೆ ಉದ್ಬವವಾಗಿತ್ತು. ಇತ್ತ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಬಿಜೆಪಿ ಮಾತ್ರ ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಪ.ಬಂಗಾಳದ ಅಧಿಕಾರದ ಗದ್ದುಗೆ ಹಿಡಿಯುತ್ತೇವೆಂಬ ಭರವಸೆ ನೀಡುತ್ತಲೇ ಬರುತ್ತಿದ್ದಾರೆ. ಗೃಹಸಚಿವ ಅಮಿತ್ ಶಾ ರ್ಯಾಲಿ ಮಾಡಿದ ದಿನವೇ ಟಿಎಂಸಿ ಸೇರಿದಂತೆ ಇತರೆ ಪಕ್ಷದ ಶಾಸಕ ಸಚಿವರುಗಳು ಪಕ್ಷ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೆ, ಅಧಿಕಾರ ಕೈ ತಪ್ಪುವ ಭಯದಲ್ಲಿರುವ ಮೂಲ ಬಿಜೆಪಿಗರು ಬಂಡಾಯವೆದಿದ್ದಾರೆ. ಈ ಬೆಳವಣಿಗೆ ಗಮನಿಸುವುದಾದರೆ, ಬಿಜೆಪಿಯ ಬಂಡಾಯ ನಾಯಕರು ತೃಣಮೂಲ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆಯೆಂದು ಬಂಗಾಳ ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.