ಇಂದು ಮೇ ತಿಂಗಳ ಮೊದಲ ದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ಶ್ರಮ ಮತ್ತು ಸಮಾಜಕ್ಕೆ ಅವರ ಕೊಡುಗೆ ಸ್ಮರಿಸುವ ಮೇ ದಿನ, ಕಾರ್ಮಿಕ ದಿನ.
ಎಂಟು ಗಂಟೆಗಳ ಕೆಲಸದ ಅವಧಿ, ದುಡಿಮೆಗೆ ತಕ್ಕ ವೇತನ, ರಜೆ, ಬಾಲ ಕಾರ್ಮಿಕ ಪದ್ಧತಿ ನಿಷೇಧದಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಗತ್ತಿನ ವಿವಿಧೆಡೆ ದುಡಿಯುವ ವರ್ಗ ನಡೆಸಿದ ಹೋರಾಟಗಳ ಫಲವಾಗಿ ಇಂದು ಎಲ್ಲ ಮಿತಿಗಳ ನಡುವೆಯೂ ಕಾರ್ಮಿಕರು ಹಲವು ಸೌಲಭ್ಯ- ಸೌಕರ್ಯಗಳನ್ನು ಕಾನೂನುಬದ್ಧವಾಗಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಶ್ರಮಿಕರ ಬೆವರಿಗೆ ಬೆಲೆ ತಂದ ಮತ್ತು ಅದೇ ಹೊತ್ತಿಗೆ ಮಾಲೀಕರ ಶೋಷಣೆಗಳಿಗೆ ಕೆಲಮಟ್ಟಿಗಾದರೂ ಅಂಕುಶ ಹಾಕಿದ ಅಂತಹ ಹೋರಾಟಗಳಲ್ಲಿ ಪ್ರಮುಖವಾದುದು ಅಮೆರಿಕದ ಶಿಕಾಗೋದ ಹೇಮಾರ್ಕೆಟ್ ಪ್ರದೇಶದಲ್ಲಿ1886ರ ಮೇ 1ರಂದು ನಡೆದ ಹೋರಾಟ.
ಆ ಮಾರುಕಟ್ಟೆಯಲ್ಲಿ ತಮಗೆ ಆಗುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸಿ ಅಲ್ಲಿನ ಕಾರ್ಮಿಕರು ನಡೆಸಿದ ಶಾಂತಿಯುತ ಪ್ರತಿಭಟನೆ, ಪೊಲೀಸರ ಬಲಪ್ರಯೋಗದೊಂದಿಗೆ ಹಿಂಸೆಗೆ ತಿರುಗಿತು. ಆ ಹಿಂಸೆಗೆ ನಾಲ್ವರು ನಾಗರಿಕರು ಮತ್ತು ಏಳು ಮಂದಿ ಪೊಲೀಸರು ಬಲಿಯಾದರು. ಕನಿಷ್ಟ ವೇತನ, ಅಧಿಕ ದುಡಿಮೆಯನ್ನು ಪ್ರತಿಭಟಿಸಿದ ಹಲವು ಹೋರಾಟಗಾರರನ್ನು ಜೀವನಪರ್ಯಂತ ಜೈಲಿಗೆ ಹಾಕಲಾಯಿತು, ಮತ್ತೂ ಕೆಲವರನ್ನು ನೇಣಿಗೇರಿಸಲಾಯಿತು. ಹಾಗೆ ಕಾರ್ಮಿಕ ಹಕ್ಕುಗಳಿಗಾಗಿ ಜೀವ ಕೊಟ್ಟವರನ್ನು ಹೇಮಾರ್ಕೆಟ್ ಹುತಾತ್ಮರು ಎಂದು ಬಣ್ಣಿಸಲಾಯಿತು. ಇದೇ ಘಟನೆ ಮುಂದೆ ವಿಶ್ವಾದ್ಯಂತ ಮೇ 1ರಂದು ಕಾರ್ಮಿಕ ದಿನಾಚಣೆ ಅಥವಾ ಮೇ ದಿನಾಚರಣೆಗೆ ನಾಂದಿ ಹಾಡಿತು.
