ಹಲವಾರು ವರ್ಷಗಳ ಹಿಂದೆ ಮನಶಾಸ್ತ್ರಜ್ಞರಾದಂತಹ ಡಾ.ಸಿ.ಆರ್.ಚಂದ್ರಶೇಖರ ಅವರು ದೂರದರ್ಶನದಲ್ಲಿ ಒಂದು ಸಂದರ್ಶನದಲ್ಲಿ ಹೇಳುತ್ತಿದ್ದರು. ಈ ದೃಶ್ಯ ಮಾಧ್ಯಮಗಳು ಕ್ರಮೇಣ ಮನುಷ್ಯರನ್ನ ಅತ್ಯಂತ ಕ್ರೂರಿಗಳನ್ನಾಗಿಸಿ ಬದಲಾಯಿಸುವ ಅಪಾಯ ನಡೆಯುತ್ತಿದೆ. ನನಗೆ ಈ ಮಾತು ನಿಜವೇನೋ ಅನಿಸ್ತು ಆದರೆ ಅದಕ್ಕೆ ಪುರಾವೆಗಳು ಕಾಣಿಸ್ತಿರ್ಲಿಲ್ಲ. ಮನಸ್ಸು ಆ ಪುರಾವೆಗೋಸ್ಕರ ತಡಕಾಡುತ್ತಾ ಇತ್ತು. ಆಮೇಲೆ ನಿಧಾನಕ್ಕೆ ಕೂತು ಯೋಚಿಸ್ತಿದ್ದೆ, ನಾನೂ ಕೂಡ 1997ರಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಸಿನೆಮಾ ವರದಿಗಾರನಾಗಿದ್ದೆ. A.S.ಮೂರ್ತಿಯವರ ಅಡಿಯಲ್ಲಿ, ಬಳಿಕ ಅದರಲ್ಲಿ ನನ್ನ ಆಸಕ್ತಿ ಇಲ್ಲವೆಂದು ನಾಟಕ,ಸಿನೆಮಾ ಕಡೆಗೆ ಬಂದೆ. ಆದರೆ ಪತ್ರಕರ್ತರ ವಲಯದಲ್ಲಿ ಏನೇನು ಬೆಳವಣಿಗೆ ಆಗುತ್ತದೆ ಅನ್ನುವುದನ್ನು ಸೂಕ್ಷ್ಮವಾಗಿ ಕಣ್ಣಾಡಿಸುತ್ತಾ ಬರುತ್ತಿದ್ದೆ. ಅಲ್ಲಿವರೆಗೂ ಲಂಕೇಶ್ ಥರದವರು ಒಂದಷ್ಟು ʼಇಂಡಿವಿಜ್ಯುವಲ್ʼ ಟ್ಯಾಬ್ಲಾಯ್ಡ್ ಪತ್ರಿಕೆಗಳು ರಾಜಕಾರಣಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ಮಾತಾಡುತ್ತಿದ್ದರು. ರಾಜಕೀಯ ವಿಶ್ಲೇಷಣೆಗಳನ್ನು ಮಾಡುತ್ತಿದ್ದರು. ಕೆಲವೊಂದು ಸಲ ಸಾರಾಸಗಟಾಗಿ ಎಲ್ಲಾ ರಾಜಕಾರಣಿಗಳನ್ನು ಬೈಯುತ್ತಿದ್ದರು. ಆದರೆ ದೂರದರ್ಶನಕ್ಕೆ ಬಂದಾಗ ಅದೊಂದು ಸುದ್ದಿಯಾಗಿ ಬದಲಾಗಿ ಸುಮ್ಮನಾಗುತ್ತಿತ್ತು.
ಕ್ರಮೇಣ ಪ್ರೈವೇಟ್ ಚಾನಲ್ ಶುರು ಆಗುತ್ತಿದ್ದಂತೆ ನನಗೆ ಕಂಡ ಹಾಗೆ ಬಹುಷ 1997-98ರ ಸಮಯ ಬಾಲಕೃಷ್ಣ ಕಾಕತ್ಕರ್ ಅವರು ʼಈ ಟಿವಿʼಗೆ ಒಂದು ಕಾರ್ಯಕ್ರಮವನ್ನು ಮಾಡಿದ ನೆನಪು. ಅದರ ಹೆಸರು ʼಹೇಳಿ ಕೇಳಿʼ ಎಂದು. ಅವರು ನೇರವಾಗಿ ಒಂದು ಏರಿಯಾದ ಕಾರ್ಪೋರೇಟರನ್ನು ಮಾತಾನಾಡಿಸುತ್ತಾ ಅವರ ಏರಿಯಾದಲ್ಲಿ ಆಗಿರುವ, ಆಗಬೇಕಾಗಿರುವ, ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಮೇಲೆ ನೀವು ಏನು ಮಾಡಿದ್ದೀರ? ಏನು ಮಾಡಿಲ್ಲ? ಅನ್ನುವುದನ್ನು ನೇರವಾಗಿ ಪ್ರಶ್ನಿಸುವ ಕಾರ್ಯಕ್ರಮ. ಅವತ್ತಿಗೆ ಅದು ಬೆಚ್ವಿಬೀಳಿಸುವ ಕಾರ್ಯಕ್ರಮ.
ಅದೇ ಈಟಿವಿಯಲ್ಲಿ ʼಕ್ರೈಮ್ ಡೈರಿʼ ಅನ್ನುವಂತಹ ಕಾರ್ಯಕ್ರಮ ಪ್ರಾರಂಭವಾಯಿತು. ಅದೂ ಬಾಲಕೃಷ್ಣ ಕಾಕತ್ಕರ್ ಅವರೇ ಇನಿಷಿಯೇಟ್ ಮಾಡಿದ್ದು. ಅವರು ಎಲ್ಲೆಲ್ಲಿ ಏನೇನೂ ಕ್ರೈಮ್ ನಡೆಯುತ್ತದೆ ಅದರ ಸಂಪೂರ್ಣ ಎಪಿಸೋಡನ್ನ ಒಂದು ಎಪಿಸೋಡ್ ಅಥವಾ ಎರಡು, ಮೂರು ಎಪಿಸೋಡ್ ಆಗಿ ಅದನ್ನು ವಿಂಗಡಿಸಿ ಅದನ್ನು ಚಿತ್ರಿಸಿ ಅದನ್ನು ಮರುಸೃಷ್ಟಿಯೆಲ್ಲಾ ಮಾಡಿ ತೋರಿಸೋಕೆ ಶುರು ಮಾಡಿದರು. ಮೊದಲು ಅತ್ಯಂತ ಅಚ್ಚರಿಯಿಂದ ಕೂತುಕೊಂಡು ಜನರು ಅಂತಹ ಕಾರ್ಯಕ್ರಮಗಳನ್ನು ನೋಡುವುದಕ್ಕೆ ಶುರು ಮಾಡಿದರು. ಅದಾದ ಮೇಲೆ ಅದೇನಾಯ್ತೋ ಗೊತ್ತಿಲ್ಲ. ಬಾಲಕೃಷ್ಣ ಕಾಕತ್ಕರ್ ಅವರು ಅದನ್ನು ಬಿಟ್ಟು tv9 ಲ್ಲಿ ʼಕ್ರೈಮ್ ಸ್ಟೋರಿʼ ಎಂದು ಮುಂದುವರೆಸಿದ್ರು. ಅದೇ ಕಾರ್ಯಕ್ರಮವನ್ನು ರವಿ ಬೆಳಗರೆಯವರು ಈಟಿವಿಯಲ್ಲಿ ಮುಂದುವರೆಸಿದ್ರು.
