ದೆಹಲಿ ಚುನಾವಣೆ ಆಗಿ ನಾಲ್ಕು ತಿಂಗಳು ಕಳೆದಿವೆ. ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಭರ್ಜರಿಯಾಗಿ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಮತ್ತೆ ಗದ್ದುಗೆ ಏರಿದೆ. ಆದರೆ. ಈಗ ಮತ್ತೆ ದೆಹಲಿ ಚುನಾವಣೆ ಸದ್ದು ಮಾಡುತ್ತಿದೆ. ಈ ಬಾರಿ ಸದ್ದು ಮಾಡುತ್ತಿರುವುದು ಆಮ್ ಆದ್ಮಿ ಪಾರ್ಟಿಯಲ್ಲ ಬದಲಿಗೆ ದೆಹಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾ.
ದೆಹಲಿ ಗಲಭೆಯ ಸಮಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ ಕೋಮು ದ್ವೇಷ ಬಿತ್ತುವ ಕೆಲಸ ಮಾಡಿದ್ದ ಕೇಸರಿ ಪಡೆಯ ನಾಯಕ ಕಪಿಲ್ ಮಿಶ್ರಾ, ಈಗ ಚುನಾವಣಾ ಅಫಿಡವಿಟ್ನಲ್ಲಿ ಸುಳ್ಳು ಹೇಳಿದ ಆರೋಪ ಎದುರಿಸುತ್ತಿದ್ದಾರೆ. ತಮ್ಮ ಅಫಿಡವಿಟ್ನಲ್ಲಿ ಆದಾಯ ತೆರಿಗೆ ಪಾವತಿಯ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ.
Also Read: ದೆಹಲಿ ಗಲಭೆಗೆ ಕಪಿಲ್ ಮಿಶ್ರಾ ಹೇಳಿಕೆ ಕಾರಣ : ಮಾರ್ಕ್ ಝುಕರ್ ಬರ್ಗ್
ಈ ವಿಚಾರವನ್ನು ಬಯಲಿಗೆ ಎಳೆದಿರುವ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಜನಪ್ರತಿನಿಧಿ ಕಾಯ್ದೆ (Representation of the People Act) ಯ ಸೆಕ್ಷನ್ 125A ಅಡಿಯಲ್ಲಿ ದೂರು ದಾಖಲಾಗಿದ್ದು, ಒಂದು ವೇಳೆ ಆರೋಪ ಸಾಬೀತಾದರೆ 6 ತಿಂಗಳ ಜೈಲುವಾಸದ ಶಿಕ್ಷೆಯನ್ನು ಕಪಿಲ್ ಮಿಶ್ರಾ ಅನುಭವಿಸಬೇಕಾಗಿ ಬರಬಹುದು.
ಅಷ್ಟಕ್ಕೂ ಆಗಿದ್ದೇನೆಂದರೆ, 2020ರ ದೆಹಲಿ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ನಲ್ಲಿ ನಮೂದಿಸಿದಂತೆ, ಕಪಿಲ್ ಮಿಶ್ರಾ ಅವರು ಕೊನೆಯ ಬಾರಿಗೆ Income Tax returns ದಾಖಲಿಸಿದ್ದು 2011-12ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅಂದರೆ 8 ವರ್ಷಗಳಲ್ಲಿ ತಾವು Income Tax returns ದಾಖಲಿಸಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದರು. ಆದರೆ, 2015ರ ಚುನಾವಣೆಯ ಅಫಿಡವಿಟ್ ಪ್ರಕಾರ 2013-14ರಲ್ಲಿ Income Tax returns ದಾಖಲೆ ಸಲ್ಲಿಸಿದ್ದೇನೆಂದು ಹೇಳಿಕೊಂಡಿದ್ದಾರೆ.
Also Read: ದೆಹಲಿ ಗಲಭೆ ಪ್ರಕರಣ; ಚಾರ್ಜ್ ಶೀಟ್ ನಲ್ಲಿ ʼಪೊಲೀಸ್ʼ ಬುದ್ಧಿ ತೋರಿದ ದೆಹಲಿ ತನಿಖಾ ತಂಡ
2015ರಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದಾಗ ನೀಡಿದ್ದ ಅಫಿಡವಿಟ್ಗೂ ಮತ್ತು 2020ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವಾಗ ಸಲ್ಲಿಸಿದ ಅಫಿಡವಿಟ್ಗೂ ವ್ಯತ್ಯಾಸವಿದೆ. ಹಾಗಾಗಿ Representation of the People Act ಪ್ರಕಾರ ಅವರು ಶಿಕ್ಷೆಗೆ ಅರ್ಹರು ಎಂಬುದು ಸಾಕೇತ್ ಗೋಖಲೆ ಅವರ ವಾದ.
ಇದರೊಂದಿಗೆ ಇನ್ಕಂ ಟ್ಯಾಕ್ಸ್ ವಿಭಾಗದಲ್ಲಿಯೂ ಕಪಿಲ್ ಮಿಶ್ರಾ ಅವರ ದೂರು ಸಲ್ಲಿಸುವುದಾಗಿ ಸಾಕೇತ್ ಗೋಖಲೆ ಹೇಳಿದ್ದಾರೆ. ಕಳೆದ 5-8 ವರ್ಷಗಳಲ್ಲಿ ಕಪಿಲ್ ಮಿಶ್ರಾ ಅವರು ಆದಾಯ ತೆರಿಗೆ ಪಾವತಿಸಿದ್ದಾರೋ ಇಲ್ಲವೋ ಎಂಬುದರ ಕುರಿತು ವಿಚಾರಣೆ ನಡೆಸಬೇಕು, ಒಂದು ವೇಳೆ ಪಾವತಿಸದೇ ಇದ್ದಲ್ಲಿ ಅವರನ್ನು ತಕ್ಷಣವೇ ಬಂಧಿಸುವ ಕೆಲಸವಾಗಬೇಕು ಎಂದು ಅವರು ಹೇಳಿದ್ದಾರೆ.
Also Read: ದೆಹಲಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಹೈಕೋರ್ಟ್
ದೆಹಲಿ ಗಲಭೆಗೆ ಪ್ರಚೋದನೆ ನೀಡಿದ ಪ್ರಕರಣದಿಂದ ನಯವಾಗಿ ನುಣುಚಿಕೊಂಡಿದ್ದ ಕಪಿಲ್ ಮಿಶ್ರಾಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಈ ಹಿಂದೆ Representation of the People Act ಅಡಿಯಲ್ಲಿ ಬರುವಂತಹ ಪ್ರಕರಣಗಳನ್ನು ಕೋರ್ಟ್ನಲ್ಲಿ ದಾಖಲಿಸಬೇಕಿತ್ತು. ಆದರೆ, ಇತ್ತೀಚಿಗೆ ಚುನಾವಣಾ ಆಯೋಗ ನೀಡಿರುವ ಹೇಳಿಕೆಯಲ್ಲಿ ಇಂತಹ ಪ್ರಕರಣಗಳನ್ನು ನೇರವಾಗಿ ಚುನಾವಣಾ ಆಯೋಗವೇ ಕೈಗೆತ್ತಿಕೊಳ್ಳಲಿದೆ.