ಇದೀಗ ಬಹುತೇಕ ಇಡೀ ಜಗತ್ತು ಕರೋನಾ ಸೋಂಕಿನಿಂದಾಗಿ ಲಾಕ್ ಡೌನ್ ನಲ್ಲಿದೆ. ದುಡಿಯುವ ಕೈಗಳು ಕೆಲಸವಿಲ್ಲದೆ, ಹೊತ್ತಿನ ಊಟದ ಚಿಂತೆಯಲ್ಲಿವೆ. ಒಂದು ಕಡೆ ಸಂಘಟಿತ ವಲಯದ ಕೈಗಾರಿಕೆ, ಕಾರ್ಖಾನೆಗಳ ಕಾರ್ಮಿಕರು ವೇತನ ಕಡಿತ, ಕೆಲಸದ ಅವಧಿಯ ಹೆಚ್ಚಳದ ಆತಂಕದಲ್ಲಿವೆ. ಈಗಾಗಲೇ ರಿಲೆಯನ್ಸ್ ನಂತಹ ಬೃಹತ್ ಉದ್ದಿಮೆಗಳೇ ಅರ್ಧದಷ್ಟು ವೇತನ ಕಡಿತ ಘೋಷಿಸಿವೆ.
ಇನ್ ಫೋಸಿಸ್ ನಾರಾಯಣಮೂರ್ತಿಯವರಂಥ ಉದ್ಯಮಪತಿಗಳು ಕೆಲಸದ ಅವಧಿಯ ಹೆಚ್ಚಳದ ಅನಿವಾರ್ಯತೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಈಗಾಗಲೇ ಹಲವು ಉದ್ದಿಮೆಗಳು, ಉದ್ಯಮ ಚಟುವಟಿಕೆಗಳು ವೇತನ ಕಡಿತ ಮಾಡಿಯಾಗಿದೆ. ಇನ್ನು ಅಸಂಘಟಿತ ವರ್ಗದ ಕಾರ್ಮಿಕರಿಗೆ ಖಾತರಿ ಕೆಲಸವೂ ಇಲ್ಲ, ವೇತನವೂ ಇಲ್ಲದ ಸ್ಥಿತಿ. ಪೂರ್ವತಯಾರಿ ಇಲ್ಲದ, ವಿವೇಚನೆರಹಿತ ಲಾಕ್ ಡೌನ್ ಹೇರಿಕೆಯಿಂದಾಗಿ ದೇಶದ ಉದ್ದಗಲಕ್ಕೆ ಕೋಟ್ಯಂತರ ಮಂದಿ ಅಸಂಘಟಿತ ವಲಯದ ಕಾರ್ಮಿಕರು, ಅದರಲ್ಲೂ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಉದ್ಯೋಗ ಅರಸಿ ಬಂದ ವಲಸೆ ಕಾರ್ಮಿಕರು ಬೀದಿಪಾಲಾಗಿದ್ಧಾರೆ, ಇಲ್ಲವೇ ಕೆಲಸ ಕಳೆದುಕೊಂಡು ವಾಪಸು ಹಳ್ಳಿಗಳಿಗೆ ಬರಿಗೈಯಲ್ಲಿ ಹೋಗಿದ್ದಾರೆ.