‘ಕ್ರೈಮ್ ಸ್ಟೋರಿ’ ದುಷ್ಟರ, ರಕ್ತಪಾತಗಳ, ಕೊಲೆಗಳ, ಕಳ್ಳತನಗಳ ಬಗೆಗಿನ ಕಥೆಯಲ್ವಾ? ಇದೇ ಕತೆಗಳನ್ನ ಜನ ದಿನಾ ರಾತ್ರಿ ಕೇಳೋಕೆ ಪ್ರಾರಂಭಿಸಿದರು. ಈಗ ಇವತ್ತಿನ ಮಾಧ್ಯಮ ಇದರ ಅತಿರೇಕಗಳಾಗಿ ದಿನ ಇಪ್ಪತ್ತನಾಲ್ಕು ಗಂಟೆ ಬರೀ ಸುದ್ದಿನೆ ಮಾಡಿ, ಅದರಲ್ಲೂ ಇಪ್ಪತ್ತನಾಲ್ಕು ಗಂಟೆ ಬರೀ ಕ್ರೈಮ್ ಸುದ್ದಿಗಳನ್ನೇ ಮಾಡುತ್ತಾ, ಇಪ್ಪತ್ತನಾಲ್ಕು ಗಂಟೆಯೂ ರಾಜಕಾರಣಿಗಳು ಅವರು ಇವರಿಗೆ ಬೈದದ್ದು, ಇವರು ಅವರಿಗೆ ಬೈದದ್ದು ಅಂದರೆ ಹೇಟ್ರೆಡ್ ಹೀಗೆ ತುಂಬುತ್ತಾ ಹೋಗುತ್ತಿದೆ. ಇದೆಲ್ಲವೂ ಕಾರಣವಾಗಿ ಸಿ.ಆರ್. ಚಂದ್ರಶೇಖರ ಹೇಳಿದಕ್ಕೆ ಪುರಾವೆಯಾಗಿ ಸಿಕ್ಕಿತು.
ಪ್ರಾಕ್ಟಿಕಲ್ ಘಟನೆ ಮೂಲಕ ನಿಮಗೆ ವಿವರಿಸಬೇಕೆಂದರೆ 1994-95 ರ ಸಂಧರ್ಭದಲ್ಲಿ ನನಗೆ ಏನೊ ಸಣ್ಣ ಆಕ್ಸಿಡೆಂಟ್ ಆಯಿತು. ನನಗೆ ಪೆಟ್ಟಾಯಿತು. ನನಗೆ ಹೊಲಿಗೆ ಹಾಕಬೇಕಾದಂತಹ ಸಂಧರ್ಭ ಬಂತು. ಸ್ನೇಹಿತ ನನ್ನನ್ನು ಕರೆದುಕೊಂಡು ಆಸ್ಪತ್ರೆಗೆ ಬಂದ. ಡಾಕ್ಟರ್ ನನ್ನ ಚರ್ಮವನ್ನು ಸೂಜಿಯಿಂದ ಹೊಲಿಗೆ ಹಾಕುತ್ತಿದ್ದುದನ್ನು ನೋಡುತ್ತಾ ಅವನು ತಲೆ ಸುತ್ತಿ ಬಿದ್ದ. ಅವನಿಗೆ ಆ ಕ್ರಿಯೆಯನ್ನ ಕಣ್ಣಾರೆ ನೋಡಿ ಸಹಿಸಿಕೊಳ್ಳೋದಿಕ್ಕೆ ಆಗಿಲ್ಲ. ಅವನು ನನ್ನ ಜತೆಯಲ್ಲೇ ಬೆಳೆದಿದ್ದಾನೆ. ಮೊನ್ನೆ ಯಾವುದೊ ಒಂದು ಮಾತಿಗೆ ಆತ ಹೆಂಗೆ ರಿಯಾಕ್ಟ್ ಮಾಡಿದ ಅಂದ್ರೆ ಇಂಥವರನ್ನೆಲ್ಲಾ ಲೈನಿಗೆ ನಿಲ್ಸಿ ISIS ನವರು ಕತ್ತು ಕುಯ್ತಾರಲ್ಲ ಆ ರೀತಿ ಕುಯ್ದು ಬಿಡಬೇಕು ಅಂತ ಅವನೇ ನನಗೆ ಹೇಳ್ತಿದ್ದಾನೆ. ಅವನು ಈ ರೀತಿ ಬೆಳೆದಿದ್ದಾನೆ. ಅಲ್ಲಾ, ಕಣಪ್ಪಾ ಅವತ್ತು ನನಗೊಂದು ಹೊಲಿಗೆ ಹಾಕ್ತಿದ್ದಾರೆ ಸೂಜಿ ಸಿರಿಂಜಿನಲ್ಲಿ, ಚರ್ಮವನ್ನು ಹೊಲಿಯುತ್ತಿದ್ದ ಆ ಪ್ರೊಸೆಸ್ ನೋಡಿಯೇ ತಲೆಸುತ್ತಿ ಬಿದ್ದವನು ನೀನು. ಇವತ್ತು ಒಂದು ಪೋಸ್ಟ್ ಮಾರ್ಟಮ್ ನೋಡಲು ಹಿಂಜರಿಯುತ್ತಿಲ್ಲ. ನೀನೇ ಸಾಯಿಸ್ತೀನಿ ಎಂದು ಹೇಳುತ್ತಿದ್ದೀಯ, ಶೂಟ್ ಮಾಡ್ಬೇಕು ಎಂದು ಹೇಳ್ತಿದ್ದೀಯ, ಬಹುಷ ನಿನ್ನ ಕೈಯಲ್ಲಿ ಕತ್ತಿ ಕೊಟ್ಟುಬಿಟ್ರೆ ಯಾರನ್ನಾದ್ರೂ ಕುಯ್ದು ಬಿಡಬಲ್ಲೆ ನಾನು ಅನ್ನೊ ಮಟ್ಟಿಗೆ ನೀನು ಬೆಳೆದಿದ್ದೀಯ ಅಂದ್ರೆ ಅದಕ್ಕೆ ಖಂಡಿತವಾಗಿಯೂ ಕಾರಣ ಇದೆ ಅನ್ನುವುದು ನನಗೆ ಮನವರಿಕೆ ಆಯಿತು.