ಗ್ಯಾರೇಜು, ಟೆಕ್ಸ್ ಟೈಲ್ಸ್, ಕಟ್ಟಡ ನಿರ್ಮಾಣ, ಮಾಲ್- ಅಂಗಡಿ, ಮಾರುಕಟ್ಟೆ, ಸಣ್ಣ ಉದ್ದಿಮೆ, ಆಹಾರ ತಯಾರಿಕಾ ಘಟಕಗಳು, ಆಟೋಮೊಬೈಲ್, ಕೃಷಿ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಬಹುತೇಕ ಎರಡು ತಿಂಗಳ ಲಾಕ್ ಡೌನ್ ನಿಂದಾಗಿ ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಕಂಗಾಲಾಗಿದ್ದಾರೆ. ಲಾಕ್ ಡೌನ್ ಪ್ಯಾಕೇಜ್ ಆಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 1.70 ಲಕ್ಷ ಕೋಟಿ ಈ ಜನಗಳಿಗೆ ತಲುಪಿದ ಯಾವ ಕುರುಹೂ ಇಲ್ಲ! ಈ ನಡುವೆ, ಕಾರ್ಮಿಕರು, ಕೂಲಿಕಾರರು ಸೇರಿದಂತೆ ದೇಶದ ಬಡ ಜನತೆ ಲಾಕ್ ಡೌನ್ ನಿಂದಾಗಿ ಎದುರಿಸುತ್ತಿರುವ ಹಸಿವಿನ ಸಮಸ್ಯೆ ನಿವಾರಣೆಗೆ ಸುಮಾರು 65 ಸಾವಿರ ಕೋಟಿ ರೂ. ನಷ್ಟು ಹಣಕಾಸು ನೆರವು ಬೇಕಾಗಬಹುದು ಎಂದು ಆರ್ ಬಿಐ ಮಾಜಿ ಗವರ್ನರ್ ಹಾಗೂ ಜಾಗತಿಕ ಖ್ಯಾತಿಯ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ ಹೇಳಿದ್ದಾರೆ.
Also Read: ಬಡವರನ್ನು ಸಾಯಲು ಬಿಡಬೇಡಿ, ಬಿಡಿಗಾಸು ನೀಡಿ; ಬಡವರಿಂದಲೇ ಭಾರತದ ಬೆಳವಣಿಗೆ: ರಘುರಾಮ್ ರಾಜನ್
ಆದರೆ, ತಟ್ಟೆ-ಲೋಟ, ಶಂಖ-ಜಾಗಟೆ ಬಾರಿಸುವ ಟಾಸ್ಕ್ ಮೂಲಕವೇ ಲಾಕ್ ಡೌನ್ ಸಂಕಷ್ಟಗಳನ್ನು ದೂರ ಮಾಡುವ ಮತ್ತು ದೇಶದ ಆರ್ಥಿಕತೆಯನ್ನು ಮೇಲೆತ್ತುವ ವಿಶ್ವಾಸದಲ್ಲಿರುವಂತೆ ಕಾಣುತ್ತಿರುವ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ, ಅಂತಹ ಸಲಹೆಗಳಿಗೆ ಕಿವಿಗೊಡುವ ಲಕ್ಷಣ ಕಾಣಿಸುತ್ತಿಲ್ಲ. ಬದಲಾಗಿ ಅದು ಬರೋಬ್ಬರಿ 68 ಸಾವಿರ ಕೋಟಿ ಬೃಹತ್ ಮೊತ್ತದ ಕಾರ್ಪೊರೇಟ್ ಕುಳಗಳ ಸಾಲ ಮನ್ನಾದತ್ತ ಹೆಚ್ಚು ಮುತುವರ್ಜಿ ವಹಿಸಿದೆ ಮತ್ತು ಕಳೆದ ಮೂರ್ನಾಲ್ಕು ದಿನಗಳಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಆಗಿರುವ ಸುಮಾರು 7.68 ಲಕ್ಷ ಕೋಟಿಯಷ್ಟು ಬೃಹತ್ ಮೊತ್ತದ ಬಗ್ಗೆ ಕಾಳಜಿ ವಹಿಸಿದೆ.