ಸೋ, ಇಲ್ಲಿ ಸಿ.ಆರ್ ಚಂದ್ರಶೇಖರ್ ಹೇಳುತ್ತಿರುವುದು ಅತ್ಯಂತ ಸ್ಪಷ್ಟ. ಯಾಕೆ ಈ ಪೀಠಿಕೆಗಳನ್ನೆಲ್ಲಾ ಹೇಳುತ್ತಿದ್ದೀನೆಂದರೆ ಮೊನ್ನೆ ನಡೆದ ಮಾಬ್ ಲಿಂಚಿಂಗ್ನ ವಿಚಾರಣೆ ಇಟ್ಟುಕೊಂಡು. ಸಾಧುಗಳನ್ನು ಸಾಯಿಸಿರುವುದು. ನೂರಾರು ಜನ ಸೇರಿ ಒಬ್ಬನನ್ನು ಕೊಲ್ಲುವುದು, ಒಬ್ಬನನ್ನು ಕೊಲ್ಲುವುದಕ್ಕೆ ಮನಸು ಹೇಗೆ ಪ್ರಿಪೇರ್ ಆಗುತ್ತೆ. ಯಾವತ್ತೂ ಕೊಲ್ಲದಿದ್ದವರು ಕೊಲ್ಲುತ್ತಿದ್ದಾರೆಂದರೆ ಕೊಲ್ಲುವ ಕಥೆಯನ್ನು ಕೇಳಿ ಕೊಲ್ಲುವುದನ್ನು ನೋಡಿ, ಕೊಲ್ಲುವುದನ್ನು ಸಮರ್ಥಿಸುವ ಮಾತುಗಳನ್ನು ಕೇಳಿ ಕೊಲ್ಲುವುದಕ್ಕೆ ರೆಡಿಯಾಗಿಬಿಡ್ತಾರೆ. ಇದೆಲ್ಲವೂ ಅದಕ್ಕೆ ಪ್ರೇರಣಾ ಶಕ್ತಿ. ನಿಜ ಈ ಮುಂಚೆ ಮಾಬ್ ಲಿಂಚಿಂಗ್ ಇರಲಿಲ್ವಾ? ಇತ್ತು!
ದೊಡ್ಡ ದೊಡ್ಡ ಯುದ್ಧಗಳೇ ನಡೆದಿದ್ದಾವೆ, ಎಲ್ಲವೂ ಆಗಿದೆ ಆದರೆ ದೃಶ್ಯ ಮಾಧ್ಯಮಗಳಿಗೆ ಇರುವ ಶಕ್ತಿ ಇದೆಯಲ್ಲಾ ಅದಕ್ಕೆ ಉದಾಹರಣೆ ಸಮೇತ ಹೇಳಬೇಕೆಂದರೆ ಬಹುಶಃ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಒಂದು ಘಟನೆ ನಡೆಯಿತು. ATM ನಲ್ಲಿ ಒಬ್ಬ ವ್ಯಕ್ತಿ ಒಂದು ಹೆಂಗಸಿನ ತಲೆಯ ಮೇಲೆ ಮಚ್ಚಿನಲ್ಲಿ ಕೊಚ್ಚಿ ಹಣ ದೋಚಿಕೊಂಡು ಹೋಗಿದ್ದ. ಅದು ಸಿಸಿ ಕೆಮರಾದಲ್ಲಿ ರೆಕಾರ್ಡ್ ಆಯಿತು. ಅದನ್ನು ನೋಡಿದ ಇಡೀ ಕರ್ನಾಟಕ ಎಷ್ಟು ದೊಡ್ಡ ಪ್ರೆಶರ್ ಹಾಕಿತು ಸಿಎಂ ಮೇಲೆ. ಕೊನೆಗೆ ಆ ಮಹಿಳೆಯನ್ನು ಆಸ್ಪತ್ರೆಗೆ ಹಾಕಿ ಸರಕಾರ ಅವರ ಖರ್ಚು ನೋಡಿಕೊಂಡು ಸಿಎಂ ಹೋಗಿ ಆ ಮಹಿಳೆನ ಮಾತಾಡಿಸಿಕೊಂಡು ಬಂದಿದ್ದು, ಇದೆಲ್ಲವೂ ಇಷ್ಟೊಂದು ಪ್ರಭಾವ ಬರುವುದಕ್ಕೆ ಹೇಗೆ ಸಾಧ್ಯವಾಯಿತು?
ಅಲ್ಲೆಲ್ಲೊ ಕೊಲೆ ಆಯಿತಂತೆ, ಏನೋ ಪಿಕ್ ಪಾಕೆಟಿಗೋಸ್ಕರ ಅಲ್ಲೇನೋ ನಡೆಯಿತಂತೆ ಇಂತಹ ಅಂತೆಕಂತೆಗಳು ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ. ದೃಶ್ಯ ರೂಪ ಇದೆಯಲ್ಲಾ ಇದು ಬಹಳ ದೊಡ್ಡ ಪ್ರಭಾವ ಬೀರುತ್ತದೆ ಅನ್ನುವುದು ಇಂತಹ ಘಟನೆಗಳು ದೊಡ್ಡ ಸಾಕ್ಷಿಯಾಗಿ ಕಾಣುತ್ತೆ. ಇದಲ್ಲದೆ ಇಂತಹ ಪ್ರಕರಣಗಳು ಅವನ್ಯಾರೊ ಯಾರನ್ನೋ ಶೂಟ್ ಮಾಡಿದ್ರಂತೆ, ಇವನ್ಯಾರೊ ಇನ್ಯಾರನ್ನೊ ಕಿಡ್ನಾಪ್ ಮಾಡಿದ್ರಂತೆ ಇಲ್ಲೇನೋ ಒಂದು ಹುಡುಗಿಯನ್ನು ಪ್ರೀತಿಸಲಿಲ್ಲ ಎನ್ನೋ ಕಾರಣಕ್ಕೆ ಆಸಿಡ್ ಹಾಕಿದನಂತೆ ಅನ್ನುವ ವಿಷಯವನ್ನ ಸುದ್ದಿ ಮಾಡುವಾಗ ನಮ್ಮ ಸುದ್ದಿ ಮಾಧ್ಯಮಗಳು ಟೈಟಲ್ಗೆನೆ ರಕ್ತ ರಾಚೋ ಹಾಗೆ ಗ್ರಾಫಿಕ್ಸ್ ಮಾಡ್ತಾರೆ. ಇದೆಲ್ಲವೂ ಕೂಡ ನೋಡುಗರ ಮೇಲೆ ಪರಿಣಾಮ ಬೀಳಲ್ವಾ? ಅದನ್ನು ಒಬ್ಬ ಟೀನೇಜ್ ಹುಡುಗ ನೋಡುತ್ತಿದ್ರೆ ನಾನೂ ಹೀಗೆ ಮಾಡಿಬಿಡ್ಬೇಕು ಅಂತ ಅವನು ಪ್ರಿಪೇರ್ ಆಗಿ ಬಿಡುದಿಲ್ವಾ? ಇದು ಇವತ್ತು ಮಾಬ್ ಲಿಂಚಿಂಗ್ ತರಹದ ಘಟನೆಗಳಿಗೆ ಸಣ್ಣ ಸಣ್ಣ ಮೆಟ್ಟಿಲುಗಳು.