ತಾನು ಅಧಿಕಾರಕ್ಕೆ ಬಂದ ಆರು ವರ್ಷಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಕಾರ್ಪೊರೇಟ್ ಕಂಪನಿಗಳ ಮಾಲೀಕರ ಪರವಾಗಿ ತಿದ್ದುಪಡಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ ಸರ್ಕಾರ, ಈಗಲೂ ಕೂಡ ಕರೋನಾ ಪರಿಸ್ಥಿತಿಯನ್ನೇ ಬಳಸಿಕೊಂಡು ಅಧಿಕ ದುಡಿಮೆಯ ಅವಧಿ ಮತ್ತು ಕಡಿಮೆ ವೇತನದಂತಹ 200 ವರ್ಷಗಳ ಹಿಂದೆ ಕಾರ್ಮಿಕ ಹೋರಾಟ ಆರಂಭಕ್ಕೆ ಮುನ್ನಾ ಇದ್ದ ಪರಿಸ್ಥಿತಿಗೆ ದುಡಿಯುವ ವರ್ಗವನ್ನು ಕೊಂಡೊಯ್ಯುವ ತಯಾರಿಯಲ್ಲಿದೆ. ರಿಲೆಯನ್ಸ್ ನಂತಹ ಪ್ರಧಾನಿ ಮೋದಿ ಆಪ್ತ ಉದ್ಯಮಿಗಳೇ ಶೇ.50ರಷ್ಟು ವೇತನ ಕಡಿತ ಘೋಷಿಸಿದಾಗಲೂ ಆ ಬಗ್ಗೆ ಕೇಂದ್ರ ಸರ್ಕಾರ ಜಾಣಮೌನ ವಹಿಸಿದೆ ಎಂದರೆ, ಈವರೆಗೆ ಲಾಕ್ ಡೌನ್ ಅವಧಿಯಲ್ಲಿ ವೇತನ ತಡೆ ಹಿಡಿಯಬಾರರು, ಕಾರ್ಮಿಕರ ಊಟೋಪಚಾರಕ್ಕೆ ನೆರವಾಗಿ ಎಂಬ ಮೋದಿಯವರ ಈವರೆಗಿನ ಮಾತುಗಳು ಎಷ್ಟು ಬಾಯುಪಚಾರದ ಬಡಿವಾರ ಎಂಬುದು ಈಗ ಅರಿವಾಗತೊಡಗಿದೆ.
Also Read: ಕಾರ್ಮಿಕ ದಿನಾಚರಣೆಗೆ ತನ್ನ ಕಾರ್ಮಿಕರಿಗೆ ʼಶಾಕಿಂಗ್ʼ ಉಡುಗೊರೆ ನೀಡಿದ ಅಂಬಾನಿ
ಬಹುಶಃ ದುಡಿಯುವ ವರ್ಗ ಹಿಂದೆಂದೂ ಕಾಣದಂತಹ ಒಂದು ಇಕ್ಕಟ್ಟಿನ, ಆತಂಕದ ಪರಿಸ್ಥಿತಿಯಲ್ಲಿ ಈ ಬಾರಿಯ ಮೇ ದಿನಾಚರಣೆ ಎದುರಾಗಿದೆ. ಹಾಗಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗೆ ಸರ್ಕಾರ ಈಗಲಾದರೂ ಧಾವಿಸಬೇಕು. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ 7500 ರೂ ಧನಸಹಾಯ ಮತ್ತು ಅಗತ್ಯ ದಿನಸಿ ಒದಗಿಸಬೇಕು. ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು. ಕೆಲಸದ ಅವಧಿ ಹೆಚ್ಚಿಸಬಾರದು, ವೇತನ ಕಡಿತವನ್ನು ಕೂಡ ಮಾಡಬಾರದು ಎಂದು ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಮೇ ದಿನವನ್ನು ಕಾರ್ಮಿಕರ ಮನೆಗಳಲ್ಲಿ, ಸಂಘಟನೆಗಳ ಕಚೇರಿಗಳಲ್ಲಿ (ಭೌತಿಕ ಅಂತರ ಕಾಯ್ದುಕೊಂಡೇ) ಆಚರಿಸಿದ್ಧಾರೆ.