ಈ ಥರದ ವ್ಯತಿರಿಕ್ತ ಪರಿಣಾಮ ಬೀರುವುದಕ್ಕೆ ಬರೀ ಮಾಧ್ಯಮಗಳೇ ಕಾರಣ ಅಂತ ಹೇಳ್ತಿಲ್ಲ. ಎಲ್ಲಾ ಕ್ರೈಮ್ ಡೈರಿ, ಕ್ರೈಮ್ ಸ್ಟೋರಿಗಳ ಪ್ರೇರಣೆಯಿಂದ ಜನ ಹೇಗಾಗಿದ್ದಾರೆಂದರೆ ಜನಗಳ ಕೈಗೆ ಈಗ ಸ್ಮಾರ್ಟ್ ಫೋನ್ ಸಿಕ್ಕಿ ಅವರೇ ಶೂಟ್ ಮಾಡ್ಕೊಂಡು ಅವರೇ ಫೇಸ್ಬುಕ್ ಗೆ ಅಪ್ಲೋಡ್ ಮಾಡಿಕೊಂಡು ಅವರೇ ವಾಟ್ಸಪಲ್ಲಿ ಕಳಿಸಿ ಇದು ಸುದ್ದಿ ಮಾಧ್ಯಮಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ ಮುಂದುವರೆಯುತ್ತಿರುವಂತಹ ಸ್ವಾತಂತ್ರ್ಯ. ಇದು ಅತೀ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಒಳ್ಳೆಯದನ್ನ ಹೇಳ್ತಾ ಇಲ್ಲ. ಕೆಟ್ಟದ್ದು ಬೇಗ ಪ್ರಚಾರ ಆಗ್ತಿದೆ. ಕೆಟ್ಟದ್ದನ್ನ ತುಂಬಾ ಚೆನ್ನಾಗಿ ನೋಡುತ್ತಾರೆ. ಅದು ಜನರನ್ನು ಅಟ್ರಾಕ್ಟ್ ಮಾಡುತ್ತಿದೆ. ಹೀಗಿರುವಾಗ ಒಂದು ಶಾಂತ ಮನಸ್ಥಿತಿಯ ಸತ್ಯವನ್ನು ಅರಿಯುವ ಸಂಯಮದ ಪ್ರೇಕ್ಷಕರನ್ನ ಅಥವಾ ನೋಡುಗರನ್ನು ಅಥವಾ ಸಮಾಜವನ್ನು ನಾವು ಹೇಗೆ ಬಯಸೋಕೆ ಸಾಧ್ಯ ಅನ್ನುವುದು ನನ್ನ ಪ್ರಶ್ನೆ.
ಮಾಬ್ ಲಿಂಚಿಂಗ್ ಅನ್ನು ಸಮರ್ಥಿಸಿಕೊಳ್ಳುವುದಕ್ಕೂ ಮುಂದಾಗಿ ಬಿಡುತ್ತಿದ್ದೀವಿ. ನೋಡಿ ಕೆಲವೊಂದು ಹೆಡ್ಡಿಂಗ್ ಹೇಗೆ ಬರುತ್ತೆ ಅಂದ್ರೆ “ದುಷ್ಟರಿಗೆ ಜನರೇ ಬುದ್ಧಿ ಕಲಿಸಿದರು” ‘ಅವನಿಗೆ ಧರ್ಮದೇಟು’ ‘ಬಿತ್ತು ನೋಡಿ ಗೂಸಾ’ ‘ಇವನಿಗೆ ಆಗಬೇಕಾಗಿತ್ತು’ ಈ ತರಹದ ಹೆಡ್ಡಿಂಗನ್ನು ಇಟ್ಟುಕೊಂಡು, ಇನ್ನೂ ವಿಚಿತ್ರವಾದ ಹೆಡ್ಲೈನ್ಸುಗಳು ‘ಕಾಮುಕನಿಗೆ ಜನರಿಂದಲೇ ಥಳಿತ ಅಥವಾ, ಲಂಚ ತೆಗೆದವರನ್ನು ಹೆಡೆಮುರಿ ಕಟ್ಟಿದ ಸಾರ್ವಜನಿಕರುʼ ಹೀಗೆ ಮಾಧ್ಯಮಗಳು ಕೂತು ಅವರ ಸಂದೇಶಗಳೇ ಸತ್ಯ ಅಂತ ಹೇಳಿ ಪ್ರಭಾವ ಬೀರೋಕೆ ಬಿಟ್ರೆ ಸಂವಿಧಾನದ ಆಶಯಗಳು ಪತನ ಆಗೊದಿಲ್ವೆ? ಕಾನೂನಾತ್ಮಕವಾಗಿ ಇದನ್ನು ಹೇಗೆ ಬ್ರೇಕ್ ಡೌನ್ ಮಾಡ್ಬೇಕು ಅದಕ್ಕೆ ಯಾವ ರೀತಿಯಾದ ಅಂಕುಶ ಹಾಕಬೇಕು ಅನ್ನುವುದನ್ನ ಯಾರು ಕೂಡಾ ಮಾಡ್ತಿಲ್ಲ. ಅಂದರೆ ಸರಕಾರವೂ ಇದನ್ನೇ ಬಳಸಿಕೊಳ್ಳೋದಿಕೆ ಶುರು ಮಾಡಿದ್ಯಲ್ಲಾ ಅದು ಇನ್ನೂ ದೊಡ್ಡ ದುರಂತ. ಒಂದು ಪಕ್ಷದವರು ಅಥವಾ ಇನ್ನೊಂದು ಪಕ್ಷದವರು ಇಬ್ಬರೂ ಸೇರಿ ತನಗೆ ಬೇಕಾದ ಮಾಧ್ಯಮಗಳು ಕಟ್ಟಿಕೊಂಡು ತಮಗೆ ಬೇಕಾದ ಕಥೆಗಳನ್ನು ಹೇಳಿಕೊಂಡು ವೋಟ್ ಬ್ಯಾಂಕ್ ಮಾಡಿ, ತಮಗೆ ಬೇಕಾದ ರಾಜಕೀಯ ನಾಯಕರನ್ನ ಅಧಿಕಾರಕ್ಕೆ ತರುತ್ತಾ, ಈ ಥರ ಮಾಡ್ತಿದ್ರೆ ಅಲ್ಟಿಮೇಟಾಗಿ ಒಂದು ದುರಂತವೇ ಆಗಿಬಿಡುತ್ತದೆ. ಸಮಾಜ ಯಾವತ್ತೂ ಸುಧಾರಣೆಯಾಗಕ್ಕಂತೂ ಸಾಧ್ಯವೇ ಇಲ್ಲ. ಎಲ್ಲರೂ ಸೇರಿ ಯೋಚಿಸಬೇಕಾದಂತದ್ದು.