“ಇವತ್ತು ದೇಶದಲ್ಲಿ ಅಧಿಕಾರದ ವಿಕೇಂದ್ರೀಕರಣಕ್ಕೆ ಪೆಟ್ಟು ಕೊಡುವ ಮೂಲಕ, ಎಲ್ಲಾ ಅಧಿಕಾರ ತಮ್ಮ ಆಪ್ತವಾದ ವ್ಯಕ್ತಿಯ ಕೈಯಲ್ಲೇ ಇರಬೇಕು ಎಂಬ ದಿಸೆಯಲ್ಲಿ ಕಾರ್ಪೊರೇಟ್ ಕುಳಗಳು ಕೆಲಸ ಮಾಡುತ್ತಿವೆ. ವ್ಯವಸ್ಥಿತವಾಗಿ ಇಡೀ ದೇಶದ ಕಾನೂನು, ಹಣಕಾಸು ಸ್ವಾತಂತ್ರ್ಯ, ಆಡಳಿತ ಬಲ,.. ಎಲ್ಲವನ್ನೂ ರಾಜ್ಯಗಳಿಂದ ಕಿತ್ತುಕೊಂಡು ಕೇಂದ್ರ ಸರ್ಕಾರ, ಅದರಲ್ಲೂ ಪ್ರಧಾನಿ ಕಚೇರಿಯಲ್ಲಿ ಕೇಂದ್ರೀಕರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಕಾರ್ಮಿಕರ, ಬಡವರ ಹಿತವೆಂದರೆ, ಅದು ಹಣದ ವಿಕೇಂದ್ರೀಕರಣ, ಹಣದ ಹರಿವು. ಅದು ಆಗದೇ ಬಡವರು, ಕಾರ್ಮಿಕರ ಬದುಕು ಬದಲಾಗದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ದೇಶದ ಕಾರ್ಮಿಕ ವರ್ಗ ದೊಡ್ಡ ಅಪಾಯದ ಕಾಲಘಟ್ಟದಲ್ಲಿದೆ. ಆದರೆ, ಕೆಲವೇ ಮಂದಿ ಕಾರ್ಪೊರೇಟ್ ಕುಳಗಳ ಹಿತಕ್ಕಾಗಿ ದೇಶದ ಬಹುಸಂಖ್ಯಾತರನ್ನು ಬಲಿಕೊಡುವ ಈಗಿನ ವ್ಯವಸ್ಥೆಯ ವಿರುದ್ಧ ಕಾರ್ಮಿಕ ವರ್ಗ ಸಿಡಿದೇಳುವುದು, ದೊಡ್ಡ ಮಟ್ಟದಲ್ಲಿ ಜಾಗತಿಕವಾಗಿ ಕೂಡ ಕಾರ್ಮಿಕ ಹೋರಾಟ ಮತ್ತು ಬಡವರ ಹೋರಾಟಗಳಿಗೆ ಈ ಕರೋನಾ ಸಂಕಷ್ಟ ನಾಂದಿ ಹಾಡಬಹುದು ಎಂಬ ನಿರೀಕ್ಷೆ ಇದೆ” ಎಂದು ರಾಜ್ಯ ಕಾರ್ಮಿಕ ಮುಖಂಡ ಟಿ ಎಲ್ ಕೃಷ್ಣೇಗೌಡರು ಹೇಳುತ್ತಾರೆ.