ಮೊನ್ನೆ ಯಾವುದೊ ಒಂದು ಪ್ರಕರಣ ಇಟ್ಟಕೊಂಡು ನಿರೂಪಕ ಪೋಲಿಸರೊಂದಿಗೆ ಮಾತಾಡಿಸ್ತಾ “ಅಲ್ಲಾ ಸ್ವಾಮಿ ನಿಮಗೆ ಗನ್ ಯಾಕೆ ಕೊಟ್ಟಿದ್ದಾರೆ ಡಿಪಾರ್ಟ್ಮೆಂಟ್? ಅದನ್ನು ಬಳಸಬೇಕು. ಅದು ಅಲಂಕಾರಕ್ಕೆ ಇಟ್ಟಹಾಗೆ ಅನಿಸ್ತಾ ಇದೆ” ಅಂತ ಹೇಳ್ತಿದ್ದಾರೆಂದರೆ ಕಾನೂನನ್ನು ಮೀರಿ ನೀವು ಈ ತರ ಕೆಲಸ ಮಾಡಿ ಎಂದು ಪೋಲಿಸ್ ಡಿಪಾರ್ಟ್ಮೆಂಟ್ ನ್ನೇ ಉದ್ರೇಕಿಸುತ್ತಿದ್ದಾರೆ. ಹಾಗಿದ್ರೆ ಇನ್ನೊಂದು ವಲಯದವ್ರು ಅವ್ರು ಪೋಲೀಸ್ ಡಿಪಾರ್ಟ್ಮೆಂಟ್ ಅಲ್ಲದಿದ್ರೂನು ಕಳ್ಳರಾಗಿದ್ರೆ, ಅವರಿಗೂ ಯಾವುದೋ ರೀತಿ ಗನ್ ಲಭಿಸಿದ್ರೆ ಅವ್ರೂ ಅದೇ ರೀತಿ ಉದ್ರೇಕಗೊಂಡು ನಿಲ್ಲವುದಿಲ್ಲವೇ? ಆ ಗುಂಡಿಗೆ ಇವರೇ ಬಲಿಯಾಗಲವ್ವೇ ಅಥವಾ ಇವರ ಮಕ್ಕಳು ಬಲಿಯಾಗಲ್ವೇ? ಯಾವ ದೃಷ್ಟಿಕೋನದಿಂದ ತಲೆಲಿಟ್ಟುಕೊಂಡು ನೀವು ಸಮಾಜದಲ್ಲಿ ಕೊಲ್ಲಿ, ಹೊಡೆದಾಕ್ಬಿಡಿ, ಈ ಸಮುದಾಯ ಬೇಕಾಗಿಲ್ಲ ನಮಗೆ ಈ ಸಮುದಾಯ ಬೇಕು ಅಥವಾ ಇಂಥ ಸಮುದಾಯ ಪ್ರಭಾವನೆಯಾಗಿದೆ ಈ ತರದ್ದೆಲ್ಲಾ ಆಲೋಚನೆಗಳನ್ನು ನಾವು ಸಮಾಜದ ಕಡೆಗೆ ತುಂಬುತ್ತಾ ಹೋಗುತ್ತಿದ್ದರೆ, ಅದೇ ನಿರೂಪಕರ ಮನೆಯಲ್ಲಿ ಮಕ್ಕಳಿವೆ, ಕುಟುಂಬ ಇದೆ ಇವರನ್ನ ಏನು ಹೇಳಿಕೊಟ್ಟಂತಾಗುತ್ತದೆ!
ಈ ದೃಷ್ಟಿಕೋನದಲ್ಲಿ ನೋಡಿದರೆ ಪತ್ರಕರ್ತೆ ಗೌರಿ ಲಂಕೇಶರು, ಕಲಬುರ್ಗಿಯವರ ಕೊಲೆಗಳ ಹಿಂದೆ ಯಾರ ಪ್ರೇರಣೆ ಅಥವಾ ಮಿಸ್ ಲೀಡ್ ಇದೆ ಎಂಬುದನ್ನು ನೆನೆದರೆ ಭಯವಾಗುತ್ತೆ.
ನೋಡಿ ಎಷ್ಟೆಷ್ಟು ಬಾಂಬ್ಗಳನ್ನು ತಯಾರು ಮಾಡಿಟ್ಟುಕೊಂಡರೂ ಕರೋನದ ಸಂದರ್ಭದಲ್ಲಿ ಹೋರಾಡಕ್ಕೆ ಆಗದೆ ಅಸಹಾಯಕ ಸ್ಥಿತಿಯಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳಿದ್ದಾರೆ, ನಾನೇ ಇಡೀ ಪ್ರಪಂಚಕ್ಕೆ ಕಿಂಗ್ ಅನ್ನುತ್ತಿದ್ದ ದೊಡ್ಡ ದೊಡ್ಡ ದೇಶಗಳೇ ಮಕಾಡೆ ಮಲಗಿದೆ. ಯಾರು ನಾವು ಶಾಶ್ವತ ಅಲ್ಲ. ಕೊನೆಗೆ ನಮ್ಮ ಮಕ್ಕಳು ನಾಳೆ ಉಳಿತಾರೆ. ಅವರು ಹೇಗೆ ಕಾಲ ಕಳೀಬೇಕು? ಇದೇ ಯೋಚನೆಯಲ್ಲಿ ಬಲಿಯಾಗಬೇಕ? ಅಥವಾ ಕ್ರೌರ್ಯಗಳಲ್ಲಿ ಇಂತಹ ಆಲೋಚನೆಯಲ್ಲಿ ಮುಳುಗಿ ಸಾಯಬೇಕಾ ? ನಮ್ಮ ಮಕ್ಕಳು ಸಂಗೀತಗಳನ್ನ ಎಂಜಾಯ್ ಮಾಡುವುದು ಬೇಡವಾ..? ಅತ್ಯಂತ ರುಚಿಕರವಾದ ಅಡುಗೆಗಳನ್ನು ಎಂಜಾಯ್ ಮಾಡುವುದು ಬೇಡ್ವಾ? ಒಳ್ಳೆಯ ಪರಿಸರವನ್ನು ಎಂಜಾಯ್ ಮಾಡುವುದು ಬೇಡವಾ? ಅತ್ಯಂತ ಅದ್ಭುತವಾದ ಕಾವ್ಯಗಳನ್ನು ಎಂಜಾಯ್ ಮಾಡುವುದು ಬೇಡವಾ? ಎಷ್ಟೊಂದು ಇದೆಯಲ್ವಾ ಸುಂದರವಾಗಿರೋದು ಈ ಪ್ರಪಂಚದಲ್ಲಿ. ಇದನ್ನು ಅನುಭವಿಸೋಕೆ ತಾನೆ ಮನುಷ್ಯ ಬದುಕಬೇಕಾದುದು. ಆದರೆ ಇಡೀ ಜೀವಿತಾವಧಿ ಈ ತರ ವಿಷವನ್ನ ಕಕ್ಕಿ ಕೊನೆಗೆ ಅದೇ ನಮಗೆ ಉಸಿರುಗಟ್ಟಿಸಿದರೆ?
ಯಾರೇ ಆಗಿರಲಿ ಒನ್ ಸೈಡೆಡ್ ಮಾತಾಡುವುದು ಬಿಟ್ಬಿಟ್ಟು ಪತ್ರಕರ್ತರು, ಬಹಳ ಮುಖ್ಯವಾಗಿ ಸೆಲೆಬ್ರಿಟಿಗಳು ಅಥವಾ ಅಂಕಣಕಾರರು ನಮ್ಮ ಮುಂದಿನ ಭಾರತ ಹೇಗಿರಬೇಕು ಅನ್ನೋದನ್ನ ದೃಷ್ಟಿಗೆ ತಗೊಂಡು ಬಿಟ್ರೆ ಸ್ವಲ್ಪ ಮಟ್ಟಿಗೆ ಸಂಯಮ ಪ್ರಾರಂಭ ಆಗ್ತದೆ ಅಂತ ಅಂದುಕೊಳ್ತೀನಿ
ಎಲ್ಲಾ ಒಂದು ಸುದ್ದಿಯನ್ನು ನಮ್ಮ ಮೂಗಿನ ನೇರಕ್ಕೆ ಮಾತನಾಡುವುದು. ಲೇಖನವೂ ಕೂಡ ನನ್ನ ಮೂಗಿನ ನೇರಕ್ಕೆ ನನ್ನ ಆಲೋಚನಾ ಮಿತಿಗೆ ನೇರವಾಗಿ ನಾನು ಬರೆಯುವುದು. ಸುದ್ದಿ ಮಾಧ್ಯಮಗಳಿಂದ ಒಳ್ಳೆಯದೇ ಆಗಿಲ್ಲವಾ ಎಂದರೆ ಖಂಡಿತಾ ಆಗಿದೆ, ಆದರೆ ಅದರ ಪ್ರಮಾಣ ಬಹಳ ಕಡಿಮೆ. ಮೊನ್ನೆ ಛತ್ತೀಸಗಢದಲ್ಲೋ ಎಲ್ಲೋ ಒಬ್ಬ ವರದಿಗಾರ ಎಷ್ಟು ಸೆನ್ಸಿಬಲ್ ಆಗಿ ವರದಿ ಮಾಡಿದ್ದ ಅಂದರೆ ಒಂದು ಶಾಲೆಯಲ್ಲಿ ಒಂದು ಸಮುದಾಯದವರನ್ನ ಒಂದು ಕ್ಲಾಸ್ರೂಮಿನಲ್ಲಿ ಇನ್ನೊಂದು ಸಮುದಾಯದವರನ್ನ ಇನ್ನೊಂದು ಕ್ಲಾಸ್ರೂಮಿನಲ್ಲಿ ಕೂರಿಸಿ ಪಾಠ ಮಾಡ್ತಿದ್ರು. ಇದು ಅನ್ಯಾಯ ಇದು ತಪ್ಪು. ಎಲ್ಲರನ್ನೂ ಬೆರೆಸಿ ನೀವು ಪಾಠ ಮಾಡಬೇಕು, ಶಿಕ್ಷಕರಾಗಿ ನೀವೇ ಒಡೆದು ಬದುಕೋದನ್ನ ಕಲಿಸ್ತಾ ಇದ್ದೀರ ಅಂತ ಹೇಳಿ ಆತ ಅದರ ವರದಿಯನ್ನು ಮಾಡಿದ್ದ. ಅಂತಹ ವರದಿಗಾರರನ್ನ ನೋಡಿ ನಿಜಕ್ಕೂ ಇಂತಹ ವರದಿಗಾರರು ಯಾರೋ ಒಬ್ರು ಇದ್ದಾರಲ್ಲ, ದ್ವೇಷ ಬೇಡ ಎಲ್ಲರೂ ಒಂದು ಎಂದು ಬದುಕೋಣ ಎಂದು ಆಲೋಚನೆ ಮಾಡುವವರು ಇದ್ದಾರಲ್ಲ ಅಂತ ಅನಿಸುತ್ತೆ.