ಕರೋನಾ ಜಗತ್ತಿನಾದ್ಯಂತ ಸೃಷ್ಟಿಸಿರುವ ಬಿಕ್ಕಟ್ಟು ಸರ್ಕಾರಗಳು, ಆಳುವ ವ್ಯವಸ್ಥೆಗಳು ನಿಜಕ್ಕೂ ಯಾರ ಹಿತ ಕಾಯುತ್ತಿವೆ. ದೇಶದ ಸಂಪತ್ತು ನಿಜಕ್ಕೂ ಯಾರಿಗಾಗಿ ಬಳಕೆಯಾಗುತ್ತಿದೆ. ಒಂದು ಕಡೆ ಹೊತ್ತಿನ ಊಟಕ್ಕೂ ಗತಿ ಇರದೆ ಪ್ರಾಣ ಬಿಡುತ್ತಿರುವ, ಬೀದಿ ಹೆಣವಾಗುತ್ತಿರುವ ದುಡಿಯುವ ಜನ, ಮತ್ತೊಂದು ಕಡೆ ಲಕ್ಷಾಂತರ ಕೋಟಿ ಸಾಲ ಮನ್ನಾ ಪ್ರಯೋಜನ ಪಡೆದೂ ಜನರ ತೆರಿಗೆ ಹಣ ಲೂಟಿ ಹೊಡೆದೂ ಲೋಲುಪತೆಯಲ್ಲಿ ಮೆರೆಯುತ್ತಿರುವ ಜನ. ಕರೋನಾದ ನೆಪದಲ್ಲಿ ದುಡಿಯುವ ಜನರನ್ನು ಜೀತಕ್ಕಿಟ್ಟುಕೊಳ್ಳುವ ಹುನ್ನಾರದ ದುಡಿಮೆಯ ಅವಧಿ ಹೆಚ್ಚಳ, ಕಡಿಮೆ ವೇತನದ ಹುನ್ನಾರಗಳು, ಕಾರ್ಪೊರೇಟ್ ಕುಳಗಳ ಪರ ಕೆಲಸ ಮಾಡುವ ಸರ್ಕಾರಗಳು,.. ಮುಂತಾದ ಬಡವರ ವಿರೋಧಿ ಬೆಳವಣಿಗೆಗಳು ಹಸಿದವರ ಕಣ್ಣು ತೆರೆಸಬಹುದು. ಅನ್ಯಾಯ ಮತ್ತು ಶೋಷಣೆಯ ವಿರುದ್ಧ ದನಿ ಎತ್ತಬಹುದು ಎಂಬುದು ಅವರ ವಿಶ್ಲೇಷಣೆ.
ಅದೇನೇ ಇರಲಿ; ಜಗತ್ತು ಈ ಹಿಂದಿನಂತೆ ಇರಲಾರದು. ಉದ್ಯಮ, ವಹಿವಾಟು, ಕೃಷಿ ಸೇರಿದಂತೆ ಎಲ್ಲವೂ ಬದಲಾಗಲಿವೆ. ಕೆಲವು ವಿಷಯದಲ್ಲಿ ಊಹೆಗೂ ಮೀರಿದ ಪರಿಣಾಮಗಳು ಆಗಲಿವೆ. ಶ್ರಮ ಮತ್ತು ದುಡಿಮೆಯ ಬೆಲೆ ಜಗತ್ತಿಗೆ ಗೊತ್ತಾಗಿದೆ ಎಂಬ ವಾದಗಳೂ ಇವೆ. ಆ ಹಿನ್ನೆಲೆಯಲ್ಲಿ ಈ ಬಾರಿಯ ಮೇ ದಿನ, ಐತಿಹಾಸಿಕ ದಿನ. ಒಂದು ಸಂಕ್ರಮಣ ಕಾಲದಲ್ಲಿ ದುಡಿಯುವ ಜನರ ಭವಿಷ್ಯವೇ ಅಯೋಮಯವಾಗಿರುವ ಹೊತ್ತಲ್ಲಿ, ನಾಳೆಯ ದಿನಗಳ ಬಗ್ಗೆ ಭರವಸೆಯನ್ನೂ ಆತಂಕವನ್ನೂ ಒಟ್ಟಿಗೇ ಹುಟ್ಟಿಸುತ್ತಿರುವ ವಿಚಿತ್ರ ಪರಿಸ್ಥಿತಿಯಲ್ಲಿ ಈ ಕಾರ್ಮಿಕ ದಿನ ಆಚರಣೆಗೆ ಒಳಗಾಗಿದೆ.