ಒಬ್ಬ ವ್ಯಕ್ತಿ ಮಹಾತ್ಮ ಗಾಂಧಿಯ ತಪ್ಪುಗಳನ್ನು ಎತ್ತಾಡಿ ಅವರನ್ನ ಕೊಂದವನೇ ಸರಿ, ಕೊಂದವನು ಇರ್ಬೇಕಾಗಿತ್ತು ಎಂಬರ್ಥದಲ್ಲಿ ಒಂದು ಪೋಸ್ಟ್ ಹಾಕಿದ್ದರಂತೆ, ಪೋಸ್ಟ್ ಹಾಕಿ ಆವತ್ತೆ ಅವರ ಮಗನನ್ನು ಕರೆದುಕೊಂಡು ಒಬ್ಬ ಡಾಕ್ಟರ್ ಬಳಿ ಬಂದ್ರಂತೆ. “ನೋಡಪ್ಪಾ ನಾನು ಕೂಡಾ ಹಿಂದೂ, ನಾನೂ ದೇವರನ್ನ ನಂಬ್ತೀನಿ ಅದೇ ಕಾರಣಕ್ಕೆನೆ ಇನ್ನೊಬ್ಬರನ್ನು ದ್ವೇಷಿಸೋಕೆ ಆಗ್ತಿಲ್ಲ. ಈಗ ಈ ತರಹದ್ದೊಂದು ಪೋಸ್ಟ್ ಹಾಕಿದ್ದೀರಿ ನೀವು. ನಿಮ್ಮ ಮಗನ ಮಾನಸಿಕ ಸಮಸ್ಯೆಗೆ ನನ್ನ ಬಳಿ ಕೌನ್ಸಿಲಿಂಗ್ಗೆ ಕರೆದುಕೊಂಡು ಬಂದಿದ್ದೀರಿ. ನಾನು ಈಗ ನಿಮ್ಮ ಮಗನಿಗೆ ಗೋಡ್ಸೆ ಬಗ್ಗೆ ಹೇಳಲಾ , ಗಾಂಧಿ ಬಗ್ಗೆ ಹೇಳಲಾ ನೀವೇ ನಿರ್ಧಾರ ಮಾಡಿ” ಅಂತ ಹೇಳಿದ್ರಂತೆ. ಆ ತಕ್ಷಣಕ್ಕೆ ಅವರು ಆ ಪೋಸ್ಟನ್ನು ಡಿಲಿಟ್ ಮಾಡಿದ್ರಂತೆ.
ನೋಡಿ, ದೆಹಲಿಯಲ್ಲಿ ಏನೋ ಒಂದು ಹೋರಾಟ ಆಗುತ್ತಿದೆ, ಅಲ್ಲಿ ಯಾರೋ ಒಬ್ಬರು ಧರಣಿ ಕೂತಿದ್ದಾರೆ ಅಂತವರ ಮೇಲೆ ಒಬ್ಬ ನಡು ರಸ್ತೆಲಿ ನಿಂತ್ಕೊಂಡು ಶೂಟ್ ಮಾಡ್ತಾನೆ ಅಂದ್ರೆ, ಅಥವಾ ಇನ್ಯಾರೊ ಒಬ್ಬ ನಮ್ಮ ಸಮುದಾಯಕ್ಕೆ ಶೋಷಣೆ ಆಗುತ್ತಿದೆಯೆಂದು ಪೋಲಿಸರಿಗೆ ಗುಂಡು ಹೊಡೆಯಲು ರೆಡಿಯಾಗುತ್ತಾನೆಂದರೆ, ಏರ್ಪೋರ್ಟಿಗೆ ಬಾಂಬ್ ಇಡುತ್ತಾನೆಂದರೆ ಇದೆಲ್ಲವೂ ಯಾವುದರಿಂದ ಪ್ರೇರಣೆಗೊಂಡಿದ್ದಾರೆಂದು ಯಾರಾದ್ರೂ ರಿಸರ್ಚ್ ಮಾಡಿದರೆ ಗೊತ್ತಾಗಿ ಬಿಡುತ್ತದೆ. ಇದು ಗಾಂಧಿಯನ್ನು ಅನುಸರಿಸೋದ್ರಿಂದ ಆಗಿರೋದ ಅಥವ ಇನ್ನೊಬ್ಬರನ್ನು ಅನುಸರಿದೋರಿಂದ ಆಗಿರೋದ ಅಂತ.
ಇಲ್ಲಿ ಗಾಂಧೀಜಿ ಮಾತ್ರ ಸರಿ ಇನ್ನೊಬ್ರು ತಪ್ಪು ಅಂತ ಹೇಳೋಕು ನಾನು ಹೊರಟಿಲ್ಲ. ಆತ ಯಾವುದೋ ಇಕ್ಕಟ್ಟಿಗೆ ಒಳಗಾಗಿ ಆ ಕೃತ್ಯ ಮಾಡಿದ ಅಂತ ಸಮರ್ಥನೆ ಮಾಡೋಣ. ಆದರೆ ಆತ ಕೂಡ ಆತನ ವಂಶಸ್ಥರು ಆ ರೀತಿ ಮಾಡಬೇಕು ಎಂದು ಬಯಸಲ್ಲ. ಯಾರ್ಯಾರೂ ‘ಗೋಲಿ ಮಾರೋ ಸಾಲೋಂಕಿ’ ಎಂದು ಘೋಷಣೆ ಕೂಗ್ತಾರೋ ಅವರೊ ಅವರ ಮಕ್ಕಳನ್ನು ಶೂಟ್ ಮಾಡೋಕೆ ಗನ್ ಕೊಟ್ಟು ಕಳಿಸಲ್ಲ. ನನ್ನ ಮಗ ಓದಲಿ, ಮದುವೆ ಆಗಲಿ, ಕುಟುಂಬ ಚೆನ್ನಾಗಿ ನೋಡ್ಕೊಳ್ಳಲಿ ಎಂದೇ ಆಶಿಸುವುದು. ಎಲ್ಲರೂ ತಮ್ಮ ಮಕ್ಕಳ ಮೇಲೆ ಇದೇ ಆಶಯ ಇರೋದರಿಂದ ನಾವು ಯೋಚನೆ ಮಾಡಬೇಕಿರುವುದು ಸಂಯಮ ಮೆರೆಯಬೇಕು. ಸುದ್ದಿಯನ್ನು ಪ್ರಕಟಿಸುವಾಗ ನಿಮ್ಮದೇ ಆಲೋಚನೆಗಳು, ಆಶಯ ಇರಲಿ ಆದರೆ ಅದನ್ನು ಪ್ರಕಟಿಸುವಾಗ ಸಂಯಮ ಇರಲಿ. ಉದ್ರೇಕಗೊಳ್ಳುವ ರೀತಿ ಆಗಕೂಡದು.
ಇದೆಲ್ಲದರ ನಡುವೆ ಮಾಬ್ ಲಿಂಚಿಂಗ್ ತರಹದ ಕೇಸ್ಗಳನ್ನ ಸಮರ್ಥನೆ ಮಾಡುತ್ತಾ ಬಂದಂತಹ ಮಾಧ್ಯಮಗಳಿಗೆ, ಪತ್ರಿಕೆಗಳಿಗೆ ಮಹಾರಾಷ್ಟ್ರದ ಘಟನೆ ಒಂದು ದೊಡ್ಡ ಪಾಠವಾಗಬೇಕು. ಯಾವ ತಪ್ಪೂ ಮಾಡದ ಆ ಸಾಧುಗಳು ಯಾರೋ ಒಬ್ಬರು ಅವರು ಮಕ್ಕಳ ಕಳ್ಳರು ಎಂದು ಹೇಳಿದಕ್ಕೆ ಇಡೀ ಊರಿನ ಜನರು ಸೇರಿ ಅವರನ್ನು ಕೊಲ್ತಾರೆಂದರೆ ಈ ಅಭ್ಯಾಸ ಎಷ್ಟೋ ವರ್ಷಗಳಿಂದ ಶುರು ಆಗಿದೆ. ಈ ಆಲೋಚನೆ ಎಷ್ಟೋ ವರ್ಷಗಳಿಂದ ಶುರು ಆಗಿದೆ ಅಂತಾನೇ ಅರ್ಥ. ಈ ಥರಹ ತಪ್ಪು ತಿಳಿವಳಿಕೆ, ತಪ್ಪು ಸಂದೇಶಗಳು ಕೊನೆಗೆ ನಮ್ಮ ಮಕ್ಕಳಿಗೆ ಕಚ್ಚುತ್ತೆ.
ಧರ್ಮದೇಟು ಅಂದರೆ ಅದು ಧರ್ಮಕ್ಕೇ ಏಟು, ಏಟು ಕೊಡುವ ಅಧಿಕಾರ ಇರುವುದು ಸಾರ್ವಜನಿಕರಿಗಲ್ಲ, ಮಾಧ್ಯಮಗಳಿಗಲ್ಲ. ಅದು ಕಾನೂನಿಗೆ ಮಾತ್ರ. ಸಂವಿಧಾನವನ್ನು ದಯವಿಟ್ಟು ಎತ್ತಿ ಹಿಡಿಯಬೇಕಿದೆ. ಇಷ್ಟೆಲ್ಲಾ ಬರೆದ ಮೇಲೆ ಕೂಡ ಪದೇಪದೇ ಕಾಡುತ್ತಿರುವುದು ಆ ಸನ್ಯಾಸಿಯೊಬ್ಬನ ನಗು. ಮುಖದ ಮೇಲೆ ರಕ್ತ ಇದೆ ಹೊಡಿತಾ ಇದ್ದಾರೆ, ಅಲ್ಲೇನೋ ಒಂದು ನಗು ಕಾಣಿಸ್ತಾ ಇದೆ. ಆದರೆ, ಯಾಕೆ ಅವರು ನಕ್ಕರೆಂದು ಗೊತ್ತಾಗುತ್ತಿಲ್ಲ. ವಿಡಿಯೋ ದೃಶ್ಯಗಳಲ್ಲಿ ಗಮನಿಸಿದರೆ ಪಾಪ ಅವರು ಸಾವಿನಿಂದ ತಪ್ಪಿಸಿಕೊಳ್ಳಲು ಪೊಲೀಸರ ಹಿಂದೆ ಹೋಗಿ ಅವಿತು ಕೊಳ್ಳುವಾಗ ಪೊಲೀಸರು ಅವರನ್ನು ರಕ್ಷಣೆ ಮಾಡಲು ಬರುತ್ತಿಲ್ಲ ಅವರೇ ಅವರನ್ನು ಜನರೆಡೆಗೆ ಬಿಟ್ಟುಕೊಟ್ಟು ಒಳಗಡೆ ಹೋದರು. ಇದಂತೂ ತುಂಬಾ ಅನ್ಯಾಯದ ವಿಷಯ. ಕೊನೆಗೂ ತಾನು ಬದುಕಲ್ಲ ಎಂದು ಗೊತ್ತಾಗಿ, ಕೊನೆಯ ನಗು ಸಮಾಜದಲ್ಲಿ ಹಾಗೆಯೇ ಬೀರಿ ಸತ್ತರೊ, ತುಂಬಾ ಸಂಕಟ ಆಗುತ್ತೆ ಆ ಮುಖ ನೋಡಿದರೆ. ಅಮಾಯಕರು ಯಾವುದೇ ಸಮುದಾಯದವರಾಗಲಿ, ಒಬ್ಬ ಮುಲ್ಲಾಗೂ ಕೂಡ ಈ ರೀತಿ ಹೊಡೆದು ಕೊಂದರು ನನಗೆ ಈ ರೀತಿಯ ಸಂಕಟವಾಗುತ್ತದೆ.
ನಮ್ಮ ಮಕ್ಕಳು ಈ ರೀತಿಯಾಗಿ ಸತ್ತರೆ ನಮಗೆ ಸಂಕಟವಾಗುತ್ತದೆ. ದಯಮಾಡಿ ಇಂಥದ್ದೊಂದು ಚಿತಾವಣೆ ಇನ್ಯಾರೋ ಸಾಯಲಿಎಂದು ನಾವು ಈ ರೀತಿಯ ಬಾಣ ಬಿಡುತ್ತೇವೆ ಆದರೆ ಅದು ವಾಪಸ್ಸು ಬಂದು ನಮ್ಮ ಅಥವಾ ನಮ್ಮ ಮಕ್ಕಳಿಗೆ ನಾಟಿಬಿಟ್ರೆ ನಮ್ಮ ಧರ್ಮಕ್ಕೆ ನಾಟಿಬಿಟ್ರೆ ತುಂಬಾ ಸಂಕಟವಾಗುತ್ತದೆ. ಈ ಎಲ್ಲಾ ಕಾರಣದಿಂದ ದಯಮಾಡಿ ಸಂಯಮವನ್ನು ಇಟ್ಟುಕೊಂಡು ಸುದ್ದಿಯನ್ನು ವಾಚನ ಮಾಡುವುದು ಅಥವಾ ಸುದ್ದಿಯನ್ನು ಬರೆಯುವಂತಹ ಅಭ್ಯಾಸವನ್ನು ಮಾಡಿಕೊಳ್ಳುವ ತುರ್ತಿನಲ್ಲಿ ಇಂದಿನ ಭಾರತವಿದೆ. ನನಗೂ ಮಕ್ಕಳಿದ್ದಾರೆ ಅವರು ಇದೇ ಸಮಾಜದಲ್ಲಿ ಮುಂದಕ್ಕೆ ಬದುಕಬೇಕಾಗುತ್ತದೆ ಎಂಬ ಕಾಳಜಿಯಿಂದ ನಾನು ಇದನ್ನು ಬರೆಯುತ್ತಿದ್ದೇನೆ ಹೊರತು ಇನ್ಯಾವುದೆ ಅಜೆಂಡಾ ನನ್ನ ತಲೆಯಲ್ಲಿ ಇಲ್ಲ.
ಬಾಳ್ಗೆ ಭೂಮಂಡಲಂ, ಬಾಳ್ಗೆ ಸಮೃದ್ಧಿ